Wednesday, August 27, 2025

ಚ್ಯವನ 6

ಸೀಮಿತವಾದ ಪರಿವಾರವನ್ನು ಹಿಂದಿಟ್ಟುಕೊಂಡು ಚ್ಯವನಾಶ್ರಮವನ್ನು ಶರ್ಯಾತಿ ಸೇರಿದ. ಮಹರ್ಷಿಗಳಿಗೆ ವಂಧಿಸಿ ತಾನು ತನ್ನ ಪುತ್ರಿಯನ್ನು ಶಾಸ್ತ್ರೋಕ್ತವಾಗಿ ಧಾರಾಪೂರ್ವಕವಾಗಿ ನೀಡಲು ಸಿಧ್ಧನಾಗಿರುವುದಾಗಿ ಹೇಳಿದ. ಶರ್ಯಾತಿಯ ಮಾತಿನಿಂದ ಚ್ಯವನಮಹರ್ಷಿಗಳಿಗೂ ಸಂತೋಷವಾಯಿತು. ಕ್ಷಿಪ್ರ ಸಮಯದಲ್ಲಿಯೇ ಅಲ್ಲೊಂದು ಮದುವೆಯ ಸಿದ್ಧತೆಯಾಗಿ ಸಂಭ್ರಮದಿಂದಲೇ ತನ್ನ ಪುತ್ರಿಯನ್ನು ಶರ್ಯಾತಿ ಮಹಾರಾಜ ಚ್ಯವನ ಮಹರ್ಷಿಗೆ ಮದುವೆ ಮಾಡಿಕೊಟ್ಟ... ಜೊತೆಗೆ ಅಪಾರವಾದ ಸಂಪತ್ತನ್ನೂ ಕೂಡ ಬಳುವಳಿಯ ರೂಪದಲ್ಲಿ ಕೊಡಲು ಮುಂದಾದ. ಆದರೆ ಸ್ವಾಭಿಮಾನಿಯಾದ ಚ್ಯವನ " ಅರಸ.. ನಿನ್ನ ಮಗಳ ಹೊರತಾಗಿ ತಾನು ಬೇರೆ ಏನನ್ನೂ ಸ್ವಿಕರಿಸಲಾರೆ" ಎಂದು ನಿರ್ಧಾಕ್ಷಿಣ್ಯದಿಂದಲೇ ಆಡಿದ. ಇದನ್ನು ಕೇಳಿ ತಾನು ಅರ್ಪಿಸಬೇಕೆಂದುಕೊಂಡಿದ್ದ ಸಂಪತ್ತು, ಸುವಸ್ತುಗಳನ್ನು ಅರಸ ಹಿಂದೆ ಪಡೆಯಬೇಕಾಯ್ತು. ಸುವ್ಯವಸ್ಥಿತವಾಗಿ ಮದುವೆ ಮಾಡಿಕೊಟ್ಟ ಶರ್ಯಾತಿ ಮಹಾರಾಜ ಒಂದೆರಡು ದಿನ ಅಲ್ಲಿಯೇ ಪರಿವಾರದೊಂದಿಗೆ ಉಳಿದ. ಅಲ್ಲಿಯವರೆಗೆ ಒಂದು ಎಲೆಮನೆಯನ್ನು ಕೂಡ ಮಾಡಿಕೊಂಡಿರದ ಮಹರ್ಷಿ ಇಂದು ಸಂಸಾರಿಯಾದ ಕಾರಣ ಒಂದು ಎಲೆಮನೆಯನ್ನು ನಿರ್ಮಿಸಲಾಯಿತು. ಅರಸನ ರಾಣಿಯರ ಮುಖದಲ್ಲಿ ಸಲ್ಪವೂ ಸಂತೋಷ ಸಮಾಧಾನಗಳಿರಲಿಲ್ಲ. ಅರಮನೆಯಲ್ಲಿ ಸುಖದಲ್ಲಿ ಕಾಲ ಕಳೆದ ರಾಜಕುಮಾರಿ ಅರಣ್ಯದ ಮಧ್ಯದಲ್ಲಿ ಸಾಮಾನ್ಯವಾದ ಎಲೆ ಮನೆಯಲ್ಲಿ ಬದುಕಬೇಕಾದ ಸ್ಥಿತಿ ಬಂದೊದಗಿತಲ್ಲಾ.. ಎಂಬುದೇ ಅವರ ಕಣ್ಣಿನಲ್ಲಿ ಕಂಬನಿ ತುಂಬಿಸಿತ್ತು. ಹೇಗೋ ಎರಡು ದಿನಗಳನ್ನು ಕಳೆದಮೇಲೆ ರಾಜ ಪರಿವಾರ ಹಿಂತಿರುಗುವುದೆಂದು ನಿರ್ಧಾರವಾಯಿತು. ಆ ಸಮಯಕ್ಕೆ ಸರಿಯಾಗಿ ಸುಕನ್ಯೆ ತನ್ನ ಸೇವಕಿಯರಿಗೆ ಹೇಳಿ ಮುನಿವಧುಗಳು ಉಡುವ ನಾರು ಸೀರೆಯನ್ನು ತರಿಸಿಕೊಂಡಳು. ತಾನು ಧರಿಸಿದ್ದ ಎಲ್ಲಾ ಅಭರಣಗಳನ್ನು ತೆಗೆದು, ತೊಟ್ಟ ರಾಜೋಚಿತವಾದ ಬಟ್ಟೆಗಳನ್ನು ಕಳಚಿ ದಾಸಿಯರು ತಂದ ನಾರುಡುಗೆಯನ್ನು ಉಟ್ಟಳು. ಎಲ್ಲಾ ಆಭರಣ,ಬಟ್ಟೆಗಳನ್ನು ಅರಮನೆಗೆ ಹಿಂತಿರುಗುವ ದಾಸಿಯರ ಕೈಗಿತ್ತಳು. ಕೆಲವು ಹೊತ್ತಿನ ಹಿಂದೆ ಸರ್ವಾಲಂಕಾರ ಭೂಷಿತೆಯಾಗಿ ಕಂಗೊಳಿಸುತಿದ್ದ ಸುಕನ್ಯೆ ಈಗ ನಾರುಡುಗೆಯಲ್ಲಿ ಹೊರ ಬಂದಿದ್ದು ನೋಡಿ ರಾಣಿಯರ ದುಃಖದ ಕಟ್ಟೆ ಒಡೆಯಿತು.. ಎಲ್ಲರೂ ರೋಧಿಸತೊಡಗಿದರು. ಅಳುತ್ತಿದ್ದ ಮಾತೆಯರನ್ನು ಸುಕನ್ಯೆ ತಾನೇ ಮುಂದಾಗಿ ಸಂತೈಸಿದಳು. ಶರ್ಯಾತಿ ಮಹಾರಾಜ ಸುಕನ್ಯೆಗೆ ಮತ್ತೆ ಮತ್ತೆ ಆಶ್ರಮದ ಜೀವನದ ಬಗ್ಗೆ ಹೇಳಿ ಋುಷಿ ಸೇವೆಯಲ್ಲಿ ಎಲ್ಲಿಯೂ ತೊಡಕು ಬಾರದಂತೆ ನಡೆದುಕೊಳ್ಳುವಂತೆ ಎಚ್ಚರಿಸಿ, ಚ್ಯವನ ಮಹರ್ಷಿಗೆ ವಂದಿಸಿ ಆತನ ಅಪ್ಪಣೆಯನ್ನು ಪಡೆದು ಪರಿವಾರದೊಂದಿಗೆ ರಾಜ್ಯದತ್ತ ಪ್ರಯಾಣಿಸಿದ. ಈಗ ಸುಕನ್ಯೆಗೆ ಆಶ್ರಮವಾಸ... ಸಾಂಧರ್ಭಿಕವಾಗಿ ಎರಡು ದಿನಗಳಿಂದ ನನ್ನನ್ನು ತುಂಬಾ ಕಾಡುತ್ತಿರುವ ಕನಕದಾಸರ ಪದ..ಎರಡು ದಿನಗಳ ಹಿಂದೆ ತೀರಿಹೋದ "ಕಟಗೇರಿ ಅನಂತಾಚಾರ್ಯರು " ಕಟಗೇರಿ ದಾಸರೆಂದೇ ಪ್ರಸಿದ್ಧರಾಗಿ ದಾಸರ ಪದಗಳನ್ನು ಎಲ್ಲೆಲ್ಲಿಯೂ ಪಸರಿಸುವಂತೆ ಮಾಡಿದವರು. ಇವರಿಗೆ ಪ್ರಸಿಧ್ಧರಾದ ಹಲವಾರು ಶಿಷ್ಯರಿದ್ದಾರೆ. ಅಶೋಕವನದಲ್ಲಿದ್ದ ಸೀತೆಯನ್ನು ಕಂಡು ಮಾತಾಡಿದ ಹನೂಮಂತನಲ್ಲಿ ಆಕೆ ಕೇಳುವ ಮಾತು... " ನನ್ನ ಕಂದ ಹಳ್ಳಿಯ ಹನುಮ... ಚೆನ್ನಾಗಿಹರೆ ಲಕ್ಷ್ಮಣ ದೇವರು... ಶ್ರೀಪತಿ ರಾಘವ ಕ್ಷೇಮದಲ್ಲಿಹರೆ. ತುಪ್ಪ ಪಂಚಾಮೃತ ಅಂದು... ಅಡವಿ ಗಡ್ಡೆಗಳಿಂದು.. ಕರ್ಪೂರ ವೀಳ್ಯ ಅಂದು.. ಕುರುಕು ಇಂದು, ಸುಪ್ಪತ್ತಿಗೆ ಮಂಚ ಅಂದು ... ಹುಲ್ಲು ಹಾಸಿಗೆಯಿಂದು, ಶ್ರೀಪತಿ ರಾಘವ ಕ್ಷೇಮದಲ್ಲಿಹರೆ. ನವವಸ್ತ್ರಗಳು ಅಂದು.. ನಾರಸೀರೆಗಳಿಂದು, ಹೂವಿನ ಗಂಟು ಅಂದು... ಜಡೆಗಳಿಂದು, ಜವ್ವಾಜಿ ಕತ್ತುರಿಯಂದು.. ಭಸಿತ ಧೂಳಿಂದು, ಶ್ರೀವರ ರಾಘವ ಕ್ಷೇಮದಲ್ಲಿಹರೆ. ಕನಕ ರಥಗಳಂದು.. ಕಾಲು ನಡಿಗೆಯಿಂದು, ಘನ ಛತ್ರ ಚಾಮರ ಅಂದು.. ಬಿಸಿಲು ಇಂದು, ಸನಕಾದಿ ಓಲೈಪೆ ಆದಿಕೇಶವ ನಮ್ಮ ಹನುಮೇಶ ರಾಘವ ಕ್ಷೇಮದಲ್ಲಿಹರೆ. ಈ ಪದವನ್ನು ಅದೆಷ್ಟೋ ಪ್ರಸಿದ್ಧ ಗಾಯಕರು ತುಂಬಾ ಚನ್ನಾಗಿಯೇ ಹಾಡಿದ್ದಾರೆ . ಆದರೆ ಕಟಗೇರಿ ದಾಸರು ಹಾಡಿದ್ದನ್ನು ಕೇಳಿದರೆ ಒಂದು ಕ್ಷಣ ನಾವೇ ಅಶೋಕವನದಲ್ಲಿ ಸೀತೆಯ ಸಮ್ಮುಖದಲ್ಲಿ ಕೈ ಜೋಡಿಸಿ ನಿಂತ ಹನೂಮನಾಗಿಬಿಡಬೇಕು. ಇಲ್ಲಿ ಪ್ರಸ್ತುತ ಸುಕನ್ಯೆಯ ಬದುಕೂ ಅದೇ ಅಲ್ಲವೆ.. ಒಂದು ಕ್ಷಣದ ಹಿಂದೆ ಎಲ್ಲವೂ ಇತ್ತು... ಈಗ ಏನೂ ಇಲ್ಲ. ಹಾಗೆಂದು ಯಾರೂ ಒತ್ತಾಯಪೂರ್ವಕವಾಗಿ ಅದನ್ನು ಕಸಿದುಕೊಳ್ಳಲಿಲ್ಲ.. ಸ್ವತಃ ಆಕೆಯೇ ಅದನ್ನು ತೊರೆದಿದ್ದಾಳೆ. ಸಾಮಾನ್ಯರಾದ ನಮಗೆ ಇರುವ ವ್ಯವಸ್ಥೆಯಲ್ಲಿ ಸ್ವಲ್ಪ ಲೋಪವಾದರೆ, ಸಿಗಬೇಕಿದ್ದು ಸಿಗಲು ಒಂದು ಕ್ಷಣ ವಿಳಂಬವಾದರೆ ಅಸಹನೆ.. ಸಿಟ್ಟು ಆವರಿಸಿಬಿಡುತ್ತದೆ. ಆದರೆ ತಾನು ಬದುಕಿನಲ್ಲಿ ಅಳವಡಿಸಿಕೊಂಡು ಬೆಳೆದ ಎಲ್ಲವನ್ನು ಕ್ಷಣಮಾತ್ರದಲ್ಲಿ ಯಾವ ಚಿಂತೆಯೂ ಇಲ್ಲದೆ ತೊರೆದುಬಿಡಲು ಸುಕನ್ಯೆಯಂತವರಿಗೆ, ಸಾವಿತ್ರಿಯಂತವರಿಗೆ, ಶ್ರೀರಾಮನಂತವರಿಗೆ ಮಾತ್ರ ಸಾಧ್ಯ. 🙏🙏 ಸುಕನ್ಯೆ ಆಶ್ರಮ ಜೀವನ ಮುಂದಿನ ಬರಹ..🙏🙏

No comments:

Post a Comment