Monday, July 28, 2025
ವೃತ್ರಾಸುರ 4
ದಶದಿಕ್ಕುಗಳನ್ನೂ ವ್ಯಾಪಿಸಿ ಬೆಳೆದು ನಿಂತ ವೃತ್ರಾಸುರನನ್ನು ಎದುರಿಸಲು ದೇವತೆಗಳು ಆಯುಧಪಾಣಿಗಳಾಗಿ ಮುಂದೆ ಬಂದರು. ಆದರೆ ವೃತ್ರನ ಸಮ್ಮಖದಲ್ಲಿ ದೇವತೆಗಳ ಪರಾಕ್ರಮ ಉಡುಗಿಹೋಯಿತು. ದೇವತೆಗಳ ಆಯುಧಗಳನ್ನೆಲ್ಲಾ ವೃತ್ರನು ನುಂಗಿಬಿಟ್ಟ, ಯಾವ ಆಯುಧಗಳಿಂದಲೂ ವೃತ್ರನನ್ನು ನೋಯಿಸಲೂ ಆಗಲಿಲ್ಲ. ಸಮ್ಮಖದಲ್ಲಿ ನಿಂತ ದೇವತೆಗಳ ತೇಜಸ್ಸನ್ನೂ ಕೂಡ ವೃತ್ರ ಸೆಳೆದುಕೊಂಡುಬಿಟ್ಟ. ಈಗ ಇಂದ್ರಾದಿ ದೇವತೆಗಳಿಗೆ ಇವನು ಸಾಮಾನ್ಯನಾದ ರಾಕ್ಷಸನಲ್ಲ ಎಂಬುದು ಅರಿವಿಗೆ ಬಂತು. ಆತನ ಎದುರು ನಿಲ್ಲಲಾರದೇ ಅವರೆಲ್ಲಾ ಪಲಾಯನ ಮಾಡಿದರು. ಕೊನೆಗೆ ಎಲ್ಲರೂ ಒಂದು ಕಡೆ ಸೇರಿ ಇಂತಹ ದುಷ್ಟ ಶಕ್ತಿಯನ್ನು ನಿವಾರಿಸಲು ಮಹಾವಿಷ್ಣುವಿನ ನಿರ್ದೇಶನವೇ ಬೇಕೆಂಬ ತೀಮಾನಕ್ಕೆ ಬಂದರು. ಎಲ್ಲರೂ ಕ್ಷೀರಸಾಗರದ ತಡಿಗೆ ಬಂದು ಬಹುವಿಧವಾಗಿ ಶ್ರೀ ಹರಿಯನ್ನು ಪ್ರಾರ್ಥಿಸತೊಡಗಿದರು. ದೇವತೆಗಳ ಪ್ರಾರ್ಥನೆಯಿಂದ ಸುಪ್ರೀತನಾಗಿ ಶ್ರೀಮನ್ನಾರಾಯಣ ಪ್ರತ್ಯಕ್ಷನಾದ. ದೇವತೆಗಳನ್ನು ಪ್ರೀತಿಯಿಂದ ಸಂತೈಸಿದ ಶ್ರೀಹರಿ ತನ್ನನ್ನು ಏಕೋಭಾವದಿಂದ ಸ್ತುತಿಸಿದ ಕಾರಣವನ್ನು ಕೇಳಿದ. ಆಗ ದೇವತೆಗಳು ವೃತ್ರಾಸುರನಿಂದ ಆದ ಪರಾಜಯವನ್ನೂ .. ಮತ್ತು ತಮ್ಮ ತೇಜಸ್ಸು ಕೂಡ ವ್ಯರ್ಥವಾದ ವಿಷಯವನ್ನು ತಿಳಿಸಿ ತಮ್ಮನ್ನು ಕಾಪಾಡಬೇಕಾದವ ನೀನೇ ಎಂದು ಹೇಳಿ ಕೈಮುಗಿದು ನಿಂತರು. ಆಗ ಶ್ರೀಹರಿ " ದೇವತೆಗಳೇ ದುಷ್ಟನಾದ ವೃತ್ರಾಸುರ ಇಂದ್ರನಿಂದಲೇ ಹತನಾಗಬೇಕಾದವನು .. ಆದರೆ ಅದಕ್ಕೆ ವಿಶೇಷವಾದ ಆಯುಧದ ಅವಶ್ಯಕತೆ ಇದೆ. ಋಷಿ ಶಿರೋಮಣಿಯಾದ ದದೀಚಿ ಮಹರ್ಷಿಗಳು ವ್ರತ -ಉಪಾಸನೆ - ತಪಸ್ಸುಗಳಿಂದ ತಮ್ಮ ದೇಹವನ್ನು ಅತ್ಯಂತ ಕಠಿಣಗೊಳಿಸಿಕೊಂಡಿದ್ದಾರೆ. ಅವರೇ ಮೊದಲು ಅಥರ್ವವೇದದ ಮುಖೇನ ಆತ್ಮವಿಧ್ಯೆಯನ್ನು ಬಳಸಿ ನನ್ನನ್ನು ಆರಾಧಿಸಿ ನಾರಾಯಣ ಕವಚವನ್ನು ಅರಿತವರು. ಅವರು ಅದನ್ನು ತೃಷ್ಟ ನಿಗೂ .. ತ್ವಷ್ಟನು ವಿಶ್ವರೂಪನಿಗೂ .. ವಿಶ್ವರೂಪನು ನಿನಗೂ ಉಪದೇಶ ಮಾಡಿದನು. ಅಶ್ವಿನೀ ದೇವತೆಗಳು ಕೂಡಾ ದದೀಚಿಗಳ ಆತ್ಮವಿದ್ಯೆಯಿಂದಲೇ ಅಮರತ್ವವನ್ನು ಪಡೆದರು. ಅಂತಹ ದದೀಚಿಯ ದೇಹವನ್ನೇ ನೀವು ಬೇಡಿ ಪಡೆದು ಅದರ ಮೂಳೆಗಳಿಂದ ವಿಶ್ವಕರ್ಮನ ಮೂಲಕ ಒಂದು ವಿಶಿಷ್ಟವಾದ ಆಯುಧ ಸಿದ್ದ ಮಾಡಿಕೊಳ್ಳಿ. ಇಂದ್ರ.. ನೀನು ಆ ಆಯುಧದ ಮುಖೇನವೇ ವೃತ್ರಾಸುರನ ತಲೆಯನ್ನು ಕತ್ತರಿಸು ನೀವು ಕಳೆದುಕೊಂಡ ಸಂಪತ್ತುಗಳೆಲ್ಲ ಮತ್ತೆ ನಿಮಗೆ ದೊರಕುತ್ತದೆ". ಹೀಗೆ ಹೇಳಿ ಮಹಾವಿಷ್ಣು ದೇವತೆಗಳಿಗೆ ಹರಸಿ ಅದೃಷ್ಯನಾದ. ಇಂದ್ರಾದಿ ದೇವತೆಗಳು ದದೀಚಿ ಮಹರ್ಷಿಗಳ ಆಶ್ರಮದತ್ತ ತೆರಳಿದರು. ಇದಕ್ಕೂ ಪೂರ್ವದಲ್ಲಿ ಒಂದು ಘಟನೆ ನಡೆದಿತ್ತು. ಬ್ರಹ್ಯವಿಧ್ಯೆಯನ್ನು ಅರಿತ ದದೀಚಿ ಮಹರ್ಷಿಗಳ ಬಳಿಗೆ ಒಂದು ದಿನ ಅಶ್ವಿನೀ ಕುಮಾರರು ತೆರಳಿ ತಮಗೆ ಬ್ರಹ್ಮವಿದ್ಯೆಯನ್ನು ಉಪದೇಶ ಮಾಡಬೇಕೆಂದು ಕೇಳಿಕೊಂಡರು .. ಆದರೆ ಯಾವುದೋ ಕಾರ್ಯದಲ್ಲಿ ವ್ಯಸ್ಥರಾಗಿದ್ದ ಮಹರ್ಷಿಗಳು "ಈಗ ಸಮಯವಿಲ್ಲ ಇನ್ನೊಮ್ಮೆ ಬನ್ನಿ" ಎಂದು ಹೇಳಿ ಕಳುಹಿಸಿದ್ದರು. ಅವರು ಹಿಂತಿರುಗಿದ ಮೇಲೆ ಇಂದ್ರನಿಗೆ ಈ ವಿಷಯ ತಿಳಿಯಿತು. ತಾನೇ ಮಹರ್ಷಿಗಳ ಬಳಿಗೆ ಹೋಗಿ "ಯಾವ ಕಾರಣಕ್ಕೂ ಅಶ್ವಿನೀಕುಮಾರರಿಗೆ ವಿದ್ಯೆಯನ್ನು ಉಪದೇಶಮಾಡಕೂಡದೆಂದೂ... ತಪ್ಪಿ ಮಾಡಿದ್ದೇ ಆದರೆ ನಿಮ್ಮ ಶಿರಶ್ಚೇದ ಮಾಡುವೆ. " ಎಂದೂ ಹೇಳಿ ಬಂದಿದ್ದ. ಅಶ್ವಿನೀ ದೇವತೆಗಳು ಮತ್ತೊಂದು ದಿನ ದದೀಚಿಗಳ ಬಳಿಗೆ ತೆರಳಿ ವಿದ್ಯೆಯನ್ನು ಉಪದೇಶ ಮಾಡಲು ಕೇಳಿಕೊಂಡರು, ಆಗ ಮಹರ್ಷಿಗಳು ದೇವೇಂದ್ರನ ಸೂಚನೆಯನ್ನು ಹೇಳಿದರು. ಆಗ ಅಶ್ವಿನೀ ದೇವತೆಗಳು ಅದಕ್ಕೆ ಯೋಚಿಸುವ ಅವಶ್ಯಕತೆ ಇಲ್ಲಾ... ದೇವೇಂದ್ರ ಆ ಕಾರಣಕ್ಕಾಗಿ ತಲೆ ಕಡಿಯುವುದೇ ಆದರೆ ಅದಕ್ಕೆ ಬೇಕಾದ ಉತ್ತರ ತಮ್ಮಲ್ಲಿದೆಯೆಂದು ಹೇಳಿ... ನಾವು ಮೊದಲೇ ನಿಮ್ಮ ತಲೆಯನ್ನು ಕಡಿದು ಬೇರೊಂದು ತಲೆಯನ್ನು ಜೋಡಿಸುತ್ತೇವೆ, ಇಂದ್ರ ಬಂದು ನಿಮ್ಮ ತಲೆ ಕಡಿದರೆ ಆವಾಗ ಈಗ ಕತ್ತರಿಸಿದ ರುಂಡವನ್ನೇ ಮತ್ತೆ ತಂದು ಜೋಡಿಸುತ್ತೇವೆ ಎಂದರು. ಅವರ ಮಾತನ್ನು ಮೊದಲು ದದೀಚಿ ಮಹರ್ಷಿ ನಂಬದೇ ಹೋದರೂ ಕೊನೆಗೆ ಹಾಗೆಯೇ ಆಗಲೆಂದು ಹೇಳಿದಾಗ ಅಶ್ವಿನೀ ಕುಮಾರರು ದದೀಚಿಯ ತಲೆ ಕತ್ತರಿಸಿ ಆ ತಲೆಗೆ ಬದಲಾಗಿ ಒಂದು ಕುದುರೆಯ ತಲೆಯನ್ನು ಜೋಡಿಸುತ್ತಾರೆ. ಮಹರ್ಷಿಗಳು ಅದೇ ಅಶ್ವದ ಶಿರದಿಂದಲೇ ಅವರಿಗೆ ಬೋಧಿಸಬೇಕಾದ್ದನ್ನು ಪೂರೈಸುತ್ತಾರೆ.. ಆದ್ದರಿಂದಲೇ ದದೀಚಿ ಮಹರ್ಷಿಗೆ "ಅಶ್ವಶಿರಾ" ಅಂದರೆ ಕುದುರೆಯ ತಲೆಯುಳ್ಳವನು ಎಂಬ ಹೆಸರೂ ಬಂತು. 🙏🙏
ದದೀಚಿಯ ದೇಹದಾನ ಮುಂದಿನ ಭಾಗದಲ್ಲಿ🙏🙏
Subscribe to:
Post Comments (Atom)
No comments:
Post a Comment