Thursday, May 29, 2025
ಸರ್ಪ ಸತ್ರ ಮುಂದಿನ ಭಾಗ...
ಜನಮೇಜಯನ ಸರ್ಪ ಸತ್ರ.. ಮುಂದುವರಿದು...
ವ್ಯವಸ್ಥಿತವಾದ ಯಜ್ಞಶಾಲೆ ನಿರ್ಮಾಣವಾಯಿತು.
ಯಜ್ಞ ನಡೆಸಲು ಬೇಕಾದ ಋತ್ವಿಜರೂ ಸೇರಿದರು.. ಯಜ್ಞಕುಂಡದ ಪೂರ್ವಭಾಗದಲ್ಲಿ ಕುಳಿತು ಖುಗ್ವೇದ ಮಂತ್ರವನ್ನು ಪಠಿಸುವನನು ಹೋತೃ.. ಅದನ್ನು ನಿರ್ವಹಿಸಲು ಚ್ಯವನವಂಶೀಯನಾದ ಚಂಡಭಾರ್ಗವ ಸಿದ್ಧನಾದನು. ದಕ್ಷಿಣ ದಿಕ್ಕಿನಲ್ಲಿ ಕುಳಿತು ಯಜುರ್ವೇದ ಮಂತ್ರ ಪಠಣಮಾಡುವವ ಅಧ್ವರ್ಯು..ಅದಕ್ಕೆ ಪಿಂಗಳರು ಸಿದ್ದರಾದರು.. ಇನ್ನು ಹೋಮಕುಂಡದ ಪಶ್ಚಿಮ ದಿಕ್ಕಿನಲ್ಲಿ ಉಪಸ್ಥಿತರಿದ್ದು ಸಾಮವೇದದ ಮುಖೇನ ಯಜ್ಞವನ್ನು ನಡೆಸುವವರು ಉದ್ಘಾತೃ.. ಅದಕ್ಕೆ ಜೈಮಿನಿಗಳು ಸಿದ್ಧರಾದರು. ಯಜ್ಞ ಕುಂಡದ ಉತ್ತರ ಭಾಗದಲ್ಲಿ ಇದ್ದು ಅಥರ್ವಣ ವೇದವನ್ನು ಪಠಿಸುವವರು ಬ್ರಹ್ಮ.. ಅದಕ್ಕೆ ಶಾಙ್ಗ೯ರೆಂಬ ಬ್ರಾಹಣರು ಸಿದ್ದರಾದರು. ಇನ್ನು ಶಿಷ್ಯರನ್ನೊಡಗೂಡಿದ ವ್ಯಾಸ, ಉದ್ಧಾಲಕ, ಶ್ವೇತಕೇತು ಮುಂತಾದವರು ಬಂದು ಸೇರಿದರು.
ಯಾಗಾರಂಭವಾಯಿತು... ಋತ್ವಿಜರು ಮಂತ್ರಗಳನ್ನು ಉಚ್ಛರಿಸುತ್ತಾ ಸ್ವಾಹಾಕಾರವನ್ನು ಹೇಳಿದಾಕ್ಷಣವೇ ಬೆಂಕಿಯನ್ನು ನೋಡಿ ಆಕರ್ಷಿತವಾಗಿ ಪತಂಗಗಳು ಬಂದು ಬೀಳುವಂತೆ ಸರ್ಪಗಳು ಬಂದು ಯಜ್ಞಕುಂಡದಲ್ಲಿದ್ದ ಅಗ್ನಿಯಲ್ಲಿ ಬಿದ್ದು ಆಹುತಿಯಾಗತೊಡಗಿದವು. ಆಹುತಿಯಾಗುವಾಗ ಆ ಸರ್ಪಗಳ ದೇಹದಿಂದ ಸಿಡಿದ ರಕ್ತ,ಮಾಂಸ, ಮಜ್ಜೆಗಳು ಕೋಡಿಯಾಗಿ ಹರಿಯತೊಡಗಿತು. ಈ ಸಂಧರ್ಭದಲ್ಲಿಯೇ ಯಜ್ಞ ವೇದಿಕೆಯಲ್ಲಿ ಒಂದು ವಿಶೇಷ ಘಟನೆ ನಡೆಯಿತು.. ಯಜ್ಞ ವೇದಿಕೆಯ ಬಳಿಗೆ ಒಂದು ನಾಯಿ ಬಂದು ಅಡ್ಡಾಡತೊಡಗಿತು. ಇದನ್ನು ನೋಡಿದ ಜನಮೇಜಯನ ಸಹೋದರರು ಅದನ್ನು ಹೊಡೆದು ಓಡಿಸಿದರು. ವಿಶೇಷವೆಂದರೆ ಅದು ದೇವಲೋಕದ " ಸರಮೆ " ಎಂಬ ನಾಯಿಯ ಮರಿಯಾಗಿತ್ತು ಪೆಟ್ಟು ತಿಂದ ಆ ನಾಯಿಯ ಮರಿ ನೇರವಾಗಿ ತಾಯಿಯ ಬಳಿ ಹೋಗಿ ದೂರಿಕೊಂಡಿತು. "ಅಮ್ಮಾ ನಾನು ಕೇವಲ ಕುತೂಹಲದಿಂದ ನೋಡಲು ಹೋದೆ..ಅವರು ಸಿದ್ಧಮಾಡಿದ ಹವಿಸ್ಸನ್ನು ನೋಡಿ ತಿನ್ನಲಿಲ್ಲ, ಯಾವ ವಸ್ತುವನ್ನೂ ಮೂಸಿ ಅಪವಿತ್ರಗೊಳಿಸಲೂ ಇಲ್ಲ..ಆದರೂ ನಿರಪರಾಧಿಯಾದ ನನ್ನನ್ನು ದಂಡಿಸಿದರು '' ಮಗನ ಮಾತನ್ನು ಕೇಳಿ ಸರಮೆಗೆ ಕನಿಕರವುಂಟಾಯಿತು. ನೇರವಾಗಿ ತಮ್ಮಂದಿರೊಂದಿಗೆ ಯಜ್ಞಮಾಡುತ್ತಿದ್ದ ಜನಮೇಜಯನಲ್ಲಿಗೆ ಬಂದಳು. ಯಾವುದೇ ಅಪರಾಧವನ್ನು ಮಾಡದಿರುವ ತನ್ನ ಮಗನನ್ನು ದಂಡಿಸಿದ ಕಾರಣವನ್ನು ಕೇಳಿದಳು. ಆದರೆ ಯಾರೊಬ್ಬರೂ ಸರಮೆಯ ಪ್ನಶ್ನೆಗೆ ಸೂಕ್ತ ಉತ್ತರ ಕೊಡಲಿಲ್ಲ. ಅವರು ಹಾಗೆ ತನ್ನನ್ನು ಉಪೇಕ್ಷಿಸಿದ್ದನ್ನು ಕಂಡು ಸರಮೆಗೆ ಕೋಪ ಬಂತು. ನಿರಪರಾಧಿಯಾದ ನನ್ನ ಮಗುವನ್ನು ದಂಡಿಸಿದ್ದಲ್ಲದೇ ನನ್ನನ್ನೂ ಉಪೇಕ್ಷೆ ಮಾಡುತ್ತಿರುವ ನೀವು ಸಂಕಲ್ಪಿಸಿರುವ ಈ ಯಾಗದ ಮದ್ಯದಲ್ಲಿಯೇ ಆತಂಕವುಂಟಾಗಲಿ ಎಂದು ಶಪಿಸಿ ಮಗನನ್ನು ಕರೆದುಕೊಂಡು ಹೋಯಿತು.( ಈ ಘಟನೆ ನಡೆದದ್ದು ಸರ್ಪಯಾಗದ ಪೂರ್ವದಲ್ಲಿ ಜನಮೇಜಯ ಮಾಡಿದ ಇನ್ನೊಂದು ಯಜ್ಞದಲ್ಲಿ ಎಂದೂ ಕೆಲವು ಕಡೆ ಇದೆ.)
ಇತ್ತ ಯಜ್ಞ ಮುಂದುವರಿಯುತ್ತಲೇ ಇತ್ತು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಸರ್ಪಗಳು ಅಗ್ನಿಯಲ್ಲಿ ಆಹುತಿಯಾಗುತ್ತಲೇ ಇದ್ದವು .. ಯಜ್ಞ ಕುಂಡಕ್ಕೆ ಬಂದು ಬೀಳುವಾಗ ಅವುಗಳ ಫೂತ್ಕಾರ.. ಚೀತ್ಕಾರ.. ಸುಡುತ್ತಿರುವ ಅವುಗಳ ದೇಹದಿಂದ ಹೊರಡುವ ಕಮಟುವಾಸನೆ ಇಡೀ ಭೂಮಂಡಲವನ್ನೇ ಆವರಿಸಿ ಕಲ್ಪಾಂತ್ಯದ ಭೀಕರತೆಯನ್ನು ಸೃಷ್ಟಿ ಮಾಡಿತ್ತು. ಬಹುಪಾಲು ಸರ್ಪಗಳು ಹೋಮಾಗ್ನಿಯಲ್ಲಿ ಬಿದ್ದು ಆಹುತಿಯಾಗುತ್ತಿದ್ದವು. ಭಯಗೊಂಡ ತಕ್ಷಕ ನೇರವಾಗಿ ದೇವಲೋಕಕ್ಕೆ ಓಡಿದ ಇಂದ್ರನಲ್ಲಿ ತನ್ನ ಭಯವನ್ನು ಹೇಳಿಕೊಂಡ, ಆಗ ಇಂದ್ರ ಸಮಾಧಾನದ ಮಾತನ್ನು ಹೇಳಿದ "ನೀನು ಹೆದರಬೇಕಾದ್ದಿಲ್ಲ ಆ ಕಾಲದಲ್ಲಿಯೇ ಬ್ರಹ್ಮ ದೇವರು ಅಭಯ ವಾಕ್ಯ ಹೇಳಿದ್ದಾರೆ ನಿಮ್ಮಲ್ಲಿಯೇ ಇರುವ ದುಷ್ಟ ಸರ್ಪಗಳ ನಾಶವಾಗುತ್ತದೆ. ಅಲ್ಲಿಯವರೆಗೆ ನೀನು ನನ್ನ ಅರಮನೆಯಲ್ಲಿ ನನ್ನೊಂದಿಗೇ ಇರು" ಎಂದು ಹೇಳಿದ. ಇಂದ್ರನ ಮಾತನ್ನು ಕೇಳಿ ತಕ್ಷಕನೂ ಸಮಾಧಾನದಿಂದ ಇಂದ್ರನೊಂದಿಗೇ ಇರತೊಡಗಿದ. ಇತ್ತ ನಾಗಲೋಕದಲ್ಲಿದ್ದ ವಾಸುಕಿಗೆ ಆತಂಕ ಹೆಚ್ಚಾಯಿತು. ಹೀಗೇ ಮುಂದುವರಿದರೆ ತಾನೂ ಋತ್ವಿಜರ ಮಂತ್ರಕ್ಕೆ ಅಧೀನನಾಗಿ ಅಗ್ನಿಯಲ್ಲಿ ಬೀಳಬೇಕಾದೀತು ಎಂದು ಯೋಚಿಸಿ... ಇಂತಹ ಸಂದರ್ಭ ಒದಗಿ ಬಾರದಿರಲಿ ಎಂದೇ ಅಲ್ಲವೇ ತಮ್ಮ ಸಹೋದರಿಯಾದ ಜರತ್ಕಾರು ಆಸ್ತೀಕನನ್ನು ಪಡೆದಿದ್ದು ಎನ್ನುವುದು ನೆನಪಿಗೆ ಬಂತು. ಕೂಡಲೇ ಸಹೋದರಿಯನ್ನು ಕರೆದು ನಡೆಯುತ್ತಿರುವ ಘಟನೆಯನ್ನು ವಿವರಿಸಿದ, ನಿನ್ನ ಪುತ್ರನಾದ ಆಸ್ತೀಕನನ್ನು ಕರೆದು ನಮ್ಮ ಸಂತತಿಯನ್ನು ಉಳಿಸಿಕೊಡಲು ಹೇಳು ಎಂದು ಕೇಳಿಕೊಂಡ.
ಅಣ್ಣನಾದ ವಾಸುಕಿಯ ಮಾತಿನಂತೆಯೇ ಜರತ್ಕಾರು ಪುತ್ರ ಆಸ್ತೀಕನನ್ನು ಬರಮಾಡಿಕೊಂಡು ಕದ್ರೂವಿನ ಶಾಪದಿಂದ ತೊಡಗಿ ನಡೆದ ಎಲ್ಲಾ ಘಟನೆಗಳನ್ನೂ ಹೇಳುತ್ತಾಳೆ. ಮತ್ತು ತಾನು ಪುತ್ರನನ್ನು ಪಡೆದ ಉದ್ದೇಶವೇ ಸರ್ಪಕುಲದ ರಕ್ಷಣೆಗೆ ಎಂಬುದನ್ನೂ ತಿಳಿಸಿ ಕೊಡುತ್ತಾಳೆ. ತಾಯಿಯ ಮಾತನ್ನು ಕೇಳಿದ ಆಸ್ತೀಕ ತನ್ನ ಸೋದರ ಮಾವಂದಿರನ್ನೂ ಅವರ ಕುಲವನ್ನೂ ಉಳಿಸಲು ಬೇಕಾಗಿ ಜನಮೇಜಯನ ಸರ್ಪಯಾಗವನ್ನು ನಿಲ್ಲಿಸುವುದಾಗಿ ತಾಯಿಯಲ್ಲಿ ಹೇಳಿ ಅವಳಿಂದ ಅಪ್ಪಣೆ ಪಡೆದು ವಾಸುಕಿಯ ಬಳಿಗೆ ಬರುತ್ತಾನೆ. ದುಃಖ ತಪ್ತನಾದ ಸೋದರ ಮಾವನನ್ನು ಕಂಡು ಧೈರ್ಯದ ಮಾತುಗಳನ್ನಾಡುತ್ತಾನೆ. ಎಂತಹಾ ಸಂಧರ್ಭವೇ ಒದಗಿ ಬಂದರೂ.. ಜನಮೇಜಯನ ಮನವೊಲಿಸಿ ಸರ್ಪಸತ್ರವನ್ನು ನಿಲ್ಲಿಸುತ್ತೇನೆ ಎಂದು ಮಾತುಕೊಟ್ಟು ಹೊರಟು ನೇರವಾಗಿ ಯಾಗಶಾಲೆಯತ್ತ ಬರುತ್ತಾನೆ. ಹಾಗೆ ಸಾಗಿ ಬರುವ ಪೂರ್ವದಲ್ಲಿಯೇ ತಕ್ಷಕನ ವಂಶದ, ಐರಾವತನ ವಂಶದ, ಕೌರವ್ಯನ ವಂಶದ, ವಾಸುಕಿಯ ವಂಶದ ವಿವಿದ ಬಣ್ಣ, ಆಕಾರದ, ಒಂದರಿಂದ ಹತ್ತು ಹಲವು ತಲೆಗಳನ್ನು ಹೊಂದಿದ್ದ, ಅತಿ ತೀಕ್ಷ್ಣವಾದ ವಿಷವನ್ನು ಹೊಂದಿದ್ದ ಕೋಟಿ ಕೋಟಿ ನಾಗಗಳು ಅಗ್ನಿಗೆ ಆಹುತಿಯಾಗಿ ಹೋಗಿದ್ದವು. ಇನ್ನೂ ನಿರಂತರವಾಗಿ ಮಂತ್ರದ ಪ್ರಭಾವಕ್ಕೆ ಒಳಗಾಗಿ ಬಂದು ಬೀಳುತ್ತಲೇ ಇದ್ದವು. ಆಸ್ತೀಕ ಯಾಗಶಾಲೆಯ ಬಳಿಗೆ ಬಂದರೆ ಹೊರಾವರಣದಲ್ಲಿದ್ದ ಕಾವಲುಗಾರರು ಇವನನ್ನು ಯಾಗಮಂಟಪದ ಬಳಿಸಾಗಲು ಬಿಡದೇ ತಡೆದು ನಿಲ್ಲಿಸುತ್ತಾರೆ. ಇತ್ತ ಜನಮೇಜಯನಿಗೆ ಅಷ್ಟೆಲ್ಲಾ ಸರ್ಪಗಳು ಬಂದು ಆಹುತಿಯಾಗಿ ಹೋದರೂ ತಕ್ಷಕ ಬಾರದೇ ಇರುವುದು ಅಸಹನೆಯನ್ನು ಉಂಟು ಮಾಡುತ್ತದೆ. ಯಾಕೆಂದರೆ ತಂದೆಯಾದ ಪರೀಕ್ಷಿತನನ್ನು ಕೊಂದವ ಅವನೇ ತಾನೆ.. ಹಾಗಾಗಿಯೇ ಭೂತ - ಭವಿಷ್ಯವನ್ನು ಬಲ್ಲ ಲೋಹಿತಾಕ್ಷ ಎಂಬ ಸೂತನನ್ನು ಕರೆಸಿ ಕೇಳುತ್ತಾನೆ. ಆಗ ಆ ಸೂತನು ತಕ್ಷಕ ಇಂದ್ರನ ಮೊರೆ ಹೊಕ್ಕ ವಿಚಾರ ಮತ್ತು ಇಂದ್ರ ಅವನಿಗೆ ಅಭಯ-ಆಶ್ರಯವನ್ನು ನೀಡಿದ ವರ್ತಮಾನವನ್ನು ತಿಳಿಸ್ತಾನೆ. ಇದರಿಂದ ಕುಪಿತನಾದ ಜನಮೇಜಯ ಇಂದ್ರ ಅವನನ್ನು ಇರಿಸಿಕೊಂಡಿದ್ದಾನೆ ಎಂದಾದರೆ ಇಂದ್ರ ಸಮೇತನಾಗಿಯೇ ಬಂದು ಬೀಳಲಿ ಕರೆಯಿರಿ ಎಂದು ಋತ್ವಿಜರಲ್ಲಿ ಹೇಳುತ್ತಾನೆ. ಅವನ ಮಾತಿಗೆ ಸಹಮತ ವ್ಯಕ್ತಪಡಿಸಿದ ಋತ್ವಿಜನಾದ ಹೋತೃವು "ಸಹೇಂದ್ರಾಯ ತಕ್ಷಕಾಯ ಸ್ವಾಹಾ" ಎಂದು ಕರೆದೇ ಬಿಡುತ್ತಾನೆ.. ಈ ಮಂತ್ರಕ್ಕೆ ಆಕೃಷ್ಟರಾದ ದೇವೇಂದ್ರ ತಕ್ಷಕರಿಬ್ಬರೂ ಪ್ರವಾಹದ ಸೆಳೆತದಲ್ಲಿ ಸಿಕ್ಕಿ ತೇಲಿ ಬರುವಂತೆ ಸ್ವರ್ಗದಿಂದ ಬೀಳತೊಡಗಿದರು. ಇತ್ತ ಕಾವಲುಗಾರರು ತಡೆದ ಕಾರಣದಿಂದ ಆಸ್ತೀಕ ಯಾಗಶಾಲೆಯ ಹೊರಾವರಣದಲ್ಲಿಯೇ ನಿಂತು ಗಟ್ಟಿಯಾದ ಸ್ವರದಲ್ಲಿ ರಾಜೇಂದ್ರನಾದ ಜನಮೇಜಯನನ್ನೂ, ಋತ್ವಿಜರನ್ನೂ ಸ್ವಸ್ತಿವಾಚನಮಾಡಿ ಹೊಗಳತೊಡಗಿದ. ಇದು ಜನಮೇಜಯನಿಗೂ ಕೇಳಿತು, ಕೂಡಲೇ ಆಸ್ತೀಕನನ್ನು ಒಳಗೆ ಬಿಡುವಂತೆ ಸೂಚನೆ ಕೊಡುತ್ತಾನೆ. ಹುಡುಗನಂತೆ ಕಾಣಿಸುತ್ತಿದ್ದರೂ ಅವನ ಮಾತು ನೆಡವಳಿಕೆಯನ್ನು ಕಂಡ ಜನಮೇಜಯನಿಗೆ ಇವನೊಬ್ಬ ಮಹಾಜ್ಞಾನಿ ಎಂಬ ಅರಿವಾಗುತ್ತದೆ. ಜನಮೇಜಯನಿಗೆ ಒಂದುಕಡೆಯಲ್ಲಿ ಆಸ್ತೀಕನಿಗೆ ಆತಿಥ್ಯ ಮಾಡಬೇಕು.. ಇನ್ನೊಂದೆಡೆಯಲ್ಲಿ ಇಂದ್ರ ಸಮೇತನಾಗಿ ತಕ್ಷಕ ಹೋಮಾಗ್ನಿಯಲ್ಲಿ ಬೀಳುವದನ್ನೂ ಕಾಣಬೇಕು... ಹಾಗಾಗಿ ಯಾಗಶಾಲೆಗೆ ಬಂದ ನಿನಗೇನು ದಾನವಾಗಿ ಕೊಡಲಿ.. ಏನನ್ನು ಯಾಚಿಸಿದರೂ ನೀಡುತ್ತೇನೆ ಎಂದು ಹೇಳಿ ಇತ್ತ ಋತ್ವಿಜರಿಗೆ ಇಂದ್ರರಕ್ಷಣೆಯಲ್ಲಿರುವ ತಕ್ಷಕನನ್ನು ಇಂದ್ರನನ್ನು ಸೇರಿಸಿಯೇ ಆಹುತಿ ನೀಡಿ ಎಂದು ಮತ್ತೆ ಮತ್ತೆ ಆತುರಪಡಿಸುತ್ತಾನೆ. ಅದಾಗಲೇ ತಕ್ಷಕನನ್ನು ಜೊತೆಗಿಟ್ಟುಕೊಂಡೇ ಸಾಗಿ ಬರುತಿದ್ದ ಇಂದ್ರ ತಾನೂ ಆಹುತಿಯಾಗುವ ಭಯದಿಂದ ಇನ್ನು ಬೇರೆ ದಾರಿಕಾಣದೇ ತಕ್ಷಕನನ್ನು ಬಿಟ್ಟು ಓಡಿ ಹೋಗಿಬಿಡುತ್ತಾನೆ. ಇದನ್ನು ನೋಡಿದ ಋತ್ವಿಜರು ತಕ್ಷಕ ಮಂತ್ರದ ಸೆಳೆತದಿಂದ ಬರುತ್ತಿರುವುದನ್ನು ಜನಮೇಜಯನಿಗೆ ಹೇಳುತ್ತಾರೆ. ಇವನಿಗೆ ಸಮಾಧಾನವಾಗುತ್ತದೆ, ಆಸ್ತೀಕನತ್ತ ತಿರುಗಿ "ಸ್ವಾಮಿ.. ತಮಗೆ ಬೇಕಾದ್ದನ್ನು ಕೇಳಿ ಕೊಡುತ್ತೇನೆ'' ಎನ್ನುತ್ತಾನೆ. ಆಗ ಆಸ್ತೀಕ "ಈ ಯಾಗವನ್ನು ಇಲ್ಲಿಗೇ ನಿಲ್ಲಿಸು... ಇನ್ನು ಒಂದು ಸರ್ಪವೂ ಆಹುತಿಯಾಗಬಾರದು ಎನ್ನುತ್ತಾನೆ. ಅದು ಸಾಧ್ಯವಾಗದು ಎಂದ ಜನಮೇಜಯ ಬೇರೆ ಏನನ್ನಾದರೂ ಕೇಳು ಎನ್ನುತ್ತಾನೆ. ಆದರೆ ತಾನು ತನ್ನ ಸೋದರ ಮಾವಂದಿರ ವಂಶವನ್ನು ಉಳಿಸಲು ತಾಯಿಯಿಂದ ಆಜ್ಞಪ್ತನಾಗಿ ಬಂದವನಿದ್ದೇನೆ ಇದಕ್ಕೆ ಹೊರತಾಗಿ ಬೇರೇನೂ ಬೇಡ ಎಂದು ನಿರ್ಧಾರದ ನುಡಿಯನ್ನಾಡುತ್ತಾನೆ. ಅವನ ಮಾತಿಗೆ ಯಾಗಶಾಲೆಯಲ್ಲಿದ್ದ ಪ್ರಾಜ್ಞರೆಲ್ಲಾ ಸಹಮತ ವ್ಯಕ್ತಪಡಿಸಿ ಆಸ್ತೀಕ ಕೇಳಿದಂತೆ ನಡೆಯುವುದೇ ಸರಿ ಎನ್ನುತ್ತಾರೆ. ಭವಿಷ್ಯವನ್ನು ಅರಿಯಬಲ್ಲ ಲೋಹಿತಾಕ್ಷನೂ ಇದು ಇಲ್ಲಿಗೇ ನಿಲ್ಲುತ್ತದೆ ಎಂದು ಹೇಳುತ್ತಾನೆ. ಇದನ್ನೆಲ್ಲಾ ಕೇಳಿದ ಜನಮೇಜಯನೂ ಸರಿ ಎಂದು ಯಾಗ ನಿಲ್ಲಿಸಲು ಒಪ್ಪುತ್ತಾನೆ. ಎಲ್ಲರೂ ಹರ್ಷೋದ್ಗಾರದಿಂದ ಚಕ್ರವರ್ತಿಯ ನಿರ್ಧಾರವನ್ನು ಸ್ವಾಗತಿಸುತ್ತಾರೆ. ಕುತೂಹಲದ ವಿಷಯವೆಂದರೆ.. ಇಂದ್ರ ತೊರೆದು ಹೋದಮೇಲೆ ಏಕಾಂಗಿಯಾದ ತಕ್ಷಕ ಈ ಮಧ್ಯದಲ್ಲಿಯೇ ಅಗ್ನಿಗೆ ಆಹುತಿಯಾಗಿ ಹೋಗಬೇಕಿತ್ತು... ಆದರೆ ಮಂತ್ರದಿಂದ ಕರೆಯಲ್ಪಟ್ಟ ತಕ್ಷಕ ಬೀಳುತ್ತಿರುವುದನ್ನು ನೋಡಿದ ಆಸ್ತೀಕ " ನಿಲ್ಲು. ನಿಲ್ಲು, ನಿಲ್ಲು," ಎಂದು ಮೂರು ಬಾರಿ ಹೇಳಿರುತ್ತಾನೆ. ಆ ಶಭ್ಧಕ್ಕೆ ಎಂತಹ ಶಕ್ತಿ ಇತ್ತೆಂದರೆ ಋತ್ವಿಜರ ಸ್ವಾಹಾಕಾರದ ಸೆಳೆತವನ್ನೂ ಪ್ರತಿರೋಧಿಸಿ ಆಗಸದಲ್ಲಿಯೇ ಜಡವಾಗಿ ತಕ್ಷಕ ನಿಂತುಬಿಟ್ಟಿದ್ದ. ಯಾಗವನ್ನು ಅಲ್ಲಿಗೇ ನಿಲ್ಲಿಸಿದ ಜನಮೇಜಯ ಅವಭೃತ ಸ್ನಾನವನ್ನು ಮುಗಿಸಿ ಬಂದು, ಎಲ್ಲಾ ಋತ್ವಿಜರಿಗೂ, ಬ್ರಾಹ್ಮಣರಿಗೂ ಯಥೇಶ್ಚವಾಗಿ ದಾನ ದಕ್ಷಿಣೆಗಳನ್ನು ಕೊಟ್ಟು ಸಂತೃಪ್ತಿಪಡಿಸುತ್ತಾನೆ. ಹಾಗೆಯೇ ಆಸ್ತೀಕನನ್ನೂ ಸತ್ಕರಿಸಿ ಮುಂದೊಂದು ಅಶ್ವಮೇಧ ಯಾಗ ಮಾಡುವ ಇಚ್ಛೆ ಇದೆ. ಆ ಕಾಲಕ್ಕೆ ತಾವು ಬರಬೇಕೆಂದು ಆಮಂತ್ರಣವನ್ನೀಯುತ್ತಾನೆ. ಅರಸನಿಂದ ಬೀಳ್ಳೊಂಡ ಆಸ್ತೀಕ ಮಾವ ವಾಸುಕಿಯಲ್ಲಿ ಬಂದು ನಡೆದ ವಿಚಾರವನ್ನೆಲ್ಲಾ ತಿಳಿಸುತ್ತಾನೆ. ಸರ್ಪಗಳಿಗೆಲ್ಲಾ ಸಂತೋಷವಾಗುತ್ತದೆ. ಇದಕ್ಕೆ ಕಾರಣನಾದ ನಿನಗೆ ಏನು ಬೇಕು ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಆಸ್ತೀಕ "ಮುಂದೆ ಯಾರೇ ಆಗಲಿ ಈ ಘಟನೆಯನ್ನು ಪಾರಾಯಣ ಮಾಡಿದವರಿಗೆ ಸರ್ಪಭಯ ಕಾಡಬಾರದು ಆಸ್ತಿಕನ ಹೆಸರನ್ನು ಹೇಳಿದವರಿಗೆ ಯಾವ ಸರ್ಪಗಳೇ ಆದರೂ ಕಚ್ಚಬಾರದು" ಎಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಸಮ್ಮತಿಸಿದ ವಾಸುಕಿಯ ನೇತೃತ್ವದಲ್ಲಿ ಸರ್ಪಗಳು ಆಸ್ತೀಕನನ್ನು' ಕೊಂಡಾಡುತ್ತಾ.. ಯಾರು ನಿನ್ನ ಹೆಸರನ್ನು ಹೇಳಿದ ಮೇಲೂ ಅಂತವರಿಗೆ ಸರ್ಪ ಕಡಿದರೆ ಅಂತಹ ಸರ್ಪದ ತಲೆ ಸಿಡಿದು ಚೂರಾಗಲಿ ಎಂದು ಹೇಳಿ ಆಸ್ತೀಕನಿಗೆ ನಂಬಿಗೆಯನ್ನು ಕೊಟ್ಟು ನಾಗಲೋಕದತ್ತ ಸಾಗಿ ಹೋದವು.
🙏🙏🙏🙏
Subscribe to:
Post Comments (Atom)
No comments:
Post a Comment