Saturday, August 9, 2025
ವೃತ್ರಾಸುರ 7
ಮಹಾ ಬಲಶಾಲಿಯಾದ ವೃತ್ರಾಸುರ ಆಕ್ರಮಣಕ್ಕಾಗಿ ಬರುತಿದ್ದ ದೇವಸೇನೆಯನ್ನು ಏಕಾಂಗಿಯಾಗಿ ಕ್ರೋಧದಿಂದ ತಡೆದು ನಿಲ್ಲಿಸುತ್ತಾನೆ. "ಎಲೈ ದೇವತೆಗಳಿರಾ... ಹೇಡಿಗಳಂತೆ ರಣಾಂಗಣಕ್ಕೆ ಬೆನ್ನು ಹಾಕಿ ಓಡಿ ಹೋಗುತ್ತಿರುವ ನಮ್ಮವರನ್ನು ಹೊಡೆದು ಕೊಲ್ಲುವುದು ಪರಾಕ್ರಮವಲ್ಲ... ನಿಜವಾಗಿ ನಿಮಗೆ ಸಾಮರ್ಥ್ಯವಿರುವುದೇ ಆದರೆ ಒಂದು ಘಳಿಗೆಯಾದರೂ ನನ್ನೊಂದಿಗೆ ನಿಂತು ಯುದ್ಧವನ್ನು ಮಾಡಿ, ನನ್ನ ಪರಾಕ್ರಮ ಏನೆಂಬುದನ್ನು ತೋರಿಸಿಕೊಡುತ್ತೇನೆ". ಎಂದು ಹೇಳುತ್ತಾ ಕೈಯಲ್ಲಿ ತ್ರಿಶೂಲವನ್ನು ಹಿಡಿದು ಘರ್ಜಿಸುತ್ತಾ ಮುಂದೊತ್ತಿ ಬಂದ. ಅವನ ವೀರವಾಣಿಯನ್ನು ಕೇಳುತ್ತಲೇ ದೇವತೆಗಳಲ್ಲಿ ಕೆಲವರು ಮೂರ್ಛಿತರಾದರು, ಹಾಗೆ ನೆಲಕ್ಕುರುಳಿದ ದೇವತೆಗಳನ್ನು ತುಳಿಯುತ್ತಲೇ ಅವನು ಮುಂದೆ ಸಾಗಿ ಬರುತಿದ್ದ. ವೃತ್ರಾಸುರ ಈ ರೀತಿಯಲ್ಲಿ ಕ್ರೋಧದಿಂದ ಸಾಗಿ ಬರುತ್ತಿರುವುದನ್ನು ನೋಡಿದ ಇಂದ್ರ ವಜ್ರಾಯುಧಪಾಣಿಯಾಗಿ ಐರಾವತವನ್ನೇರಿ ಅವನನ್ನು ಎದುರಿಸಲು ಮುಂದಾಗುತ್ತಾನೆ.
ತನ್ನ ಸಮ್ಮಖಕ್ಕೆ ಸಾಗಿ ಬರುತ್ತಿರುವ ಇಂದ್ರನನ್ನು ನೋಡಿದ ವೃತ್ರ ಬಲವಾದ ಒಂದು ಗದೆಯಿಂದ ಐರಾವತದ ನೆತ್ತಿಗೆ ಹೊಡೆಯುತ್ತಾನೆ. ಅವನ ಗದಾಪ್ರಹಾರಕ್ಕೆ ಐರಾವತವೆಂಬ ಆ ದಿಗ್ಗಜವೂ ಒಂದು ಕ್ಷಣ ನೋವಿನಿಂದ ಫೀಳಿಡುತ್ತಾ ಇಪ್ಪತ್ತೆಂಟು ಗಜಗಳಷ್ಟು ಹಿಂದೆ ಸರಿಯುತ್ತದೆ. ತಕ್ಷಣದಲ್ಲಿಯೇ ಇಂದ್ರನು. ಅಮೃತವನ್ನೇ ಸ್ಪುರಿಸುವ ಅನುಭವ ನೀಡುವ ತನ್ನ ಕೈಯಿಂದ ಅದರ ನೆತ್ತಿಯನ್ನು ನೇವರಿಸಿ ನೋವು ಶಮನವಾಗುವಂತೆ ಮಾಡುತ್ತಾನೆ. ಹಾಗೆ ಐರಾವತವನ್ನು ಸಂತೈಸಿದ ದೇವೆಂದ್ರ ಮತ್ತೂ ಕೃದ್ಧನಾಗಿ ಸಿಂಹನಾದಗೈಯತ್ತಾ ವೃತ್ರನ ಸಮ್ಮಖಕ್ಕೆ ಬರುತ್ತಾನೆ. ಸ್ವತಃ ಇಂದ್ರನೇ ತನ್ನ ಸಮ್ಮಖಕ್ಕೆ ಬರುತ್ತಿರುವುದನ್ನು ನೋಡಿ ವೃತ್ರಾಸುರನ ಕ್ರೋಧ ಇಮ್ಮಡಿಯಾಯಿತು. ಹಾಗಾಗಿ ಇಂದ್ರನನ್ನು ಉದ್ದೇಶಿಸಿ " ದೇವೇಂದ್ರಾ... ಬ್ರಾಹ್ಮಣನೂ... ನಿನ್ನ ಗುರುವೂ... ಹಾಗೆಯೇ ನನ್ನ ಸಹೋದರನೂ ಆಗಿದ್ದ ವಿಶ್ವರೂಪನನ್ನು ನಿರ್ದಯಿಯಾದ ನೀನು ಕೊಂದು ಕಳೆದಿದ್ದೀ .. ನಿನ್ನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದೇ ನನ್ನ ಜನನವಾಗಿದೆ, ಇದೋ ನನ್ನ ಕೈಯಲ್ಲಿರುವ ಶೂಲದಿಂದ ನಿನ್ನನ್ನು ಇರಿದು ಕೊಂದೆನಾದರೆ ನಾನು ನನ್ನ ಅಣ್ಣನ ಋಣವನ್ನು ತೀರಿಸಿದ ಹಾಗಾಗುತ್ತದೆ. ನೀನೇ ನೀನಾಗಿ ನನ್ನ ಸಮ್ಮುಖಕ್ಕೆ ಬಂದುದೇ ಒಳ್ಳೆಯದಾಯಿತು, ದಯಾಹೀನನೂ ನಿರ್ಲಜ್ಜನೂ ಆದ ನಿನ್ನನ್ನು ಸ್ವರ್ಗ ಲಕ್ಷ್ಮಿಯೂ ಕೂಡ ತೊರೆದು ಹೋಗಿದ್ದಾಳೆ. ಹೇಗೆ ನನ್ನಣ್ಣನಾದ ವಿಶ್ವರೂಪನ ಮೂರೂ ತಲೆಗಳನ್ನು ನೀನು ಕತ್ತರಿಸಿ ಹಾಕಿದೆಯೋ ಅದೇ ರೀತಿ ನಾನು ದುಷ್ಟನಾದ ನಿನ್ನ ತಲೆಯನ್ನೂ ಕತ್ತರಿಸಿ ಕೆಡುಹುವೆನು, ಅದೋ ಅಲ್ಲಿ ನಿನ್ನ ಆಜ್ಞಾಪಾಲಕರಾದ ಸುರರು ರಣದಲ್ಲಿ ಸೋತು ಪಲಾಯನ ಮಾಡುತ್ತಿರುವ ನನ್ನವರನ್ನು ಹಿಂಬಾಲಿಸಿ ಕೊಲ್ಲುತ್ತಿದ್ದಾರೆ... ಈ ಕ್ಷಣದಲ್ಲಿ ನಾನು ನಿನ್ನನ್ನು ಕೊಂದೆನಾದರೆ ಅವರೂ ನಿರ್ಗತಿಕರಾಗುತ್ತಾರೆ". ಹೀಗೆಂದು ಹೇಳುತ್ತಾ ಇಂದ್ರನಿಗೆ ಎದುರಾದ ವೃತ್ರನ ಕ್ರೋಧಕ್ಕೆ ದೇವತೆಗಳು ಮೂರ್ಛಿತರಾದರು.
ಇಂದ್ರನ ಕೈಯಲ್ಲಿರುವ ವಜ್ರಾಯುಧವನ್ನು ನೋಡಿದ ವೃತ್ರ.. " ಅಯ್ಯಾ ನಡೆಯುವಂತಹ ಯುದ್ಧಕ್ಕೆ ಬೇಕಾದ ಸಿದ್ಧತೆಯನ್ನು ನೀನು ಮಾಡಿಕೊಂಡೇ ಬಂದಿದ್ದೀ ಎಂದು ಕೇಳಿದ್ದೇನೆ. ನಿನ್ನ ಕೈಯಲ್ಲಿರುವ ಆಯುಧ ವಿಷ್ಣುವಿನ ಶಕ್ತಿಯ ಮತ್ತು ದಧೀಚಿಯ ತ್ಯಾಗದ ಫಲ ಎಂಬುದೂ ತಿಳಿದಿದೆ... ಮುಂದಾಗುವ ಯುದ್ಧದಲ್ಲಿ ನೀನೇನಾದರೂ ಆ ಆಯುಧವನ್ನೆ ಬಳಸಿ ನನ್ನನ್ನು ಕೊಲ್ಲುವ ಸಾಧ್ಯತೆಯೂ ಇದೆ ಆದರೆ ಅಂಜಿಕೆಯಿಂದ ನಾನು ನನ್ನ ಉದ್ದೇಶದಿಂದ ಹಿಂದೆ ಸರಿಯಲಾರೆ.. ಯಾಕೆಂದರೆ ನಿನ್ನ ಕೈಯಲ್ಲಿರುವ ವಜ್ರವನ್ನು ನೋಡಿದ ಮೇಲೆ ನೀನು ಕೈಗೊಂಡ ಕಾರ್ಯ ವಿಷ್ಣು ಸಂಕಲ್ಪ ಎಂಬುದರಲ್ಲಿ ಎರಡು ಮಾತಿಲ್ಲ... ಪ್ರಪಂಚದ ಚರಾಚರಗಳಲ್ಲಿ ಅವ್ಯಕ್ತನಾಗಿರುವ.. ಯೋಗಿಗಳ ಸಂಮುಖದಲ್ಲಿ ಸದಾ ವ್ಯಕ್ತನಾಗಿಯೇ ಇರುವ ಆ ಭಗವಂತನ ಸಂಕಲ್ಪ ಹೇಗಿದೆಯೋ... ಆದರೆ ನನಗೆ ಅವನ ಹೊರತಾದ ಸ್ವರ್ಗಕಾಮವಿಲ್ಲ... ಅವನಿರುವ ಲೋಕದ ಮೋಕ್ಷ ಸ್ಥಾನದ ಅಭಿಲಾಷೆಯೂ ಇಲ್ಲ... ಯಾಕೆಂದರೆ ಜನ್ಮ ಜನ್ಮಾಂತರದ ಪಾಪವನ್ನು ತೊಳೆದುಕೊಳ್ಳದೆ ಅದು ನನಗೆ ದಕ್ಕುವುದೂ ಇಲ್ಲ, ಆದರೆ ವಿಷ್ಣು ಸಾನ್ನಿಧ್ಯಕ್ಕೆ ಕರೆದೊಯ್ಯಬಲ್ಲ ಸಜ್ಜನರ ಸಂಗ ದೊರೆತರೆ ಸಾಕು. ಅದನ್ನು ನಾನು ಪೌರುಷದಿಂದಲೇ ಪಡೆಯುವೆ ". ಎಂದು ಹೇಳುತ್ತಾ ಆಕ್ರಮಣಕ್ಕೆ ಸಿದ್ಧನಾದ.
ಕ್ರುದ್ಧನಾಗಿ ಇಂದ್ರನ ಎದುರಾಗಿ ಬಂದ ವೃತ್ರ ತನ್ನ ಕೈಯಲ್ಲಿದ್ದ ಶೂಲದಿಂದ ಇಂದ್ರನನ್ನು ಘಾತಿಸಲು ಮುಂದಾದ. ಅವನು ಶೂಲದಿಂದ ತಿವಿಯಲು ತನ್ನ ಬಲಿಷ್ಠವಾದ ಬಾಹುವನ್ನು ಮುಂದೆ ಚಾಚಿದ ಕೂಡಲೇ ದೇವೇಂದ್ರ ಸ್ವಲ್ಪವೂ ಅಂಜಿಕೊಳ್ಳದೇ ಹರಿತವಾದ ನೂರು ಅಲಗುಗಳನ್ನು ಹೊಂದಿದ ತನ್ನ ವಜ್ರಾಯುಧದಿಂದ ಅವನ ಬಲತೋಳನ್ನೇ ಕತ್ತರಿಸಿಹಾಕಿದ. ದೇವತೆಗಳಲ್ಲ ಈ ಕಾರ್ಯದಿಂದ ಸಂತೋಷಗೊಂಡು ಜಯಕಾರ ಮಾಡಿದರು. ತನ್ನ ಒಂದು ಬಾಹುವನ್ನು ಮತ್ತು ಶೂಲಾಯುಧವನ್ನೂ ಕಳೆದುಕೊಂಡರೂ ವೃತ್ರಾಸುರ ಎದೆಗುಂದಲಿಲ್ಲ.. ಮತ್ತೊಂದು ಕೈಯಿಂದ ಪರಿಘಾಯುಧವನ್ನು ಹಿಡಿದು ಇಂದ್ರನಿಗೂ ಅವನೇರಿದ ಐರಾವತಕ್ಕೂ ಅಪ್ಪಳಿಸಿದ. ಬೀಸಿದ ರಭಸ ಹೇಗಿತ್ತೆಂದರೆ... ಇಂದ್ರನೇರಿದ ದಿಗ್ಗಜ ಒಂದು ಕ್ಷಣ ಕಂಪಿಸಿತು. ಇಂದ್ರನ ಕೈಯಲ್ಲಿದ್ದ ವಜ್ರಾಯುಧ ಜಾರಿ ಬಂದು ವೃತ್ರನ ಸಮ್ಮುಖದಲ್ಲಿ ಬಿದ್ದಿತು.🙏🙏
ಮುಂದುವರಿಯುವುದು🙏
Subscribe to:
Post Comments (Atom)
No comments:
Post a Comment