Thursday, June 5, 2025

ಗರುಡ ಜನ್ಮ

ಜನಮೇಜಯನ ಸರ್ಪಯಾಗಕ್ಕೆ ಕಾರಣವಾದ ಘಟನೆಗಳನ್ನು ಬರೆಯುವಾಗ ಅಕ್ಕತಂಗಿಯರಾದ ವಿನತೆ ಮತ್ತು ಕದ್ರೂ ಇವರಲ್ಲಿ ಏರ್ಪಟ್ಟ ಪಂದ್ಯ... ಕದ್ರೂವಿನ ಕುತಂತ್ರದಿಂದ ಸೋತು ಅವಳಿಗೇ ದಾಸಿಯಾದ ವಿನತೆಯ ಬಗ್ಗೆ ಹೇಳಿದ್ದೆ. ಪ್ರಬಲನಾಗಿ ಹುಟ್ಟಬೇಕಾಗಿದ್ದ ಒಂದು ಮಗು ವಿನತೆಯ ಅಸೂಯೆ ಮತ್ತು ಆತುರದ ಕಾರಣದಿಂದ ಹೆಳವನಾಗಿ ಹೋದ.. ಆದರೂ ದೈವ ನಿರ್ಣಯವೇ ಬೇರೆ ..ಹೆಳವನಾದ ವಿನತೆಯ ಹಿರಿಯ ಪುತ್ರ ಅರುಣನೆಂಬ ನಾಮದಿಂದ ಸೂರ್ಯನಾರಾಯಣನ ರಥದ ಸಾರಥಿಯಾದ. ಇಲ್ಲಿ ಅರುಣನು ಸೂರ್ಯರಥದ ಸಾರಥಿಯಾಗಲೂ ಒಂದು ಘಟನೆ ಕಾರಣವಾಗುತ್ತದೆ. ಸಮುದ್ರ ಮಂಥನದ ಕಾಲದಲ್ಲಿ ಉದ್ಭವಿಸಿದ ಅಮೃತವನ್ನು ವಿಷ್ಣು ಮೋಹಿನಿ ರೂಪದಿಂದ ದೇವತೆಗಳಿಗೆ ಹಂಚುವ ಸಂಧರ್ಭ.. ದೇವತೆಗಳ ಪಂಕ್ತಿಯಲ್ಲಿ ರಾಕ್ಷಸನೊಬ್ಬ ವಂಚನೆಯಿಂದ ಕುಳಿತು ಅಮೃತ ಕುಡಿದಿದ್ದನ್ನು ಸೂರ್ಯ ಚಂದ್ರರು ನೋಡುತ್ತಾರೆ,ಮತ್ತು ಮಹಾವಿಷ್ಣುವಿಗೆ ಸೂಚಿಸುತ್ತಾರೆ. ಮಹಾವಿಷ್ಣು ಕೂಡಲೇ ಸುದರ್ಶನ ಪ್ರಯೋಗದಿಂದ ಆತನ ತಲೆಯನ್ನು ಕತ್ತರಿಸುತ್ತಾನೆ. ಆದರೆ ಅದಾಗಲೇ ಅಮೃತ ಅವನ ದೇಹದಲ್ಲಿ ಸೇರಿಹೋಗಿದ್ದರಿಂದ ರುಂಡ ಮುಂಡಗಳು ಬೇರೆಯಾದರೂ ಬೇರೆ ಬೇರೆಯಾಗಿಯೇ ಉಳಿದುಕೊಂಡು ರಾಹು ಕೇತುಗಳೆಂಬ ಹೆಸರಿನಿಂದ ಉಳಿದುಕೊಂಡುಬಿಡುತ್ತಾರೆ. ಇದಕ್ಕೆ ಕಾರಣರಾದ ಸೂರ್ಯ ಚಂದ್ರರ ಬಗ್ಗೆ ದ್ವೇಶದಿಂದ ಆಗಾಗ ಅವರನ್ನು ಪೀಡಿಸತೊಡಗುತ್ತಾರೆ. ಹೀಗೆ ರಾಹುಕೇತುಗಳ ಪೀಡನೆಗೆ ಒಳಗಾದ ಸೂರ್ಯನಿಗೆ ಸಿಟ್ಟು ಬರುತ್ತದೆ ದೇವತೆಗಳ ಹಿತಕ್ಕಾಗಿ ತಾವು ಮಾಡಿದ ಕಾರ್ಯವಾದರೂ ತಮಗೆ ಸಂಕಷ್ಟ ಬಂದಾಗ ದೇವತೆಗಳು ಸಹಾಯಕ್ಕೆ ಬರಲಿಲ್ಲ ಹಾಗಿದ್ದರೆ ತನ್ನ ತೀಕ್ಷ್ಣವಾದ ಕಿರಣಗಳಿಂದ ಲೋಕವನ್ನೇ ನಾಶ ಮಾಡಿಬಿಡುತ್ತೇನೆ ಎಂದು ಬಿಸಿಯಾದ ಕಿರಣಗಳನ್ನು ಹೊರಸೂಸತೊಡಗಿದ. ಇದರಿಂದ ಲೋಕಗಳು ಬಸವಳಿದವು ದೇವತೆಗಳು ಚಿಂತಿತರಾದವರು ಬ್ರಹ್ಮದೇವರ ಬಳಿ ಓಡಿದರು. ಬ್ರಹ್ಮದೇವರು ಸೂರ್ಯದೇವನ ಕಿರಣದ ಉರಿಯನ್ನು ಹೀರಿ ಲೋಕವನ್ನು ಉಳಿಸಬೇಕಾದರೆ ಕಷ್ಯಪ ಮುನಿಯಿಂದ ವಿನತೆಯಲ್ಲಿ ಜನಿಸಿದ ಅರುಣನಿಗೆ ಮಾತ್ರ ಸಾಧ್ಯ ಎನ್ನುತ್ತಾನೆ. ಆಗ ದೇವತೆಗಳು ಅರುಣನನ್ನು ಪ್ರಾರ್ಥಿಸಿ ಸೂರ್ಯನ ರಥದ ಸಾರಥಿಯನ್ನಾಗಿ ಮಾಡುತ್ತಾರೆ. ಅರುಣನು ಸೂರ್ಯದೇವನ ಸುಡುವ ಕಿರಣಗಳನ್ನು ತಾನು ಹೀರಿಕೊಂಡು ಲೋಕಗಳನ್ನು ಸಂರಕ್ಷಿಸುತ್ತಾನೆ. ಹಾಗಾಗಿಯೇ ಕಿರಣೋದಯದ ಪೂರ್ವದಲ್ಲಿಯೇ ಅರುಣೋದಯ.. ಎಂದು ಹೇಳುವುದು ರೂಢಿ. ಇತ್ತ ಕದ್ರೂವಿನ ದಾಸ್ಯವನ್ನು ಅಂಗೀಕರಿಸಿದ ವಿನತೆ ದುಃಖದಿಂದ ಉಳಿದ ಒಂದು ಮೊಟ್ಟೆಯನ್ನು ನಿರ್ಲಕ್ಷಿಸಿಯೇಬಿಟ್ಟಳು. ಆದರೆ ಆ ನಿಯಾಮಕನ ನಿರ್ಣಯ ಮೀರಲು ಯಾರಿಗೆ ಸಾಧ್ಯ..? ಉಳಿದ ಆ ಒಂದು ಮೊಟ್ಟೆ ಸುದೀರ್ಘ ಒಂದು ಸಾವಿರ ವರ್ಷಗಳ ಕಾಲ ಬೆಳವಣಿಗೆಯನ್ನು ಹೊಂದಿತು. ಕಾಲ ಪರಿಪಕ್ವವಾದಾಗ ತಾನಾಗಿಯೇ ತನ್ನ ಹೊರ ಕವಚವನ್ನು ಬೇಧಿಸಿ ಹೊರ ಬಂದಿತು. ವಿಸ್ತಾರಾದ ರೆಕ್ಕೆಗಳನ್ನು ಹೊಂದಿ..ಮೊನಚಾದ ಕೊಕ್ಕನ್ನು ಹೊಂದಿ ಸೂಕ್ಷ್ಮವಾದ ಕೆಂಪಡರಿದ ಕಣ್ಣುಗಳನ್ನು ಹೊಂದಿದ ಪಕ್ಷಿಯ ಆಕಾರ.. ಒಮ್ಮೆಲೇ ದೇವತೆಗಳು ಕೂಡ ಬೆದರಿದರು. ಹಾಗೆ ಹುಟ್ಟಿದವನೇ ಮಹಾಬಲಿಷ್ಠನಾದ ಗರುಡ.... ಅವನ ದೇಹದಿಂದ ಹೊರಸೂಸುವ ತೇಜಸ್ಸು ಅಗ್ನಿಯ ಜ್ವಾಲೆಯನ್ನೂ ಮೀರಿಸುತಿತ್ತು ಇದನ್ನು ನೋಡಿದ ದೇವತೆಗಳು ಅಗ್ನಿಯೇ ಲೋಕಗಳನ್ನು ದಹಿಸಲು ಇಂತಹ ರೂಪವನ್ನು ಹೊಂದಿದ್ದಾನೆಂದು ಭಾವಿಸಿ ಅಗ್ನಿಯ ಸ್ತುತಿ ಮಾಡಿದರು. ಪ್ರತ್ಯಕ್ಷನಾದ ಅಗ್ನಿದೇವನು ಆ ರೂಪದಲ್ಲಿ ಕಾಣಿಸುತ್ತಿರುವುದು ವಿನತೆ ಪುತ್ರನಾದ ಗರುಡ ಎನ್ನುತ್ತಾನೆ. ಆಗ ದೇವತೆಗಳು ಗರುಡನ ಬಳಿ ಬಂದು ಘೋರ ರೂಪವನ್ನು ಮರೆಯಾಗಿಸಿ ಶಾಂತನಾಗಲು ಪ್ರಾರ್ಥಿಸುತ್ತಾರೆ. ದೇವತೆಗಳು ಹಾಗೆ ಹೇಳಿದಾಗ ಗರುಡ ಒಮ್ಮೆ ತನ್ನ ದೇಹವನ್ನೇ ನೋಡಿಕೊಳ್ಳುತ್ತಾನೆ ಅವರ ಮಾತು ಸರಿಯೆನಿಸಿ ಶಾಂತನಾಗುತ್ತಾನೆ. ಇತ್ತ ವಿನತೆಗೆ ತನ್ನ ಇನ್ನೊಂದು ಮೊಟ್ಟೆಗೆ ಒಂದು ಸಾವಿರ ವರ್ಷಗಳಾಗಿದ್ದು ಅರಿವಿಗೆ ಬರುತ್ತದೆ. ಹಾಗಾಗಿಯೇ ಅದನ್ನು ಇರಿಸಿದ ಸ್ಥಳಕ್ಕೆ ಬರುತ್ತಾಳೆ, ಅಂಡ ಒಡೆದುಹೋಗಿರುತ್ತದೆ. ಎದುರಿಗೆ ಬೃಹದಾಕಾರದ ಪಕ್ಷಿ ಕಾಣಿಸುತ್ತದೆ. ಹೆದರಿಕೆಯಿಂದಲೇ ನೀನಾರು ಎಂದು ಗರುಡನಲ್ಲಿ ಕೇಳುತ್ತಾಳೆ. ಅವನು ಅದೇ ಮೊಟ್ಟೆಯಿಂದ ಉದಿಸಿದವ ತಾನೆಂದು ಹೇಳಿ ತಾಯಿಗೆ ನಮಸ್ಕರಿಸುತ್ತಾನೆ. ವಿನತೆಗೆ ಪ್ರಬಲನಾದ ಮಗನನ್ನು ಪಡೆದೆ ಎಂಬ ಸಂತೋಷವಾಗುತ್ತದೆ. ಆದರೂ ಕದ್ರೂವಿನ ದಾಸ್ಯ ನೆನಪಾಗಿ ಗರುಡನ ಹೆಗಲೇರಿಯೆ ಕದ್ರೂವಿನ ಬಳಿಗೆ ತೆರಳುತ್ತಾಳೆ. ಗರುಡನೂ ದೊಡ್ಡಮ್ಮನಿಗೆ ನಮಸ್ಕರಿಸುತ್ತಾನೆ. ವಿನತೆ ಆತ ತನ್ನ ಮಗನೆಂದು ಹೇಳಿದಾಗ "ಎಷ್ಟಾದರೂ ದಾಸಿಯ ಮಗ ದೂರನಿಲ್ಲು" ಎಂದು ಹಳಿಯುತ್ತಾಳೆ.( ವ್ಯಾಸ ಮಹಾಭಾರತದಲ್ಲಿ ಕದ್ರೂ ವಿನತೆಯ ಅಕ್ಕ ಎಂದೂ ಕವಿ ಪರಮದೇವನ ತುರಂಗ ಭಾರತದಲ್ಲಿ ಆಕೆ ವಿನತೆಯ ತಂಗಿ ಎಂಬುದಾಗಿಯೂ ಇದೆ.) ಹೀಗಿರುವಾಗ ಒಂದು ದಿನ ಕದ್ರೂ ವಿನತೆಯನ್ನು ಕರೆದು "ಸಮುದ್ರ ಮಧ್ಯದಲ್ಲಿ ವಿಶ್ವಕರ್ಮನಿಂದ ನಿರ್ಮಿತವಾದ ವಿಶಿಷ್ಟವಾದ ರಮಣಕವೆಂಬ ದ್ವೀಪವಿದೆಯಂತೆ, ಅದನ್ನು ನೋಡಬೇಕಾಗಿದೆ ನೀನು ನನ್ನನ್ನು ಹೊತ್ತುಕೊಂಡು ಆ ದ್ವೀಪಕ್ಕೆ ಹೋಗು ನನ್ನ ಮಕ್ಕಳಾದ ಸರ್ಪಗಳು ನಿನ್ನ ಮಗನಾದ ಗರುಡನ ಬೆನ್ನೇರಲಿ" ಎಂದು ಆಜ್ಞಾಪಿಸುತ್ತಾಳೆ. ವಿನತೆ ಹಾಗೆಯೇ ಕದ್ರೂವನ್ನು ಹೊತ್ತುಕೊಳ್ಳುತ್ತಾಳೆ. ನಾಗಗಳು ಗರುಡನ ಬೆನ್ನೇರುತ್ತಾರೆ. ಗಗನ ಮಾರ್ಗದಲ್ಲಿ ಸಾಗುವಾಗ ಗರುಡ ಸೂರ್ಯನಿಗೆ ಸಮೀಪಿಸುತ್ತಾನೆ. ಸೂರ್ಯನ ಶಾಖದಿಂದ ಅವನ ಬೆನ್ನೇರಿದ್ದ ಸರ್ಪಗಳು ಪ್ರಜ್ಞಾಹೀನರಾಗಿ ಬೀಳತೊಡಗುತ್ತವೆ. ದುಃಖಿತಳಾದ ಕದ್ರೂ ಇಂದ್ರನನ್ನು ಪ್ರಾರ್ಥಿಸುತ್ತಾಳೆ. ಪ್ರಸನ್ನನಾದ ಇಂದ್ರ ಮಳೆ ಸುರಿಸುತ್ತಾನೆ, ಮಳೆಯಿಂದ ತಂಪಾಗಿ ಇಳೆಯಲ್ಲಿ ಬಿದ್ದ ಸರ್ಪಗಳು ಮತ್ತೆ ಚೇತನ ಹೊಂದುತ್ತವೆ. ಪುನಃ ರಮಣಕ ದ್ವೀಪದೆಡೆಗೆ ಪ್ರಯಾಣಿಸಿ ಅತಿ ಮನೋಹರವಾದ ಆ ಪ್ರದೇಶವನ್ನು ಎಲ್ಲರೂ ತಲುಪುತ್ತಾರೆ. ಅಲ್ಲಿಯ ಸೌಂಧರ್ಯವನ್ನು ನೋಡುತ್ತಾ ಕದ್ರೂ ಮತ್ತು ಆಕೆಯ ಪುತ್ರರಾದ ಸರ್ಪಗಳು ವಿಹರಿಸತೊಡಗುತ್ತಾರೆ. ಕೆಲವು ಕಾಲ ಕಳೆದ ಮೇಲೆ, ಕದ್ರೂ ಮತ್ತು ಆಕೆಯ ಪುತ್ರರು ಬೇರೊಂದು ದ್ವೀಪಕ್ಕೆ ಕರೆದುಕೊಂಡು ಹೋಗಲು ಗರುಡನಿಗೆ ಹೇಳುತ್ತಾರೆ. ಆಗ ಗರುಡನಿಗೆ ಅವರು ಹೇಳುವ ಶೈಲಿಯಲ್ಲಿ ತಮ್ಮದು ದಾಸ್ಯದ ಬದುಕು ಎಂಬ ಅರಿವಾಗುತ್ತದೆ. ತಾಯಿಯನ್ನು ಕರೆದು "ಅಮ್ಮಾ ಈ ದುಃಸ್ತಿತಿಗೆ ಕಾರಣವೇನು" ಎಂದು ಕೇಳುತ್ತಾನೆ. ವಿನತೆ ದುಃಖದಿಂದ ಹಿಂದೆ ನಡೆದ ಘಟನೆಯನ್ನು ಹೇಳುತ್ತಾಳೆ. ತಾಯಿಯ ದಾಸ್ಯ ನಿವಾರಣೆಗೆ ಬದಲಾಗಿ ಏನು ತಂದುಕೊಡಲಿ ಎಂದು ಕದ್ರೂವಿನಲ್ಲಿ ಕೇಳಿದಾಗ ಮಕ್ಕಳಲ್ಲಿಯೂ ವಿಚಾರಮಾಡಿ ಹೇಗಿದ್ದರೂ ಅಸಾಧ್ಯವಾದುದನ್ನೇ ಕೇಳಬೇಕೆಂದು "ತಮಗೆ ಅಮೃತವನ್ನು ತಂದುಕೊಟ್ಟರೆ ವಿನತೆಯ ದಾಸ್ಯ ನಿವಾರಣೆ " ಎಂದು ಹೇಳುತ್ತಾಳೆ...🙏🙏 ಗರುಡನ ಹಸಿವಿನ ನಿವಾರಣೆ... ಅವೃತಾಪಹರಣ ಮುಂದಿನ ಭಾಗ.. .

No comments:

Post a Comment