Tuesday, May 27, 2025

ಜರತ್ಕಾರು ಮತ್ತು ಆಸ್ತೀಕ

ಜರತ್ಕಾರು ಮತ್ತು ಆಸ್ತೀಕ ಜನಮೇಜಯನ ಸರ್ಪಯಾಗದ ಕಥೆ ಆರಂಭಿಸುವ ಮುನ್ನವೇ ಅದನ್ನು ನಿಲ್ಲಿಸಲು ಬೇಕಾದ ಒಂದು ಭೂಮಿಕೆ ಸಿದ್ಧವಾದದ್ದನ್ನು ಹೇಳಲೇಬೇಕಾಗುತ್ತದೆ. ಅಂದು ತಾಯಿಯಾದ ಕದ್ರೂ ಕೊಟ್ಟ ಶಾಪದ ಬಗ್ಗೆ ಸರ್ಪ ಸಂತತಿಗೆ ಸದಾ ಆತಂಕ ಇದ್ದೇ ಇರುತ್ತದೆ. ಆ ಶಾಪದ ಪರಿಣಾಮ ಏನಾಗಬಹದು..ಅದರಿಂದ ನಿವೃತ್ತಿ ಹೇಗೆ ಎಂಬ ಬಗ್ಗೆ ಚಿ೦ತೆ ಕಾಡುತ್ತಲೇ ಇತ್ತು. ಆಗಾಗ ಮಾತೆಯ ಶಾಪವಾಕ್ಯ ನೆನಪಾಗಿ ಆತಂಕ ಉಂಟಾಗುತಿತ್ತು. ಇದೇ ಸಂದರ್ಭದಲ್ಲಿ ಒಂದು ಘಟನೆ ನಡೆಯುತ್ತದೆ. ಜರತ್ಕಾರು ಎಂಬ ಒಬ್ಬ ಋಷಿ ಇದ್ದ, ಇವನ ತಂದೆ ತಾಯಿಗಳು ಯಾರು ಎಂದು ಸರಿಯಾದ ಉಲ್ಲೇಖ ಸಿಗಲಿಲ್ಲ, ಯಾಯಾವರ ಎಂಬುವವರು ಇವನ ಪಿತೃಗಳು... ಒಂದು ಕಡೆ ನಿಲ್ಲದೇ ಸದಾ ಊರೂರು ತಿರುಗುತ್ತಲೇ ಇರುವವರು ಎಂದು ಈ ಹೆಸರು.. ಇವರ ಕುಲದಲ್ಲಿ ಹುಟ್ಟಿದ ಜರತ್ಕಾರು ಕೂಡ ಅಲ್ಲಲ್ಲಿ ತಿರುಗುತ್ತಾ ತಪಸ್ಸು ಮಾಡುತ್ತಾ ಕಾಲ ಕಳೆಯುತ್ತಿದ್ದ. ಒಂದು ದಿನ ಹೀಗೆಯೇ ಸಂಚಾರ ಮಾಡುತ್ತಿರುವಾಗ ಒಂದು ಪಾಳುಭಾವಿ.. ಹುಲ್ಲಿನಿಂದ ಮುಚ್ಚಿ ಹೋಗುವ ಸ್ಥಿತಿಯಲ್ಲಿದೆ.. ಒಂದಷ್ಟು ಜನ ಅದೇ ಹುಲ್ಲನ್ನು ಹಿಡಿದು ನೇತಾಡುತಿದ್ದಾರೆ..ಅವರು ಆಧಾರವಾಗಿ ಹಿಡಿದ ಹುಲ್ಲನ್ನು ಇಲಿಗಳು ಕಡಿಯುತ್ತಾ ಇವೆ. ಪೂರ್ತಿ ಕತ್ತರಿಸಿ ಹೋದರೆ ಅವರು ಕೆಳಗೆ ಬೀಳುತ್ತಾರೆ.. ಅಂತಹ ಸ್ಥಿತಿಯಲ್ಲಿ ಜರತ್ಕಾರು ಅವರನ್ನು ನೋಡಿದ. ಕುತೂಹಲವಾಯಿತು...ಆ ಹುಲ್ಲನ್ನು ಬಿಟ್ಟು ಬೇರೆ ರಕ್ಷಣೆ ಅರಸುವ ಯೋಚನೆಯನ್ನೂ ಅವರು ಮಾಡಿದಂತೆ ಅವನಿಗೆ ಅನ್ನಿಸಲಿಲ್ಲ..ಹಾಗಾಗಿಯೇ ಮಾತನಾಡಿಸಿದ.. ಅಯ್ಯಾ...ನೀವು ಯಾರು ಯಾಕೆ ಈ ಸ್ಥಿತಿಯಲ್ಲಿದ್ದೀರಿ.. ಈ ಪಾಳುಕೂಪದಲ್ಲಿ ನೀವಿರಲು ಕಾರಣವೇನು...? ಜರತ್ಕಾರು ಹೀಗೆ ಕೇಳಲು ಅವರು ಹೇಳಿದರು.." ಅಯ್ಯಾ ಬ್ರಾಹ್ಮಣ..ಯಾಯಾವರರೆಂದು ನಮ್ಮ ಹೆಸರು.. ಭೂಲೋಕದಲ್ಲಿ ತಪಸ್ಸು ಮಾಡುತ್ತಾ ಬದುಕಿ ನಂತರ ಉನ್ನತವಾದ ಪಿತೃ ಲೋಕವನ್ನು ಸೇರಬೇಕಾದವರು ನಾವಾಗಿದ್ದೆವು... ಆದರೆ... ಏನು ಮಾಡೋಣ ನಮ್ಮ ಕುಲದಲ್ಲಿ ಹುಟ್ಟಿದ ಒಬ್ಬನೇ ವ್ಯಕ್ತಿ ಜರತ್ಕಾರು ಎಂಬಾತ ಕೇವಲ ತಪಸ್ಸನ್ನು ಮಾತ್ರ ಮಾಡುತ್ತಾ ಬ್ರಹ್ಮಚಾರಿಯಾಗಿ ತಿರುಗುತ್ತಾ ಇದ್ದಾನೆ...ಅವನು ಸಂಸಾರಿಯಾಗಿ ಸಂತಾನವನ್ನು ಪಡೆಯದೇ ಇರುವ ಕಾರಣ ನಮಗೆ ಇಂತಹ ದುಸ್ಥಿತಿ ಉಂಟಾಗಿದೆ.. ನಮ್ಮ ಪತನಭೀತಿಗೆ ಅವನೇ ಕಾರಣ " ಎಂದರು. ಅವರ ಮಾತನ್ನು ಕೇಳಿ.."ನೀವು ಹೇಳಿದ ಜರತ್ಕಾರು ನಾನೇ..ನನಗೆ ಸಾಂಸಾರಿಕ ಜೀವನದಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲ ಆದರೆ ನಿಮ್ಮ ಸ್ಥಿತಿಯನ್ನು ನೋಡಿ ನಿಮ್ಮ ಉದ್ಧಾರಕ್ಕಾಗಿ ನಾನು ಸಂಸಾರಿಯಗಲು ಸಿದ್ಧನಿದ್ದೇನೆ ಆದರೆ... ಅದಕ್ಕೆ ನಿಬಂಧನೆಗಳಿದೆ. ನಾನು ಕೈ ಹಿಡಿಯುವ ವಧು ನನ್ನ ಹೆಸರಿನವಳೇ ಆಗಿರಬೇಕು..ನಾನು ಕನ್ಯಾರ್ಥಿಯಾಗಿ ಎಲ್ಲಿಗೂ ಹೋಗುವುದಿಲ್ಲ.. ಕನ್ಯಾಪಿತೃವೇ ಬಂದು ಕನ್ಯೆಯನ್ನು ಭಿಕ್ಷೆಯರೂಪದಲ್ಲಿ ನನಗೆ ಕೊಟ್ಟರೆ ನಾನವಳನ್ನು ಸ್ವೀಕರಿಸುತ್ತೇನೆ...ಆ ಕನ್ಯಾಮಣಿಯ ಸದಾ ನನಗೆ ಅನುಕೂಲಳೇ ಆಗಿರಬೇಕು..ನನಗೆ ವಿರೋಧವನ್ನು ಎಸಗಿದರೆ ನಾನವಳನ್ನು ತೊರೆದು ಬಿಡುತ್ತೇನೆ..." ಎಂದನು. ಯಾವುದಕ್ಕೂ ಬ್ರಹ್ಮಚಾರಿಯಾದ ಜರತ್ಕಾರು ಸಂಸಾರಿಯಾಗುವ ಮನಸ್ಸು ಮಾಡಿದ್ದಕ್ಕೆ ಪಿತೃಗಳಿಗೆ ಸಂತೋಷವಾಯಿತು. ಅವರಿಂದ ಬೀಳ್ಕೊಂಡು ಜರತ್ಕಾರು ಮುಂದೆ ಹೊರಟ. ಇತ್ತ ನಾಗಲೋಕದಲ್ಲಿ ಸರ್ಪಗಳ ಸಭೆ.. ನಾಗರಾಜನಾದ ತಕ್ಷಕನ ಅಧ್ಯಕ್ಷತೆ.. ಅದಾಗಲೇ ಪರೀಕ್ಷಿತ ಪುತ್ರನಾದ ಜನಮೇಜಯ ಪಟ್ಟಾಭಿಷಿಕ್ತನಾಗಿದ್ದಾನೆ.. ಮಾತೆಯ ಶಾಪ ಯಾವಾಗ ಬರಸಿಡಿಲಿನಂತೆ ಎರಗುವುದೋ ಎಂಬ ಭಯ...ಎಲ್ಲರೂ ಒಂದೊಂದು ಸೂಚನೆ ಕೊಡುತ್ತಿದ್ದಾರೆ..ಕೆಲವರು ಪರೀಕ್ಷಿತನನ್ನು ಕೊಂದ ಹಾಗೆ ಇವನನ್ನು ಕಚ್ಚಿ ಕೊಂದು ಬಿಡೋಣ ಎನ್ನುತ್ತಿದ್ದಾರೆ.. ಏಲಾಪತ್ರ ಎಂಬ ನಾಗ ಆ ಸಭೆಯನ್ನು ಉದ್ದೇಶಿಸಿ ಹೇಳುತ್ತಾನೆ. " ಅಯ್ಯಾ ಬಂಧುಗಳೇ.. ನಾವು ಹಿಂದಿನ ಘಟನೆಯನ್ನು ಅವಲೋಕಿಸಬೇಕಾದ ಅನಿವಾರ್ಯತೆ ಇದೆ. ಅಂದು ನಮ್ಮ ಮಾತೆ ನಮಗೆ ಶಾಪವನ್ನು ಕೊಟ್ಟಾಗ ನಾಗ ಸಂತತಿಯೇ ಅಳಿದು ಹೋಗುತ್ತದೆ ಎಂದು ಆತಂಕಕ್ಕೆ ಒಳಗಾದ ದೇವತೆಗಳು ಬೃಹ್ಮದೇವರ ಬಳಿಗೆ ಹೋಗಿ ಕೇಳಿದಾಗ ಸೃಷ್ಠಿಕರ್ತನಾದ ಬ್ರಹ್ಮದೇವರು ದೇವತೆಗಳಿಗೆ ಹೇಳಿದ್ದನ್ನು ನೆನಪಿಸಿಕೊಳ್ಳಿ..ಯಾಯಾವರ ರ ಸಂತತಿಯಲ್ಲಿ ಜನಿಸಿದ ಜರತ್ಕಾರು ಎಂಬ ಋಷಿಯ ಕೈ ಹಿಡಿಯುವ ಅದೇ ಹೆಸರನ್ನು ಹೊಂದಿದ ನಾಗಕನ್ನಿಕೆಯ ಪುತ್ರನಿಂದ ಸರ್ಪಕುಲ ಉಳಿಯುತ್ತದೆ ಎಂದಿದ್ದಾನೆ. ಹಾಗಿದ್ದರೆ ಈಗನಾವು ಬೇರೆ ದಾರಿಯನ್ನು ಹುಡುಕಬೇಕಾಗಿಲ್ಲ.. ಜರತ್ಕಾರು ಎನ್ನುವ ಆ ಖುಷಿಯನ್ನು ಹುಡುಕಿ ತಕ್ಷಕನ ಸಹೋದರಿಯಾದ ಜರತ್ಕಾರುವನ್ನು ಮದುವೆ ಮಾಡುವುದೇ ದಾರಿ ಅವರಿಂದ ಜನಿಸುವ ಸಂತಾನ ನಮ್ಮ ಕುಲಕ್ಷಯವನ್ನು ನಿಲ್ಲಿಸುತ್ತದೆ ".. ಏಲಾಪತ್ರನ ಈ ಮಾತಿಗೆ ಎಲ್ಲರೂ ನಿಟ್ಟುಸಿರು ಬಿಟ್ಟು ಸಮ್ಮತಿಯನ್ನು ಸೂಚಿಸುತ್ತಾರೆ. ಜರತ್ಕಾರುವಿನ ನಿಬಂಧನೆಯನ್ನು ಅರಿತ ತಕ್ಷಕ ತಾನೇ ಮುಂದಾಗಿ ತನ್ನ ಸಹೋದರಿ ಜರತ್ಕಾರುವನ್ನು ಬಿಕ್ಷೆಯ ರೂಪದಲ್ಲಿ ನೀಡಲು ಕರೆದುಕೊಂಡು ಬರುತ್ತಾನೆ. ಜರತ್ಕಾರುವನ್ನು ಕಂಡು ಆಕೆಯನ್ನು ಸ್ವೀಕರಿಸಬೇಕು ಎಂದು ಕೇಳಿಕೊಳ್ಳುತ್ತಾನೆ. ಮೊದಲು ನಿರಾಕರಿಸಲು ಮುಂದಾದ ಜರತ್ಕಾರು ಕನ್ಯೆಯ ಹೆಸರೂ ತನ್ನ ಹೆಸರೇ ಎಂದು ತಿಳಿದಾಗ ಸಮ್ಮತಿಸುತ್ತಾನೆ. ಬಿಕ್ಷಾರೂಪದಲ್ಲಿ ಆಕೆಯನ್ನು ಸ್ವೀಕರಿಸಿ ಮದುವೆಯಾಗುತ್ತಾನೆ. ಸಾಂಸಾರಿಕ ಜೀವನ ಚೆನ್ನಾಗಿಯೇ ಸಾಗುತ್ತಿರುತ್ತದೆ. ನಾಗಕನ್ನಿಕೆ ಗರ್ಭವತಿಯಾಗುತ್ತಾಳೆ. ಒಂದು ದಿನ ಸಾಯಂಕಾಲ ಪತ್ನಿಯ ತೊಡೆಯ ಮೇಲೆ ತಲೆಯಿಟ್ಟು ಜರತ್ಕಾರು ಮಲಗಿರುತ್ತಾನೆ... ಸೂರ್ಯಾಸ್ತ ಸಮೀಪಿಸಿದರೂ ಏಳುವುದಿಲ್ಲ. ಇತ್ತ ಪತ್ನಿಯಾದ ಜರತ್ಕಾರುವಿಗೆ ಆತಂಕವುಂಟಾಗುತ್ತದೆ. ಸಂಧ್ಯಾ ಕಾಲದಲ್ಲಿ ಪತಿ ಮಾಡಬೇಕಾದ ನಿತ್ಯಕರ್ಮಗಳು ತಪ್ಪಿ ಹೋಗುತ್ತದೆ. ಹಾಗಾಗಿ ಪತಿಯನ್ನು ಎಬ್ಬಿಸಬೇಕು.. ಎಬ್ಬಿಸಿದರೆ ಕೋಪಗೊಂಡರೇ.. ಏನಾದರಾಗಲಿ ಇಂತಹ ಸಂದರ್ಭದಲ್ಲಿ ಬ್ರಾಹ್ಮಣ ಮಾಡಬೇಕಾದ ಕರ್ತವ್ಯಕ್ಕೆ ಚ್ಯುತಿ ಆಗಬಾರದೆಂದು ಪತಿಯನ್ನು ಎಬ್ಬಿಸಿದಳು. ಎಚ್ಚರಗೊಂಡ ಜರತ್ಕಾರು ಕೋಪಗೊಂಡ ಸತಿಯಾದವಳು ಪತಿಗೆ ಅನುಕೂಲೆಯಾಗಿರಬೇಕು..ನೀನು ನನ್ನ ನಿದ್ರಾಭಂಗ ಮಾಡಿದೆ...ನಿನ್ನೊಂದಿಗೆ ಇನ್ನು ಸಂಸಾರ ಮಾಡಲಾರೆ ಎಂದು ಹೇಳಿ.. ನೀನು ನಿನ್ನ ಬದುಕನ್ನು ಮತ್ತೆ ತವರಿನಲ್ಲಿಯೇ ಕಳೆ..ನನ್ನ ನಿರೀಕ್ಷೆ ಬೇಡ.. ಎಂದನು.ಪತ್ನಿ ಕಣ್ಣೀರುಗರೆದು ಬೇಡಿಕೊಂಡರೂ ಕೇಳದೆ ಹೊರಡಲನುವಾದ..ಆ ಕ್ಷಣದಲ್ಲಿ ತಾನು ಗರ್ಭವತಿ ಎಂದೂ ಅರಿಯದ ಜರತ್ಕಾರು ಅವನಲ್ಲಿಯೇ ಕೇಳಿದಾಗ.."ಅಸ್ತಿ" ಎಂದು ಹೇಳಿ.. ನಿನಗೆ ಹುಟ್ಟುವ ಮಗನು ಜ್ಞಾನಿಯೂ ವೇದ ವೇದಾಂಗ ಪಾರಂಗತನೂ ಆಗಿ ನಿಮ್ಮ ಕುಲದ ಉದ್ಧಾರಕನೂ ಆಗುತ್ತಾನೆ ಎಂದು ಹೇಳಿ ಹೊರಟು ಹೋದ. ನಾಗಸ್ತ್ರೀಯಾದ ಜರತ್ಕಾರು ಕಣ್ಣೀರು ಸುರಿಸುತ್ತಾ ತಕ್ಷಕನ ಬಳಿಗೆ ಬರುತ್ತಾಳೆ. ನಡೆದ ಘಟನೆಯನ್ನೆಲ್ಲ ಹೇಳುತ್ತಾಳೆ. ತಕ್ಷಕನಿಗೂ ದುಃಖವಾಗುತ್ತದೆ, ಆದರೆ ತಪಸ್ವಿಯಾದ ಜರತ್ಕಾರುವಿನ ನಿರ್ಧಾರವನ್ನು ತಡೆಯುವ ಸಾಧ್ಯತೆ ತನಗಿಲ್ಲ ಎಂಬುದನ್ನು ಅರಿತು,ತನ್ನ ಸಹೋದರಿ ಗರ್ಭವತಿ ಎಂಬುದನ್ನು ಅರಿತು ಉದ್ದೇಶ ಈಡೇರಿದ ಒಂದು ಸಮಾಧಾನವಾಗುತ್ತದೆ. ತಂಗಿಯನ್ನು ಅತ್ಯಂತ ಎಚ್ಚರಿಕೆಯಿಂದ ಪಾಲಿಸುತ್ತಾನೆ. ದಿನತುಂಬಿ ಜರತ್ಕಾರು ಸರ್ಪಕುಲೋದ್ಧಾರಕನಾದ ಮಗನಿಗೆ ಜನ್ಮ ಕೊಡುತ್ತಾಳೆ. ಗರ್ಭದಲ್ಲಿರುವಾಗಲೇ ಪತಿ ''ಅಸ್ತು'' ಹೇಳಿದ ಕಾರಣಕ್ಕೂ ''ಆಸ್ತೀಕ " ಎಂದು ನಾಮಕರಣವಾಗುತ್ತದೆ. ಚ್ಯವನ ಮಹರ್ಷಿಯಿಂದ ವೇದ ವೇದಾಂಗಗಳನ್ನು ಕಲಿಯುತ್ತಾನೆ.( ದೇವೀ ಭಾಗವತದಲ್ಲಿ.. ಪತಿ ತೊರೆದು ಹೋದ ಮೇಲೆ ಜರತ್ಕಾರು ಕೈಲಾಸಕ್ಕೆ ಹೋಗಿ ಪಾರ್ವತೀ ಪರಮೇಶ್ವರರಲ್ಲಿ ಆಸರೆ ಹೊಂದಿರುತ್ತಾಳೆ. ಅಲ್ಲಿಯೇ ಜನಿಸಿದ ಆಸ್ತೀಕ ಶಿವನಿಂದಲೇ ಸಕಲ ವಿದ್ಯೆಗಳನ್ನೂ ಕಲಿಯುತ್ತಾನೆ.)🙏🙏

No comments:

Post a Comment