Monday, May 19, 2025

ಗುರುಭಕ್ತಿ - ವೇದ ( ಬೈದ ) ಆಯೋದದೌಮ್ಯರ ಮೂರನೇಯ ಶಿಷ್ಯನಾದ ವೇದನನ್ನು ( ಕೆಲವು ಕಡೆ ಬೈದ ಎಂದೂ ಇದೆ ) ಪರಿಚಯಸುವಾಗ ಬಹಳ ದೊಡ್ಡ ಕಾರ್ಯಕ್ಕೆ ಕೈ ಇಕ್ಕಿದಂತಾಗುತ್ತದೆ, ವೇದನ ಬಗ್ಗೆ ಹೇಳಬೇಕಾದದ್ದು ಬಹಳಷ್ಟು ಇಲ್ಲದೆ ಹೋದರೂ ಅವನ ಶಿಷ್ಯನಾದ ಉತ್ತನ್ಕ ( ಉದಂಕ ಎಂದೂ ಕರೆಯುತ್ತಾರೆ ) ನ ಬಗ್ಗೆ ಹೇಳಲೇಬೇಕು.. ಇದನ್ನು ಆರಂಭಿಸಿದರೆ ಅರ್ಧ ಮಹಾಭಾರತವನ್ನೇ ಹೇಳಬೇಕಾಗುತ್ತದೆ. ನನಗನ್ನಿಸಿದಂತೆ ಮಹಾಕಾವ್ಯಗಳಲ್ಲಿ ಸುದೀರ್ಘ ಹಿನ್ನೆಲೆಯನ್ನು ಹೊಂದಿರುವ ಎರಡು ಘಟನೆಗಳು ಎಂದರೆ, ನರಕಾಸುರ ವಧೆ ಮತ್ತು ಜನಮೇಜಯನ ಸರ್ಪಯಾಗ. ಕೃತಯುಗದಲ್ಲಿ ಹಿರಣ್ಯಾಕ್ಷ ವಧಾ ಕಾಲಕ್ಕೆ ಶ್ವೇತವರಾಹನಾಗಿ ಕಾಣಿಸಿಕೊಂಡ ಮಹಾವಿಷ್ಣು ಮತ್ತು ಭೂದೇವಿಯರ ಪುತ್ರ ನರಕ ದೈತ್ಯ, ಅವನ ವಧೆ ಆಗಿದ್ದು ದ್ವಾಪರ ಯುಗದ ಕೊನೆಯ ಕಾಲದಲ್ಲಿ. ಹಾಗೆಯೇ ಕಲಿಯುಗದ ಆರಂಭದಲ್ಲಿ ನಡೆದ ಜನಮೇಜಯನ ಸರ್ಪಯಾಗಕ್ಕೆ ಮುಹೂರ್ತ ಇಟ್ಟದ್ದು ಕೃತಯುಗದ ಆದಿಯಲ್ಲಿ, ಮಹಾಭಾರತದ ಮುಖ್ಯ ಕಥೆಗಳಲ್ಲಿ ಇದು ಪ್ರಸ್ತಾಪ ಆಗದೇ ಹೋದರೂ ನಿಜವಾಗಿ ಮಹಾಭಾರತ ಆರಂಭ ಆಗುವುದೇ ಸರ್ಪಯಾಗದ ದೋಷದಿಂದ ಕುಷ್ಠರೋಗ ಪೀಡಿತನಾದ ಜನಮೇಜಯನಿಗೆ ವ್ಯಾಸ ನಿರ್ದೇಶನದಂತೆ ವೈಶಂಪಾಯನರು ಮಹಾಭಾರತ ಕಥೆ ಹೇಳುವುದರಿಂದ. ಜನಮೇಜಯನ ಸರ್ಪಯಾಗದಲ್ಲಿ ಹಲವು ಹಿನ್ನೆಲೆಗಳ ಸಂಗಮವಿದೆ. ಕೃತಯುಗದಲ್ಲಿ ನಡೆದ ಕದ್ರೂ ವಿನತೆಯರ ಪಂಥ.. ಹೆತ್ತ ತಾಯಿಯಾದ ಕದ್ರುವಿನಿಂದ ಮಕ್ಕಳಾದ ಸರ್ಪಗಳಿಗೆ ಶಾಪ, ಅರುಣ ಮತ್ತು ಗರುಡರ ಜನನ, ಗರುಡನಿಂದ ಅಮೃತಾಪಹಾರಣ, ರುರು ಮತ್ತು ಪ್ರಮದ್ವರೆಯ ಕಥೆ ರುರುವಿಗೆ ಸರ್ಪ ಸಂತತಿಯ ಬಗ್ಗೆ ದ್ವೇಷ, ವೇದ ಶಿಷ್ಯನಾದ ಉತ್ತನ್ಕನಿಗೆ ಸರ್ಪ ಸಂತತಿಯನ್ನು ನಾಶ ಮಾಡಬೇಕೆನ್ನುವ ಛಲ, ಕಲಿಪ್ರಭಾವದಿಂದ ಪರೀಕ್ಷಿತನಿಂದ ಶಮೀಕ ಮಹರ್ಷಿಯ ಆಶ್ರಮದಲ್ಲಿ ಘಟಿಸಿದ ಅಪಚಾರ..ಶಮೀಕ ಪುತ್ರ ಶೃಂಗಿಯ ಶಾಪ, ತಂದೆಯ ಸಾವಿಗೆ ಕಾರಣನಾದ ತಕ್ಷಕನ ವಂಶ ನಿರ್ಮೂಲನೆ ಮಾಡಬೇಕೆನ್ನುವ ಜನಮೇಜಯನ ಛಲ, ಆದರೆ ಇಷ್ಟು ಹಿನ್ನೆಲೆಯಿದ್ದೂ ಯಾಗ ಸಂಪೂರ್ಣ ಆಗಲಿಲ್ಲ..ಭಂಗಗೊಂಡ ದಕ್ಷನ ಯಾಗದ ಬಗ್ಗೆ ಎಲ್ಲರಿಗೂ ಗೊತ್ತು, ಆದರೆ ಇಷ್ಟೆಲ್ಲಾ ಹಿನ್ನೆಲೆ ಇದ್ದೂ ಅಪರಿಪೂರ್ಣವಾದ ಸರ್ಪಯಾಗದ ಪೂರ್ಣ ವಿವರಣೆ ಎಲ್ಲರಿಗೂ ಗೊತ್ತಿಲ್ಲವೆಂದೆ ಭಾವಿಸುತ್ತೇನೆ. ಪೂರ್ಣ ಬರೆಯಲು ಮೂರುನಾಲ್ಕು ಕಂತುಗಳಾದರೂ ಬೇಕಾದೀತು ಶೀರ್ಷಿಕೆ ಕೊಟ್ಟ ಹಾಗೇ ವೇದ ಮತ್ತು ಉತ್ತನ್ಕರಿಂದಲೇ ಮುಂದಿನ ಕಂತು ಆರಂಭವಾಗುವುದು. 🙏🙏

No comments:

Post a Comment