Friday, August 15, 2025

ಚ್ಯವನ 3

ಭೃಗು ಪುತ್ರನಾದ ಚ್ಯವನನು ಬೆಳೆಯುತ್ತಾ ವೇದಗಳನ್ನಭ್ಯಾಸ ಮಾಡಿ, ಧ್ಯಾನ ತಪಸ್ಸನ್ನಾಚರಿಸುತ್ತ ಕಾಲವನ್ನು ಕಳೆಯುತ್ತಿದ್ದನು. ಹೀಗೆ ಒಮ್ಮೆ ನರ್ಮದಾ ತೀರದ ವೈಢೂರ್ಯ ಪರ್ವತದ ತಪ್ಪಲಿನಲ್ಲಿ ಒಂದು ಪ್ರಶಸ್ತವಾದ ಸ್ಥಳದಲ್ಲಿ ತಪಸ್ಸನ್ನಾಚರಿಸುತ್ತ ಕುಳಿತನು. ಬಹುಕಾಲ ಸಂದುಹೋಯಿತು, ಏಕಾಗ್ರಚಿತ್ತನಾಗಿದ್ದ ಚ್ಯವನನಿಗೆ ಕಾಲದ ಪರಿವೆಯೇ ಇರಲಿಲ್ಲ. ಅವನು ಕುಳಿತಿದ್ದ ಸ್ಥಳದ ಸುತ್ತಲೂ ಗಿಡಗಳು ಹುಟ್ಟಿ ಬೆಳೆದು ಹೆಮ್ಮರಗಳಾದವು. ಅವನ ದೇಹವನ್ನು ಬಳಸಿ ಹುತ್ತವೊಂದು ಬೆಳೆದು ನಿಂತಿತು. ಇದಾವುದರ ಪರಿವೆಯೂ ಅವನಿಗಿರಲಿಲ್ಲ. ಯೋಗ ಬಲದಿಂದ ಅವನ ದೇಹಕ್ಕೆ ಆಹಾರ ಬೇಕೆನಿಸಲಿಲ್ಲ. ವೈವಸ್ವತ ಮನುವಿಗೆ ಒಂಬತ್ತು ಜನ ಮಕ್ಕಳು, ಅವರಲ್ಲಿ ಶರ್ಯಾತಿ ಒಬ್ಬ, ಶರ್ಯಾತಿಗೆ ನಾಲ್ಕು ಸಾವಿರ ಜನ ಪತ್ನಿಯರಾದರೂ ಮಕ್ಕಳು ಮಾತ್ರ ಎರಡು ಜನ. ಪುತ್ರನ ಹೆಸರು "ಆನರ್ತ " "ಸುಕನ್ಯಾ" ಎಂಬ ಪುತ್ರಿ. ಪ್ರಾಯದಿಂದ ಶೋಭಿಸುತ್ತಿದ್ದ ಸುಕನ್ಯೆ ಮನ್ಮಥನರಸಿಯಾದ ರತಿಗೂ ಮೀರಿದ ಸೌಂದರ್ಯದಿಂದ ಕಂಗೊಳಿಸುತಿದ್ದಳು. ಒಂದು ದಿನ ಶರ್ಯಾತಿ ಮಹಾರಾಜ ತನ್ನ ಪರಿವಾರದೊಂದಿಗೆ ವಿಹಾರಾರ್ಥವಾಗಿ ಚ್ಯವನ ತಪಸ್ಸನ್ನು ಆಚರಿಸುತ್ತಿದ್ದ ಪ್ರದೇಶಕ್ಕೆ ಬಂದ. ಅರಸನ ಪರಿವಾರಕ್ಕೆ ನರ್ಮದಾ ತೀರದಲ್ಲಿ ವ್ಯವಸ್ಥಿತವಾದ ಬಿಡಾರಗಳನ್ನು ನಿರ್ಮಿಸಲಾಯಿತು. ಅರಮನೆಯ ಸ್ತ್ರೀಯರು ಸಂತೋಷದಿಂದ ಜಲಕೇಳಿ., ವನಕೇಳಿ ಎಂದು ತಮ್ಮಿಷ್ಟದಂತೆ ಆನಂದಿಸತೊಡಗಿದರು. ಪರಿವಾರದಲ್ಲಿದ್ದ ಸುಕನ್ಯೆಯೂ ಸಖಿಯರನ್ನು ಕೂಡಿಕೊಂಡು ನಲಿಯುತ್ತಾ ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದಳು. ಮುಂದೆ ಸಾಗುತ್ತಾ ಅವಳು ಏಕಾಂಗಿಯಾಗಿ ಒಂದು ವೃಕ್ಷದ ನೆರಳಿನಲ್ಲಿ ಆಟವಾಡುತ್ತಾ ಕುಳಿತಳು, ಅವಳು ಕುಳಿತ ಸ್ಥಳದ ಎದುರಿನಲ್ಲಿಯೇ ಎತ್ತರಕ್ಕೆ ಬೆಳೆದ ಹುತ್ತ... ಅದು ಚ್ಯವನನನ್ನು ಆವರಿಸಿ ಬೆಳೆದಿದ್ದು. ಹುತ್ತದ ಎದುರು ಕುಳಿತಿದ್ದ ಸುಕನ್ಯೆಯ ಗಮನ ಹುತ್ತದತ್ತ ಹೋಯಿತು. ಅಲ್ಲಿ ಯಾವುದೋ ಪ್ರಕಾಶಮಾನವಾದ ಮಣಿಗಳೆರಡು ಹುತ್ತದ ಮಧ್ಯದಲ್ಲಿ ಹೊಳೆಯುತ್ತಿರುವದನ್ನು ನೋಡಿದಳು. ಅದೇ ಕ್ಷಣದಲ್ಲಿ ತಪೋಮಗ್ನನಾಗಿದ್ದ ಚ್ಯವನನಿಗೂ ಎಚ್ಚರವಾಗಿತ್ತು. ತನ್ನನ್ನು ಆವರಿಸಿದ ಆ ಹುತ್ತದ ಒಳಗಿನಿಂದಲೇ ಸುಕನ್ಯೆಯನ್ನು ಕರೆದು ಮಾತನಾಡಿದ.. ಆದರೆ ಆಹಾರವಿಲ್ಲದೆ ಕೃಶವಾಗಿದ್ದ ಅವನ ಬಾಯಿಯಿಂದ ಹೊರಟ ಧ್ವನಿ ಸುಕನ್ಯೆಗೆ ಕೇಳಿಸಲೇ ಇಲ್ಲ. ಅವಳು ಅಲ್ಲಿ ಹೊಳೆಯುತ್ತಿರುವ ವಸ್ತುವೇನೆಂದು ತಿಳಿಯಬೇಕೆಂಬ ಕುತೂಹಲದಿಂದ ಒಂದು ಮುಳನ್ನು ತೆಗೆದು ಚುಚ್ಚಿದಳು, ತನ್ನ ಕಣ್ಣುಗಳಿಗೇ ಆಕೆ ಚುಚ್ಚಿದ ಕಾರಣದಿಂದ ಮಹರ್ಷಿಗೆ ಸಹಿಸಲಾರದ ನೋವಾಯಿತು. ಕಣ್ಣುಗಳಿಂದ ಧಾರಾಕಾರವಾಗಿ ರಕ್ತ ಸುರಿಯತೊಡಗಿತು. ಇದರಿಂದ ಬೆದರಿದ ಸುಕನ್ಯೆ ಅಲ್ಲಿಂದ ಹೊರಟುಬಿಟ್ಟಳು. ಚ್ಯವನನಿಗೆ ನೋವಿನ ಜೊತೆಯಲ್ಲಿಯೇ ಸಿಟ್ಟೂ ಬಂತು, ಅದರ ಪರಿಣಾಮವಾಗಿಯೇ ಅಲ್ಲಿ ಬಿಡಾರಗಳನ್ನು ನಿರ್ಮಿಸಿಕೊಂಡಿದ್ದ ಶರ್ಯಾತಿಯ ಪರಿವಾರ ಬಳಲಿತು. ಚ್ಯವನನ ಕೋಪ ರಾಜ ಪರಿವಾರದವರ ಮಲ-ಮೂತ್ರವನ್ನು ನಿರ್ಭಂಧಿಸಿ ಬಿಟ್ಟಿತ್ತು. ಎಲ್ಲರ ಹೊಟ್ಟೆಯೂ ಉಬ್ಬರಿಸಿತು ಯಾವ ಔಷಧವೂ ಪರಿಣಾಮ ಬೀರಲಿಲ್ಲ, ರಾಜ ವೈದ್ಯರು ರೋಗದ ಕಾರಣವೇನೆಂದು ತಿಳಿಯದೆ ಕೈಚೆಲ್ಲಿದರು. 🙏 ಮುಂದುವರಿಯುವುದು.🙏

No comments:

Post a Comment