Saturday, August 2, 2025

ವೃತ್ರಾಸುರ 5

ದೇವತೆಗಳನ್ನೆಲ್ಲಾ ತನ್ನ ಜೊತೆಗೆ ಕೊಡಿಕೊಂಡು ಬಂದ ಇಂದ್ರ ದದೀಚಿ ಮಹರ್ಷಿಗಳ ದರ್ಶನ ಮಾಡಿ ಕೈಮುಗಿದು ನಿಲ್ಲುತ್ತಾನೆ. ಬಂದಂತಹ ದೇವತೆಗಳನ್ನು ನೋಡಿದ ದದೀಚಿ ಮಹರ್ಷಿ ಅವರನ್ನ ಸತ್ಕರಿಸಿ ತನ್ನಾಶ್ರಮದವರೆಗೆ ಆಗಮಿಸಿದ ಉದ್ದೇಶವನ್ನು ತಿಳಿಸಿರೆಂದು ಕೇಳಿಕೊಳ್ಳುತ್ತಾನೆ. ಆಗ ಇಂದ್ರಾದಿಗಳು ವೃತ್ರಾಸುರನ ಉತ್ಪತ್ತಿಯ ವಿದ್ಯಮಾನವನ್ನು ತಿಳಿಸಿ ಅವನನ್ನು ವಧಿಸುವ ಸಲುವಾಗಿ ತಮ್ಮ ಅಮೂಲ್ಯವಾದ ದೇಹವನ್ನು ದಾನ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ಆ ಮಾತನ್ನು ಕೇಳಿದ ದದೀಚಿ ಮಹರ್ಷಿ " ಅಯ್ಯಾ ಇಂದ್ರಾದಿ ದೇವತೆಗಳೇ... ನೀವು ದರ್ಶನಭಾಗ್ಯವನ್ನು ಕರುಣಿಸಿದ್ದು ನನಗೆ ಪುಣ್ಯದಾಯಕವೇ ಹೌದು ಆದರೆ.. ನೀವು ಅಪೇಕ್ಷಿಸುತ್ತಿರುವುದನ್ನು ಕೇಳಿದಾಗ ಆಶ್ಚರ್ಯ ಎಂದೆನಿಸುತ್ತಿದೆ. ಈ ಪ್ರಪಂಚದಲ್ಲಿ ಯಾವುದೇ ಜೀವಿಯೇ ಆಗಿರಲಿ ತನ್ನ ದೇಹದ ಮೇಲೆ ಅಭಿಮಾನವನ್ನು ಹೊಂದಿರುತ್ತದೆ. ತನ್ನ ದೇಹ ಪೋಷಣೆಗೆ ಬೇಕಾದ್ದನ್ನು ಗಳಿಸಲು ಸಾಹಸ ಪಡುತ್ತದೆ. ಭೂಮಿಯಲ್ಲಿ ಹುಟ್ಟಿದ್ದೇವೆ ಎಂದಾದರೆ ನಮ್ಮ ಅಸ್ತಿತ್ವವನ್ನು ತೋರಿಸುವುದೇ ದೇಹವಲ್ಲವೇ... ದೇಹವನ್ನು ತೊರೆದಲ್ಲಿಗೇ ಆ ಜೀವಿಯ ಅಂತ್ಯವಾಯಿತು ಎಂಬುದು ಸತ್ಯ. ಈ ನೆಲೆಯಲ್ಲಿಯೇ ಅಲ್ಲವೇ ಪ್ರತಿಯೊಂದು ಜೀವಿಯೂ ದೇಹ ತೊರೆಯುವಾಗ ಅಂದರೆ ಮರಣ ಕಾಲದಲ್ಲಿ ದುಃಖಿಸುವುದು ಅಯ್ಯೋ ಬಿಟ್ಟು ಹೋಗುವೆನಲ್ಲಾ.. ಎಂದು, ಹಾಗಿದ್ದಾಗ ನನಗೂ ಕೂಡ ಅಂತಹ ದೇಹಾಭಿಮಾನ ಇದ್ದರೆ ತಪ್ಪಲ್ಲ ತಾನೆ. ಈ ಜೀವನದಲ್ಲಿ ಏನನ್ನು ಸಾಧಿಸಿದೆನೋ ಅದೆಲ್ಲವೂ ಈ ದೇಹದಿಂದ ಎಂದು ಭಾವಿಸಿದರೆ ತಪ್ಪೇ..? ಹಾಗಿರುವಾಗ ಅಂತಹ ದೇಹವನ್ನೇ ನೀವು ಬಯಸಿದರೆ ಅದನ್ನು ಅಷ್ಟು ಸುಲಭವಾಗಿ ಕೊಟ್ಟುಬಿಡುತ್ತೇನೆ ಎಂದು ಹೇಳಲಾದೀತೆ..'' . ಹೀಗೆ ದೇವತೆಗಳ ಮುಂದೆ ಪ್ರಶ್ನಾರ್ಥಕವಾಗಿ ವಿಷಯವನ್ನು ಮುಂದಿಟ್ಟರು. ಮಹರ್ಷಿಗಳ ಮಾತಿಗೆ ಪ್ರತಿಯಾಗಿ ಇಂದ್ರ.. "ಸ್ವಾಮೀ ಕರ್ಮಭೂಮಿಯಲ್ಲಿ ಹುಟ್ಟಿದ ಸಾಮಾನ್ಯ ಜೀವಿಗಳಿಗೆ ನೀವು ಹೇಳಿದಂತೆ ದೇಹಾಭಿಮಾನ ಸಹಜ ಆದರೆ ನಿಮ್ಮಂತಹ ಜ್ಞಾನಿಗಳು ಲೋಕಕಲ್ಯಾಣದ ಕಾರಣಕ್ಕಾಗಿಯೇ ಸಮಸ್ತವನ್ನು ವಿನಿಯೋಗಿಸುವವರು, ಕೊಡು ಎಂದು ಕೇಳುವವರು ಸ್ವಾರ್ಥಿಗಳಾಗಿರುತ್ತಾರೆ. ಅವರಿಗೆ ಕೊಡುವವರ ಕಷ್ಟ ಗೊತ್ತಾಗುವದಿಲ್ಲ ಹಾಗೇ ಗೊತ್ತಾದರೆ ಅವರು ಕೇಳಲಾರರು, ಇನ್ನು ಕೊಡುವವನಿಗೂ ಕೇಳುವವನ ಕಷ್ಟದ ಅರಿವಿರುವುದಿಲ್ಲ ಹಾಗೆ ಅರಿವಿಗೆ ಬಂದರೆ ಅವನು ಇಲ್ಲಾ ಎಂದು ಹೇಳುವುದೂ ಇಲ್ಲ. ನೀವು ಗಳಿಸಿದ ವಿದ್ಯಾ ಸಂಪತ್ತೋ... ತಪ: ಶ್ಯಕ್ತಿಯೋ ಅದು ಲೋಕೋದ್ಧಾರಕ್ಕೆ ವಿನಿಯೋಗವಾದರೆ ಅದರಿಂದ ಅತ್ಯಂತ ಸಂತೋಷ ಹೊಂದುವವರು ನೀವು. ಈ ದೇಹ ಎಂಬುದು ನಿಮಗೆ ಕೇವಲ ಒಂದು ಮಾಧ್ಯಮ ಅಷ್ಟೇ ಅಲ್ಲವೇ... ನೀವು ಹೀಗೆ ಭಾವಿಸಿದ್ದೀರಿ ಎಂಬ ಕಾರಣದಿಂದಲೇ ಶ್ರೀಮನ್ಮಹಾವಿಷ್ಣು ನಮ್ಮನ್ನು ನಿಮ್ಮ ಬಳಿಗೆ ಕಳುಹಿಕೊಟ್ಟಿದ್ದಾನೆ. ದುಷ್ಟನಾದ ವೃತ್ರನನ್ನು ತರಿದು ಲೋಕ ಲೋಕಗಳಿಗೆ ಕ್ಷೇಮವನ್ನು ಉಂಟುಮಾಡಲು ಯೋಗ, ವ್ರತಾನುಷ್ಠಾನಗಳಿಂದ ಕಠಿಣವಾದ ನಿಮ್ಮ ದೇಹದಿಂದಲೇ ವಿಶಿಷ್ಟವಾದ ಒಂದು ಆಯುಧ ಸಿದ್ಧವಾಗಬೇಕಾಗಿದೆ". ಇಂದ್ರನಾಡಿದ ಮಾತನ್ನು ಕೇಳಿದ ದದೀಚಿ ಮಹರ್ಷಿ ಆಶ್ಚರ್ಯದಿಂದ ... " ಏನೂ ಮಹಾವಿಷ್ಣು ಆಡಿದ ಮಾತೇ ಇದು... ದೇವತೆಗಳೇ ನಿಮ್ಮಿಂದ ಧರ್ಮಸಮ್ಮತವಾದ ಮಾತುಗಳನ್ನೇ ಕೊಳಬೇಕೆಂದು ಬಯಸಿ ನಾನು ಮೊದಲಾಡಿದ ಮಾತುಗಳು . ಅಳಿದು ಹೋಗಬೇಕಾದ ಈ ದೇಹ ದುಃಖದಲ್ಲಿರುವ ನೀವೋ ಅಲ್ಲಾ ನಿಮ್ಮ ಮುಖೇನ ಲೋಕದ ಉದ್ಧಾರಕ್ಕೆ ವಿನಿಯೋಗವಾಗುತ್ತದೆ ಎಂದಾದರೆ ಅದೇ ಭಾಗ್ಯವಲ್ಲವೆ... ಈ ದೇಹ ಪಂಚಭೂತಗಳನ್ನು ಬಳಸಿಕೊಂಡು ಪುಷ್ಠವಾಗಿರುವುದು. ಮುಂದೆ ಇದು ಅಲ್ಲಿಯೇ ಲೀನವಾಗಬೇಕಾದ್ದು ಆದರೆ.... ಅದೂ ವ್ಯರ್ಥವಾಗಿ ಮಣ್ಣಿನಲ್ಲಿ ಮಣ್ಣಾಗಿ ಹೋಗದೇ ನಿಮ್ಮ ಉಪಯೋಗಕ್ಕೆ ಬರುವುದು ಎಂದಾದರೆ ಈಗಲೇ ನಾನು ನಿಮಗಾಗಿ ನನ್ನ ದೇಹವನ್ನು ತೊರೆಯುತ್ತೇನೆ. ಈ ದೇಹವನ್ನು ನಿಮಗೆ ಬೇಕಾದ ಹಾಗೆ ಬಳಸಿಕೊಳ್ಳಬಹುದು". ಹೀಗೆ ಹೇಳಿದ ದದೀಚಿ ಮಹರ್ಷಿಗಳು ತಮ್ಮ ಸಾಂಸಾರಿಕವಾದ ಎಲ್ಲ ಕಟ್ಟುಗಳನ್ನು ಕತ್ತರಿಸಿ, ಇಂದ್ರಿಯ, ಪ್ರಾಣ, ಮನಸ್ಸು, ಬುದ್ಧಿ, ಎಲ್ಲವನ್ನೂ ಸಂಯಮಕ್ಕೆ ತಂದುಕೊಂಡು ತಮ್ಮನ್ನು ಪರಬ್ರಹ್ಮನಲ್ಲಿ ಲೀನಗೊಳಿಸಿದವರಾಗಿ ಯೋಗದಿಂದ ಅವರ ದೇಹವನ್ನು ತೊರೆದು ಬಿಟ್ಟರು. 🙏 ಮುಂದುವರಿಯುವುದು 🙏🙏

No comments:

Post a Comment