Monday, May 19, 2025

ಉತ್ತನ್ಕ.... ಮುಂದುವರಿದ ಭಾಗ ಪೌಶನ ಅರಮನೆಯಿಂದ ವಿಶಿಷ್ಟವಾದ ಕರ್ಣಕುಂಡಲಗಳನ್ನು ಪಡೆದು ಹೊರಟ ಉತ್ತನ್ಕ. ಸ್ವಲ್ಪ ದೂರ ಸಾಗುವಾಗ ಯಾರೋ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಹಾಗೆ ಅನ್ನಿಸಿತು. ಹಿಂತಿರುಗಿ ನೋಡಿದರೆ ಒಬ್ಬ ದಾರಿಹೋಕ ನಗ್ನನಾಗಿ ಇವನನ್ನು ಹಿಂಬಾಲಿಸುತಿದ್ದ. ಯಾರೋ ಭಿಕ್ಷುಕ ಇರಬೇಕೆಂದು ಉಪೇಕ್ಷಿಸಿ ಮುಂದೆ ನಡೆದ. ಸ್ವಲ್ಪ ದೂರ ಕ್ರಮಿಸಿದ ಮೇಲೆ ಸಂದ್ಯಾ ವಿಧಿಗಳನ್ನು ಮಾಡಬೇಕಾದ ಸಮಯ ಬಂತು, ಅನತಿ ದೂರದಲ್ಲಿಯೇ ಕಾಣುತ್ತಿದ್ದ ಒಂದು ನದಿಯ ದಂಡೆಗೆ ತೆರಳಿ ಒಂದು ಬಂಡೆಯ ಮೇಲೆ ಕರ್ಣ ಕುಂಡಲಗಳನ್ನು ಇಟ್ಟು ನೀರಿಗೆ ಇಳಿದು ಸ್ನಾನ.. ಅರ್ಘ್ಯ ವಿಧಿಗಳನ್ನು ಪೂರೈಸಿ ಮೇಲೆ ಬಂದ. ಅನತಿ ದೂರದಲ್ಲಿ ಇವನು ಬಂಡೆಯ ಮೇಲಿಟ್ಟ ಕರ್ಣಕುಂಡಲಗಳನ್ನು ಅಲ್ಲಿಯವರೆಗೆ ಇವನನ್ನು ಹಿಂಬಾಲಿಸಿ ಬರುತಿದ್ದ ನಗ್ನ ದಾರಿಹೋಕ ಎತ್ತಿಕೊಂಡು ಧಾವಿಸಿ ಹೋಗುತ್ತಿರುವುದು ಕಾಣಿಸಿತು. ಕೂಡಲೇ ಅವನನ್ನು ಹಿಂಬಾಲಿಸಿ ಗಟ್ಟಿಯಾಗಿ ಹಿಡಿದುಕೊಂಡ... ಮರುಕ್ಷಣವೇ ಇವನ ಬಾಹುಗಳಲ್ಲಿ ಬಂದಿಯಾದ ಆ ನಗ್ನವ್ಯಕ್ತಿ ಒಂದು ಹಾವಿನ ರೂಪ ಹೊಂದಿ ಇವನ ಕೈಯಿಂದ ತಪ್ಪಿಸಿಕೊಂಡು ಒಂದು ಬಿಲದೊಳಗೆ ಇಳಿದು ಹೋಗಿಬಿಟ್ಟ. ಉತ್ತನ್ಕನಿಗೆ ಕುಂಡಲಗಳನ್ನು ಕಳೆದುಕೊಂಡ ಬೇಸರದೊಂದಿಗೆ ಅದನ್ನು ಅಪಹರಿಸಿದವ ತಕ್ಷಕ ಎಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಹಾಗಿದ್ದರೆ ಅವನು ಇಳಿದು ಹೋದ ಬಿಲದಲ್ಲಿಯೇ ಮುಂದೆ ಹೋಗಬೇಕೆಂದು ಯೋಚಿಸಿ ಪಕ್ಕದಲ್ಲಿ ನೋಡಿದಾಗ ಒಂದು ಪಾಲಾಷ ದಂಡ ಕಾಣಿಸಿತು. ಅದನ್ನೇ ಹಿಡಿದು ಬಿಲ ದ್ವಾರವನ್ನು ಅಗೆಯುತ್ತ ಮುಂದೆ ಸಾಗಿದ... ಸಾಗುತ್ತಾ ಸಾಗುತ್ತಾ ಆ ಬಿಲ ಮಾರ್ಗ ನೇರವಾಗಿ ನಾಗಲೋಕಕ್ಕೆ ಕೊಂಡಯ್ದಿತು. ಉತ್ತನ್ಕ ವಿಶಿಷ್ಟವಾದ ಸೌಧಗಳಿಂದ ಕೂಡಿದ ನಾಗಲೋಕವನ್ನು ನೋಡಿದ. ತಮ್ಮ ಪೂತ್ಕಾರದಿಂದಲೇ ಜೀವಿಗಳನ್ನು ನಾಶಮಾಡಿಬಿಡಬಲ್ಲ ವಿಷಸರ್ಪಗಳ ಸಂಚಾರವನ್ನೂ ನೋಡಿದ, ತನ್ನಿಂದ ಕುಂಡಲಗಳನ್ನು ಅಪಹರಿಸಿ ಹೋದ ತಕ್ಷಕ ಎಲ್ಲಿದ್ದಾನೆ ಎನ್ನುವುದನ್ನು ಹುಡುಕಲು ಅವನಿಗೆ ಸಾಧ್ಯವಾಗಲಿಲ್ಲ. ಆದರೂ ದೃತಾರಾಷ್ಟ್ರ.. ತಕ್ಷಕ.. ಐರಾವತ.. ಶ್ರುತಸೇನ ಎಂಬ ನಾಗ ಪ್ರಮುಖರ ನಾಮ ಸ್ತೋತ್ರ ಮಾಡುತ್ತಾ ಉರಗ ಲೋಕದಲ್ಲಿ ಅಲೆದಾಡಿದ.. ಆದರೆ ಕಳೆದುಕೊಂಡ ಕುಂಡಲ ಅವನಿಗೆ ಸಿಗಲಿಲ್ಲ.. ಒಂದು ಪ್ರಯೋಜನ ಆಯಿತು ಸ್ತೋತ್ರ ಆಲಿಸಿದ ನಾಗಗಳು ಇವನಿಗೆ ತೊಂದರೆ ಮಾಡಲಿಲ್ಲ. ಹಾಗೆಯೇ ಮುಂದೆ ಸಾಗುತ್ತಿರುವಾಗ ಇಬ್ಬರು ಸ್ತ್ರೀಯರು ಹಲವು ಧಾರಗಳನ್ನು ಕೈಯಲ್ಲಿ ಹಿಡಿದು ಬಟ್ಟೆಯನ್ನು ನೇಯುತ್ತಿರುವುದನ್ನು ನೋಡಿದ ಅವರು ಕೈಯಲ್ಲಿ ಹಿಡಿದ ಧಾರಗಳ ಅರ್ಧ ಭಾಗ ಕಪ್ಪು ಉಳಿದರ್ದ ಭಾಗ ಬೆಳ್ಳಗೆ ಇತ್ತು. ಅಲ್ಲಿಯೇ ಆರುಜನ ಹುಡುಗರು ಹನ್ನೆರಡು ಗೂಟಗಳಿರುವ ಒಂದು ಚಕ್ರವನ್ನು ತಿರುಗಿಸುತ್ತಾ ಇದ್ದರು. ಸ್ವಲ್ಪ ಮುಂದೆ ಸುಂದರವಾದ ಒಂದು ಕುದುರೆಯನ್ನು ಏರಿ ಒಬ್ಬ ವ್ಯಕ್ತಿ ಬರುತ್ತಿರುವುದನ್ನು ನೋಡಿದ. ಅವನನ್ನು ನೋಡಿದಾಕ್ಷಣ ಉತ್ತನ್ಕ ಅವನನ್ನೂ ಸ್ತುತಿ ಮಾಡತೊಡಗಿದನು. ಇವನ ಸ್ತುತಿಯಿಂದ ಸಂತುಷ್ಟನಾದ ಆ ಪುರುಷ ಏನಾಗಬೇಕು ಎಂದು ಪ್ರಸನ್ನಚಿತ್ತದಿಂದ ಕೇಳಿದ.. ಸ್ವಾಮೀ ನನಗಾಗಿ ಏನಾದರೂ ಮಾಡಬೇಕೆಂಬ ಮನವಿದ್ದರೆ ಈ ನಾಗಲೋಕದ ಉರಗಗಳೆಲ್ಲವೂ ನನಗೆ ಶರಣಾಗುವಂತೆ ಮಾಡು ಎಂದು ಕೇಳಿದ. ಅದನ್ನು ಕೇಳಿದ ಆ ಮಹಾಪುರುಷ ಹಾಗಗಬೇಕೆಂದರೆ ಈ ಕುದುರೆಯ ಹಿಂಭಾಗವನ್ನು ಊದು ಎಂದು ಹೇಳಿದ. ಉತ್ತನ್ಕ ಹಾಗೇ ಮಾಡಲು ಆ ಕುದುರೆಯ ನವದ್ವಾರಗಳಿಂದಲೂ ಹೊಗೆಯಿಂದ ಕೂಡಿದ ಅಗ್ನಿಜ್ವಾಲೆ ಹೊರಸೂಸತೊಡಗಿತು.. ಇನ್ನೇನು ಸರ್ಪಲೋಕವನ್ನೇ ವ್ಯಾಪಿಸಿಬಿಡುತ್ತದೋ ಎನ್ನುವ ಸಂದರ್ಭದಲ್ಲಿ ತಕ್ಷಕ ಓಡೋಡಿ ಬಂದು ನಿನಗೆ ಬೇಕಾದ ಕುಂಡಲಗಳು ಇದೋ ಇಲ್ಲಿದೆ ಎಂದು ಕೊಟ್ಟು ಹೊರಟು ಹೋಗಿಬಿಟ್ಟ. ಉತ್ತನ್ಕನಿಗೆ ಸಂತೋಷವಾಯಿತು. ಜೊತೆಗೆ ಮತ್ತೆ ದುಗುಡ ಆವರಿಸಿತು. ಅಂದು ಆಶ್ರಮದಿಂದ ಹೊರಡುವಾಗ "ಇಂದಿಗೆ ಸರಿಯಾಗಿ ನಾಲ್ಕು ದಿನಕ್ಕೆ ಮಂಗಳ ದಿನವೊಂದು ಇದೆ ಅಂದು ಕುಂಡಲಗಳನ್ನು ಧರಿಸುತ್ತೇನೆ" ಎಂದು ಗುರುಪತ್ನಿ ಹೇಳಿದ್ದರು ಆದರೆ ಇಂದಿಗೆ ಮೂರು ದಿನಗಳು ಕಳೆದು ಹೋಯಿತು ಇನ್ನೊಂದು ದಿನದಲ್ಲಿ ಅಲ್ಲಿಗೇ ಹೋಗುವುದಾದರು ಹೇಗೆ ಎಂಬ ಚಿಂತೆ ಅವನನ್ನು ಆವರಿಸಿತು. ಇವನ ಚಿಂತೆಯನ್ನು ಅರಿತ ಅಶ್ವಾರೋಹಿ ವ್ಯಕ್ತಿ ತನ್ನ ಕುದುರೆಯನ್ನೇ ಏರುವಂತೆ ಸೂಚಿಸಿದ. ಕುದುರೆಯನ್ನು ಏರುತಿದ್ದಂತೆ ಮನೋವೇಗದಲ್ಲಿ ಕುದುರೆ ಸಾಗಿ ಗುರುಗಳ ಆಶ್ರಮಕ್ಕೆ ಬಂದುಬಿಟ್ಟಿತು. ಉತ್ತನ್ಕ ಕುದುರೆಯನ್ನು ಇಳಿಯುತ್ತಲೇ ಕುದುರೆಯೂ.. ಜೊತೆಗಿದ್ದ ವ್ಯಕ್ತಿಯೂ ಅದೃಶ್ಯರಾಗಿಹೋದರು. ಇತ್ತ ಉತ್ತನ್ಕನ ನಿರೀಕ್ಷೆಯಲ್ಲಿಯೇ ಇದ್ದ ಗುರುಪತ್ನಿಯನ್ನು ಕಂಡು ಕುಂಡಲಗಳನ್ನು ಮುಂದಿಟ್ಟು ನಮಸ್ಕರಿಸಿದ. ಆನಂದಭರಿತಳಾದ ಗುರುಮಾತೆ ಉತ್ತನ್ಕನನ್ನು ಮನಸಾರೆ ಹರಸಿದಳು. ಅವಳ ಆಶೀರ್ವಾದ ಪಡೆದು ಗುರುಗಳ ಬಳಿಗೆ ಬಂದು ನಮಸ್ಕರಿಸಿದ.. ಗುರುಗಳು ವಿಳಂಬವಾಗಲು ಕಾರಣ ಕೇಳಿದರು.. ಆಗ ನಡೆದ ಘಟನೆ ವಿವರಿಸಿ ಹೇಳಿದ ಮತ್ತು ತಾನು ಕಂಡ ವಿಚಿತ್ರ ದೃಶ್ಯಗಳನ್ನು ಹೇಳಿ ಅದರ ಹಿನ್ನಲೆ ಏನೆಂದು ಕೇಳಿದ. ಆಗ ಗುರುಗಳು ಒಂದೊಂದಾಗಿ ಹೇಳಿದರು "ಮೊದಲಾಗಿ ಪೌಶನ ಅರಮನೆಗೆ ಸಾಗುವಾಗ ವೃಷಭವನ್ನೇರಿ ಬಂದವ ಇಂದ್ರ.. ವೃಷಭರೂಪದಲ್ಲಿದ್ದುದೆ ಐರಾವತ.. ನೀನು ಸೇವಿಸಿದ ಅದರ ಸಗಣಿ ಮೂತ್ರವೇ ಅಮೃತ ಹಾಗಾಗಿಯೇ ನಿನಗೆ ಉರಗಲೋಕದಲ್ಲಿ ವಿಷದ ಪರಿಣಾಮ ಆಗಲಿಲ್ಲ. ಇಂದ್ರ ನನ್ನ ಮಿತ್ರ ಹಾಗಾಗಿ ನಿನಗೆ ಅನುಕೂಲ ಮಾಡಿದ. ಇನ್ನು ನೀನು ತಕ್ಷಕನನ್ನು ಹಿಂಬಾಲಿಸಿ ಹೋಗಲು ಬಿಲವನ್ನು ಅಗೆಯಲು ನಿನ್ನ ಕೈಗೆ ಸಿಕ್ಕಿದ ಪಲಾಶದಂಡವು ಇಂದ್ರನ ವಜ್ರ ಆಯುಧ, ಮತ್ತೆ ನಾಗಲೋಕದಲ್ಲಿ ಇಬ್ಬರು ಸ್ತ್ರೀಯರು ಬಟ್ಟೆ ನೇಯುವುದನ್ನು ನೋಡಿದೆಯಲ್ಲಾ ಅವರು ಧಾತ್ರಿ-ವಿಧಾತ್ರಿ ಎಂಬುವವರು. ಅವರನ್ನು ಎರಡು ಅಯನಗಳೆಂದು ಬಾವಿಸು. ಅವರು ಕೈಯಲ್ಲಿ ಹಿಡಿದ ದಾರಗಳೆ ದಿನಗಳು.. ದಾರದ ಬಿಳಿ ಕಪ್ಪು ಬಣ್ಣವೇ ಹಗಲು ರಾತ್ರಿ.. ಅದರಿಂದ ಸಿದ್ದವಾಗುವ ಬಟ್ಟೆಯೇ ಸಂವತ್ಸರ.. ಚಕ್ರ ತಿರುಗಿಸುತಿದ್ದ ಆರು ಹುಡುಗರೇ ಋತುಗಳು. 12 ಗೂಟವನ್ನು ಹೊಂದಿದ ಚಕ್ರವೇ 12 ಮಾಸ. ಅಶ್ವರೋಹಿಯಾಗಿ ಬಂದು ನಿನಗೆ ಸಹಕರಿಸಿದವನೇ ಪರ್ಜನ್ಯದೇವ ಅವನೇರಿದ ಅಶ್ವವೇ ಅಗ್ನಿದೇವ. ಇವರೆಲ್ಲರೂ ನಿನ್ನನ್ನು ಮೆಚ್ಚಿ ಸಹಕರಿಸಿದ ಕಾರಣ ನೀನು ಈ ಕಾರ್ಯದಲ್ಲಿ ಯಶಸ್ವಿಯಾಗಲು ಸಾಧ್ಯ ವಾಯಿತು" ಎಂದರು. ಇನ್ನು ನಿನ್ನ ಗುರುಕುಲ ವಾಸವೆಂಬುದು ಮುಗಿಯಿತು ಒಳ್ಳೆಯ ಗುರಿಯನ್ನು ಅರಸಿ ಶ್ರೇಯೋವಂತನಾಗಿ ಬಾಳು ಎಂದು ಹರಸಿದರು. ಗುರುಗಳ ಮಾತನ್ನು ಕೇಳಿದ ಉತ್ತನ್ಕನಿಗೆ ಸಂತೋಷವಾಯಿತು, ಗುರುಗಳ ಆಶೀರ್ವಾದ ಪಡೆದು ಆಶ್ರಮದಿಂದ ಹೊರಟ. ಹೊರಡುವಾಗಲೇ ವಿನಾಕಾರಣ ತನ್ನ ಕಾರ್ಯದಲ್ಲಿ ಅಡ್ಡಿಯಾದ ತಕ್ಷಕನಿಗೆ ಸರಿಯಾದ ಶಿಕ್ಷೆ ಕೊಡಬೇಕು ಉರಗರೆಲ್ಲರೂ ದುಷ್ಟರು ಇವರ ನಾಶ ಆಗಬೇಕು ಎಂಬ ನಿರ್ಣಯ ಮನಸ್ಸಿನಲ್ಲಿ ಸ್ಥಿರವಾಗಿ ಹೋಯಿತು.... ಈ ಘಟನೆ ಜನಮೇಜಯನ ಸರ್ಪಯಾಗಕ್ಕೆ ಒಂದು ಅಡಿಗಲ್ಲು.. ಇನ್ನೂ ಎಷ್ಟು ಕಲ್ಲುಗಳು ಬೀಳುತ್ತದೆ ಮುಂದೆ ನೋಡೋಣ 🙏🙏

No comments:

Post a Comment