Wednesday, June 25, 2025
ಗಾಲವ
ಗಾಲವ..ಗುರುದಕ್ಷಿಣೆ...
ವಿಶಿಷ್ಟ ವಾದ ಗುರುದಕ್ಷಿಣೆಯನ್ನು ಸಲ್ಲಿಸುವ ಮುಖೇನ ಗುರುಭಕ್ತಿಯನ್ನು ಪ್ರಪಂಚಕ್ಕೆ ತೋರಿಸಿ ಕೊಟ್ಟ ಕಥೆಗಳನ್ನು ಹೇಳಲು ಹೊರಟವನಿಗೆ ಉತ್ತಂಕನ' ಕಥೆ ಹೇಳುತ್ತಾ ಜನಮೇಜಯನ ಸರ್ಪಯಾಗದ ಕಥೆಯವರೆಗೆ ಬರೆಯಬೇಕಾಗಿ ಬಂತು. ವಿಶಿಷ್ಟವಾದ ಗುರುದಕ್ಷಿಣೆಯನ್ನು ಸಲ್ಲಿಸಿದವರ ಪಟ್ಟಿಯಲ್ಲಿ "ಗಾಲವ " ಈ ಹೆಸರು ಪುರಾಣದಲ್ಲಿ ಹೆಚ್ಚು ಚರ್ಚೆಗೆ ಅವಕಾಶ ಮಾಡಿಕೊಟ್ಟದ್ದು ಎನ್ನಬಹುದೇನೋ... ರಾಮಾಯಣ..ಮಹಾಭಾರತಗಳಲ್ಲಿ ಕೆಲವು ಕಡೆ "ಗಾಲವ" ವಿಶ್ವಾಮಿತ್ರ ಶಿಷ್ಯನೆಂದೂ... ವಿಶ್ವಾಮಿತ್ರ ಪುತ್ರನೆಂದೂ ಹೇಳಲಾಗಿದೆ. ತ್ರಿಶಂಕುವಿನ ಸಂದರ್ಭದಲ್ಲಿ ಈತ ವಿಶ್ವಾಮಿತ್ರ ಪುತ್ರನೆಂದೇ ಹೇಳಿದ್ದಾರೆ. ಮಹಾಭಾರತದ "ಸಭಾಪರ್ವ " ದಲ್ಲಿ ಇವನನ್ನು ವಿಶ್ವಾಮಿತ್ರ ಶಿಷ್ಯನೆಂದು ಹೇಳಲಾಗಿದೆ. ಇಲ್ಲಿ ನಾನು ಬರೆಯಹೊರಟಿರುವುದು ವಿಶ್ವಾಮಿತ್ರ ಶಿಷ್ಯನಾದ ಗಾಲವನ ಬಗ್ಗೆ.
ವಶಿಷ್ಟ ವಿರೋಧವನ್ನು ಕಟ್ಟಿಕೊಂಡ ಕೌಶಿಕ ರಾಜ್ಯವನ್ನು ತೊರೆದು ತಪಸ್ಸಿಗೆ ತೆರಳಿ ವಿಶ್ವಾಮಿತ್ರನಾಗುವಲ್ಲಿ ನಡೆದ ಒಂದು ಘಟನೆ... ಯಮಧರ್ಮನು ವಿಶ್ವಾಮಿತ್ರರನ್ನು ಪರೀಕ್ಷಿಸಲು ವಶಿಷ್ಟರ ರೂಪವನ್ನು ಧರಿಸಿ ವಿಶ್ವಾಮಿತ್ರರ ಆಶ್ರಮಕ್ಕೆ ಬರುತ್ತಾನೆ. ವಿಶ್ವಾಮಿತ್ರನಿಗೆ ಒಮ್ಮೆಯೇ ಆತಂಕವಾಗುತ್ತದೆ...ತನ್ನ ವಿರೋಧಿಯಾದ ವಶಿಷ್ಟ... ಅದೂ ತನ್ನ ಆಶ್ರಮದ ಸಮ್ಮುಖದಲ್ಲಿ.... ಆದರೂ ವಾಸ್ತವಕ್ಕೆ ಬಂದು ಕರೆದು ಉಪಚರಿಸುತ್ತಾನೆ, ಬಂದ ಕಾರಣವನ್ನು ಕೇಳುತ್ತಾನೆ. ವಶಿಷ್ಟರು "ಅಯ್ಯಾ ವಿಶ್ವಾಮಿತ್ರರೇ ಹಸಿವಿನಿಂದ ಬಳಲಿದ ನಾನು ನಿಮ್ಮ ಆಶ್ರಮದಲ್ಲಿ ಭೋಜನಕ್ಕಾಗಿ ಬಂದಿದ್ದೇನೆ" ಎನ್ನುತ್ತಾರೆ. ಒಂದು ಕಡೆಯಲ್ಲಿ ಆಶ್ಚರ್ಯ ಮತ್ತೊಂದೆಡೆಯಲ್ಲಿ ಸಂತೋಷ... ಕ್ಷಣಕಾಲ ನಿರೀಕ್ಷೆ ಮಾಡಿದರೆ ಕೈಯಾರೆ ಚರುವನ್ನು ಸಿದ್ಧಪಡಿಸಿ ಬಡಿಸುವುದಾಗಿ ಹೇಳಿ ಅಡುಗೆಯ ಸಿದ್ಧತೆಯಲ್ಲಿ ತೊಡಗುತ್ತಾರೆ. ಅಡುಗೆಯನ್ನು ಮಾಡಿ ಅದನ್ನು ಬಡಿಸಲು ಆಶ್ರಮದ ಹೊರಬಂದು ನೋಡಿದರೆ ಅಲ್ಲಿ ವಶಿಷ್ಟರಿಲ್ಲ. ಸಿದ್ಧಪಡಿಸಿದ ಚರುವನ್ನು ತಲೆಯ ಮೇಲೆ ಹೊತ್ತು ವಶಿಷ್ಟರನ್ನು ಹುಡುಕುತ್ತಾ ಬರುತ್ತಾರೆ. ಹಾಗೆ ಸಾಗುತ್ತಿರುವಾಗ ವಶಿಷ್ಟರು ಕಾಣಸಿಗುತ್ತಾರೆ. ತಂದ ಅಡುಗೆಯನ್ನು ಉಣ್ಣಲು ಹೇಳಿದರೆ.. ತಾನು ಈಗಾಗಲೇ ಸಮೀಪದ ಆಶ್ರಮದಲ್ಲಿ ಆಹಾರವನ್ನು ಸೇವಿಸಿದ್ದಾಗಿಯೂ ನೀವು ಸಿದ್ಧಪಡಿಸಿದ ಚರುವನ್ನೂ ಸ್ವಲ್ಪ ಹೊತ್ತಿನಲ್ಲಿ ಬಂದು ಉಣ್ಣುವುದಾಗಿ ಹೇಳಿ ಹೋಗಿಬಿಡುತ್ತಾರೆ. ವಿಶ್ವಾಮಿತ್ರರು ತಲೆಯ ಮೇಲೆ ಚರುವನ್ನು ಹೊತ್ತು ಅಲ್ಲಿಯೇ ಕಾದು ನಿಲ್ಲುತ್ತಾರೆ. ದಿನಗಳು ಕಳೆಯತೊಡಗುತ್ತದೆ. ವಶಿಷ್ಟರು ಬರಲಿಲ್ಲ... ವಿಶ್ವಾಮಿತ್ರರ ನಿಂತಲ್ಲಿಂದ ಒಂದು ಹೆಜ್ಜೆಯನ್ನೂ ಕದಲಿಸಲಿಲ್ಲ.. ಈ ಸಂದರ್ಭದಲ್ಲಿ ವಿಶ್ವಾಮಿತ್ರರ ಬಳಿಯಲ್ಲಿದ್ದ ಗಾಲವನೆಂಬ ಶಿಷ್ಯ ಅವರ ಸೇವೆಯನ್ನು ಮಾಡತೊಡಗುತ್ತಾನೆ. ದಿನ ಕಳೆದು ತಿಂಗಳುಗಳು ಕಳೆದು ವರ್ಷಗಳೂ ಕಳೆಯತೊಡಗುತ್ತವೆ. ನಿಂತಲ್ಲಿಯೇ ನಿಂತ ವಿಶ್ವಾಮಿತ್ರ ಅವರ ಸೇವೆಯನ್ನು ಮಾಡುತ್ತಿರುವ ಗಾಲವ.. ಹೀಗೆ ಸುಧೀರ್ಘ ಒಂದು ನೂರು ವರ್ಷಗಳು ಕಳೆದುಬಿಡುತ್ತವೆ. ಸಂತೋಷಗೊಂಡ ಯಮಧರ್ಮ ಮತ್ತೆ ವಶಿಷ್ಟರ ರೂಪದಿಂದಲೇ ಬರುತ್ತಾನೆ.. ವಶಿಷ್ಟರನ್ನು ನೋಡಿದ ವಿಶ್ವಾಮಿತ್ರರು ಸಿದ್ಧ ಮಾಡಿ ತಲೆಯ ಮೇಲೆ ಹೊತ್ತಿದ್ದ ಚರುವನ್ನು ಕೆಳಗಿಳಿಸುತ್ತಾರೆ. ನೂರು ವರ್ಷಗಳು ಕಳೆದಿದ್ದರೂ ಮಾಡಿದ ಪಾಕ ತನ್ನ ಬಿಸಿಯನ್ನು ಕಳೆದುಕೊಳ್ಳದೇ ಈಗ ತಾನೇ ಒಲೆಯಿಂದ ಇಳಿಸಿದ ಪಕ್ವಾನ್ನದ ಹಾಗೆಯೇ. ಇರುತ್ತದೆ. ಸಂತೋಷದಿಂದ ಊಟ ಮಾಡಿದ ವಶಿಷ್ಟ ರೂಪದ ಯಮಧರ್ಮ ವಿಶ್ವಾಮಿತ್ರರನ್ನು ಹರಸಿ ಹೊರಟು ಹೋಗುತ್ತಾನೆ. ಇತ್ತ ವಿಶ್ವಾಮಿತ್ರರು ಸುದೀರ್ಘ ನೂರು ವರ್ಷಗಳ ಕಾಲ ನಿಂತಲ್ಲೇ ಇದ್ದ ತಮ್ಮನ್ನು ಸೇವೆ ಮಾಡಿದ ಗಾಲವನ ಗುರುಭಕ್ತಿಗೆ ಸೋತು ಎಲ್ಲಾ ವಿದ್ಯೆಗಳನ್ನು ಉಪದೇಶ ಮಾಡಿ ಹರಸುತ್ತಾರೆ. ಗಾಲವನೂ ಸಂತೋಷ ಹೊಂದುತ್ತಾನೆ. ಆದರೆ ತನ್ನನ್ನು ಸರ್ವ ವಿದ್ಯಾಪಾರಂಗತನನ್ನಾಗಿ ಮಾಡಿದ ಗುರುಗಳಿಗೆ ಗುರುದಕ್ಷಿಣೆಯನ್ನು ಕೊಡಬೇಕೆಂದು ತಿರ್ಮಾನಿಸುತ್ತಾನೆ. ಗುರುಗಳಲ್ಲಿ.. "ಸ್ವಾಮೀ ನಿಮ್ಮಿಂದ ನಾನು ಉದ್ಧರಿಸಲ್ಪಟ್ಟಿದ್ದೇನೆ ಸಕಲ ವಿದ್ಯೆಗಳೂ ಇಂದು ನನಗೆ ದೊರೆತವು ಇದಕ್ಕೆ ಕಾರಣರಾದ ಕರುಣಾಮಯಿಯಾದ ತಮಗೆ ಗುರುದಕ್ಷಿಣೆಯ ರೂಪದಲ್ಲಿ ಏನನ್ನು ಕೊಡಲಿ " ಎಂದು ಕೇಳುತ್ತಾನೆ. ವಿಶ್ವಾಮಿತ್ರರು "ಮಗೂ ಗಾಲವ... ಸುದೀರ್ಘ ನೂರು ವರ್ಷಗಳ ಕಾಲ ನನ್ನ ಸೇನೆಯನ್ನು ಮಾಡಿದ್ದಿ ಇದಕ್ಕಿಂತ ಮಿಗಿಲಾದ ಮತ್ತೊಂದು ಗುರುದಕ್ಷಿಣೆ ಬೇಡ.. ಗುರುದಕ್ಷಿಣೆ ಸಂದಿತು ಎಂದು ಭಾವಿಸಿಕೊಂಡು ಹೋಗಿ ನಿನ್ನ ಜೀವನವನ್ನು ನಡೆಸು" ಎಂದು ಹೇಳುತ್ತಾರೆ. ಇದನ್ನು ಕೇಳಿದ ಗಾಲವನಿಗೆ ಸಮಾಧಾನವಾಗುವುದಿಲ್ಲ ಗುರುಗಳಿಗೆ ಏನಾದರೂ ಕೊಡಬೇಕು ಎಂಬ ಭಾವನೆ ಹೋಗುವುದಿಲ್ಲ.. ಗುರುಗಳು ಏನನ್ನಾದರೂ ಕೇಳಿದರೆ ಬಡವನಾದ ತನ್ನ ಬಳಿ ಕೊಡಲು ಇದೆಯೇ ಎಂದೂ ಯೋಚಿಸಿದೇ ಮತ್ತೆ ಮತ್ತೆ ಕೇಳುತ್ತಾನೆ. ಇವನ ಮಾತಿನಿಂದ ವಿಶ್ವಾಮಿತ್ರರಿಗೆ ಸ್ವಲ್ಪ ಕೊಪವೇ ಬರುತ್ತದೆ. ಹಾಗಾಗಿಯೇ "ಏಕತ: ಶ್ಯಾಮ ಕರ್ಣಾನಾಂ ಹಯಾನಾಂ ಚನ್ದ್ರವರ್ಚಸಾಮ್ | ಅಷ್ಟೌ ಶತಾನಿ ಮೇ ದೇಹಿ ಗಚ್ಛ ಗಾಲವ ಮಾಚಿರಮ್ II " ಎಂದು ಹೇಳಿಬಿಡುತ್ತಾರೆ. ಒಂದು ಕಿವಿ ಕಪ್ಪಾಗಿರುವ ಬಿಳಿ ಬಣ್ಣದ ಎಂಟುನೂರು ಕುದುರೆಗಳನ್ನು ತಂದುಕೊಡು ಎಂದು ಕೇಳಿಬಿಡುತ್ತಾರೆ.🙏🙏...
ಅಶ್ವಶೋಧನೆಗೆ ಹೊರಡುವ ಗಾಲವನ ಬಗ್ಗೆ. ಮುಂದಿನ ಬರಹ🙏🙏
Subscribe to:
Post Comments (Atom)
No comments:
Post a Comment