Monday, May 19, 2025
ಉತ್ತನ್ಕ.. ಮುಂದಿನ ಭಾಗ
ವೇದ ಶಿಷ್ಯನಾದ ಉತ್ತನ್ಕ ಗುರುಪತ್ನಿ ಕೇಳಿದ ಗುರುದಕ್ಷಿಣೆಯನ್ನು ತಂದೊಪ್ಪಿಸಲು ಅತ್ಯಂತ ಸಂತೋಷದಿಂದ ಪೌಷನ ನಗರಿಗೆ ಹೊರಡುತ್ತಾನೆ. ಅವನು ಸಾಗಿ ಬರುವ ಮಾರ್ಗದಲ್ಲಿ ಎತ್ತರವಾದ ಒಂದು ಎತ್ತನ್ನು ಏರಿ ಒಬ್ಬ ದೃಢಕಾಯ ಬರುತ್ತಿದ್ದನು. ಎದುರಾಗಿ ಬಂದ ಉತ್ತನ್ಕನನ್ನು ನೋಡಿ " ಅಯ್ಯಾ ಬ್ರಾಹ್ಮಣ ನೀನು ಮುಂದೆ ಸಾಗಬೇಕೆಂದರೆ ನಾನು ಏರಿದ ಈ ವೃಷಭದ ಸಗಣಿ ಮತ್ತು ಮೂತ್ರವನ್ನು ಸೇವಿಸಿ ಹೋಗು " ಎನ್ನುತ್ತಾನೆ. ಆಗ ಉತ್ತನ್ಕ ನಿರಾಕರಿಸಿದಾಗ, ನಿನ್ನ ಗುರುಗಳೂ ಹೀಗೇ ಮಾಡಿದ್ದರು ಎನ್ನುತ್ತಾನೆ. ಅದನ್ನು ಕೇಳಿದ ಉತ್ತನ್ಕ ಗುರುಗಳು ಸೇವಿಸಿದ್ದಾರೆ ಎಂದರೆ ನನಗೂ ಅದು ಆದೀತು ಎಂದು ಹೇಳಿ ವೃಷಭದ ಸಗಣಿ ಮತ್ತು ಗಂಜಲವನ್ನು ಸೇವಿಸಿ ಆತುರಾತುರದಲ್ಲಿ ಆಚಮನ ಮುಗಿಸಿ ಮುಂದೆ ಸಾಗುತ್ತಾನೆ. ( ಇಲ್ಲಿ ಹೇಳಬೇಕಾದ ಇನ್ನೊಂದು ವಿಷಯವೇನೆಂದರೆ ವ್ಯಾಸಭಾರತದಲ್ಲಿಯೇ ಈ ಘಟನೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ ಹೇಳಲಾಗಿದೆ, ಆದಿಪರ್ವದಲ್ಲಿ ಉತ್ತನ್ಕ ವೇದ ಶಿಷ್ಯನೆಂದೂ.. ಅವನು ಪೌಷರಾಜನ ಪತ್ನಿಯ ಕುಂಡಲವನ್ನು ತಂದು ಕೊಟ್ಟನೆಂದೂ.. ಅದೇ ವ್ಯಾಸ ಭಾರತದ ಅಶ್ವಮೇಧಿಕ ಪರ್ವದಲ್ಲಿ ಉತ್ತನ್ಕ ಗೌತಮರ ಶಿಷ್ಯನೆಂದೂ ಅಹಲ್ಯೆಯ ಆಸೆಯಂತೆ ಸೂರ್ಯ ವಂಶದ ಸೌದಾಸ ಅಥವಾ ಕಲ್ಮಾಷಪಾದನ ಹೆಂಡತಿಯಾದ ಮದಯಂತಿಯ ಕುಂಡಲವನ್ನು ತಂಡನೆಂದು ಹೇಳಲಾಗಿದೆ. ಪ್ರಸ್ತುತ ನಾನು ಪೌಷ ರಾಜನೆಂದೇ ಭಾವಿಸಿ ಪ್ರಸ್ತುತ ಪಡಿಸುತ್ತಿದ್ದೇನೆ)
ವೃಷಭಾರೋಹಿ ಹೇಳಿದಂತೆ ಮುಂದೆ ಸಾಗಿದ ಉತ್ತನ್ಕ ನೇರವಾಗಿ ಪೌಷ ಅಳುತ್ತಿದ್ದ ನಗರಕ್ಕೆ ಬರುತ್ತಾನೆ. ರಾಜನ ಭೇಟಿ ಮಾಡಿದಾಗ ಪೌಷ ರಾಜ ಸಂತೋಷದಿಂದ ಆತಿಥ್ಯ ನೆರವೇರಿಸುತ್ತಾನೆ. ತಾವು ಬಂದ ಉದ್ದೇಶ ಏನೆಂದು ಕೇಳಿದಾಗ ಗುರುದಕ್ಷಿಣೆಯಾಗಿ ಸಲ್ಲಿಸಲು ನಿನ್ನ ಹೆಂಡತಿಯ ಕರ್ಣಕುಂಡಲಗಳನ್ನು ನೀಡಬೇಕು ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಪೌಷರಾಜ ಅತ್ಯಂತ ಸಂತೋಷದಿಂದಲೇ ಒಪ್ಪಿ ಅಂತಃಪುರದಲ್ಲಿರುವ ತನ್ನ ಪತ್ನಿಯನ್ನು ಕಾಣಲು ಕಳುಹಿಸಿ ಕೊಡುತ್ತಾನೆ. ರಾಣಿಯ ಅಂತಃಪುರಕ್ಕೆ ತೆರಳಿದ ಉತ್ತನ್ಕನಿಗೆ ಅಲ್ಲಿ ರಾಣಿ ಕಾಣಸಿಗುವುದಿಲ್ಲ ಕೋಪದಿಂದ ಹಿಂತಿರುಗಿ ರಾಜನಲ್ಲಿಗೆ ಬಂದು ನಿಂದಿಸಿ ಮಾತಾಡುತ್ತಾನೆ. ಅಂತಃಪುರದಲ್ಲಿಯೇ ಇರುವ ರಾಣಿ ಉತ್ತನ್ಕನಿಗೆ ಕಾಣದೆ ಇರುವುದು ಏಕೆಂದು ಊಹಿಸಿದ ಅರಸ " ಮಹಾ ಪತಿವ್ರತೆಯಾದ ನನ್ನ ಹೆಂಡತಿ ಪರರಿಗೆ ಕಾಣಿಸಿಕೊಳ್ಳಬೇಕಾದರೆ ಬಂದವನು ತನುಮನದಲ್ಲಿ ಶುದ್ಧನಾಗಿರಬೇಕು ಬಹುಷಃ ನಿಮ್ಮಲ್ಲಿಯೇ ಏನೋ ಕಲ್ಮಶ ಇರಬೇಕು " ಎಂದಾಗ ಉತ್ತನ್ಕನಿಗೆ ಮಾರ್ಗದಲ್ಲಿ ನಡೆದ ಘಟನೆ ನೆನಪಾಗುತ್ತದೆ. ಆತುರಾತುರದಲ್ಲಿ ವೃಷಭದ ಸಗಣಿ ಗಂಜಲವನ್ನು ಸ್ವೀಕರಿದವ ನಿಂತೇ ಆಚಮನ ಮಾಡಿ ಇತ್ತ ಸಾಗಿ ಬಂದಿದ್ದ. ರಾಜ ಹೇಳಿದ್ದು ಸರಿ ಎಂದು ತಿಳಿದು ನೇರವಾಗಿ ನದಿ ತೀರಕ್ಕೆ ಹೋಗಿ ಸ್ನಾನ ಸಂದ್ಯಾವಂದನೆಗಳನ್ನು ಪೂರೈಸಿ ಮತ್ತೆ ರಾಣಿಯ ಅರಮನೆಗೆ ಬಂದ. ಅರಮನೆಯಲ್ಲಿಯೇ ಇದ್ದ ಮಹಾರಾಣಿ ಉತ್ತನ್ಕನನ್ನು ಸ್ವಾಗತಿಸಿ ಸತ್ಕರಿಸಿದಳು. ರಾಣಿಯಲ್ಲಿ ತಾನು ಬಂದ ಉದ್ದೇಶ ತಿಳಿಸಿದಾಗ ಅತ್ಯಂತ ಸಂತೋಷದಿಂದಲೇ ಕರ್ಣಕುಂಡಲಗಳನ್ನು ತೆಗೆದು ಕೊಟ್ಟಳು, ಜೊತೆಗೆ ಒಂದು ಎಚ್ಚರಿಕೆಯ ಮಾತನ್ನೂ ಹೇಳಿದಳು "ಈ ವಿಶೇಷವಾದ ಕರ್ಣ ಕುಂಡಲಗಳನ್ನು ಅಪಹರಣ ಮಾಡಲು ನಾಗರಾಜನಾದ ತಕ್ಷಕ ಬಹಳ ಕಾಲದಿಂದ ಪ್ರಯತ್ನ ಮಾಡುತ್ತಿದ್ದಾನೆ ಹಾಗಾಗಿ ಬಹಳ ಎಚ್ಚರ ಇರಲಿ" ಎಂದಳು. ತಕ್ಷಕ ತನಗೇನು ಮಾಡಲಾರ ಎಂದು ಹೇಳಿ ಅವಳಿಂದ ಬೀಳ್ಕೊಂಡು ಮತ್ತೆ ಅರಸನಲ್ಲಿಗೆ ಬಂದ, ಇವನನ್ನು ಬರಮಾಡಿಕೊಂಡ ಅರಸ ತನ್ನ ಬಯಕೆಯನ್ನು ಹೇಳಿಕೊಂಡ. " ನಿಮ್ಮಂತಹ ಮಹಾತ್ಮರ ದರ್ಶನ ಅಪರೂಪಕ್ಕೆ ಆಗುವಂತದ್ದು.. ಹಾಗಾಗಿಯೇ ನಿಮ್ಮಂಥವರು ಅತಿಥಿಯಾಗಿ ಆಗಮಿಸಿದಾಗ ಶ್ರಾದ್ದ ಮಾಡಲು ಸರಿಯಾದ ಸಂದರ್ಭ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ, ಹಾಗಾಗಿ ನಾನಿಂದು ಮಾಡುವ ಶ್ರಾದ್ದಕ್ಕಾಗಿ ಅವಕಾಶ ಮಾಡಿಕೊಟ್ಟು ಸತ್ಕಾರ ಸ್ವೀಕರಿಸಿ ಹರಸಬೇಕು ಎಂದು ಕೇಳಿಕೊಂಡ. ಆಯಿತು ಎಂದು ಅನುಮತಿಸಿದ ಉತ್ತನ್ಕನನ್ನು ಸತ್ಕರಿಸಿ ನೈವೇದ್ಯ ಅರ್ಪಿಸಲು ಭೋಜನಶಾಲೆಗೆ ಕರೆದುಕೊಂಡು ಹೋದನು. ಭೋಜನಕ್ಕೆ ಕುಳಿತ ಉತ್ತನ್ಕನಿಗೆ ಬಡಿಸಿದ ಅನ್ನದಲ್ಲಿ ಕೂದಲು ಇದ್ದದ್ದನ್ನು ಕಂಡನು, ಒಮ್ಮೆಲೇ ಕೋಪದಿಂದ " ಪರಿಶುದ್ಧ ಅನ್ನವನ್ನು ಬಡಿಸಬೇಕಾದ ನೀನು ಅಪರಿಶುದ್ಧವಾದ ಅನ್ನವನ್ನು ಬಡಿಸಿದ್ದಿ ಇದಕ್ಕೆ ನ್ನಿನ್ನ ಔದಾಸೀನ್ಯವೇ ಕಾರಣ ಹಾಗಿದ್ದರೆ ನಿನಗೆ ಕಣ್ಣುಗಳು ಇಲ್ಲವೇ.. ಕಣ್ಣುಗಳು ಇದ್ದೂ ಹೀಗೆ ಮಾಡಿದ ನೀನು ಕುರುಡನಾಗಿ ಹೋಗು " ಎಂದು ಶಪಿಸಿಬಿಟ್ಟ. ಇದನ್ನು ಕೇಳಿದ ರಾಜನಿಗೂ ಕೋಪ ಬಂತು. " ನಾನು ಪರಿಶುದ್ಧ ಎಂದು ಭಾವಿಸಿಯೇ ಬಡಿಸಿದ ಅನ್ನ ಆದರೂ ವಿವೇಚನೆ ಇಲ್ಲದೆ ಶಪಿಸಿದೆ.. ಪ್ರತಿಯಾಗಿ ನಾನು ಶಾಪ ಕೊಡುವೆ.. ಮುಂದೆ ನಿನಗೆ ಮಕ್ಕಳಾಗದೆ ಹೋಗಲಿ " ಎಂದು ಹೇಳಿಬಿಟ್ಟ. ಶಾಪ ಪ್ರಧಾನದಿಂದ ಇಬ್ಬರ ಮನಸ್ಸಿಗೂ ಬೇಸರವಾಯಿತು, ಅನ್ನದಲ್ಲಿದ್ದ ಕೂದಲನ್ನು ಉತ್ತನ್ಕ ತೋರಿಸಿದ.. ಆಗ ಪೌಷ ಕ್ಷಮೆ ಕೇಳಿದ ತನ್ನನ್ನು ಕುರುಡನನ್ನಾಗಿ ಮಾಡಬೇಡ ಎಂದು ಕೇಳಿಕೊಂಡ.. ಆಗ ನಿನ್ನ ಕುರುಡುತನ ಶಾಶ್ವತವಾಗಿ ಉಳಿಯುವುದಿಲ್ಲ ಎಂದು ಉತ್ತನ್ಕ ಹೇಳಿದ. ಪ್ರತಿಯಾಗಿ ಪೌಷ ಹೇಳಿದ.. "ಸ್ವಾಮಿ ನಿಮ್ಮ ಮಾತು ಕಠಿಣವಾದರೂ ಹೃದಯ ಬೆಣ್ಣೆಯಂತೆ. ಆದರೆ ನಾನು ಕ್ಷತ್ರಿಯ ನನ್ನ ಮಾತು ಮೃದು ಹೃದಯದಲ್ಲಿ ಕಠಿಣತೆ ನೆಲೆಗೊಂಡಿದೆ.. ಹಾಗಾಗಿ ಶಾಪ ಹಿಂದೆ ಪಡೆಯಲು ಅಸಾಧ್ಯ " ಉತ್ತನ್ಕ ನಗುತ್ತ ಹೇಳಿದ "ಮಹಾರಾಜಾ ನೀನು ಶಾಪ ಹಿಂಪಡೆಯದೇ ಇದ್ದರೂ ಅದರ ಪರಿಣಾಮ ನನ್ನ ಮೇಲೆ ಆಗುವುದಿಲ್ಲ ಯಾಕೆಂದರೆ ಬಡಿಸಿದ ಅನ್ನ ಅಪರಿಶುದ್ಧ ಎಂದು ಹೇಳಿದರೂ ಪರೀಕ್ಷೆ ಮಾಡದೇ ನನಗೆ ಶಪಿಸಿದೆ ಹಾಗಾಗಿ ನಿನ್ನ ಶಾಪ ನನಗೇನು ಮಾಡದು... ಹಾಗಾಗಿ ಮುಂದೆ ನಮ್ಮ ನಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳೋಣ" ಎಂದು ಹೇಳಿ ಪೌಷನನ್ನು ಬೀಳ್ಕೊಂಡು ಹೊರಟ.
ಈ ಕಂತಿನಲ್ಲಿ ಇಷ್ಟೇ ಸಾಕು... ಒಂದು ಕಡೆ ದೂರದರ್ಶನದಲ್ಲಿ ಭಾರತ ಪಾಕಿಸ್ತಾನದ ಯುದ್ಧದ ವಾರ್ತೆ.. ಉತ್ತನ್ಕನ ಮುಂದಿನ ಪ್ರಯಾಣ.. ಮುಂದಿನ ಬರಹಕ್ಕೆ.. 🙏🙏
Subscribe to:
Post Comments (Atom)
No comments:
Post a Comment