Monday, May 19, 2025

ಪರೀಕ್ಷಿತ ಸರ್ಪ ಯಾಗಕ್ಕೆ ಕಾರಣವಾದ ಎರಡು ಘಟನೆಗಳನ್ನು ಈ ಮೊದಲು ತಿಳಿಸಿದೆ. ಈಗ ಮೂರನೆಯ ಘಟನೆ. ಮಹಾಭಾರತ ಯುದ್ಧದ ನಂತರ ಸುದೀರ್ಘ ಮೂವತ್ತಾರು ವರ್ಷಗಳಕಾಲ ಧರ್ಮರಾಜ ಚಕ್ರವರ್ತಿಯಾಗಿ ಹಸ್ತಿನಾವತಿಯನ್ನು ಪಾಲಿಸಿದ. ಅಶ್ವಮೇಧವೇ ಮುಂತಾದ ಯಾಗಗಳನ್ನು ಮಾಡಿ ಸಂಪೂರ್ಣ ಭೂಮಂಡಲದಲ್ಲಿ ತನ್ನ ಆಡಳಿತ ಸ್ಥಾಪಿಸಿದ.ಹೀಗಿರುವಾಗ ತನ್ನ ಆರಾಧ್ಯ ದೇವನಾದ ಶ್ರೀಕೃಷ್ಣ ಪರಮಾತ್ಮ ಪರಂಧಾಮಗೈದನೆಂಬ ವರ್ತಮಾನ ತಿಳಿದು ಸ್ವಾಮಿಯೇ ಇನ್ನಿಲ್ಲವೆಂದಾದ ಮೇಲೆ ಪಾಂಡವರಾದ ತಾವೂ ನಿರ್ಗಮಿಸಬೇಕೆಂದು ತೀರ್ಮಾನಕ್ಕೆ ಬಂದ. ಹಾಗಾಗಿಯೇ ಪರೀಕ್ಷಿತನಿಗೆ ಹಾಸ್ತಿನಾವತಿಯ ಪಟ್ಟಕಟ್ಟಿದ. ನಾಲ್ವರು ತಮ್ಮಂದಿರು ಹಾಗೂ ದ್ರೌಪದಿಯನ್ನೂ ಜೊತೆಗೂಡಿಕೊಂಡು ಸ್ವರ್ಗಾರೋಹಣ ಮಾಡಲು ಹೊರಟ. ಮಹಾಭಾರತ ಯುದ್ಧದ ನಂತರ ಪಾಂಡವರನ್ನು ಹೊರತುಪಡಿಸಿ ಚಂದ್ರವಂಶವನ್ನು ಮುನ್ನೆಡಿಸಲಿಕ್ಕೆ ಉಳಿದಿದ್ದು ಈ ಪರೀಕ್ಷಿತ ಒಬ್ಬನೇ. ಮಹಾಭಾರತ ಯುದ್ಧದ ಕೊನೆಯಲ್ಲಿ ಶತ್ರುಗಳನ್ನು ಸಂಪೂರ್ಣ ನಾಶಮಾಡಿಬಿಡುತ್ತೇನೆ ಎಂದು ದ್ರೋಣಪುತ್ರ ಅಶ್ವತ್ತಾಮ ಬ್ರಹ್ಮಾಸ್ತ್ರ ಪ್ರಯೋಗಿಸಿಬಿಡುತ್ತಾನೆ. ಅದಕ್ಕೆ ಪ್ರತಿಯಾಗಿ ಶ್ರೀಕೃಷ್ಣ ನಿರ್ದೇಶನದಂತೆ ಅರ್ಜುನನೂ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ನಾರದ, ವೇದವ್ಯಾಸರ ಮಾತಿನಿಂದ ಅರ್ಜುನ ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ತಾನೇ ಉಪಶಮನ ಮಾಡುತ್ತಾನೆ, ಆದರೆ ಅಶ್ವತ್ತಾಮ ಪ್ರಯೋಗಿಸಿದ ಅಸ್ತ್ರಕ್ಕೆ ಉತ್ತರೆಯ ಗರ್ಭ ಗುರಿಯಾಗುತ್ತದೆ.ಆ ಕಾಲಕ್ಕೆ ಅಭಿಮನ್ಯು ಪತ್ನಿಯಾದ ಉತ್ತರೆ ಗರ್ಭಿಣಿಯಾಗಿರುತ್ತಾಳೆ. ಶ್ರೀಕೃಷ್ಣ ಕಾರುಣ್ಯದಿಂದ ಗರ್ಭಸ್ತ ಶಿಶು ಸತ್ತರೂ ಮತ್ತೆ ಬದುಕುವಂತಾಗುತ್ತದೆ. ಹಾಗಾಗಿಯೇ ಅವನಿಗೆ ಪರೀಕ್ಷಿತ ಎಂಬ ಹೆಸರಿಡಲಾಯಿತು. ಪಾಂಡವರ ಬಳಿಯಲ್ಲಿಯೇ ಬೆಳೆದು ಕೃಪಾಚಾರ್ಯರಲ್ಲಿ ವಿದ್ಯಾಭ್ಯಾಸ ಮಾಡುತ್ತಾನೆ. ಉತ್ತರನ ಮಗಳಾದ ಇರಾವತಿ ಎಂಬಾಕೆಯನ್ನು ಮದುವೆಯಾಗಿ, ಜನಮೇಜಯ, ಶೃತಸೇನ,ಉಗ್ರಸೇನ ಮತ್ತು ಭೀಮಸೇನ ಎಂಬ ನಾಲ್ಕು ಜನ ಮಕ್ಕಳನ್ನು ಪಡೆಯುತ್ತಾನೆ. ಧರ್ಮರಾಜ ಇವನಿಗೆ ಪಟ್ಟಾಭಿಷೇಕ ಮಾಡುವಾಗ 36 ವರ್ಷ ವಯಸ್ಸು. ನಿಜವಾಗಿ ಆಗ ದ್ವಾಪರಯುಗದ ಅಂತ್ಯ ಮತ್ತು ಕಲಿಯುಗದ ಆರಂಭ ಕಾಲ. ಧರ್ಮರಾಜನ ಆಳ್ವಿಕೆಯಲ್ಲಿಯೇ ಕಲಿ ಪ್ರವೇಶ ಮಾಡಿದ್ದ.. ಭೀಮಸೇನನಿಂದ ಬಂದಿಸಲ್ಪಟ್ಟ ಕಲಿ ಧರ್ಮರಾಯನ ಕೇಳಿಕೆಯಂತೆ ತನ್ನ ಪ್ರಭಾವವನ್ನು ಸಂಪೂರ್ಣ ಬೀರದೆ ಇರಲು ಒಪ್ಪುತ್ತಾನೆ. ಪರೀಕ್ಷಿತನ ಆಡಳಿತದಲ್ಲೂ ಕಲಿ ಕಾಣಿಸಿಕೊಳ್ಳುತ್ತಾನೆ. ಒಬ್ಬ ಚಂಡಾಲನಾಗಿ, ರಾಜ ವೇಷವನ್ನು ತೊಟ್ಟು ಒಂದು ಹಸುವನ್ನು ಮತ್ತು ಒಂದು ವೃಷಭವನ್ನೂ ದಂಡಿಸುತ್ತಾ ಬರುತ್ತಿರುತ್ತಾನೆ. ಪಾಪ ವೃಷಭದ ಮೂರು ಕಾಲುಗಳು ಕುಂಟಾಗಿರುತ್ತದೆ. ಕೇವಲ ಒಂದೇ ಕಾಲಿನಿಂದ ನಿಂತು ಚಂಡಾಲ ಕೊಡುತ್ತಿರುವ ಹಿಂಸೆಯಿಂದ ನಡುಗುತ್ತಿರುತ್ತದೆ. ಹಸುವೋ.. ಬಾಯಾರಿಕೆ ಮತ್ತು ಹಸಿವಿನಿಂದ ಸಣಕಲು ಶರೀರವಾಗಿರುತ್ತದೆ. ಆದರೂ ಅವೆರಡನ್ನು ರಾಜ ವೇಷದಲ್ಲಿರುವ ಚಂಡಾಲ ದಂಡಿಸುತ್ತಿದ್ದ. ಇದನ್ನು ನೋಡಿದ ಪರೀಕ್ಷಿತ ಹರಿತವಾದ ಖಡ್ಗವನ್ನು ಸೆಳೆದು ಅವನನ್ನು ನಿಲ್ಲುವಂತೆ ಹೇಳಿ ಪ್ರಶ್ನಿಸಲಾಗಿ ಅವನೇ ಕಲಿಯೆಂದು ತಿಳಿಯುತ್ತದೆ. ಒಂದುಕಾಲಿನ ಮೇಲೆ ನಿಂತ ವೃಷಭವೇ ಧರ್ಮ, ನಿತ್ರಾಣಗೊಂಡ ಗೋವು ಭೂದೇವಿಯಾಗಿರುತ್ತಾರೆ. ಆಗ ಪರೀಕ್ಷಿತನ ಕೋಪದಿಂದ ಬೆದರಿದ ಕಲಿ ತನಗೆ ವಾಸ ಮಾಡಲು ಸ್ಥಳ ನಿರ್ದೇಶನ ಮಾಡುವಂತೆ ಕೇಳಿಕೊಳ್ಳುತ್ತಾನೆ. ಆಗ ಪರೀಕ್ಷಿತನು ಜೂಜು, ಮದ್ಯಪಾನ, ಆಧಾರ್ಮಿಕ ಸ್ತ್ರೀಸಂಗ, ಮತ್ತು ಹಿಂಸೆ ಇವುಗಳಲ್ಲಿ ವಾಸ ಮಾಡಲು ಅವಕಾಶ ಕೊಡುತ್ತಾನೆ. ಇನ್ನೂ ಸ್ವಲ್ಪ ಹೆಚ್ಚು ಬೇಕು ಎನ್ನಲು ಸುವರ್ಣವನ್ನೂ ಬಿಟ್ಟುಕೊಟ್ಟನು. ಅಲ್ಲಿಗೆ ಕಲಿಪುರುಷನಿಗೆ ವಾಸ ಮಾಡಲು ಅಸತ್ಯ, ಮದ, ಕಾಮ, ವೈರ ಮತ್ತು ರಜೋಗುಣ ಈ ಐದು ಸ್ಥಳಗಳು ದೊರೆತವು. ಕೆಲವು ವರ್ಷಗಳು ಕಳೆದವು, ಪರೀಕ್ಷಿತನು ಒಂದು ದಿನ ಮೃಗಬೇಟೆಗಾಗಿ ಹೊರಟನು, ಕಾಡಲ್ಲಿ ಬೇಟೆಯಾಡಿ, ತಿರುಗುತ್ತಾ ಬಹಳ ಆಯಾಸವಾಯಿತು. ಎಲ್ಲಿ ಹುಡುಕಿದರೂ ಕುಡಿಯಲು ಒಂದು ಹನಿ ನೀರೂ ಸಹ ಸಿಗಲಿಲ್ಲ. ಹಾಗೆಯೇ ಸಾಗಿಬರುತ್ತಿದ್ದಾಗ ಒಂದು ಆಶ್ರಮ ಕಾಣಿಸಿತು. ಮೊದಲೇ ಬಳಲಿದ್ದ ರಾಜನಿಗೆ ಆಶ್ರಮದಲ್ಲಿ ಬೇಕಾದ ಉಪಚಾರ ಸಿಗಬಹುದೆಂದು ಆಶ್ರಮ ಪ್ರವೇಶ ಮಾಡಿದ. ಆದರೆ ಅಲ್ಲಿ ಯಾರೂ ಇವನನ್ನು ಆದರಿಸಿ ಸ್ವಾಗತಿಸಲಿಲ್ಲ, ಮುಂದೆ ಸಾಗಿ ಬಂದಾಗ ಒಬ್ಬ ಮುನಿ ತಪಸ್ಸು ಮಾಡುತ್ತಾ ಕುಳಿತಿದ್ದ. ಬಾಯಾರಿಕೆಯನ್ನು ತಾಳಲಾರದೆ ಪರೀಕ್ಷಿತ ಅವನನ್ನೇ ಕರೆದು ತನ್ನ ತೃಷೆಯ ನಿವಾರಣೆಗಾಗಿ ಸ್ವಲ್ಪ ನಿರಾನ್ನಾದರೂ ಕೊಡಿರೆಂದು ಕೇಳಿಕೊಂಡ. ಏಕಾಗ್ರತೆಯಿಂದ ತಪಸ್ಸಿನಲ್ಲಿದ್ದ ಮುನಿಗೆ ಇದು ಕೇಳಿಸಲಿಲ್ಲ. ಮತ್ತೆ ಮತ್ತೆ ಕೂಗಿದರೂ ಮುನಿ ಮಾತನಾಡದೇ ಇದ್ದಾಗ ಅರಸನ ಸಹನೆ ಮೀರಿತು, ಒಂದು ನಾಡಿನ ಚಕ್ರವರ್ತಿಯಾದ ತನಗೆ ಅಪಮಾನ ಆಯಿತು ಎಂದು ಭಾವಿಸಿ ಹಿಂತಿರುಗಬೇಕೆಂದು ತೀರ್ಮಾನಿಸುವಾಗಲೇ ಅಲ್ಲಿಯೇ ಸತ್ತುಬಿದ್ದ ಒಂದು ಹಾವು ಕಾಣಿಸಿತು. " ಬಾಯಾರಿಕೆಯಿಂದ ಬಂದವನಿಗೆ ಒಂದು ಗುಟುಕು ನೀರನ್ನೂ ಕೊಡಲಾಗದ ನಿನಗೂ ಈ ಸತ್ತ ಹಾವಿಗೂ ಏನೂ ವ್ಯತ್ಯಾಸ ಇಲ್ಲ " ಎಂದು ಹೇಳಿ ತನ್ನ ಬಿಲ್ಲಿನ ತುದಿಯಿಂದ ಆ ಸತ್ತ ಹಾವನ್ನು ಎತ್ತಿ ತಪಸ್ವಿಯ ಕೊರಳಿಗೆ ಹಾಕಿ ರಾಜ್ಯದತ್ತ ನಡೆದುಬಿಟ್ಟ. ಅಲ್ಲಿ ತಪಸ್ಸಿನಲ್ಲಿ ತೊಡಗಿದ್ದ ಮಹರ್ಷಿಯ ಹೆಸರು ಶಮೀಕ, ಅವನಿಗೆ ಶೃಂಗಿ ಎಂಬ ತೇಜಸ್ವಿ ಪುತ್ರನಿದ್ದನು. ಅರಸ ಸರ್ಪವನ್ನು ಶಮೀಕನ ಕೊರಳಿಗೆ ಹಾಕಿ ಹೋದಮೇಲೆ ಶೃಂಗಿ ಆಶ್ರಮಕ್ಕೆ ಬಂದು ತಂದೆಯನ್ನು ಕಾಣುವಾಗ ಕೊರಳಲ್ಲಿ ತೂಗುತ್ತಿರುವ ಸತ್ತ ಹಾವು ಕಾಣಿಸುತ್ತದೆ. ಯೋಗದೃಷ್ಟಿಯಿಂದ ನೋಡುವಾಗ ಇದು ಪರೀಕ್ಷಿತ ಎಸಗಿದ ಕಾರ್ಯವೆಂದೂ ತಿಳಿಯುತ್ತಾನೆ. ಇದು ತಂದೆಯನ್ನು ಅವಮಾನಿಸಲೆಂದೇ ಮಾಡಿದ ಕಾರ್ಯ ಎಂದು ಭಾವಿಸಿದ ಶೃಂಗಿ " ಇಂತಹ ದುಃಸ್ಸಾಹಸಕ್ಕೆ ಮುಂದಾದ ಪರೀಕ್ಷಿತನು ಇಂದಿನಿಂದ ಏಳು ದಿನಗಳಲ್ಲಿ ತಕ್ಷಕ ಕಚ್ಚಿ ಸಾಯುವಂತಾಗಲಿ " ಎಂದು ಶಪಿಸಿಬಿಟ್ಟ. ಇಷ್ಟೆಲ್ಲ ನಡೆದಮೇಲೆ ಶಮೀಕ ಮಹರ್ಷಿಗೆ ಎಚ್ಚರವಾಯಿತು. ಎದುರಿಗೆ ಸಿಟ್ಟಿನಿಂದ ಕುಳಿತ ಮಗ, ಕೊರಳಲ್ಲಿ ಸತ್ತ ಹಾವು..., ಕೊರಳಿನಲ್ಲಿದ್ದ ಹಾವನ್ನು ತೆಗೆದೆಸೆದು ಏನಾಯಿತು ಎಂದು ಮಗನನ್ನು ಕೇಳಿದ. ನಡೆದ ವಿಷಯವನ್ನೆಲ್ಲಾ ಶೃಂಗಿ ತಿಳಿಸಿದಾಗ ಶಮೀಕನಿಗೆ ಸಂತೋಷಕ್ಕಿಂತ ದುಃಖವೇ ಆಯಿತು. ಅರಸ ತಾನಾಗಿ ನಮ್ಮ ಆಶ್ರಮಕ್ಕೆ ಬಂದಾಗ ಅವನನ್ನು ಸತ್ಕರಿಸಬೇಕಾದ್ದು ನಮ್ಮ ಕರ್ತವ್ಯವಾಗಿತ್ತು ಧ್ಯಾನಸ್ತನಾಗಿದ್ದ ನನಗೆ ತಿಳಿಯದೇ ಹೋಯಿತು. ಆದರೆ ನೀನು ಘೋರವಾದ ಶಾಪವನ್ನು ಕೊಟ್ಟು ತಪ್ಪುಮಾಡಿಬಿಟ್ಟೆ, ಧರ್ಮದಿಂದ ನಾಡನ್ನು ಆಳುತ್ತಿರುವ ಚಕ್ರವರ್ತಿ ಆತ. ಅವನ ನಾಶವನ್ನು ನಾವು ಬಯಸಬಾರದು, ಹೀಗೆ ಹೇಳಿ ತನ್ನ ಶಿಷ್ಯನಾದ ಗೌರಮುಖ ಎಂಬಾತನನ್ನು ಕರೆದು ಹಸ್ತಿನಾವತಿಗೆ ಹೋಗಿ ಶಾಪದ ಬಗ್ಗೆ ಎಚ್ಚರಿಸಿ ತಕ್ಷಕನಿಂದ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಪರೀಕ್ಷಿತನಿಗೆ ಹೇಳುವಂತೆ ಸೂಚಿಸುತ್ತಾನೆ. ಶಮೀಕನಿಂದ ಕಳುಹಲ್ಪಟ್ಟ ಗೌರಮುಖ ನೇರವಾಗಿ ಪರೀಕ್ಷಿತನ ಬಳಿಗೆ ಬಂದು ನಡೆದ ವಿಚಾರವನ್ನೆಲ್ಲ ತಿಳಿಸಿ ತಕ್ಷಕನಿಂದ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಶಮೀಕ ಮಹರ್ಷಿಗಳೇ ಮತ್ತೆ ಮತ್ತೆ ಹೇಳಿರುವುದಾಗಿ ತಿಳಿಸಿದ. ಪರೀಕ್ಷಿತನಿಗೆ ಸಾವು ಸಮೀಪಿಸಿದ ವಿಚಾರಕ್ಕಿಂತ ಅದು ಶಾಪರೂಪದಲ್ಲಿ ಬಂದಿದ್ದು ಬೇಸರವಾಯಿತು. ಆದರೂ ಗೌರಮುಖನನ್ನು ಆತಿಥ್ಯಮಾಡಿ, ಶಮೀಕರಿಗೂ ಸಮಾಧಾನದ ಮಾತುಗಳನ್ನು ಹೇಳಿ ಕಳುಹಿಸಿ ಕೊಡುತ್ತಾನೆ. ತಕ್ಷಕನಿಂದ ರಕ್ಷಣೆಗೆ ಬೇಕಾಗಿ ಗಂಗಾತೀರದಲ್ಲಿ ಏಕಸ್ತಂಭ ಭವನದ ನಿರ್ಮಾಣವಾಗುತ್ತದೆ. ಪರೀಕ್ಷಿತನಿಗೆ ಬದುಕುವ ಯಾವ ನಿರೀಕ್ಷೆಗಳೂ ಉಳಿದಿರಲಿಲ್ಲ. ತಾನು ಸಹನೆಮೀರಿ ವರ್ತಿಸಿ ಶಾಪಕ್ಕೆ ಗುರಿಯಾದೆ ಎಂಬುದೇ ಕಾಡುತ್ತಿತ್ತು, ಹೇಗಿದ್ದರೂ ಸಾವು ನಿಶ್ಚಿತ. ಹಾಗಾಗಿಯೇ ಉಳಿದ ದಿನಗಳನ್ನು ಪುಣ್ಯಕಥಾ ಶ್ರವಣದ ಮೂಲಕ ಕಳೆಯಲು ತೀರ್ಮಾನಿಸಿದ. ಆ ಸಮಯಕ್ಕೆ ಶುಕಮುನಿಗಳು ರಾಜನ ಬಳಿಗೆ ಆಗಮಿಸುತ್ತಾರೆ. ಅರಸನು ಆದರದಿಂದ ಸತ್ಕಾರ ಮಾಡಿ ಅವರಲ್ಲಿ ಭಾಗವತಶ್ರವಣ ಮಾಡುವ ಆಸೆಯನ್ನು ವ್ಯಕ್ತಪಡಿಸುತ್ತಾನೆ. ಶುಕಮುನಿಗಳು ಅವನಿಗೆ ಸಂಪೂರ್ಣ ಶ್ರೀ ಮದ್ಭಾಗವತವನ್ನು ಹೇಳಲು ಆರಂಭಿಸುತ್ತಾರೆ. ಇತ್ತ ಶೃಂಗಿಯ ಶಾಪದಿಂದ ಕಾರ್ಯಪ್ರವೃತ್ತನಾದ ತಕ್ಷಕ ಪರೀಕ್ಷಿತ ಇರುವಲ್ಲಿಗೆ ರೂಪ ಮರೆಸಿಕೊಂಡು ಹೊರಡುತ್ತಾನೆ, ದಾರಿಯಲ್ಲಿ ಬರುವಾಗ ಕಶ್ಯಪ ಎನ್ನುವ ಬ್ರಾಹ್ಮಣ ಸಿಗುತ್ತಾನೆ. ಪರಸ್ಪರ ಪರಿಚಯವಾಗುತ್ತದೆ. ಆಗ ಕಶ್ಯಪ ಪರೀಕ್ಷಿತನಿಗೆ ಶೃಂಗಿಯ ಶಾಪ, ಮತ್ತು ಆ ಶಾಪದಿಂದ ರಾಜನನ್ನು ಉಳಿಸಲು ಮಂತ್ರವಿದ್ಯೆ ಅರಿತ ತಾನು ಧಾವಿಸುತ್ತಿರುವುದಾಗಿ ಹೇಳಿದ. ಆಗ ತಕ್ಷಕ.. " ಅಯ್ಯಾ ಬ್ರಾಹ್ಮಣ ಅರಸನನ್ನು ಕಚ್ಚುವುದು ಸಾಮಾನ್ಯ ಹಾವಲ್ಲ.. ಘೋರವಾದ ವಿಷದಿಂದ ಏನನ್ನಾದರೂ ಕ್ಷಣಮಾತ್ರದಲ್ಲಿ ಭಸ್ಮಮಾಡಿಬಿಡಬಹುದಾದ ತಕ್ಷಕನ ವಿಷದಿಂದ ಬದುಕಿಸಬಲ್ಲೆಯಾ.. " ಎಂದು ಕೇಳಿದ. ಆಗ ಕಶ್ಯಪ ಎಂತಹ ವಿಷವೇ ಆಗಲಿ ತನ್ನಲ್ಲಿ ಮಂತ್ರ.. ಉಂಟು ಎಂದು ಹೇಳುತ್ತಾನೆ. ಆಗ ತಕ್ಷಕ ತನ್ನ ನಿಜವನ್ನು ತಿಳಿಸಿ, ಅವನ ಔಷಧಿಯ ಪರಿಣಾಮ ಪರೀಕ್ಷೆಮಾಡಲು ಮುಂದಾಗುತ್ತಾನೆ. ಸಮೀಪದಲ್ಲಿಯೇ ಕಡುಹಸಿರಿನಿಂದ ಕೂಡಿದ್ದ ಮರವನ್ನು ತಕ್ಷಕ ಹೋಗಿ ಕಚ್ಚುತ್ತಾನೆ, ಮರುಕ್ಷಣವೇ ಆ ಮರ ವಿಷಪ್ರಭಾವದಿಂದ ಸುಟ್ಟು ಬೂದಿಯಾಗಿ ಹೋಗುತ್ತದೆ. ಪ್ರಶ್ನಾರ್ಥಕವಾಗಿ ಕಶ್ಯಪನನ್ನು ನೋಡಲು ಮರುಕ್ಷಣದಲ್ಲಿಯೇ ಮಂತ್ರಪ್ರಭಾವದಿಂದ ಬೂದಿಯಾದ ಮರವನ್ನು ಮೊದಲಿನಂತೆಯೇ ಚಿಗುರಿ ನಿಲ್ಲುವಂತೆ ಮಾಡುತ್ತಾನೆ. ತಕ್ಷಕನಿಗೆ ಆತಂಕವಾಗುತ್ತದೆ ಶೃಂಗಿಯ ಶಾಪವನ್ನು ಸತ್ಯವಾಗಿಸಬೇಕಾದ ಅನಿವಾರ್ಯತೆ ಉಂಟು, ಆದರೆ ಈ ಬ್ರಾಹ್ಮಣ ಅಲ್ಲಿಗೆ ಬಂದರೆ ತನ್ನ ಕಾರ್ಯ ಯಶಸ್ವಿಯಾಗಿ ನೆರವೇರುವುದಿಲ್ಲ. ಆಗ ಬ್ರಾಹ್ಮಣನಿಗೆ ಪರೀಕ್ಷಿತನನ್ನು ಬದುಕಿಸಿದರೆ ಸಿಗಬಹುದಾದ ಪ್ರಯೋಜನ ಏನೆಂದು ಕೇಳಲು ಬೇಕಾದಷ್ಟು ಧನಪ್ರಾಪ್ತಿಯಾಗುತ್ತದೆ ಎನ್ನುತ್ತಾನೆ. ಆವಾಗ ಸರ್ಪರಾಜನಾದ ತನ್ನಲ್ಲಿ ಇರುವ ಸಂಪತ್ತನ್ನು ತಿಳಿಸಿ ಹೇರಳವಾದ ಧನರಾಶಿಯನ್ನು ಕಶ್ಯಪನಿಗೆ ಕೊಟ್ಟು ಹಿಂದಕ್ಕೆ ಕಳುಹಿಸುತ್ತಾನೆ. ಇತ್ತ ಪರೀಕ್ಷಿತ ಏಕಸ್ತ0ಭ ಭವನದಲ್ಲಿ ಕುಳಿತು ಭಾಗವತ ಶ್ರವಣದಲ್ಲಿ ತೊಡಗಿ ಏಳನೆಯ ದಿನ, ಎಲ್ಲೆಲ್ಲಿಯೂ ರಾಜನ ರಕ್ಷಣೆಗೆ ಬಿಗಿ ಭದ್ರತೆ, ಮಣಿ.. ಮಂತ್ರಗಳಿಂದ ರಾಜನನ್ನು ರಕ್ಷಿಸಲು ನೆರೆದ ಪಂಡಿತರು.. ಭಾಗವತದ ಪುಣ್ಯಶ್ರವಣ ಮುಗಿದಿದೆ. ಸುರ್ಯಾಸ್ತ ಆಗುವ ಸಮಯ... ಕೆಲವರಿಗೆ ಆಗಲೇ ಒಂದು ರೀತಿಯ ಸಮಾಧಾನ.. ಇನ್ನು ಏನೂ ಅಗಲಿಕ್ಕಿಲ್ಲ.. ಏಳನೆಯ ದಿನ ಕಳೆಯುತ್ತಾ ಬಂತು... ಆದರೆ ಪರೀಕ್ಷಿತನಿಗೆ ಬದುಕುವ ಆಸೆಯಿಲ್ಲ, ಭಾಗವತ ಶ್ರವಣವಾದಮೇಲೆ ತಾನೇ ಪ್ರಾಯೋಪವೇಷ ಮಾಡುವ ಮನಸ್ಥಿತಿಗೆ ಬಂದುಬಿಟ್ಟಿದ್ದಾನೆ. ತಕ್ಷಕ ಬಂದು ನೋಡಿದಾಗ ಸುಲಭವಾಗಿ ರಾಜನ ಬಳಿ ಹೋಗುವುದು ಕಷ್ಟ ಎಂಬ ಅರಿವಾಗುತ್ತದೆ. ತನ್ನ ಜೊತೆಗಿರುವ ಸರ್ಪಗಳನ್ನು ಕರೆದು ಬ್ರಾಹ್ಮಣ ರೂಪದಿಂದ ಅರಸನನ್ನು ಕಾಣಲು ಹಣ್ಣು.. ದರ್ಬೆಗಳನ್ನು ಹಿಡಿದು ಹೋಗಲು ತಿಳಿಸುತ್ತಾನೆ. ಅವರು ತೆಗೆದುಕೊಂಡುಹೋಗುವ ಹಣ್ಣಿನಲ್ಲಿ ತಾನೇ ಸೂಕ್ಷ್ಮ ರೂಪದಲ್ಲಿ ಹುಳುವಾಗಿ ಅಡಗಿಕೊಳ್ಳುತ್ತಾನೆ. ಕಪಟ ವಿಪ್ರರು ಸ್ವಸ್ತಿವಾಚನ ಮಾಡುತ್ತಾ ರಾಜನನ್ನು ಸಂದರ್ಶಿಸುತ್ತಾರೆ. ತಾವು ತಂದಂತ ಫಲಗಳನ್ನು ಹರಿವಾಣದಲ್ಲಿಟ್ಟು ರಾಜನಿಗೆ ಅರ್ಪಿಸಿ ತೆರಳುತ್ತಾರೆ.ಅದಾಗಲೇ ಸೂರ್ಯಾಸ್ತದ ನಂತರ ಕತ್ತಲೆ ಭವನವನ್ನು ಆವರಿಸತೊಡಗಿರುತ್ತದೆ. ಹರಿವಾಣದಲ್ಲಿದ್ದ ಹಣ್ಣುಗಳನ್ನು ತೆಗೆದುಕೊಂಡು ಕೆಲವನ್ನು ತಂನ್ನೊಂದಿಗಿರುವ ಮಂತ್ರಿಗಳಿಗೂ ಹಿತೈಷಿಗಳಿಗೂ ನೀಡುತ್ತಾನೆ. ಒಂದು ಹಣ್ಣನ್ನು ತಾನೇ ಹಿಡಿದು ತಿನ್ನಬೇಕೆನ್ನುವಾಗ ಯೋಚನೆ.... " ಋಷಿಕುಮಾರನ ಶಾಪವನ್ನು ನಿಜವಾಗಿಸಲು ಈ ಹಣ್ಣೇ ತಕ್ಷಕನಾಗಿ ಕಚ್ಚಿಬಿಡಲಿ... " ಇನ್ನೇನು ಕೈಯಲ್ಲಿರುವ ಹಣ್ಣನ್ನು ಕಚ್ಚಬೇಕೆನ್ನುವಾಗ.. ಅಣುರೂಪದಲ್ಲಿ ಅವಿತಿದ್ದ ತಕ್ಷಕ ಹೊರಬಂದು ಕಚ್ಚಿಬಿಡುತ್ತಾನೆ.. ಕ್ಷಣಮಾತ್ರದಲ್ಲಿ ವಿಷಪ್ರಭಾವದಿಂದ ರಾಜನದೇಹ ಸುಟ್ಟುಹೋಗುತ್ತದೆ. ಇದೇ ಕಾರಣದಿಂದ ಪರೀಕ್ಷಿತನ ಮಗನಾದ ಜನಮೇಜಯ ಸರ್ಪಯಾಗಕ್ಕೆ ಸಂಕಲ್ಪ ಮಾಡುತ್ತಾನೆ. 🙏🙏

No comments:

Post a Comment