Tuesday, August 12, 2025
ಚ್ಯವನ 1
ಈ ಹಿಂದೆ ನಾನು ಸರ್ಪಯಾಗದ ಬಗ್ಗೆ ಬರೆಯುವಾಗ ರುರು ಮತ್ತು ಪ್ರಮುಧ್ವರೆಯರ ಕಥೆಯನ್ನು ವಿವರಿಸುವಾಗ ಚ್ಯವನನ ಬಗ್ಗೆ ಬರೆದಿದ್ದೆ. ಇಲ್ಲಿ ಸ್ವಲ್ಪ ವಿಸ್ತಾರವಾಗಿ ಬರೆಯತೊಡಗಿದ್ದೇನೆ. ಭೃಗು ಮಹರ್ಷಿಗಳಿಗೆ ಪುಲೋಮೆ ಎಂಬ ಪ್ರೀತಿಯ ಹೆಂಡತಿಯಿದ್ದಳು. ಪತ್ನಿಯಾದ ಪುಲೋಮೆಯಿಂದ ತನಗಿಂತ ಹೆಚ್ಚು ತೇಜಸ್ವಿಯಾದ ಸಂತಾನವನ್ನು ಪಡೆಯಬೇಕೆಂದು ಭೃಗು ಮಹರ್ಷಿಗಳು ಆಶಿಸಿದ್ದರು. ಅಂತೆಯೇ ಪುಲೋಮೆ ಗರ್ಭವನ್ನು ಧರಿಸಿದ್ದಳು, ಹೀಗೆ ಸಂತಾನದ ನಿರೀಕ್ಷೆಯಲ್ಲಿಯೇ ಸತಿಪತಿಗಳು ಆನಂದದಿಂದ ಇದ್ದರು. ಎಂದಿನಂತೆ ಒಂದು ದಿನ ಭೃಗು ಮಹರ್ಷಿಗಳು ಸ್ನಾನ ಸಂಧ್ಯಾದಿ ನಿತ್ಯಕರ್ಮಗಳಿಗಾಗಿ ಆಶ್ರಮದಿಂದ ನದಿಯೆಡೆಗೆ ತೆರಳಿದರು. ಭೃಗು ಮಹರ್ಷಿಗಳು ಆಶ್ರಮವನ್ನು ಬಿಟ್ಟು ತೆರಳುವುದನ್ನೇ ಪುಲೋಮನೆಂಬ ರಾಕ್ಷಸ ನಿರೀಕ್ಷಿಸುತ್ತಿದ್ದ. ಅವರು ಅತ್ತ ಸಾಗಿದ ಮರುಕ್ಷಣವೇ ನಿಧಾನವಾಗಿ ಆಶ್ರಮದ ಪರಿಸರವನ್ನು ಪ್ರವೇಶಮಾಡಿದ. ಆಶ್ರಮದ ಹೊರಾವರಣದಲ್ಲಿ ಅಗ್ನಿಹೋತ್ರಕ್ಕಾಗಿ ಸ್ಥಾಪಿಸಿದ ಅಗ್ನಿದೇವ ಆನಂದದಿಂದ ಕಂಗೊಳಿಸುತ್ತಿದ್ದ. ಪುಲೋಮೆಯನ್ನು ಅಪಹರಿಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ಆಶ್ರಮ ಪ್ರವೇಶ ಮಾಡಿದ್ದ ರಾಕ್ಷಸನ ಕಣ್ಣಿಗೆ ಅಗ್ನಿದೇವ ಕಾಣಿಸಿದ. ಆಗ ಪುಲೋಮ ರಾಕ್ಷಸನ ಮನಸ್ಸಿನಲ್ಲಿದ್ದ ಅನುಮಾನಕ್ಕೆ ಸರಿಯಾದ ಉತ್ತರವನ್ನು ಅಗ್ನಿ ಕೊಡುತ್ತಾನೆ ... ಕೊಡಬಲ್ಲನೆಂದು ಭಾವಿಸಿ ಅವನಲ್ಲೇ ಕೇಳಿದ.. " ಅಯ್ಯಾ ಅಗ್ನಿಯೇ ಈ ಆಶ್ರಮದಲ್ಲಿ ವಾಸವಾಗಿರುವ ಸುಂದರಿಯಾದ ಪುಲೋಮೆ ನನಗೆ ಸೇರಿದವಳು... ಇವಳ ಬಾಲ್ಯಾವಸ್ಥೆಯಲ್ಲಿಯೇ ಇವಳ ತಂದೆ ಈಕೆ ನನಗೆ ಸೇರಿದವಳೆಂದು ಆಡಿದ್ದಾನೆ. ಆದರೆ ದುಷ್ಟನಾದ ಆತ ನನಗರಿವಿಲ್ಲದಂತೆ ಪ್ರಾಯಕ್ಕೆ ಬಂದ ಈಕೆಯನ್ನು ಈ ಬ್ರಾಹ್ಮಣನಿಗೆ ಮದುವೆ ಮಾಡಿ ಕೊಟ್ಟುಬಿಟ್ಟ. ನನಗೆ ತಿಳಿಯದ ಹಾಗೆ ಈಕೆ ಇಲ್ಲಿ ಈ ಬಡ ಮುನಿಯೊಂದಿಗೆ ಸಂಸಾರ ನಡೆಸುತ್ತಾ ಇದ್ದಾಳೆ. ಆದರೆ ಇವಳ ತಂದೆಯಾಡಿದ ಮಾತಿನ ಪ್ರಕಾರ ಇವಳು ನನಗೇ ಸೇರಬೇಕಾದವಳು ... ಈ ನನ್ನ ನಿರ್ಣಯ ಸರಿಯಲ್ಲವೇ ನೀನೇ ಹೇಳು". ಹೀಗೆಂದು ಅಗ್ನಿಯಲ್ಲಿ ಕೇಳಿದ... ಉತ್ತರ ಬರಲಿಲ್ಲ, ಮತ್ತೆ ಮತ್ತೆ ಕೇಳಿದ... ಆಗ ಅಗ್ನಿ ಕೂಡ ಯೋಚಿಸತೊಡಗಿದ, ಬಾಲ್ಯದಲ್ಲಿ ಕೊಡುತ್ತೇನೆ ಎಂದು ಹೇಳಿದ ಕಾರಣ ನಿನಗೆ ಸೇರಬೇಕು ಎಂದು ಹೇಳಿದರೆ ಭೃಗು ಶಪಿಸುತ್ತಾನೆ. ನಿನಗೆ ಅಧಿಕಾರ ಇಲ್ಲವೆಂದರೆ ರಾಕ್ಷಸ ಪೀಡಿಸುತ್ತಾನೆ... ಆಗ ಅನಿವಾರ್ಯವಾಗಿ ಅಗ್ನಿ ಪುಲೋಮ ರಾಕ್ಷಸನನ್ನು ಹತ್ತಿರ ಕರೆದು ಗುಟ್ಟಾಗಿ ಹೇಳುತ್ತಾನೆ.. " ಅಯ್ಯಾ ಅಸುರಾ... ಇವಳ ತಂದೆ ಬಾಲ್ಯದಲ್ಲಿಯೇ ನಿನಗೀಯುತ್ತೇನೆಂದು ಹೇಳಿದ ಕಾರಣದಿಂದ ಅವಳು ನಿನಗೆ ಸೇರಬೇಕಾದವಳೇ ಆದರೂ ... ಮುಂದೆ ಆತನೇ ನನ್ನನ್ನು ಸಾಕ್ಷಿಯನ್ನಾಗಿಟ್ಟುಕೊಂಡು ಯಥಾವಿದಿಯಿಂದ ವೇದೋಕ್ತ ಕರ್ಮಗಳಿಂದ ಭೃಗುವಿಗೆ ನೀಡಿದ್ದಾನೆ.. ಹಾಗಾಗಿ ಪುಲೋಮೆ ಈಗ ಭೃಗುವಿಗೇ ಸೇರಬೇಕಾದವಳು ಇದು ಸತ್ಯ ಇನ್ನು ಮುಂದಿನ ನಿರ್ಧಾರ ನಿನ್ನದು". ( ಇಲ್ಲಿ ತರ್ಕಿಸಬೇಕಾದ್ದು.. ಪುಲೋಮೆಯ ತಂದೆ ಆಕೆಯನ್ನು ಯಾವ ಕಾಲದಲ್ಲಿಯೂ ರಾಕ್ಷಸನಿಗೆ ಕೊಟ್ಟಿದ್ದು ಸುಳ್ಳಾಗಿರಬಹುದು... ಹಾಗೆಂದು ಮಕ್ಕಳು ಬಾಲ್ಯದಲ್ಲಿ ಹಠ ಮಾಡಿದಾಗ ನಿನ್ನನ್ನು ಅವರಿಗೆ ಕೊಡುತ್ತೇನೆ ... ಇವರಿಗೆ ಕೊಡುತ್ತೇನೆ ಎಂದು ಹೆದರಿಸುವುದಿಲ್ಲವೇ.. ಇದೂ ಹಾಗೇ ಆಗಿರಬೇಕು)
ಅಗ್ನಿಯಾಡಿದ ಮಾತುಗಳನ್ನು ಕೇಳಿಸಿಕೊಂಡ ಪುಲೋಮ ರಾಕ್ಷಸ ಹೆಚ್ಚು ಯೋಚಿಸುವ ಗೊಡವೆಗೇ ಹೋಗಲಿಲ್ಲ. ಒಂದು ಕ್ರೂರವಾದ ಹಂದಿಯ ರೂಪವನ್ನು ತಳೆದು ಆಶ್ರಮದಲ್ಲಿದ್ದ ಗರ್ಭಿಣಿ ಪುಲೋಮೆಯನ್ನು ಅಪಹರಿಸಿಕೊಂಡು ವೇಗವಾಗಿ ಹೊರಟುಬಿಟ್ಟ. ಹಾಗೆ ಸಾಗುವಾಗ ಗರ್ಭದಲ್ಲಿದ್ದ ಶಿಶುವಿಗೆ ಇದನ್ನು ತಿಳಿದು ಕ್ರೋಧವುಂಟಾಯಿತು, ಸಿಟ್ಟುಗೊಂಡ ಶಿಶು ಗರ್ಭದಿಂದ ತಾನಾಗಿಯೇ ಹೊರ ಜಾರಿ ಭೂಮಿಗೆ ಬಿತ್ತು. ನೆಲಕ್ಕೆ ಬಿದ್ದ ಆ ಹಸುಗೂಸು ತಕ್ಷಣ ತನ್ನ ತಾಯಿಯನ್ನು ಅಪಹರಿಸಿಕೊಂಡು ಹೋಗುತ್ತಿದ್ದ ರಾಕ್ಷಸನನ್ನು ದುರುಗುಟ್ಟಿ ನೋಡಿತು. ಬಲಿಷ್ಠನಾಗಿದ್ದ ಪುಲೋಮ ಕ್ಷಣಮಾತ್ರದಲ್ಲಿ ಶಿಶುವಿನ ಕಣ್ಣಿನಿಂದ ಹೊರಟ ಕ್ರೋಧಾಗ್ನಿಗೆ ಭಸ್ಮವಾಗಿ ಹೋದ. ಋಷೀಪತ್ನಿ ಪುಲೋಮೆ ತಕ್ಷಣವೇ ನೆಲದ ಮೇಲೆ ಬಿದ್ದಿದ್ದ ತನ್ನ ಶಿಶುವನ್ನು ಎತ್ತಿಕೊಂಡು ದುಃಖದಿಂದ ಆಶ್ರಮದತ್ತ ನಡೆದು ಬರತೊಡಗಿದಳು. ಹಾಗೆ ಆಶ್ರಮದತ್ತ ಆಕೆ ಸಾಗಿ ಬರುವಾಗ ಅವಳ ಕಣ್ಣಿನಿಂದ ಕೆಳಗಿಳಿದ ಕಣ್ಣೀರು ನದಿಯಾಗಿ ಹರಿದು "ವಧೂಸರ '' ಎಂಬ ಹೆಸರಿನಿಂದ ಪ್ರಖ್ಯಾತವಾಯಿತು. ಅತ್ತ ಪುಲೋಮೆಯ ಗರ್ಭದಿಂದ ಜಾರಿದ ಕಾರಣಕ್ಕಾಗಿ ಆ ಶಿಶುವಿಗೆ ಬ್ರಹ್ಮ ಸಂಕಲ್ಪದಂತೆ ಬಂದ ಹೆಸರು "ಚ್ಯವನ ". 🙏🙏
ಮುಂದುವರಿಯುವುದು🙏
Subscribe to:
Post Comments (Atom)
No comments:
Post a Comment