Monday, May 19, 2025
ಗುರುಭಕ್ತಿ
ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಗುರುಗಳು ಇದ್ದೇ ಇರುತ್ತಾರೆ, ಕೇವಲ ಅಕ್ಷರ ಕಲಿಸಿದವ ಮಾತ್ರ ಗುರು ಅಂತ ಭಾವಿಸಬೇಕಾದುದಲ್ಲ. ತನ್ನ ಅನುಭವ ಹಂಚಿಕೊಂಡು ಬದುಕಿನ ದಾರಿ ತೋರಿಸಿದವರೂ ಗುರುಗಳೇ ಅಲ್ಲವೇ.. ಹಾಗೆಂದು ಅಂತಹ ಪಥ ನಿರ್ದೇಶಕರನ್ನು ಗೌರವದಿಂದ ಕಾಣುತ್ತಿರುವುದು ಇಲ್ಲವೇ ಇಲ್ಲ.. ಇನ್ನು ಗುರುಭಕ್ತಿ ಎನ್ನುವ ಭಾವ ಈ ಕಾಲಕ್ಕೆ ಬಹಳ ದೂರ.
ನಮ್ಮ ಪುರಾಣಗಳಲ್ಲಿ ಅಲ್ಲಲ್ಲಿ ಗುರುಭಕ್ತಿಯಿಂದಲೇ ಶ್ರೇಯಸ್ಸನ್ನು ಹೊಂದಿದ ಕೆಲವರು ಆದರ್ಶ ಶಿಷ್ಯರು ಸಿಗುತ್ತಾರೆ.. ಅವರಲ್ಲಿ ಶ್ರೀಮನ್ಮಹಾಭಾರತದಲ್ಲಿ ಬರುವ ಉಪಮನ್ಯುವಿನ ಕಥೆಯೂ ಒಂದು.
ಒಂದು ಕಾಲದಲ್ಲಿ ಆಯೋದದೌಮ್ಯ ರೆಂಬ ಗುರುಗಳಿದ್ದರು, ಅವರಿಗೆ ಮೂರುಜನ ಪ್ರಮುಖ ಶಿಷ್ಯರು, ಉಪಮನ್ಯು, ಆರುಣಿ, ವೇದ ಎಂಬುದಾಗಿ ಅವರ ಹೆಸರು. ಆಶ್ರಮದಲ್ಲಿ ಉಪಮನ್ಯುವಿಗೆ ಗೋವುಗಳನ್ನ ಪಾಲಿಸಬೇಕಾದ ಹೊಣೆ, ಪ್ರತಿದಿನವೂ ಹಸುಗಳನ್ನು ಕಾಡಿಗೆ ಹೊಡೆದುಕೊಂಡು ಹೋಗಿ ಹುಲ್ಲು ಮೇಯಿಸಿಕೊಂಡು ಬರುತಿದ್ದ. ಗುರುಗಳು ಒಮ್ಮೆ ಅವನನ್ನು ಗಮನಿಸಿದಾಗ ತುಂಬಾ ದಷ್ಟಪುಷ್ಟವಾಗಿ ಕಾಣುತಿದ್ದ ಅವನಲ್ಲಿಯೇ ಕೇಳಿದರು " ಮಗೂ ನೀನು ಆಹಾರಕ್ಕೆ ಏನು ವ್ಯವಸ್ಥೆ ಮಾಡಿಕೊಂಡಿದ್ದಿ? " ಉಪಮನ್ಯು ಹೇಳಿದ ಗುರುಗಳೇ ಭಿಕ್ಷೆಯನ್ನು ಬೇಡಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತೇನೆ.. ಗುರುಗಳು ಹೇಳಿದರು " ಉಪಮನ್ಯು ಭಿಕ್ಷೆಯಿಂದ ಪಡೆದ ಆಹಾರವನ್ನು ಗುರುಗಳಿಗೆ ಅರ್ಪಿಸದೆ ಸೇವಿಸುವುದು ತಪ್ಪಲ್ಲವೇ " ಇಷ್ಟು ಕೇಳಿ ಅವರು ನಿತ್ಯಾನುಷ್ಠಾನ ಮಾಡಲು ಹೊರಟುಹೋದರು. ಮರುದಿನ ಉಪಮನ್ಯು ಭಿಕ್ಷೆಯಿಂದ ತಂದ ಆಹಾರವನ್ನು ಗುರುಗಳ ಮುಂದೆ ಇಟ್ಟು ಕೈ ಮುಗಿದ.... ಕೆಲವು ಕ್ಷಣಗಳ ನಂತರ ಗುರುಗಳು ಅವನಿಗೆ ಹೊರಡಲು ಸೂಚಿಸಿದರು. ಹೀಗೇ ಕೆಲವು ದಿನಗಳು ಕಳೆಯಿತು. ಒಂದು ದಿನವೂ ಗುರುಗಳು ಶಿಷ್ಯ ತಂದು ಸಮರ್ಪಿಸಿದ ಆಹಾರದಲ್ಲಿ ಸ್ವಲ್ಪವನ್ನೂ ಹಿಂತಿರುಗಿ ಕೊಡಲಿಲ್ಲ. ಆದರೂ ಉಪಮನ್ಯು ಸಂತೋಷವಾಗಿಯೇ ಇದ್ದ, ಗುರುಗಳು ಮತ್ತೆ ಕೇಳಿದರು " ಉಪಾ.. ಭಿಕ್ಷೆಯಿಂದ ತಂದ ಆಹಾರವನ್ನು ನನಗೆ ಅರ್ಪಿಸುತ್ತಿರುವೆ.. ನೀನು ಆಹಾರಕ್ಕೆ ಏನು ಮಾಡುತ್ತಿರುವೆ..? ಉಪಮನ್ಯು ಹೇಳಿದ "ಗುರುಗಳೇ ಮತ್ತೊಮ್ಮೆ ಭಿಕ್ಷೆ ಬೇಡಿ ಉಣ್ಣುತ್ತಿರುವೆ " ಗುರುಗಳು " ಮಗೂ ಮತ್ತೊಮ್ಮೆ ಭಿಕ್ಷೆ ಕೇಳಿದರೆ ಇನ್ನೊಬ್ಬ ವಿದ್ಯಾರ್ಥಿಯ ಅನ್ನವನ್ನು ಕಸಿದ ಹಾಗಲ್ಲವೇ ಅದು ತಪ್ಪು " ಎಂದು ಹೇಳಿ ಎದ್ದು ಹೋದರು. ಮರುದಿನದಿಂದ ಮತ್ತೆ ಅವನೂ ತನ್ನ ನಿತ್ಯ ಕಾರ್ಯಗಳಲ್ಲಿ ತೊಡಗಿಕೊಂಡ.. ದಿನಗಳು ಕೆಲವು ಕಳೆಯಿತು. ಉಪಮನ್ಯುವಿನ ದೇಹ ಸೊರಗಲಿಲ್ಲ, ಎಂದಿನಂತೆ ಲವಲವಿಕೆಯಿಂದಲೇ ಇದ್ದ. ಒಂದು ಸಂಜೆ ಗುರುಗಳು ಪ್ರಶ್ನೆ ಮಾಡಿದರು " ಉಪಾ.. ಏನು ಆಹಾರವನ್ನು ಸೇವಿಸುತ್ತಿರುವೆ... " ಶಿಷ್ಯ ತುಂಬಾ ಭಕ್ತಿಯಿಂದ ಹೇಳಿದ ಗುರುಗಳೇ ಕಾಡಿಗೆ ಗೋವುಗಳನ್ನ ಕರೆದುಕೊಂಡು ಹೋಗುವಾಗ ಅವುಗಳ ಹಾಲನ್ನೇ ಕುಡಿಯುತ್ತಿರುವೆ.. ಗುರುಗಳು ಹೇಳಿದರು "ಮಗೂ ಗೋವುಗಳ ಹಾಲನ್ನು ಕುಡಿದರೆ ಪುಟ್ಟ ಕರುಗಳ ಆಹಾರವನ್ನು ಕಸಿದಂತಾಗಲಿಲ್ಲವೇ.." ಇಷ್ಟು ಹೇಳಿ ಗುರುಗಳು ನಿತ್ಯಕರ್ಮಗಳಿಗೆ ಎದ್ದು ಹೋದರು. ಹಾಗಿದ್ದರೆ ಆಹಾರವನ್ನು ಹೇಗೆ ಪಡೆಯಬೇಕು ಎಂದು ಗುರುಗಳು ಹೇಳಲಿಲ್ಲ.. ಶಿಷ್ಯ ಕೇಳಲೂ ಇಲ್ಲ. ಮತ್ತೆ ಕೆಲವು ದಿನ ಕಳೆಯಿತು, ಗುರುಗಳು ನಿರೀಕ್ಷೆ ಮಾಡಿದ ಹಾಗೆ ಶಿಷ್ಯನಲ್ಲಿ ಯಾವ ಬದಲಾವಣೆ ಆಗಲಿಲ್ಲ, ಆತ ಎಂದಿನಂತೆಯೇ ಇದ್ದ. ಗುರುಗಳು ಮತ್ತೆ ಒಂದು ಸಂಜೆ ಕೇಳಿದರು. " ಮಗೂ ಒಮ್ಮೆ ಬೇಡಿದ ಭಿಕ್ಷೆಯನ್ನು ನನಗೆ ಅರ್ಪಿಸುತ್ತ ಇದ್ದಿ.. ಎರಡನೇ ಬಾರಿ ಭಿಕ್ಷೆ ಕೇಳುವುದನ್ನ ಬಿಟ್ಟಿದ್ದಿ.. ಗೋವುಗಳ ಹಾಲನ್ನು ಕುಡಿಯುವುದನ್ನು ಬಿಟ್ಟಿದ್ದೀಯ.. ಈಗ ಆಹಾರಕ್ಕೆ ಏನು ಮಾಡುತ್ತಿರುವೆ..
ಆಗ ಸುಳ್ಳು ಹೇಳಲು ಅರಿಯದ ಉಪಮನ್ಯು ಸಹಜವಾಗಿ ಉತ್ತರಿಸುತ್ತಾನೆ, " ಗುರುಗಳೇ ಕರುಗಳು ಗೋವುಗಳ ಹಾಲನ್ನು ಕುಡಿಯುವಾಗ ಅವುಗಳ ಕಟಬಾಯಿಂದ ಹೊರಗೆ ಬರುವ ನೊರೆಯನ್ನೇ ಕುಡಿಯುತ್ತೇನೆ " ಗುರುಗಳಿಗೆ ಅವನ ಸಹಜ ಸರಳತೆಯಿಂದ ಸಂತೋಷವಾದರೂ ತೋರಿಸಿಕೊಳ್ಳದೆ " ಪಾಪ ಆ ಕರುಗಳು ನಿನ್ನಮೇಲಿನ ಕರುಣೆಯಿಂದ ತಾವು ಕುಡಿಯುವ ಹಾಲನ್ನು ನೊರೆಯ ರೂಪದಲ್ಲಿ ನಿನಗೆ ಕುಡಿಸುತ್ತಿರಬೇಕು " ಇಷ್ಟು ಹೇಳಿ ಎದ್ದು ಹೋದರು. ಮರುದಿನದಿಂದ ಉಪಮನ್ಯುವಿಗೆ ಯಾವ ಆಹಾರವೂ ಸಿಗದಂತಾಯಿತು, ಒಂದೆರಡು ದಿನಗಳಲ್ಲಿ ದೇಹಾಯಾಸ ತಡೆದುಕೊಳ್ಳಲಾಗಲಿಲ್ಲ. ಅರಣ್ಯದಲ್ಲಿ ಗೋವುಗಳೊಂದಿಗೆ ತಿರುಗುತ್ತಾ ತಿರುಗುತ್ತಾ ಹಸಿವನ್ನು ತಡೆಯಲಾಗದೆ ಚಿಗುರೊಡೆದು ಹಸಿರಾಗಿ ಕಾಣುತ್ತಿದ್ದ ಎಕ್ಕದ ಎಲೆಗಳನ್ನು ತಿಂದ. ಸ್ವಾಭಾವಿಕವಾಗಿ ಕಹಿಯಾಗಿಯೂ ಕಟುವಾಗಿಯೂ ಇರುವ ಎಕ್ಕದ ಎಲೆಯ ಸೇವನೆ ಬಹುಬೇಗ ಪರಿಣಾಮವನ್ನು ತೋರಿಸಿತು. ಆಯಾಸ ಹೆಚ್ಚಾಯಿತು.. ಕಣ್ಣುಗಳು ಕುರುಡಾದವು, ಎಲ್ಲಿ ಹೋಗಬೇಕೆಂದು ತಿಳಿಯದೆ ಸಾಗುತ್ತಿರುವಾಗ ಕಣ್ಣು ಕಾಣಿಸದೆ ಹಾಳು ಬಾವಿಯೊಂದರಲ್ಲಿ ಬಿದ್ದುಬಿಟ್ಟ. ಇತ್ತ ಆಶ್ರಮದಲ್ಲಿ ಸುರ್ಯಾಸ್ತವಾದರೂ ಶಿಷ್ಯ ಬರದೇ ಇರುವುದನ್ನು ಕಂಡು ಗುರುಗಳು ಉಳಿದ ಶಿಷ್ಯರನ್ನು ಕೂಡಿಕೊಂಡು ಹುಡುಕುತ್ತ ಬಂದರು. ಕರೆಯುತ್ತಾ ಬರುತ್ತಿರುವ ಗುರುಗಳ ದ್ವನಿಯನ್ನು ಆಲಿಸಿದ ಉಪಮನ್ಯು ಬಾವಿಯಿಂದಲೇ ಗುರುಗಳನ್ನು ಮಾತನಾಡಿಸುತ್ತಾನೆ.. ಏನಾಯಿತು ಎಂದು ಕೇಳಿದ ಗುರುಗಳಿಗೆ ನಡೆದ ಘಟನೆ ಹೇಳಿ ಕಣ್ಣುಗಳು ಕುರುಡಾದುದನ್ನು ಹೇಳುತ್ತಾನೆ. ಗುರುಗಳು ದೇವವೈದ್ಯರಾದ ಅಶ್ವಿನಿದೇವತೆಗಳನ್ನು ಸ್ತುತಿಸಲು ಸೂಚಿಸುತ್ತಾರೆ. ಗುರುಗಳ ಅನುಗ್ರಹದಿಂದ ಮಂತ್ರಪೂರ್ವಕವಾಗಿ ಯಮಳರಾದ ಅಶ್ವಿನಿ ದೇವತೆಗಳನ್ನು ಆರಾಧಿಸುತ್ತಾನೆ. ಉಪಮನ್ಯುವಿನ ಸ್ತುತಿಯಿಂದ ಪ್ರಸನ್ನರಾದ ಅಶ್ವಿನಿ ದೇವತೆಗಳು ಪ್ರತ್ಯಕ್ಷರಾಗಿ ದೇವ ನಿರ್ಮಿತವಾದ ಭಕ್ಷ್ಯವೊಂದನ್ನು ಉಪಮನ್ಯುವಿನ ಕೈಯಲ್ಲಿಟ್ಟು ಇದರ ಸೇವನೆಯಿಂದ ನಿನ್ನ ಕಣ್ಣಿನ ದೃಷ್ಟಿ ಹಿಂತಿರುಗಿ ಬರುತ್ತದೆ ಸೇವಿಸು ಎನ್ನುತ್ತಾರೆ. ಆಗ ಉಪಮನ್ಯು " ದೇವತೆಯರೇ ನಾನು ಇದನ್ನು ನನ್ನ ಗುರುಗಳಿಗೆ ಅರ್ಪಿಸದೇ ಸೇವಿಸಲಾರೆ " ಎನ್ನುತ್ತಾನೆ. ಆಗ ದೇವತೆಗಳು ಅವನನ್ನು ಪರೀಕ್ಷೆ ಮಾಡಲಾಗಿಯೇ " ಒಂದು ಕಾಲದಲ್ಲಿ ನಿನ್ನ ಗುರುಗಳಿಗೆ ಇಂತಹ ಪಾಯಸವನ್ನು ನೀಡಿದಾಗ ಅವರು ತನ್ನ ಗುರುಗಳಿಗೆ ನೀಡದೆ ಸ್ವೀಕರಿದ್ದರು " ಎನ್ನುತ್ತಾರೆ. ಆದರೂ ಉಪಮನ್ಯು ಸ್ವೀಕರಿಸಲು ನಿರಾಕರಿಸುತ್ತಾನೆ. ಆಗ ಅಶ್ವಿನೀ ದೇವತೆಗಳು ಇವನ ಗುರುಭಕ್ತಿಗೆ ಸಂತೋಷ ಹೊಂದಿ " ನೀನು ಚಕ್ಷುಷ್ಮಂತನೂ, ಶ್ರೇಯೋವಂತನು ಆಗುವೆ.. ನಿನ್ನ ಹಲ್ಲುಗಳು ಬಂಗಾರದ್ದಾಗಲಿ" ಎಂದು ಹೇಳಿ ಅದೃಷ್ಯರಾಗುತ್ತಾರೆ.
ದೃಷ್ಟಿಯನ್ನು ಹೊಂದಿದ ಉಪಮನ್ಯು ಬಾವಿಯಿಂದ ಮೇಲೆದ್ದು ಬಂದು ಗುರುಗಳಿಗೆ ನಮಸ್ಕರಿಸಿದಾಗ ಸಂತೋಷದಿಂದ ಶಿಷ್ಯನ ತಲೆಯನ್ನು ನೇವರಿಸುತ್ತ "ಮಗೂ ಅಶ್ವಿನಿ ದೇವತೆಗಳು ಹೇಳಿದಂತೆಯೇ ನೀನು ಉತ್ತಮವಾದ ಶ್ರೇಯಸ್ಸನ್ನು ಹೊಂದುವೆ ಎಲ್ಲ ವೇದ, ಶಾಸ್ತ್ರಗಳೂ ನಿನ್ನ ಸ್ಮೃತಿಪಥದಲ್ಲಿ ಶಾಶ್ವತವಾಗಿರಲಿ ಎಂದು ಹರಸುತ್ತಾರೆ.
ಉಳಿದಿಬ್ಬರು ಶಿಷ್ಯರ ಕಥೆ ಮುಂದೊಮ್ಮೆ.
Subscribe to:
Post Comments (Atom)
No comments:
Post a Comment