Monday, May 19, 2025

ಗುರುಭಕ್ತಿ ( ಆರುಣಿ ) ಆಯೋದದೌಮ್ಯರ ಶಿಷ್ಯರಲ್ಲಿ ಮತ್ತೊಂದು ಪ್ರಮುಖ ಹೆಸರು "ಆರುಣಿ" ಶ್ರೀಮನ್ಮಹಾಭಾರತ ಪ್ರಕಾರ ಇವನು ಪಾಂಚಾಲ ದೇಶದವನು. ರೂಢಿಯಲ್ಲಿ ಬೃಹದಾರಣ್ಯಕ ಮತ್ತು ಕಠೋಪನಿಷತ್ತಿನಲ್ಲಿ ಬರುವ ನಚಿಕೇತನ ತಂದೆ ಇವನೇ ಎಂದು ಹೇಳುವ ಕ್ರಮ, ಆದರೆ ಶ್ರೀಮನ್ಮಹಾಭಾರತದಲ್ಲಿ ಇವರು ಬೇರೆ ಬೇರೆ ಎಂದೇ ಹೇಳಲಾಗಿದೆ. ಆರುಣಿ ತನ್ನ ಸಹಪಾಠಿಗಳಾದ ಉಪಮನ್ಯು ಮತ್ತು ವೇದ ಇವರುಗಳೊಂದಿಗೆ ಗುರುಕುಲದಲ್ಲಿ ಅಭ್ಯಾಸ ನಿರತನಾಗಿದ್ದ. ಅಂದಿನ ಗುರುಕುಲದ ಶಿಕ್ಷಣ ಪದ್ಧತಿ ಬೇರೆಯೇ ಅಲ್ಲವೇ.. ಸದಾ ಆಶ್ರಮದ ನಿತ್ಯ ಕೆಲಸಗಳನ್ನು ಮಾಡಬೇಕು.. ಗೋಪರಿಪಾಲನೆ, ಕೈತೋಟ, ಹೂದೋಟ, ಹೊಲ, ಗದ್ದೆ.. ಎಲ್ಲವೂ ಇರುತಿತ್ತು, ಆಶ್ರಮಕ್ಕೆ ಅಗತ್ಯವಿರುವ ಎಲ್ಲವನ್ನು ಅಲ್ಲಿರುವ ಶಿಷ್ಯರೇ ಬೆಳೆಯುತ್ತಿದ್ದರು. ಅರಣ್ಯಕ್ಕೆ ಹೋಗಿ ಯಜ್ಞ ಯಾಗಗಳಿಗೆ ಬೇಕಾಗುವ ಸಮಿಧೆಗಳನ್ನೂ ಅವರೇ ಸಂಗ್ರಹಿಸಿ ತರುತ್ತಿದ್ದರು, ನಿಜವಾಗಿ ಜೀವನ ನಿರ್ವಹಣೆ ಮಾಡಲು ಬೇಕಾದ ವಿಧ್ಯೆ ಅದೇ ತಾನೇ... ಕೇವಲ ಪಠ್ಯವನ್ನೇ ಅಭ್ಯಾಸ ಮಾಡಲು ಅಂದಿನವರಿಗೆ ಹೆಚ್ಚು ಕಾಲ ಬೇಕಾಗುತ್ತಿರಲಿಲ್ಲ. ಗುರುಗಳು ನಿನಗೆ ಎಲ್ಲ ವಿದ್ಯೆಗಳು ತಿಳಿಯಲಿ ಎಂದು ಹೇಳಿದ್ದರೂ ಸಾಕಾಗುತಿತ್ತು.. ಇದು ಉತ್ಪ್ರೇಕ್ಷೆ ಎಂದು ಈಗ ಅನ್ನಿಸಿದರೂ ಇತ್ತೀಚಿನ ಕಾಲದಲ್ಲಿ ಆಚಾರ್ಯ ಶಂಕರರು ಎಂಟನೇ ವರ್ಷಕ್ಕೆ ಚತುರ್ವೇಧ ಪಾರಂಗತರಾಗಿದ್ದರು ಎಂಬುದನ್ನು ಕೇಳಿ ಬಲ್ಲೆವು. ಆರುಣಿ ಕೂಡಾ ಗುರುಸೇವಾ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ, ಒಂದು ದಿನ ಗುರುಗಳು ಅವನಿಗೆ ಗದ್ದೆಗೆ ಹೋಗಿ ನೀರಿನ ವ್ಯವಸ್ಥೆ ನೋಡಿ ಬರಲು ಹೇಳಿದರು. ಗುರುಗಳ ಮಾತಿನಂತೆ ಆರುಣಿ ಗದ್ದೆಗೆ ಹೋಗಿ ನೋಡಿದಾಗ ಒಂದು ಗದ್ದೆಯ ಬದು ನೀರಿನಿಂದ ಕೊಚ್ಚಿ ಹೋಗಿತ್ತು, ಎಷ್ಟು ಪ್ರಯತ್ನ ಮಾಡಿದರೂ ಅದನ್ನು ಸರಿಮಾಡಲಾಗಲಿಲ್ಲ. ಹಾಕಿದ ಮಣ್ಣು ನೀರಿನ ರಭಸಕ್ಕೆ ಮತ್ತೆ ಮತ್ತೆ ಕೊಚ್ಚಿ ಹೋಗುತಿತ್ತು. ಆ ಕ್ಷಣದಲ್ಲಿ ಆರುಣಿಗೆ ಬೇರೆ ದಾರಿ ಕಾಣದಿದ್ದಾಗ ಒಂದು ಯೋಚನೆ ಬಂತು. ಮಣ್ಣಿನ ಬದಲಿಗೆ ಹರಿದು ಹೋಗುತಿದ್ದ ನೀರಿಗೆ ಅಡ್ಡವಾಗಿ ತಾನೇ ಮಲಗಿಬಿಟ್ಟ... ಹರಿದುಹೋಗುತಿದ್ದ ನೀರು ನಿಂತು ಗದ್ದೆಯಲ್ಲಿ ಬೇಕಾದಷ್ಟು ಸಂಗ್ರಹವಾಯಿತು.ಇತ್ತ ಬಹಳ ಸಮಯವಾದರೂ ಆರುಣಿ ಹಿಂತಿರುಗಿ ಬರದಿರುವುದನ್ನು ಗಮನಿಸಿದ ಗುರುಗಳು ಶಿಷ್ಯರ ಸಮೇತ ಇವನನ್ನು ಹುಡುಕುತ್ತಾ ಗದ್ದೆಯ ಬಳಿಗೆ ಬಂದರು. ಅಲ್ಲೆಲ್ಲಿಯೂ ಕಾಣದೆ "ಮಗೂ ಆರುಣಿ ಎಲ್ಲಿದ್ದಿ.. ಶೀಘ್ರವಾಗಿ ಇತ್ತ ಬಾ" ಎಂದು ಕರೆದರು. ಮರುಕ್ಷಣದಲ್ಲಿಯೇ ಗದ್ದೆಯ ಬದುವಾಗಿ ಮಲಗಿದ್ದ ಆರುಣಿ " ಗುರುಗಳೇ ನಾನಿಲ್ಲಿದ್ದೇನೆ " ಎಂದು ಹೇಳುತ್ತಾ ಎದ್ದು ಬಂದು ಗುರುಗಳಿಗೆ ನಮಸ್ಕರಿಸಿ ನಡೆದ ಘಟನೆಯನ್ನು ಅವರಲ್ಲಿ ನಿವೇದಿಸಿಕೊಂಡ. ಆಯೋದದೌಮ್ಯರಿಗೆ ಸಂತೋಷವಾಯಿತು "ನನ್ನ ಮಾತನ್ನು ಚಾಚು ತಪ್ಪದೆ ನಿರ್ವಹಿಸುವಲ್ಲಿ ನೀನು ಮಾಡಿದ ಸಾಹಸದಿಂದ ಸಂತೋಷವಾಯಿತು, ನನ್ನ ಕೂಗನ್ನು ಕೇಳಿದಾಕ್ಷಣ ನೀನು ಗದ್ದೆಯ ಬದುವಿನಿಂದ ಎದ್ದು ಬಂದ ಕಾರಣದಿಂದಲೇ ನೀನು ಉದ್ದಾಲಕನೆಂಬ ಹೆಸರಿನಿಂದ ಪ್ರಸಿದ್ಧನಾಗುವೆ, ಎಲ್ಲ ವೇದಗಳು, ಧರ್ಮಶಾಸ್ತ್ರಗಳೂ ನಿನ್ನ ಬುದ್ದಿಗೆ ಗೋಚರವಾಗಲಿ" ಎಂದು ಹರಸಿದರು. ಮುಂದೆ ಈ ಉದ್ದಾಲಕ ಗೃಹಸ್ಥನಾಗಿ, ಶ್ವೇತಕೇತು ಎನ್ನುವ ಮಗನನ್ನೂ ಸುಜಾತ ಎನ್ನುವ ಮಗಳನ್ನೂ ಪಡೆದ. ತನ್ನ ಶಿಷ್ಯನಾದ ಕಹೋಡಕನಿಗೆ ಮಗಳನ್ನು ಮದುವೆ ಮಾಡಿಕೊಟ್ಟ, ಪುರಾಣಗಳಲ್ಲಿ ಬರುವ ಅಷ್ಟಾವಕ್ರನೆನ್ನುವ ಋಷಿ ಇದೇ ಕಹೋಡಕ ಮತ್ತು ಸುಜಾತ ದಂಪತಿಗಳ ಮಗ. ಒಮ್ಮೆ ಉದ್ದಾಲಕ ಯಾಗ ಮಾಡುತ್ತಿರುವಾಗ ಯಜ್ಞವೇದಿಕೆಯಲ್ಲಿ ನೀರಿನ ಅನಿವಾರ್ಯತೆ ಉಂಟಾಯಿತು, ಆ ಹೊತ್ತಿನಲ್ಲಿ ಪುಣ್ಯದಾಯಿನಿಯಾದ ಸರಸ್ವತಿಯನ್ನು ಮನಸ್ಸಿನಲ್ಲಿಯೇ ಸ್ಮರಿಸಿ ಆಹ್ವಾನಿಸಿದರು.. ಮರುಕ್ಷಣವೇ ನದಿಯಾದ ಸರಸ್ವತಿ ಉದ್ದಾಲಕ ಮಾಡುತ್ತಿದ್ದ ಯಜ್ಞಶಾಲೆಗೇ ಹರಿದುಬಂದಳು ಹಾಗಾಗಿಯೇ ಸರಸ್ವತಿ ನದಿಗೆ "ಮನೋರಮಾ " ಎಂಬ ಹೆಸರು ಉಂಟು.

No comments:

Post a Comment