Sunday, September 28, 2025

ಚ್ಯವನ 8

ಅನಿವಾರ್ಯ ಕಾರಣಗಳಿಂದ ಚ್ಯವನ ಸ್ವಲ್ಪ ಹಿಂದಾಯಿತು ಕ್ಷಮೆ ಇರಲಿ 🙏🙏 ಅಶ್ವಿನೀ ದೇವತೆಗಳು ಸುಕನ್ಯೆಗೆ ಸಹಾಯ ಮಾಡಲು ಮುಂದಾಗಿದ್ದರು. ಇದರಲ್ಲಿ ಅವರಿಗೂ ಒಂದು ಸ್ವಾರ್ಥ ಇತ್ತು... ಸಂಜ್ಞಾ ದೇವಿಯು ಅಶ್ವದರೂಪದಲ್ಲಿ ಇದ್ದಾಗ ಸೂರ್ಯನಿಂದ ಹುಟ್ಟಿದವರು ಅವರು, ಉಳಿದ ದೇವತೆಗಳಿಗೆ ಸಿಗುವಂತೆ ಇವರಿಗೆ ಸೋಮಪಾನದ ಅಧಿಕಾರ ಇರಲಿಲ್ಲ, ನಾಸತ್ಯ ಮತ್ತು ದಸ್ರ ಎಂಬ ಹೆಸರಿನ ಅಶ್ವಿನೀ ಕುಮಾರರು ದೇವತೆಗಳ ಪಂಕ್ತಿಯಲ್ಲಿ ಶೂದ್ರ ವರ್ಣಕ್ಕೆ ಸೇರಿಸಲ್ಪಟ್ಟವರೆಂದು ಮಹಾಭಾರತದ ಶಾಂತಿ ಪರ್ವದಲ್ಲಿ ಹೇಳಿದೆ. '' ಅಶ್ವಿನೌ ತು ಸ್ಮೃತೌ ಶೂದ್ರೌ ತಪಸ್ಯುಗ್ರೇ ಸಮಾಸ್ಥಿತೌ " ಹಾಗಾಗಿ ತಾವೂ ದೇವತೆಗಳ ಪಂಕ್ತಿಯಲ್ಲಿ ಸೋಮಪಾನದ ಅಧಿಕಾರ ಪಡೆಯಬೇಕೆಂಬುದು ಅವರ ನಿರೀಕ್ಷೆಯಾಗಿತ್ತು. ಹಾಗಾಗಿ ಸುಕನ್ಯೆಯ ಪಾತಿವ್ರತ್ಯಕ್ಕೆ ಮೆಚ್ಚಿದ ಅವರು "ದೇವೀ... ದೇವ ವೈದ್ಯರಾದ ನಾವು ನಿನ್ನ ಪತಿಯನ್ನೂ ನಮ್ಮ ಹಾಗೇ ಸುಂದರ ಯುವಕನನ್ನಾಗಿ ಮಾಡಬಲ್ಲೆವು ಆದರೆ.. ನಿನ್ನ ಪತಿಯೂ ಸೇರಿ ನಾವು ಮೂವರೂ ಒಂದೇ ರೂಪದಲ್ಲಿರುವಾಗ ನೀನು ನಿನ್ನ ಪತಿಯನ್ನು ಮತ್ತೆ ವರಿಸಬೇಕಾಗುತ್ತದೆ". ತನ್ನ ಪತಿಯು ಸುಂದರ ಯುವಕನಾಗುತ್ತಾನೆ ಎಂದರೆ ಯಾವ ಹೆಣ್ಣಾದರೂ ಅದನ್ನು ಬಯಸುವಂತೆಯೇ ಸುಕನ್ಯೆಯೂ ಅವರ ಮಾತಿಗೆ ಒಪ್ಪುತ್ತಾಳೆ. ಹಾಗೆಯೇ ತನ್ನ ಪತಿಯಾದ ಚ್ಯವನನನ್ನು ಒಪ್ಪಿಸಿ ಕರೆದುಕೊಂಡು ಬರಲು ತಿಳಿಸುತ್ತಾರೆ. ಹಾಗೆಯೇ ತನ್ನಾಶ್ರಮಕ್ಕೆ ತೆರಳಿದ ಸುಕನ್ಯೆ ಪತಿಯಲ್ಲಿ ಅಶ್ವಿನೀ ದೇವತೆಗಳೊಂದಿಗೆ ನಡೆದ ಸಂಪೂರ್ಣ ಮಾತುಕತೆಯನ್ನು ತಿಳಿಸುತ್ತಾಳೆ. ಮೊದಲು ಅಷ್ಟು ಆಸಕ್ತಿಯನ್ನು ಹೊಂದಿರದಿದ್ದರೂ ನಂತರದಲ್ಲಿ ಚ್ಯವನ ಅವಳ ಮಾತಿಗೆ ಒಪ್ಪಿಕೊಳ್ಳುತ್ತಾನೆ. ನಂತರದಲ್ಲಿ ಅವರಿಬ್ಬರೂ ಅಶ್ವಿನೀ ದೇವತೆಗಳ ಬಳಿಗೆ ಬರುತ್ತಾರೆ. ಸತಿಯ ಜೊತೆಗೆ ಬಂದ ಚ್ಯವನನನ್ನು ನೋಡಿ ಅವರಿಬ್ಬರೂ ಅವನ ಕೈ ಹಿಡಿದುಕೊಂಡು ಬಳಿಯಲ್ಲೆ ಇರುವ ಸರೋವರವನ್ನು ಇಳಿದರು. ಕ್ಷಣಕಾಲ ... ಸುಕನ್ಯೆ ನೋಡುತ್ತಿರುವಂತೆಯೇ ಸುಂದರರಾದ ಮೂರು ಜನ ದೇವಪುರುಷರು ಆ ಸರೋವರದಿಂದ ಮೇಲೆದ್ದು ಬಂದರು. ಉತ್ತಮವಾದ ವಸನಗಳನ್ನು ತೊಟ್ಟು ದಿವ್ಯಾಭರಣಗಳನ್ನು ಧರಿಸಿದ್ದ ಆ ಮೂವರ ರೂಪದಲ್ಲಿ ಎಳ್ಳಿನಿತೂ ವ್ಯತ್ಯಾಸ ಇರಲಿಲ್ಲ. ಮೇಲೆ ಬಂದ ಮೂವರೂ ಕಣ್ಣರಳಿಸಿ ನೋಡುತ್ತಿದ್ದ ಸುಕನ್ಯೆಯನ್ನು ಕುರಿತು ಏಕಕಂಠದಿಂದ.. " ಸುಂದರಿ.. ನಾವು ಮೂರು ಜನರೂ ನಿನ್ನನ್ನು ವರಿಸಲು ಬಯಸಿದ್ದೇವೆ.. ಆದರೆ ನಿನಗೆ ಆಯ್ಕೆಯ ಅವಕಾಶ ಹಾಗಾಗಿ ನಿನಗೆ ಯಾರು ಪತಿಯಾಗಬೇಕೆಂದು ನೀನೇ ಆಯ್ಕೆ ಮಾಡು." ಈಗ ಚ್ಯವನ ಸುಕನ್ಯೆಯರಿಬ್ಬರಿಗೂ ಪರೀಕ್ಷೆ. ಸುಂದರ ರೂಪವನ್ನು ಹೊಂದಿದ ಆತ ಸೂಚಿಸುವ ಅವಕಾಶವೂ ಇಲ್ಲ. ಒಂದೇ ರೂಪ ಹೊಂದಿದ ಮೂವರಲ್ಲಿ ಆಕೆ ಮತ್ತೆ ತನ್ನ ಪತಿಯನ್ನೇ ಆಯ್ಕೆಮಾಡಿಕೊಳ್ಳಬೇಕು, ಸ್ವಲ್ಪ ಯೋಚಿಸಿ ಆಕೆ ತನ್ನ ಪಾತಿವ್ರತ್ಯವನ್ನೇ ಪಣಕ್ಕಿಡಲು ಮುಂದಾದಳು.. ಮನಸ್ಸಿನಲ್ಲಿಯೇ ಪತಿಯನ್ನು ಧ್ಯಾನಿಸಿ ಆ ಮೂವರಲ್ಲಿ ತನ್ನ ಪತಿಯಾರೆಂದು ತಿಳಿದು ಮುಂದೆ ಬಂದು ಆತನ ಕೈ ಹಿಡಿದಳು. ಪತಿಯ ಆಶೀರ್ವಾದ, ದೇವಾನುಗ್ರಹ ಇದ್ದ ಕಾರಣ ಅವಳು ಹಿಡಿದ ಕೈ ಚ್ಯವನನದ್ದೇ ಆಗಿತ್ತು. ಆತನಿಗೂ ತನ್ನ ಸತಿಯ ಪಾತಿವ್ರತ್ಯದ ಬಲವನ್ನು ಕಂಡು ಸಂತೋಷವಾಯಿತು. ವೃದ್ಧನಾದವ ಈಗ ಯುವಕನಾಗಿದ್ದ, ಕುರುಡುತನ ಕಳೆದು ದೃಷ್ಠಿ ದೊರಕಿತ್ತು. ಸುಕನ್ಯೆಯೂ ಪತಿಯ ಸುಂದರ ರೂಪವನ್ನು ನೋಡಿ ಬಹಳ ಆನಂದ ಹೊಂದಿದಳು . ಅಶ್ವಿನೀ ದೇವತೆಗಳ ಅನುಗ್ರಹದಿಂದ ಸಂತಸಗೊಂಡ ಚ್ಯವನ ಅವರನ್ನು ಕುರಿತು " ಯಮಳರೇ ನಿಮ್ಮ ಅನುಗ್ರಹದಿಂದ ನಾನು ಹೊಸ ತಾರುಣ್ಯದ ರೂಪವನ್ನು ಹೊಂದಿದೆ... ನನಗೆ ಅನುರೂಪಳಾದ ಸುಕನ್ಯೆಯೂ ಮತ್ತೆ ನನ್ನನ್ನೇ ವರಿಸಿದಳು. ನನ್ನ ಬದುಕಿಗೇ ಒಂದು ಸುಂದರ ರೂಪವನ್ನು ಕೊಟ್ಟ ನಿಮಗೆ ಇದಕ್ಕೆ ಪ್ರತಿಯಾಗಿ ನೀವು ಬಯಸಿದ ಸೋಮಪಾನವನ್ನು ಇಂದ್ರನ ಸಮ್ಮುಖದಲ್ಲಿಯೇ ಮಾಡಿಸುತ್ತೇನೆ ಇದು ಸತ್ಯ" ಎಂದು ಗಂಭೀರವಾಣಿಯಲ್ಲಿ ಹೇಳಿದ. ಚ್ಯವನನ ಮಾತುಗಳನ್ನು ಕೇಳಿದ ಅಶ್ವಿನೀಕುಮಾರರಿಗೂ ಸಂತೋಷವಾಗಿ ಸ್ವರ್ಗಲೋಕದತ್ತ ಪ್ರಯಾಣ ಬೆಳಸಿದರು. ಇತ್ತ ಚ್ಯವನ ಸುಕನ್ಯೆಯರು ಸಂತೋಷಚಿತ್ತದಿಂದ ಆಶ್ರಮದತ್ತ ತಿರುಗಿ ಬಂದರು.🙏🙏 ಮುಂದುವರಿಯುವುದು🙏

No comments:

Post a Comment