Wednesday, May 28, 2025
ಸರ್ಪ ಸತ್ರ
ಜನಮೇಜಯ - ಸರ್ಪ ಸತ್ರ
ಪರೀಕ್ಷಿತನನ್ನು ತಕ್ಷಕ ಮೋಸದಿಂದಲೇ ಸಾಯಿಸಿದ.. ಅವನನ್ನು ಕಚ್ಚಿದಕೂಡಲೇ ನಿಜ ಸರ್ಪಾಕೃತಿಯನ್ನು ತಳೆದು ಆಕಾಶಮಾರ್ಗದಲ್ಲಿ ಹಾರಿಹೋದ. ಮರುಕ್ಷಣದಲ್ಲೇ ಪರೀಕ್ಷಿತನ ದೇಹ ಸಿಡಿಲೆರಗಿದ ಮರದಂತೆ ಸುಟ್ಟುಕರಕಲಾಗಿ ಹೋಯಿತು. ಪರೀಕ್ಷಿತನು ವಾಸ ಮಾಡಿದ್ದ ಏಕಸ್ಥಂಭ ಭವನವೂ ವಿಷದ ಜ್ಜಾಲೆಯಿಂದ ಉರಿದುಹೋಯಿತು. ನಂತರದಲ್ಲಿ ಪ್ರಮುಖರೆಲ್ಲಾ ಸೇರಿ ಚಿಕ್ಕವನಾದ ಜನಮೇಜಯನ ಮೂಲಕ ಅಳಿದ ಅರಸನಿಗೆ ಅಂತ್ಯಕ್ರಿಯೆಗಳನ್ನು ಮಾಡಿಸಿದರು. ಆ ನಂತರದಲ್ಲಿ ಹಸ್ತಿನಾವತಿಯ ಪಟ್ಟಾಭಿಷೇಕವನ್ನು ಜನಮೇಜಯನಿಗೆ ಮಾಡಿದರು.
ಆಡಳಿತವನ್ನು ನಿಭಾಯಿಸುವ ಪ್ರಾಯವಿನ್ನೂ ಅವನಿಗೆ ಆಗಿರದಿದ್ದರೂ ಮಂತ್ರಿಗಳು ಮತ್ತು ಹಿರಿಯರ ನಿರ್ದೇಶನದಲ್ಲಿ ರಾಜ್ಯಾಡಳಿತವನ್ನು ಮಾಡತೊಡಗಿದ. ಹಾಗೆಯೇ ವರುಷಗಳು ಕಳೆದವು.. ರಾಜಕುಮಾರ ಪ್ರಾಯ ಪ್ರಭುದ್ಧನಾದ. ಅರಸನಿಗೆ ವಿವಾಹ ಮಾಡಿಸುವ ಉದ್ದೇಶದಿಂದ ಕಾಶೀ ದೇಶದ ಅರಸನಾದ ಸ್ವರ್ಣವರ್ಮನ ಬಳಿಗೆ ಹೋಗಿ ಅವನ ಪುತ್ರಿಯಾದ ವಪುಷ್ಟಮೆಯನ್ನು ಜನಮೇಜಯನಿಗೆ ಮದುವೆಮಾಡಿಕೊಡಬೇಕೆಂದು ಮಂತ್ರಿಗಳು ಪ್ರಸ್ತಾಪ ಮಾಡಿದರು. ಕಾಶೀಶನೂ ಹಸ್ತಿನಾವತಿಯ ಚಕ್ರವರ್ತಿಗೆ ಮಗಳನ್ನು ಕೊಡಲು ಸಂತೋಷದಿಂದಲೇ ಒಪ್ಪಿದ. ಸಂಭ್ರಮದಿಂದ ವಿವಾಹ ಮಹೋತ್ಸವ ನೆರವೇರಿತು. ಊರ್ವಶೀ- ಪುರೂರವರಂತೆ ಸಂತೋಷದಿಂದ ಜನಮೇಜಯ-ವಪುಷ್ಟಮೆಯರು ಸಾಂಸಾರಿಕ ಜೀವನವನ್ನು ನಡೆಸಿದರು. ಹಲವು ವರ್ಷಗಳ ಕಾಲ ಜನಮೇಜಯನು ಸಂತೋಷದಿಂದ ಈ ಭೂಮಂಡಲವನ್ನು ಆಳಿದನು.ತಕ್ಷಶಿಲೆ ಮುಂತಾದ ದೇಶಗಳನ್ನು ದಿಗ್ವಿಜಯದ ಮುಖೇನ ಗೆದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಇದೇ ಸಂದರ್ಭದಲ್ಲಿ ಸರ್ಪಕುಲದ ಬಗ್ಗೆ ಮೊದಲೇ ದ್ವೇಷವನ್ನು ಹೊಂದಿ, ದುಷ್ಟ ಸರ್ಪಸಂತತಿಯನ್ನು ನಾಶ ಮಾಡಬೇಕೆಂದು ಸಮಯದ ನಿರೀಕ್ಷೆಯಲ್ಲಿದ್ದ ಉತ್ತಂಕ ಅರಸನ ಸಂದರ್ಷನಕ್ಕಾಗಿ ಬರುತ್ತಾನೆ. ತಪಸ್ವಿಯನ್ನು ಕಂಡ ಜನಮೇಜಯ ಆದರದಿಂದ ಆತಿಥ್ಯವನ್ನು ನೆರವೇರಿಸುತ್ತಾನೆ. ಕುಶಲೋಪರಿಯ ನಂತರ ಅನ್ಯತಾ ಭಾವಿಸದೆ ಬಂದ ಉದ್ದೇಷವನ್ನು ಹೇಳಿರೆಂದು ವಿನಂತಿಸಿಕೊಳ್ಳುತ್ತಾನೆ. ಆಗ ಸ್ವಲ್ಪ ಕೋಪಗೊಂಡವನಂತೆಯೇ ಉತ್ತಂಕ ಹೇಳತೊಡಗುತ್ತಾನೆ. ನೀನು ಚಕ್ರವರ್ತಿಯಾಗಿ ವಿಸ್ತಾರವಾದ ಈ ಭೂಮಂಡಲವನ್ನು ಆಳುತಿದ್ದೀಯ.. ನಿನ್ನ ಆಳ್ವಿಕೆ ಉತ್ತಮವಾದದ್ದು ಎಂದು ಪ್ರಜೆಗಳು ಹೊಗಳುತ್ತಿದ್ದಾರೆ.. ಕ್ಷತ್ರಿಯನಾಗಿ ನಿನ್ನ ಕರ್ತವ್ಯವನ್ನು ಮಾಡಿದರೂ ಒಬ್ಬ ಮಗನಾಗಿ ತಂದೆಯ ಸದ್ಗತಿಗಾಗಿ ಮಾಡಬೇಕಾದ ಕಾರ್ಯವನ್ನು ಮಾಡಲಿಲ್ಲ... ಉತ್ತಂಕನ ಮಾತುಗಳನ್ನು ಕೇಳಿದ ಜನಮೇಜಯನಿಗೆ ಆಶ್ಚರ್ಯ - ಆತಂಕ ಉಂಟಾಗುತ್ತದೆ. " ಸ್ವಾಮಿ ತಂದೆಯವರ ಮರಣಾನಂತರ ಪುರೋಹಿತರ ನಿರ್ದೇಶನದಲ್ಲಿಯೇ ತಂದೆಯವರ ಔರ್ಧ್ವದೈಹಿಕ ಕಾರ್ಯಗಳೆಲ್ಲವನ್ನು ಮಾಡಿದ್ದಾಗಿದೆ... ಅದರಲ್ಲಿ ಯಾವ ಕೊರತೆಯೂ ಆಗಲಿಲ್ಲ ಎಂದು ವಿನಯದಿಂದಲೇ ನುಡಿದ. ಆಗ ಉತ್ತಂಕ "ಅದೆಲ್ಲವೂ ಸರಿಯೇ ಆದರೆ ನಿನ್ನ ತಂದೆಯ ಸಾವಿಗೆ ಕಾರಣರಾದವರನ್ನು ಶಿಕ್ಷಿಸದೇ ಬಿಟ್ಟರೆ ಏನು ಪ್ರಯೋಜನ.. ಮಹಾ ಬಲಶಾಲಿಯೂ ಧಾರ್ಮಿಕನೂ ಆಗಿದ್ದ ಪರೀಕ್ಷಿತನನ್ನು ಮೋಸದಿಂದ ಕೊಲ್ಲಲಾಯಿತು " ಎಂದು ನುಡಿದ. ಉತ್ತಂಕನ ಮಾತನ್ನು ಕೇಳಿ ಜನಮೇಜಯ ತಾನು ತಿಳಿಯದೇ ಹೋದ ತಂದೆಯ ಸಾವಿನ ವೃತ್ತಾಂತವನ್ನು ಹೇಳಬೇಕೆಂದು ಕೇಳಿಕೊಂಡ.
(ಮಹಾಭಾರತದಲ್ಲಿಯೇ ಈ ಸಂದರ್ಭ ಎರಡು ರೀತಿಯ ವಿವರಣೆಯನ್ನು ಕೊಡುತ್ತದೆ. ಉತ್ತಂಕನ ಬಗ್ಗೆ ಹೇಳುವಾಗ ಈತನೇ ಜನಮೇಜಯನಿಗೆ ಪರೀಕ್ಷಿತನ ಸಾವಿನ ವೃತ್ತಾಂತವನ್ನು ಹೇಳಿ ಸರ್ಪಯಾಗಕ್ಕೆ ಪ್ರೇರಕನಾಗುತ್ತಾನೆ ಎಂದಿದ್ದರೆ.. ಮುಂದೊಂದು ಕಡೆ ಜನಮೇಜಯನೇ ಮಂತ್ರಿಗಳಲ್ಲಿ ತಂದೆಯ ಸಾವಿನ ವಿವರವಾದ ಘಟನೆಯನ್ನು ಕೇಳಿ ಕ್ರೋಧದಿಂದ ಸರ್ಪಯಾಗದ ಸಂಕಲ್ಪ ಮಾಡುತ್ತಾನೆ ಎಂದಿದೆ. ಕಾಡಿನ ನಿರ್ಜನ ಪ್ರದೇಶದಲ್ಲಿ ನಡೆದ ಕಾಶ್ಯಪ ಎಂಬ ಬ್ರಾಹ್ಮಣನಿಗೂ ತಕ್ಷಕನಿಗೂ ನಡೆದ ಸಂವಾದ ಉಳಿದವರಿಗೆ ತಿಳಿದಿದ್ದಾದರೂ ಹೇಗೆ ಎಂಬ ಪ್ರಶ್ನೆಗೆ ಮಹಾಭಾರತದಲ್ಲಿಯೇ ಒಂದು ಸ್ವಾರಸ್ಯಕರವಾದ ಉತ್ತರವೂ ಇದೆ. ತಕ್ಷಕ ತನ್ನ ವಿಷದಿಂದ ಎದುರು ಬೆಳೆದುನಿಂತ ಮರವೊಂದನ್ನು ಸುಟ್ಟು ಕರಕಲಾಗಿಸುತ್ತಾನೆ.ಕಾಶ್ಯಪ ತನ್ನ ಮಂತ್ರಬಲದಿಂದ ಅದನ್ನು ಮತ್ತೆ ಮೊದಲಿನ ಹಾಗೆಯೇ ಎದ್ದು ನಿಲ್ಲುವ ಹಾಗೆ ಮಾಡುತ್ತಾನೆ. ಈ ಸಂಧರ್ಭದಲ್ಲಿ ಇವರಿಬ್ಬರಿಗೂ ಅರಿಯದೇ ಹೋದ ಒಂದು ವಿಷಯ ನಡೆದಿರುತ್ತದೆ. ಒಬ್ಬ ಕಟ್ಟಿಗೆ ಮಾರುವ ವ್ಯಕ್ತಿ ಕಟ್ಟಿಗೆ ಸಂಗ್ರಹಿಸಲು ಅದೇ ಮರವನ್ನು ಏರಿದ್ದ.. ತಕ್ಷಕನ ವಿಷದಲ್ಲಿ ಅವನೂ ಸುಟ್ಟು ಹೋಗಿದ್ದ.. ಮತ್ತೆ ಕಾಶ್ಯಪನ ಮಂತ್ರದಿಂದ ಬದುಕಿದ... ಇದು ಅವರಿಬ್ಬರ ಗಮನಕ್ಕೂ ಬರಲೇ ಇಲ್ಲ... ಮುಂದೆ ಅವನೇ ಅಲ್ಲಿ ನಡೆದ ಘಟನೆಯನ್ನು ಊರಿನಲ್ಲಿ ಹೇಳಿದ...)
ಉತ್ತಂಕ ವಿವರವಾಗಿ ಪರೀಕ್ಷಿತನ ಮರಣ ವೃತ್ತಾಂತವನ್ನು ಜನಮೇಜಯನಿಗೆ ತಿಳಿಸುತ್ತಾನೆ, ಮತ್ತು ಸರ್ಪಸಂಕುಲದ ಮೇಲೆ ಸೇಡನ್ನು ತೀರಿಸಿಕೊಳ್ಳಲು ಪ್ರೇರೇಪಿಸುತ್ತಾನೆ. ಸೇಡನ್ನು ತೀರಿಸಿಕೊಳ್ಳಲು ಸರ್ಪಯಾಗದ ಸಂಕಲ್ಪವೇ ಆಗುತ್ತದೆ. ಅಂತಹ ಒಂದು ಯಾಗ ಸಾಧ್ಯವೇ ಎಂಬ ಪ್ರಶ್ನೆ ಎದುರಾದಾಗ ಕಲ್ಪಾಂತರದಲ್ಲಿ ಇಂತಹ ಒಂದು ಯಾಗ ನಡೆದಿದ್ದನ್ನು ಉಲ್ಲೇಖಿಸಲಾಗುತ್ತದೆ. (ಹಿಂದಿನ ಕಲ್ಪದಲ್ಲಿ ಜನಮೇಜಯ ಮಾಡಿದ ಸರ್ಪಯಾಗ ಎಂದೇ ಭಾರತದಲ್ಲಿ ಹೇಳಿದೆ) ಅಂದರೆ ಅಂತಹ ಒಂದು ಯಾಗಕ್ಕೆ ಬೇಕಾದ ಮಂತ್ರ ಭಾಗವೂ ಇತ್ತು ಎಂದೇ ಅಲ್ಲವೇ...ಒಟ್ಟಾರೆಯಾಗಿ ದುಷ್ಟ ಸರ್ಪಗಳ ವಿನಾಶಕ್ಕೆ ಬೇಕಾಗಿ ಸಂಕಲ್ಪಬದ್ದನಾದ ಜನಮೇಜಯ ಪುರೋಹಿತರ ನಿರ್ದೇಶನದಂತೆ ಯಜ್ಞಶಾಲೆಯನ್ನು ನಿರ್ಮಾಣ ಮಾಡಿಸಿದ. ಉನ್ನತವಾದ ಯಜ್ಞ ವೇಧಿಕೆ.. ಸರ್ಪಾಹುತಿಗೆ ಬೇಕಾಗಿ ಯಜ್ಞ ಕುಂಡದ ನಿರ್ಮಾಣವಾಯಿತು....
...ಸರ್ಪಾಹುತಿ ಮುಂದಿನ ಭಾಗದಲ್ಲಿ..🙏🙏
Subscribe to:
Post Comments (Atom)
No comments:
Post a Comment