Monday, May 19, 2025
ವೇದ ಮತ್ತು ಉತ್ತನ್ಕ
ಆಯೋದದೌಮ್ಯರ ಮೂರನೆಯ ಶಿಷ್ಯ ವೇದ, ಸದಾ ಭಕ್ತಿಯಿಂದ ಗುರುಸೇವಾ ಕೈಂಕರ್ಯದಲ್ಲಿ ತೊಡಗಿಕೊಂಡವ.ಆಶ್ರಮದಲ್ಲಿ ಯಾವ ಕೆಲಸವೇ ಆಗಲಿ ಭಕ್ತಿಯಿಂದ ಮಾಡಿ ಮುಗಿಸುತ್ತಿದ್ದ, ಬಹಳ ಸಾಧು ಸ್ವಭಾವದವನೂ ಆಗಿದ್ದ. ಉಳಿದ ಶಿಷ್ಯರು ಹೊಲದ ಕೆಲಸಗಳಲ್ಲಿ ಎತ್ತಿನ ಬದಲಿಗೆ ಇವನನ್ನೇ ಕಟ್ಟಿ ಉಳುತ್ತಿದ್ದರು. ಆದರೂ ತನಗಾಗುವ ಆಯಾಸ ನೋವುಗಳನ್ನು ಸಹಿಸಿಕೊಂಡು ಇರುತ್ತಿದ್ದ. ಹಲವು ದಿನ ಇದನ್ನು ಗಮನಿಸುತ್ತಿದ್ದ ಗುರುಗಳು ಒಂದು ದಿನ ಸಂತುಷ್ಟರಾಗಿ ಸರ್ವಜ್ಞತ್ವವನ್ನು ಹೊಂದು ಎಂದು ಹರಸಿ ಬೀಳ್ಕೊಟ್ಟರು. ಮುಂದೆ ವೇದನು ಬ್ರಹ್ಮಚರ್ಯಾಶ್ರಮವನ್ನು ತೊರೆದು ಅನುರೂಪಳಾದ ಕನ್ನಿಕೆಯ ಕೈಹಿಡಿದು ಗೃಹಸ್ಥನಾದನು. ಬಳಿಕ ಇವನಲ್ಲಿಯೂ ಹಲವು ಶಿಷ್ಯರು ವಿದ್ಯಾರ್ಜನೆಗೋಸ್ಕರ ಬಂದು ಆಶ್ರಯಿಸಿದರು. ಆದರೆ ತಾನು ಗುರುಕುಲವಾಸದಲ್ಲಿ ಅನುಭವಿಸಿದ ಕಷ್ಟದ ದಿನಗಳನ್ನು ನೆನಪಿಸಿಕೊಂಡ ವೇದನು ತನ್ನ ಶಿಷ್ಯರಿಗೆ ಯಾವುದೇ ಕೆಲಸವನ್ನೂ ಹೇಳುತ್ತಿರಲಿಲ್ಲ. ಹೀಗೆಯೇ ದಿನಗಳು ಕಳೆಯುತ್ತಿರುವಾಗ ಒಮ್ಮೆ ವೇದನು ಕಾರ್ಯಾರ್ಥವಾಗಿ ಕೆಲವು ದಿನಗಳ ಕಾಲ ಆಶ್ರಮವನ್ನು ತೊರೆಯಬೇಕಾದ ಅನಿವಾರ್ಯತೆ ಒದಗುತ್ತದೆ. ಆಗ ತನ್ನ ಶಿಷ್ಯರಲ್ಲೊಬ್ಬನಾದ ಉತ್ತನ್ಕನನ್ನು (ನಿಜವಾಗಿ ಉತ್ತನ್ಕ ಎಂದು ಬರೆಯುವುದಲ್ಲ "ನ್ಕ" ದ ಬದಲು"ಘ " ದ ನಂತರ ಬರುವ ಅಕ್ಷರಕ್ಕೆ ಕ ವನ್ನು ಒತ್ತಕ್ಷರವಾಗಿ ಬಳಸಬೇಕು.. ಆದರೆ ಕೀಲಿಮಣೆಗೆ ಹಾಗೊಂದು ಅಕ್ಷರ ಇದೆ ಎಂದು ಗೊತ್ತಿಲ್ಲ ) ಕರೆದು ಹೇಳಿದರು " ಕುಮಾರ ನಾನು ಕಾರ್ಯಾರ್ಥದಿಂದ ಕೆಲವು ದಿನ ಆಶ್ರಮದಲ್ಲಿ ಇರುವುದಿಲ್ಲ ಹಾಗಾಗಿ ಕಾಲಕಾಲಕ್ಕೆ ಹೊಣೆಯರಿತು ಆಶ್ರಮದ ಕೆಲಸಗಳನ್ನು ನೀನು ಮಾಡಬೇಕು " ಎಂದು ಹೇಳಿ ಹೊರಟರು.
ಉತ್ತನ್ಕನಿಗೆ ಬಹಳ ಸಂತೋಷವಾಯಿತು, ಎಂದೂ ಕೆಲಸ ಹೇಳದಿದ್ದ ಗುರುಗಳು ಇಂದು ಹೇಳಿದರು.. ಅದೂ ಉಳಿದವರು ಇದ್ದರೂ ನನಗೇ ಹೇಳಿದರು (ಈಗಿನ ಕಾಲವಾದರೆ ಉಳಿದವರಿದ್ದೂ ನನಗೇ ಹೇಳಿದರಲ್ಲಾ ಎಂಬ ಬೇಸರವೇ ಆಗುತಿತ್ತು) ಹಾಗಾಗಿ ಬಹಳ ಶ್ರದ್ಧೆಯಿಂದಲೇ ಆಶ್ರಮದ ಕೆಲಸಗಳಲ್ಲಿ ತೊಡಗಿಕೊಂಡ. ಒಂದು ದಿನ ಗುರುಪತ್ನಿಯ ಜೊತೆಯಲ್ಲಿದ್ದ ಕೆಲವು ಸ್ತ್ರೀಯರು ಇವನ ಬಳಿಗೆ ಬಂದು " ಋತುಸ್ನಾತೆಯಾದ ಗುರುಪತ್ನಿಯು ಇಂದು ಋತುಸ್ನಾನವನ್ನು ಪೂರೈಸಿದ್ದಾರೆ.. ಗುರುಗಳು ಆಶ್ರಮದಲ್ಲಿ ಇಲ್ಲದ ಕಾರಣ ಋತುಕಾಲವು ವ್ಯರ್ಥವಾಗುವುದಲ್ಲಾ ಎಂಬ ಬೇಸರದಲ್ಲಿದ್ದಾರೆ ಹಾಗಾಗಿ ಗುರುವಿನ ಆಣತಿಯಂತೆ ಆಶ್ರದ ಹೊಣೆ ಹೊತ್ತ ನೀನು ಗುರುಪತ್ನಿಯ ಆಸೆಯನ್ನು ನೆರವೇರಿಸು ಇದರಿಂದ ಗುರುಗಳಿಗೂ ಗುರುಪತ್ನಿಗೂ ಸಂತೋಷವಾಗುತ್ತದೆ" ಎಂದರು. ಆಗ ಉತ್ತನ್ಕ "ತಾಯಂದಿರೆ ಗುರುವನ್ನು ನನ್ನ ತಂದೆ ಎಂದು ಭಾವಿಸಿದ್ದೇನೆ ಹಾಗಾಗಿ ಗುರುಪತ್ನಿ ನನಗೆ ಮಾತೆಯೇ ಹೌದು, ಅಧರ್ಮದ ದಾರಿಯಲ್ಲಿ ನಾನೆಂದೂ ಸಾಗಲಾರೆ ಅಂತಹ ಹೇಯವಾದ ಕಾರ್ಯಕ್ಕೆ ನನ್ನ ಮನಸ್ಸು ಎಂದೂ ಒಳಪಡುವುದಿಲ್ಲ" ಎಂದು ನಿರಾಕರಿಸಿದನು. ದಿನಗಳು ಕಳೆದಮೇಲೆ ಗುರುಗಳು ಆಶ್ರಮಕ್ಕೆ ಹಿಂತಿರುಗಿದರು. ಆಶ್ರಮದಲ್ಲಿ ನಡೆದ ವಿಚಾರ ಅವರಿಗೂ ತಿಳಿಯಿತು, ತಮ್ಮ ಶಿಷ್ಯನ ನಿರ್ಧಾರ ಕೇಳಿ ಬಹಳ ಸಂತೋಷವೂ ಆಯಿತು.ಹಾಗಾಗಿಯೇ ಎಲ್ಲಾ ವಿಧ್ಯೆಗಳೂ ಅವನ ಅಂತರ್ಗತವಾಗಲೆಂದು ಹರಸಿದರು. ಇನ್ನೇನು ಆಶ್ರಮವನ್ನು ತೊರೆದು ಉತ್ತನ್ಕ ಹೊರಡಬೇಕು ಆ ಕ್ಷಣದಲ್ಲಿ "ಗುರುಗಳೇ ಯಾರೂ ಸಂಪ್ರದಾಯಕ್ಕೆ ವಿರುದ್ಧವಾಗಿ ವಿದ್ಯೆಯನ್ನು ಕಲಿಯಲಾಗದು ಅದರಿಂದ ಗುರುಶಿಷ್ಯರಿಬ್ಬರಿಗೂ ದೋಷವೇ ಸರಿ ಆದ್ದರಿಂದ ತಮ್ಮಲ್ಲಿ ವಿದ್ಯೆ ಕಲಿತ ನಾನು ಗುರುದಕ್ಷಿಣೆ ಅರ್ಪಿಸಬೇಕೆಂದಿರುವೆ, ತಮಗೆ ಇಷ್ಟವಾದದ್ದು ಯಾವುದು ಹೇಳಿ" ಎಂದು ವಿನಂತಿಸುತ್ತಾನೆ. ಗುರುಗಳು ನಸುನಗೆಯಿಂದ "ಮಗೂ ಇನ್ನೂ ಕೆಲವುಕಾಲ ನೀನು ಈ ಆಶ್ರಮದಲ್ಲಿಯೇ ಇರು ನಂತರದಲ್ಲಿ ನೋಡೋಣ" ಎಂದು ಹೇಳಿದರು. ದಿನ ಕೆಲವು ಕಳೆಯಿತು ಮತ್ತೆ ಗುರುಗಳಲ್ಲಿ ಅದೇ ಪ್ರಶ್ನೆ ಕೇಳುತ್ತಾನೆ, ಗುರುಗಳು ಮತ್ತದೇ ಉತ್ತರ ಕೊಡುತ್ತಾರೆ. ದಿನಗಳ ತರುವಾಯ ಮತ್ತೆ ಬಂದು ಕೇಳುತ್ತಾನೆ, ಗುರುಗಳಿಗೆ ಇನ್ನು ಇವನನ್ನು ತಡೆಯಲಾಗದು ಕೇಳಿದರೆ ಕೊಡಲು ಕಡು ಬಡವನಾದ ಇವನ ಬಳಿ ಏನೂ ಇಲ್ಲ ಎಂದು ಯೋಚಿಸಿ " ಮಗೂ ನನಗೇನೂ ಬೇಡ ಆದರೂ ಕೊಡವ ಮನಸ್ಸಿದ್ದರೆ ನಿನ್ನ ಮಾತೆಯ ಸ್ಥಾನದಲ್ಲಿರುವ ಗುರುಪತ್ನಿಯನ್ನು ಕೇಳು ಅವಳೇನಾದರೂ ಬಯಸಿದರೆ ಕೊಡು " ಎಂದು ಹೇಳುತ್ತಾರೆ. ಆಗ ಉತ್ತನ್ಕ ಗುರುಪತ್ನಿಯ ಬಳಿ ಹೋಗಿ ಗುರುದಕ್ಷಿಣೆಯಾಗಿ ಏನನ್ನು ಕೊಡಲಿ ಎಂದು ಕೇಳಿದಾಗ ಸಹಜವಾಗಿಯೇ ಸ್ತ್ರೀಯರಿಗೆ ಬಂಗಾರದ ಬಗ್ಗೆ ಆಸೆಯಲ್ಲವೇ... ಹಾಗಾಗಿ ತನಗೆ ಸೌದಾಸ ರಾಜನ ಪತ್ನಿಯಾದ ಮದಯಂತಿ ಧರಿಸಿರುವ ವಿಶಿಷ್ಟವಾದ ಕರ್ಣಕುಂಡಲಗಳು ಬೇಕು ಎಂದು ಕೇಳುತ್ತಾಳೆ ( ಕೆಲವು ಕಡೆ ಪೌಷ ರಾಜನ ಸತಿ ಎನ್ನುವ ಉಲ್ಲೇಖ ಇದೆ) ಗುರುಪತ್ನಿಯ ಮಾತನ್ನು ಕೇಳಿ ಸಂತೋಷದಿಂದ ಕರ್ಣಕುಂಡಲ ತರಲು ಹೊರಡುತ್ತಾನೆ.
ಉತ್ತನ್ಕ ದಾರಿಯಲ್ಲಿ ಕಂಡ ವಿಚಿತ್ರಗಳು ಗುರುದಕ್ಷಿಣೆ ಪಡೆದ ಬಗೆ.. ಮುಂದಿನ ಬರಹದಲ್ಲಿ 🙏🙏
Subscribe to:
Post Comments (Atom)
No comments:
Post a Comment