Saturday, June 7, 2025

ಅಮೃತಾಪಹರಣ 2ನೇ ಭಾಗ

ಮುಂದುವರಿದ ಭಾಗ... ತನ್ನೆರಡು ಕಾಲುಗಳಲ್ಲಿ ಗಜಕಚ್ಛಪರನ್ನೂ ಕೊಕ್ಕಿನಲ್ಲಿ ವಾಲಖಿಲ್ಯರಿದ್ದ ವಿಸ್ತಾರವಾದ ಆಲದ ಕೊಂಬೆಯನ್ನೂ ಕಚ್ಚಿಕೊಂಡು ಹಾರಿದ ಗರುಡನಿಗೆ ಅವರನ್ನು ಇಳಿಸಲು ಸರಿಯಾದ ಸ್ಥಳವೇ ಕಾಣಿಸಲಿಲ್ಲ... ಒಂದುಕಡೆ ತಪೋಭಂಗವಾಯಿತು ಎಂದು ಖುಷಿಗಳು ಶಾಪ ಕೊಟ್ಟಾರು ಎಂಬ ಭಯ... ಹಾರುತ್ತಾ ಮತ್ತೆ ತಂದೆಯವರಾದ ಕಶ್ಯಪರು ತಪಸ್ಸು ಮಾಡುತಿದ್ದ ಗಂಧಮಾದನ ಪರ್ವತಕ್ಕೆ ಬಂದ, ಇವನು ಬರುತಿದ್ದಂತೆಯೇ ನಡೆದ ಅಚಾತುರ್ಯ ಕಶ್ಯಪರ ಅರಿವಿಗೆ ಬಂತು.. ಮಗನನ್ನುದ್ದೇಶಿಸಿ "ಮಗೂ ಆತುರ ಪಡಬೇಡ ನೀನು ಹೊತ್ತು ತರುತ್ತಿರುವ ಕೊಂಬೆಯಲ್ಲಿ ತಪಸ್ಸನ್ನಾಚರಿಸುತ್ತಿರುವವರು ಸಾಮಾನ್ಯರೆಂದು ಭಾವಿಸದಿರು ಕೇವಲ ಸೂರ್ಯಕಿರಣಗಳನ್ನೇ ಆಹಾರವಾಗಿ ಸ್ವೀಕರಿಸಿ ಘೋರವಾದ ತಪೋನಿರತರು ವಾಲಖಿಲ್ಯರು ಹಾಗಾಗಿ ಎಚ್ಚರಿಕೆಯಿಂದ ವರ್ತಿಸು" ಎಂದು ಹೇಳಿ .. ವಾಲಖಿಲ್ಯರನ್ನು ಕುರಿತು ''ಇವನು ನನ್ನ ಮಗ ವೈನತೇಯ ತಾಯಿಯ ದಾಸ್ಯವನ್ನು ಬಿಡಿಸಲೂ.. ಲೋಕಕಲ್ಯಾಣಕ್ಕಾಗಿಯೂ ಕಾರ್ಯನಿರತನಾಗಿದ್ದಾನೆ ಅವನ ಕಾರ್ಯದಿಂದ ನಿಮಗೆ ತೊಂದರೆಯಾದರೆ ಕ್ಷಮಿಸಿಬಿಡಿ " ಎಂದು ಹೇಳುತ್ತಾರೆ. ಕಶ್ಯಪರ ಮಾತನ್ನು ಮನ್ನಿಸಿದ ವಾಲಖಿಲ್ಯರು ಆ ಬೃಹದಾಕಾರದ ಕೊಂಬೆಯಿಂದ ಕೆಳಗಿಳಿದು ತಪಸ್ಸನ್ನು ಮುಂದುವರಿಸಲು ಹಿಮಾಲಯದತ್ತ ತೆರಳುತ್ತಾರೆ. ಗರುಡ ಆ ಕೊಂಬೆಯನ್ನು ಕಚ್ಚಿಕೊಂಡೇ ತೊದಲು ನುಡಿಯಲ್ಲಿ ಕೊಂಬೆಯನ್ನು ಎಸೆಯಲು ಸೂಕ್ತ ಸ್ಥಳವನ್ನು ತೋರಿಸಲು ಕೇಳಿಕೊಳ್ಳುತ್ತಾನೆ. ಆಗ ಕಶ್ಯಪರು ನೂರು ಯೋಜನ ದೂರದಲ್ಲಿರುವ ಒಂದು ನಿರ್ಜನವಾದ ಪರ್ವತವನ್ನು ತೋರಿಸುತ್ತಾರೆ. ಅವರ ಮಾತಿನಂತೆಯೇ ಅತ್ತ ತೆರಳಿದ ಗರುಡ ಆ ಕೊಂಬೆಯನ್ನು ಅಲ್ಲಿ ಎಸೆದು.. ಅದೇ ಪರ್ವತಾಗ್ರದಲ್ಲಿ ಕುಳಿತು ತಾನು ಹಿಡಿದುಕೊಂಡಿದ್ದ ಗಜಕಚ್ಛಪರನ್ನು ತಿಂದು ಮುಗಿಸುತ್ತಾನೆ. ಹೊಟ್ಟೆತುಂಬಿದ ಅನುಭವವಾಗುತ್ತದೆ. ಮುಂದೆ ಅಮೃತವನ್ನು ತರಲು ದೇವಲೋಕದತ್ತ ಪ್ರಯಾಣ ಆರಂಭಿಸುತ್ತಾನೆ. ಇತ್ತ ದೇವಲೋಕದಲ್ಲಿ ಉತ್ಪಾತಗಳು ಉಂಟಾಗತೊಡಗುತ್ತದೆ. ದುಷ್ಟರಾದ ಅಸುರಾರೋ ಆಕ್ರಮಣ ಮಾಡಿದರೋ ಎಂದು ದೇವತೆಗಳು ಭಯಭೀತರಾಗುತ್ತಾರೆ. ದೇವೇಂದ್ರ ಸುರಗುರುಗಳಾದ ಬೃಹಸ್ಪತಿಗಳ ಬಳಿಗೆ ತೆರಳಿ ಆಗುತ್ತಿರುವ ಉತ್ಪಾತಗಳಿಗೆ ಕಾರಣವೇನೆಂದು ಕೇಳುತ್ತಾನೆ. ಆಚಾರ್ಯ ಬೃಹಸ್ಪತಿ ಗರುಡ ಅಮೃತವನ್ನು ಅಪಹರಿಸಲು ಬರುತ್ತಿರುವ ಬಗ್ಗೆ ಹೇಳುತ್ತಾರೆ. ಕೂಡಲೇ ಅಮೃತಬಾಂಡದ ರಕ್ಷಣೆಗಿರುವ ಬಲವನ್ನು ಹೆಚ್ಚಿಸಲಾಗುತ್ತದೆ. ಸುರರೆಲ್ಲರೂ ಆಕ್ರಮಣವನ್ನು ಎದುರಿಸಲು ಸರ್ವಸನ್ನದ್ಧರಾಗಿ ನಿಲ್ಲುತ್ತಾರೆ. ದೇವಲೋಕವನ್ನು ಪ್ರತೀಶಿಸಿದ ಗರುಡನಿಗೆ ಪ್ರಬಲ ಪ್ರತಿರೋಧವೇ ಎದುರಾಗುತ್ತದೆ. ಆಕ್ರಮಿಸಲು ಮುಂದಾದ ದೇವತೆಗಳನ್ನು ತನ್ನ ಕಾಲಿನಿಂದ ಒದೆಯುತ್ತಾ ಕೊಕ್ಕಿನಿಂದ ಘಾಸಿಗೊಳಿಸುತ್ತಾ.. ರೆಕ್ಕೆಗಳಿಂದ ಬಡಿಯುತ್ತಾ ಓಡಿಸ ತೊಡಗುತ್ತಾನೆ. ಸುರರು.. ಸುರ ಪಕ್ಷಪಾತಿಗಳಾಗಿ ಬಂದ ಬಲವೂ ಗರುಡನ ಸಾಮರ್ಥ್ಯದ ಸಮ್ಮಖದಲ್ಲಿ ಪಲಾಯನ ಮಾಡಬೇಕಾದ ಸ್ಥಿತಿ ಉಂಟಾಗುತ್ತದೆ. ಅವರನ್ನೆಲ್ಲಾ ಹಿಮ್ಮೆಟ್ಟಿಸಿ ಅಮೃತಬಾಂಡವಿರುವ ಸ್ಥಳಕ್ಕೆ ಬರುತ್ತಾನೆ.. ಅಲ್ಲಿ ನೋಡಿದರೆ ಅಮೃತವಿರುವ ಪ್ರದೇಶವನ್ನು ತಲುಪಲಾಗದಂತೆ ವರ್ತುಲಾಕಾರದಲ್ಲಿ ಅಗ್ನಿ ಧಗಧಗಿಸುತ್ತಿರುತ್ತದೆ. ಅದನ್ನು ಪ್ರವೇಶಿಸುವುದು ದುಃಸಾಧ್ಯವೆಂದು ಅರಿತ ಗರುಡ ಹಿಂತಿರುಗಿ ಬಂದು ತನ್ನ ಮುಖವನ್ನು ಎಂಟುಸಾವಿರದ ಒಂದುನೂರು ಮುಖಗಳನ್ನಾಗಿಸಿಕೊಂಡು ಪ್ರತಿಯೊಂದು ಬಾಯಿಯಲ್ಲಿಯೂ ಹಲವು ನದಿಗಳ ಜಲವನ್ನು ತುಂಬಿಕೊಂಡು ಹಿಂತಿರುಗಿ ಬಂದು ಉರಿಯುತ್ತಿರುವ ಆ ಆಗ್ನಿಯಮೇಲೆ ಉಗುಳಿಬಿಡುತ್ತಾನೆ. ಕೂಡಲೇ ಬಡಬಾನಲದಂತೆ ಉರಿಯುತ್ತಿದ್ದ ಅಗ್ನಿ ಶಾಂತವಾಗುತ್ತದೆ. ಮುಂದೆ ಸಾಗಬೇಕೆನ್ನುವಾಗ ಹರಿತಾದ ಅರೆಗಳಿಂದ ಕೂಡಿದ ಒಂದು ಉಕ್ಕಿನ ಯಂತ್ರ ಸುತ್ತಲೂ ವೇಗವಾಗಿ ತಿರುಗುತ್ತಾ ಇರುತ್ತದೆ. ಕ್ಷಣಕಾಲ ಯೋಚಿಸಿದ ಗರುಡ ತನ್ನ ದೇಹವನ್ನು ಕುಗ್ಗಿಸಿಕೊಂಡು ಅಣುರೂಪದಿಂದ ಆ ಅರೆಗಳ ಮದ್ಯದಲ್ಲಿಯೇ ನುಸುಳಿಕೊಂಡು ದಾಟಿಬಿಡುತ್ತಾನೆ,ಮತ್ತೆ ಮುಂದೆ ನೋಡಿದರೆ ಘೋರವಾದ ವಿಷವುಳ್ಳ ಎರಡು ಸರ್ಪಗಳು ಸುತ್ತಲೂ ನೋಡುತ್ತಾ ಕಾಯುತ್ತಿರುತ್ತವೆ. ಕೇವಲ ಕಣ್ಣಿನಿಂದ ನೋಡಿದರೂ ಸಾಕು ಅವುಗಳ ವಿಷ ಪ್ರಭಾವಕ್ಕೆ ಜೀವಿಗಳು ಸತ್ತು ಹೋಗಬೇಕು.. ಅಷ್ಟು ಕ್ರೂರವಾದ ಆ ಸರ್ಪಗಳ ಕಣ್ಣೇ ಕಾಣಿಸದಂತೆ ತನ್ನ ರೆಕ್ಕೆಯಿಂದ ದೂಳನ್ನು ಎಬ್ಬಿಸಿ ಮತ್ತೆ ತನ್ನ ರೆಕ್ಕೆಗಳಿಂದ ಬಡಿದು.. ಕೊಕ್ಕಿನಿಂದ ಸೀಳಿ ಹಾಕುತ್ತಾನೆ. ಮುಂದೆ ಎತ್ತರದ ವೇದಿಕೆಯಲ್ಲಿ ಬಂಗಾರದ ಕುಂಭದಲ್ಲಿ ಅಮೃತವನ್ನು ಇರಿಸಲಾಗಿತ್ತು. ಗರುಡ ಅದನ್ನು ಎತ್ತಿಕೊಂಡು ಹಿಂತಿರುಗಿ.. ತಿರುಗುತ್ತಿರುವ ಉಕ್ಕಿನ ಯಂತ್ರವನ್ನು ಒದೆದು ಒಡೆದುಹಾಕಿ ಮೇಲೆ ಹಾರಿ ಸಾಗುತ್ತಾನೆ. ದೇವತೆಗಳು ವಿಶಿಷ್ಟವಾದ ತಮ್ಮ ಆಯುಧಗಳನ್ನು ಗರುಡನತ್ತ ಪ್ರಯೋಗಿಸಿದರೂ ಯಾವ ಪ್ರಯೋಜನವೂ ಆಗಲಿಲ್ಲ, ಅಮೃತಬಾಂಡವನ್ನು ಹಿಡಿದು ಗಗನಮಾರ್ಗದಲ್ಲಿ ಸಾಗತೊಡಗುತ್ತಾನೆ. ತನಗೆ ಅಮೃತ ದೊರೆತರೂ ಅದನ್ನು ತಾನು ಸೇವಿಸದೇ ಪರರಿಗಾಗಿ ಕೊಂಡೊಯ್ಯುತ್ತಿರುವ ಗರುಡನ ಗುಣವನ್ನು ಕಂಡು ಸಂತೋಷಗೊಂಡ ಮಹಾವಿಷ್ಣು ಗರುಡನಿಗೆ ಇದಿರಾಗುತ್ತಾನೆ. ''ನಿನ್ನ ಈ ಪರಾಕ್ರಮ ತ್ಯಾಗಬಾವವನ್ನು ಕಂಡು ಸಂತುಷ್ಟನಾಗಿದ್ದೇನೆ ನಿನಗೇನು ವರ ಬೇಕು ಕೇಳು" ಎಂದಾಗ "ನಿನ್ನ ಧ್ವಜದಲ್ಲಿ ನನಗೆ ಸ್ಥಾನ ಕೊಡು " ಎಂದು ಕೇಳಿಕೊಳ್ಳುತ್ತಾನೆ. ಆಗಲಿ ಎಂದು ವಿಷ್ಣು ಅನುಗ್ರಹಿಸುತ್ತಾನೆ. ಹಾಗೆಯೇ ಪರಾಕ್ರಮಿಯಾದ ಗರುಡ "ನನ್ನಿಂದ ನಿನಗೇನು ಸಹಾಯವಾಗಬೇಕೆಂದು ಕೇಳುತ್ತಾನೆ. "ನೀನು ನನಗೆ ವಾಹನವಾಗಿ ಬೇಕು" ಎಂದು ವಿಷ್ಣು ಹೇಳಿದಾಗ ಸಂತೋಷದಿಂದ ಒಪ್ಪುತ್ತಾನೆ. ಹಾಗಾಗಿಯೇ ಮಹಾವಿಷ್ಣು "ಗರುಡಧ್ವಜ" ನೂ "ಗರುಡವಾಹನ " ನೂ ಆಗಿದ್ದು. ಪರಮಾತ್ಮನಿಂದ ಅನುಗ್ರಹಿತನಾದ ಗರುಡ ಮುಂದೆ ಸಾಗುತ್ತಿದ್ದಾಗ ಮತ್ತೆ ದೇವೇಂದ್ರ ವಜ್ರಧಾರಿಯಾಗಿ ಎದುರಾಗುತ್ತಾನೆ. ಪ್ರತಿಭಟಿಸಿದ ದೇವೇಂದ್ರನಿಂದ ಹೋರಾಟದಲ್ಲಿ ವಜ್ರಾಯುಧದ ಪ್ರಯೋಗವಾಗುತ್ತದೆ. ವಜ್ರಾಯುಧ ಗರುಡನನ್ನು ಘಾತಿಸಲು ಅಸಾಧ್ಯವಾದರೂ ಗರುಡ ಇಂದ್ರನನ್ನು ಕುರಿತು "ಅಯ್ಯಾ ದೇವೇಂದ್ರ.. ನೀನು ಯಾವ ಆಯುಧವನ್ನು ಪ್ರಯೋಗಿಸಿದರೂ ಅವು ನನ್ನನ್ನು ಏನೂ ಮಾಡಲಾರವು ಆದರೆ... ಈ ವಜ್ರಾಯುಧದ ಹಿನ್ನೆಲೆ ಏನು ಎನ್ನುವುದನ್ನು ಅರಿತಿದ್ದೇನೆ. ನಿರಂತರ ತಪಸ್ಸನ್ನು ಆಚರಿಸಿದ ತಪಸ್ವಿಯ ತ್ಯಾಗ ಇದರಲ್ಲಿದೆ ಹಾಗಾಗಿ ಇದು ನನ್ನನ್ನು ಫಾತಿಸಲಾಗದೇ ವ್ಯರ್ಥವಾಯಿತು ಎಂದಾಗಕೂಡದು ಅದಕ್ಕಾಗಿಯೇ ಇದೋ ನೋಡು ನನ್ನ ರೆಕ್ಕೆಯಲ್ಲಿರುವ ಒಂದು ಗರಿಯನ್ನು ಕೆಡವಿದ್ದೇನೆ" ಎಂದು ಗರಿಯನ್ನು ಬೀಳಿಸುತ್ತಾನೆ. ಅವನ ರೆಕ್ಕೆಯಿಂದ ಸುವರ್ಣಮಯ ತೇಜದಿಂದ ಗರಿಯೊಂದು ಕೆಳಗೆ ಬೀಳುತ್ತದೆ. ಅದನ್ನು ಕಂಡು "ಸುಪರ್ಣ..ಸುಪರ್ಣ '' ಎಂದು ಎಲ್ಲರೂ ಕೊಂಡಾಡುತ್ತಾರೆ. ಹಾಗಾಗಿಯೇ ಗರುಡನಿಗೆ "ಸುಪರ್ಣ " ಎಂಬ ಹೆಸರೂ ಬಂತು. ಗರುಡನ ಪರಾಕ್ರಮವನ್ನು ಕಂಡು ಸೋಲೊಪ್ಪಿಕೊಂಡ ಇಂದ್ರ ಸ್ನೇಹಹಸ್ತವನ್ನು ಬಯಸುತ್ತಾನೆ. ಒಪ್ಪಿದ ಗರುಡನಲ್ಲಿ "ನಿನಗೆ ಪ್ರಯೋಜನವಿಲ್ಲದ ಈ ಅಮೃತವನ್ನು ಯಾಕೆ ಕೊಂಡೊಯ್ಯುತ್ತಿದ್ದೀ..ಮರಳಿ ಕೊಟ್ಟುಬಿಡು" ಎಂದಾಗ.. "ಇದರಿಂದ ನನ್ನ ತಾಯಿಯ ದಾಸ್ಯ ವಿಮೋಚನೆಯಾಗಬೇಕು ಹಾಗಾಗಿ ಇದನ್ನು ಒಯ್ಯುತ್ತಿದ್ದೇನೆ..ಆದರೆ ಯಾವ ಕಾರಣಕ್ಕೂ ಸರ್ಪಗಳಿಗೆ ಕುಡಿಯಲು ಅವಕಾಶ ಮಾಡಿಕೊಡುವುದಿಲ್ಲ..ನಾನು ಅವುಗಳ ಮುಂದೆ ಇದನ್ನು ಇಟ್ಟ ಕೂಡಲೇ ನೀನು ಇದನ್ನು ಕೊಂಡೊಯ್ಯಬಹುದು" ಎಂದು ಹೇಳುತ್ತಾನೆ. ಇಂದ್ರನಿಗೆ ಸಂತೋಷವಾಗಿ ವರವೇನು ಬೇಕು ಎಂದು ಕೇಳಿದಾಗ ಸರ್ಪಗಳು ತನ್ನ ತಾಯಿಗೆ ಮಾಡಿದ ಮೋಸವನ್ನು ನೆನಪಿಸಿಕೊಂಡು '' ದುಷ್ಟರಾದ ಆ ಸರ್ಪಗಳೇ ತನಗೆ ಆಹಾರವಾಗಬೇಕೆಂದು ಕೇಳಿಕೊಳ್ಳುತ್ತಾನೆ. ಇಂದ್ರನು ವರರೂಪವಾಗಿ ಅದನ್ನು , "ಅಸ್ತು" ಎನ್ನುತ್ತಾನೆ. ಹಾಗೆ ಇಂದ್ರನನ್ನೂ ಹಿಂಬಾಲಿಸಲು ಹೇಳಿ ಅಮೃತದೊಂದಿಗೆ ತಾಯಿಯ ಬಳಿಗೆ ಬರುತ್ತಾನೆ. ಹೊರಟ ಕಾರ್ಯದಲ್ಲಿ ಯಶ ಸಾಧಿಸಿ ಬಂದ ಮಗನನ್ನು ನೋಡಿ ವಿನತೆಗೆ ಸಂತೋಷವಾಗುತ್ತದೆ. ವರರೂಪವಾಗಿ "ನಿನಗೆ ಮುಪ್ಪು.. ಮರಣ ಭಾಧಿಸದೇ ಇರಲಿ" ಎಂದು ಹೇಳುತ್ತಾಳೆ. ಕದ್ರು ಸುತರಾದ ಸರ್ಪಗಳ ಬಳಿ ಅಮೃತಕಲಶದೊಂದಿಗೆ ಸಾಗುತ್ತಾರೆ. " ನೀವು ಬಯಸಿದ ಅಮೃತವನ್ನು ತಂದಿದ್ದೇನೆ ಈ ಕ್ಷಣವೇ ನನ್ನ ತಾಯಿ ದಾಸಿಯಲ್ಲ ಎನ್ನುವುದನ್ನು ನೀವು ಘೋಷಿಸಬೇಕು '' ಎಂದಾಗ ಅಮೃತವನ್ನು ಕಂಡ ಸಂತೋಷದಲ್ಲಿ ಎಲ್ಲರೂ "ವಿನತೆ ಇನ್ನು ದಾಸಿಯಲ್ಲ" ಎಂದು ಹೇಳುತ್ತಾರೆ. ಆಗ ತಂದ ಅಮೃತಕಲಶವನ್ನು ಪವಿತ್ರವಾದ ದರ್ಭೆ ಬೆಳೆದ ಸ್ಥಳದಲ್ಲಿ ಇಟ್ಟು... . " ಇದನ್ನು ಸ್ನಾನಾದಿಗಳನ್ನು ಪೂರೈಸಿ ಶುಚಿರ್ಭೂತರಾಗಿ ಸೇವಿಸಿ '' ಎಂದು ಹೇಳುತ್ತಾನೆ. ಸರ್ಪಗಳು ಆತುರಾತುರವಾಗಿ ನದಿಯತ್ತ ಧಾವಿಸುತ್ತವೆ. ಇದೇ ಸಂದರ್ಭ ಕಾಯುತ್ತಿದ್ದ ದೇವೇಂದ್ರ ಅಮೃತಕಲಶವನ್ನು ಎತ್ತಿಕೊಂಡು ದೇವಲೋಕದತ್ತ ಸಾಗುತ್ತಾನೆ. ಇತ್ತ ಸ್ನಾನ ಸಂಧ್ಯಾದಿಗಳನ್ನು ಪೂರೈಸಿದ ಸರ್ಪಗಳು ಅಮೃತವಿದ್ದ ಸ್ಥಳಕ್ಕೆ ಧಾವಿಸಿ ಬರುತ್ತವೆ. ಇರಿಸಿದ ಅಮೃತಕಲಶವಿಲ್ಲ... ಆದರೂ ಆಮೃತ ಕಲಶವನ್ನಿಟ್ಟ ಸ್ಥಳದಲ್ಲಿದ್ದ ದರ್ಭೆಹುಲ್ಲುಗಳ ಮೇಲೆ ಅಮೃತ ಬಿದ್ದಿರಬಹುದೆಂಬ ಭ್ರಮೆಯಿಂದ ಆ ಧರ್ಭೆ ಹುಲ್ಲುಗಳನ್ನೇ ನೆಕ್ಕತೊಡಗುತ್ತವೆ. ಹರಿತವಾದ ಗರಿಯನ್ನು ಹೊಂದಿದ ದರ್ಭೆಯನ್ನು ನೆಕ್ಕಿದ ಕಾರಣದಿಂದ ಸರ್ಪಗಳ ನಾಲಿಗೆ ಸೀಳಿ ಇಭ್ಭಾಗವಾಯಿತು. ಅಂದಿನಿಂದ ಎಲ್ಲ ಸರ್ಪ ಸಂತತಿಯ ನಾಲಿಗೆಯೂ ಸೀಳಾಗಿಯೇ ಇದೆ. ಪವಿತ್ರವಾದ ಅಮೃತವನ್ನು ಇಟ್ಟಕಾರಣ... ಅಮೃತಸ್ಪರ್ಷವಾದ ದರ್ಭೆ ಪವಿತ್ರವಾಯಿತು.🙏🙏 ಹೊಸದೊಂದು ಕಥೆಯೊಂದಿಗೆ ಮುಂದಿನ ಬರಹ🙏

No comments:

Post a Comment