Monday, May 19, 2025

ವಿನತೆ ಮತ್ತು ಕದ್ರೂ ಗುರುಭಕ್ತಿ ಹೊಂದಿದ, ಶ್ರದ್ದೆಯಿಂದ ಗುರುದಕ್ಷಿಣೆ ಅರ್ಪಿಸಿದ ಶಿಷ್ಯರನ್ನು ಪರಿಚಯಿಸಲು ಹೊರಟಾಗ ಉತ್ತನ್ಕನ ಕಥೆ ತಂದು ನಿಲ್ಲಿಸಿದ್ದು ಜನಮೆಜಯನ ಸರ್ಪಯಾಗದ ಆರಂಭಕ್ಕೆ. ಆದರೆ ನಾನು ಮೊದಲೇ ಹೇಳಿದ್ದೆ... ಜನಮೇಜಯನ ಸರ್ಪಯಾಗಕ್ಕೆಹಲವು ಹಿನ್ನಲೆ ಇದೆ ಎಂದು. ಮೊದಲ ಹಿನ್ನೆಲೆ ಬಗ್ಗೆ ನೋಡೋಣ.. ದಕ್ಷ ಪ್ರಜಾಪತಿಗೆ 60 ಜನ ಹೆಣ್ಣು ಮಕ್ಕಳು ಅವರಲ್ಲಿ ದಿತಿ ಅದಿತಿ ಮುಂತಾದ 13 ಜನರನ್ನು ಕಶ್ಯಪರಿಗೆ ಮದುವೆ ಮಾಡಿಕೊಟ್ಟ. ಅವರಲ್ಲಿ ಕದ್ರೂ ವಿನತೆ ಎಂಬ ಇಬ್ಬರು ಸಹೋದರಿಯರಿಗೆ ಉತ್ತಮವಾದ ಸಂತಾನ ಹೊಂದಬೇಕೆಂಬ ಅಪೇಕ್ಷೆಯುನ್ಟಾಯಿತು. ಹಾಗೆಯೇ ಕದ್ರೂ ಕಶ್ಯಪರ ಬಳಿ ಹೋಗಿ.. " ಸ್ವಾಮೀ ಲೋಕದಲ್ಲಿ ಪರಾಕ್ರಮಿಗಳದ ಒಂದು ಸಾವಿರ ನಾಗಗಳನ್ನು ನಾನು ಪುತ್ರರನ್ನಾಗಿ ಹೊಂದುವಂತೆ ಅನುಗ್ರಹಿಸಿ " ಎಂದು ಬೇಡಿಕೊಂಡಳು. ಕಶ್ಯಪರು ಅಸ್ತು ಎಂದು ಆಶೀರ್ವದಿಸಿದರು. ಇದನ್ನು ತಿಳಿದ ವಿನತೆಯೂ ಗಂಡನ ಬಳಿ ಹೋಗಿ.. " ಸ್ವಾಮೀ ಸಂಖ್ಯಾಬಲಕ್ಕಿಂತ ಪರಾಕ್ರಮಿಗಳಾದ ಇಬ್ಬರೇ ಇದ್ದರೂ ಸಾಕು ಹಾಗಾಗಿ ನನಗೆ ನನ್ನಕ್ಕನಿಗೆ ಹುಟ್ಟಬಹುದಾದ ಸಾವಿರ ಮಕ್ಕಳನ್ನೂ ಮೀರಿಸುವ ಎರಡು ಜನ ಮಕ್ಕಳು ಬೇಕು " ಎಂದಳು ಕಶ್ಯಪರು ನಸುನಗುತ್ತಾ ಆಗಲಿ ಎಂದು ಹೇಳಿ ತಪಸ್ಸಿಗೆ ಹೊರಟು ಹೋದರು. ಕೆಲವು ವರ್ಷಗಳೇ ಕಳೆಯಿತು, ಕದ್ರೂ ಒಂದು ಸಾವಿರ ಮೊಟ್ಟೆಗಳನ್ನು ಪ್ರಸವಿಸಿದಳು. ದಾಸಿಯರು ಅವುಗಳನ್ನು ಪಾತ್ರೆಯಲ್ಲಿಟ್ಟು ಶಾಖವನ್ನು ಕೊಡುತ್ತ ರಕ್ಷಿಸಿ ಇಟ್ಟರು. ಕೆಲವು ಕಾಲದಲ್ಲಿ ವಿನತೆಯೂ ಎರಡು ಮೊಟ್ಟೆಯನ್ನು ಪ್ರಸವಿಸಿದಳು. ದಾಸಿಯರು ಅವುಗಳನ್ನೂ ಹಾಗೆಯೇ ರಕ್ಷಿಸತೊಡಗಿದರು. ಸುಮಾರು ಇದುನೂರು ವರ್ಷಗಳೇ ಕಳೆಯಿತು.. ಕದ್ರೂ ಪ್ರಸವಿಸಿದ ಮೊಟ್ಟೆಗಳು ಒಂದೊಂದೇ ಒಡೆದು ಸುಂದರವಾದ ಸರ್ಪರೂಪಿ ಮರಿಗಳು ಹೊರಗೆ ಬಂದವು. ತಾಯಿಯಾದ ಕದ್ರೂ ಮಕ್ಕಳನ್ನು ನೋಡಿ ಸಂತೋಷ ಹೊಂದಿದಳು. ವಿನತೆಯ ಮೊಟ್ಟೆಗಳು ಒಡೆಯಲೇ ಇಲ್ಲ. ಒಂದುಕಡೆ ಕದ್ರೂ ಮಕ್ಕಳೊಂದಿಗೆ ಆನಂದಪಡುವುದನ್ನು ನೋಡಿ ಅಸೂಯೆ, ಮತ್ತೊಂದೆಡೆ ತನ್ನ ಮೊಟ್ಟೆಯಿಂದ ಮಕ್ಕಳು ಬರಲಿಲ್ಲ ಎಂಬ ಆತಂಕ.. ದಿನವೂ ಹೋಗಿ ನೋಡುವಳು. ಕಡೆಗೂ ವಿನತೆಯ ಸಂಯಮ ಮೀರಿತು, ಒಂದು ದಿನ ಒಂದು ಮೊಟ್ಟೆಯನ್ನು ತಾನೇ ಒಡೆದುಬಿಟ್ಟಳು. ಒಳಗಿನ ದೃಶ್ಯವನ್ನು ನೋಡಿ ವಿನತೆಗೆ ಆಘಾತವಾಯಿತು. ದೇಹದ ಮೇಲರ್ದ ಸುಂದರವಾಗಿ ಪರಿಪೂರ್ಣ ಬೆಳವಣಿಗೆ ಆಗಿತ್ತು ಸೊಂಟದ ಕೆಳಗಿನ ಭಾಗ ಪೂರ್ಣವಾಗಿರಲಿಲ್ಲ. ಹಾಗಿದ್ದರೂ ಶಿಶುವಿಗೆ ಚೈತನ್ಯವಿತ್ತು. ಸೂರ್ಯನ ಸರಿಸಮವಾದ ಕಾಂತಿಯಿಂದ ಬೆಳಗುತಿತ್ತು. ಬೆಳವಣಿಗೆ ಪೂರ್ವದಲ್ಲಿಯೇ ಮೊಟ್ಟೆಯನ್ನು ಒಡೆದು ತನ್ನನ್ನು ಅಂಗವಿಕಲನನ್ನಾಗಿಸಿಸದ ತಾಯಿಯನ್ನು ಮಗು ಕೋಪದಿಂದ ದುರುಗುಟ್ಟಿ ನೋಡಿತು. " ನೀನು ಕದ್ರುವಿನ ಬಗ್ಗೆ ಹೊಂದಿದ ಮಾತ್ಸರ್ಯ ನನ್ನನ್ನು ಅಂಗವಿಕಲನನ್ನಾಗಿ ಮಾಡಿತು.. ನನ್ನ ಜೀವನದ ಶ್ರೇಯಸ್ಸಿಗೆ ಕಾರಣಳಾಗಬೇಕಿದ್ದ ನೀನು ನನ್ನನ್ನು ಹೆಳವನನ್ನಾಗಿಸಿದ ಕಾರಣದಿಂದ ದಾಸ್ಯದ ಜೀವನ ನಡೆಸುವಂತಾಗಲಿ" ಎಂದು ಶಪಿಸಿಬಿಟ್ಟಿತು. ಮಗುವಿನ ನುಡಿಯನ್ನು ಕೇಳಿ ವಿನತೆಗೆ ಆಘಾತವಾಯಿತು. " ಮಗೂ ತಪ್ಪು ಮಾಡಿದೆ.. ಆದರೆ ನಾನು ದಾಸ್ಯದ ಬದುಕನ್ನು ಹೇಗೆ ಸ್ವೀಕರಿಸಲಿ ಕಂದಾ.. ನನ್ನನ್ನು ಕ್ಷಮಿಸಿಬಿಡು" ಎಂದು ಎತ್ತಿ ಮುದ್ದಿಸುತ್ತ ಕೇಳಿಕೊಂಡಳು. ಆಗ " ಅಮ್ಮಾ.. ಇಲ್ಲಿರುವ ಇನ್ನೊಂದು ಅಂಡವನ್ನು ಪೂರ್ಣ ಬೆಳೆಯುವ ಅವಕಾಶ ಮಾಡಿಕೊಡು.. ಇನ್ನೂ ಐದುನೂರು ವರ್ಷಗಳು ಬೇಕು, ಹಾಗೆ ಪೂರ್ಣ ಬೆಳವಣಿಗೆ ಹೊಂದಿ ಹೊರಗೆ ಬರುವ ನಿನ್ನ ಮಗನ ಸಾಹಸದಿಂದ ನಿನ್ನ ದಾಸ್ಯದ ನಿವಾರಣೆ ಆಗುತ್ತದೆ" ಎಂದು ಹೇಳಿ ಮೊದಲೇ ದೈವ ನಿರ್ಣಯದಂತೆ ಸೂರ್ಯನ ಸೂರ್ಯನ ರಥವೇರಿ ರಥದ ಸಾರಥಿಯಾಯಿತು. ಅವನೇ ಸೂರ್ಯನ ಸಾರಥಿ ಅರುಣ. ಸೂರ್ಯನ ಸಾರಥಿ ಹೆಳವ ಎಂದು ಏಕೆ ಹೇಳುತ್ತಾರೆ ಎಂಬುದಕ್ಕೂ ಹಿನ್ನೆಲೆ ಇದು. ನಂತರ ದಿನಗಳು ಕಳೆದವು.. ಅರುಣನ ಶಾಪದಿಂದ ಬೇಸರಹೊಂದಿದ ವಿನತೆ ಇನ್ನೊಂದು ಮೊಟ್ಟೆಯ ಉಪೇಕ್ಷೆಯನ್ನೇ ಮಾಡಿದಳು. ಆದರೂ ಅದರಷ್ಟಕ್ಕೆ ಅದು ಬೆಳೆಯುತ್ತಾ ಇತ್ತು. ಅದಾಗಲೇ ದೇವಾಸುರರು ಸೇರಿ ಸಮುದ್ರಮಥನ ಮಾಡುತ್ತಿದ್ದರು ಉಚ್ಚೈಶ್ರವಸವೆಂಬ ಶ್ರೇಷ್ಠವಾದ ಕುದುರೆ ಮಥನದಿಂದ ಹುಟ್ಟಿಬಂದಿತ್ತು. ಹೀಗೆಯೇ ಮಾತನಾಡುತ್ತ ಕದ್ರೂ ವಿನತೆಯರು ಅದರ ಬಣ್ಣದ ಬಗ್ಗೆ ಮಾತನಾಡಿಕೊಳ್ಳತೊಡಗಿದರು. ವಿನತೆ ಆ ಕುದುರೆ ಸಂಪೂರ್ಣ ಶ್ವೇತವರ್ಣದಿಂದ ಕೂಡಿದೆ ಎಂದಳು. ಕದ್ರೂ ಅದರ ಬಾಲ ಕಪ್ಪು ಎಂದಳು. ಮಾತು ಮಾತಿನಲ್ಲಿ ಪಂದ್ಯವೇ ಏರ್ಪಟ್ಟಿತು. ಸರಿ ನಾಳೆ ಹೋಗಿ ಪ್ರತ್ಯಕ್ಷ ನೋಡೋಣ.. ಯಾರು ಗೆಲ್ಲುವರೋ ಅವರಿಗೆ ಸೋತವರು ದಾಸಿಯಾಗಬೇಕು ಎಂಬ ಒಪ್ಪಂದವೂ ಆಯಿತು. ರಾತ್ರಿ ಕದ್ರೂ ಯೋಚನೆ ಮಾಡಿದಳು, ದೇವಕುದುರೆ ಸಂಪೂರ್ಣ ಬಿಳಿ ಎಂದು ತಿಳಿದೂ ಮಾತು ಮಾತಿನಲ್ಲಿ ಪಂಥ ಏರ್ಪಟ್ಟಿತಲ್ಲ ಸೋತರೆ ವಿನತೆಯ ದಾಸಿಯಾಗಬೇಕು ಎಂದು ಚಿಂತಿಸಿ ಮಕ್ಕಳಾದ ನಾಗಗಳನ್ನು ಕರೆದಳು. " ಮಕ್ಕಳೇ ನಿಮ್ಮ ಮಾತೆಯಾದ ನಾನು ನಿಮ್ಮ ಚಿಕ್ಕಮ್ಮನ ದಾಸಿಯಾಗಬೇಕಾದ ಸಂದರ್ಭ ಬಂದಿದೆ ಹಾಗಾಗಿ ನೀವೇ ಇದನ್ನು ತಡೆಯಬೇಕು " ಎಂದಳು. " ನಿನಗಾಗಿ ನಾವು ಏನನ್ನು ಮಾಡಬೇಕು ಹೇಳು ತಾಯಿ " ಎಂದು ಮಕ್ಕಳೆಲ್ಲ ಕೇಳಿದರು. "ಮಕ್ಕಳೇ.. ನಾಳೆ ನಾನೂ ಮತ್ತು ನಿಮ್ಮ ಚಿಕ್ಕಮ್ಮ ಕದ್ರೂ ಒಟ್ಟಾಗಿ ದೇವಾಶ್ವವಾದ ಉಚ್ಚೈಶ್ರವಸವನ್ನು ನೋಡಲು ಹೋಗುತ್ತೇವೆ. ಆ ಕಾಲಕ್ಕೆ ಕಪ್ಪಾದ ನೀವು ಹೋಗಿ ಅದರ ಬಾಲವನ್ನು ಕಚ್ಚಿಕೊಂಡು ಅದರ ಬಾಲ ಕಪ್ಪಾಗಿ ಕಾಣುವಂತೆ ಮಾಡಬೇಕು" ಎಂದಳು. ಇದನ್ನು ಕೇಳಿದ ಸರ್ಪಗಳು " ಮಾತೇ.. ತಾಯಿಯಾದವಳು ಎಂದಿಗೂ ಮಕ್ಕಳ ಹಿತವನ್ನೇ ಬಯಸಬೇಕು ಅವರಿಗೆ ಧರ್ಮದ ಮಾರ್ಗವನ್ನೇ ತಿಳಿಸಿಕೊಡಬೇಕು.. ಆದರೆ ನೀನು ಅಧರ್ಮಮಾರ್ಗ ತೋರಿಸುತ್ತಿರುವೆ ಇದು ನಮಗೆ ಸಾಧ್ಯವಾಗದು " ಎಂದು ಹೇಳಿಬಿಟ್ಟವು. ಇದನ್ನು ಕೇಳಿದ ಕದ್ರುವಿಗೆ ತಡೆಯಲಾರದ ಕೋಪ ಬಂದುಬಿಟ್ಟಿತು ತಾನೇ ಸಾಕಿ ಬೆಳೆಸಿದ ಮಕ್ಕಳು ತನ್ನ ಮಾತಿಗೆ ಪ್ರತಿಯಾಡಿಬಿಟ್ಟರಲ್ಲ.. ಪಂದ್ಯದಲ್ಲಿ ಸೋತರೆ ದಾಸಿಯಾಗುವುದೊಂದು ಕಡೆ, ಅವಳ ಕಣ್ಣುಗಳು ಕೆಂಪಾದವು ಇದನ್ನೆಲ್ಲ ಯೋಚಿಸಿ ಅವಳ ಬಾಯಲ್ಲಿ ಶಾಪವಾಕ್ಯ ಬಂದು ಬಿಟ್ಟಿತು. " ಪರೀಕ್ಷಿತ ಪುತ್ರನಾದ ಜನಮೇಜಯನು ಮಾಡುವ ಯಾಗದಲ್ಲಿ ಅಗ್ನಿಯು ನಿಮ್ಮನ್ನು ದಹಿಸಲಿ " ಎಂದು ಹೇಳಿಬಿಟ್ಟಳು. ಲೋಕದಲ್ಲಿ ನಡೆಯುವ ವಿದ್ಯಮಾನವನ್ನು ತಿಳಿಯುವ ಬ್ರಹ್ಮ ಈ ಶಾಪವಾಕ್ಯಕ್ಕೆ ಅಸ್ತು ಎಂದುಬಿಟ್ಟ. ಯಾಕೆಂದರೆ ಪ್ರಪಂಚವನ್ನೇ ಸುಡಬಹುದಾದ ಘೋರ ವಿಷವನ್ನು ಹೊಂದಿದ ಸರ್ಪಗಳು ಅದೇ ಅಹಂಕಾರದಿಂದ ಪ್ರಪಂಚದಲ್ಲಿರುವ ಜೀವರಾಶಿಗಳನ್ನು ಕಚ್ಚಿ ಕೊಲ್ಲತೊಡಗಿದರೆ ತನ್ನ ಸೃಷ್ಟಿಯೇ ನಾಶವಾಗಿ ಹೋಗುತ್ತದೆ. ಹಾಗಾಗಿ ಕಶ್ಯಪನನ್ನು ಕರೆದು ಈ ವಿಚಾರವನ್ನು ಹೇಳಿ ನಡೆದ ಘಟನೆಬಗ್ಗೆ ಬೇಸರಗೊಳ್ಳಬೇಡೆಂದು ಸಮಾಧಾನಪಡಿಸಿದ. ಇತ್ತ ಶಾಪ ಹೊಂದಿದ ನಾಗಗಳು ಆ ರಾತ್ರಿ ಭಯದಿಂದ ಒಂದೆಡೆ ಸೇರಿದವು. ಕಾರ್ಕೋಟಕನೆಂಬ ಒಬ್ಬ ಸರ್ಪ ಪರಿಣಾಮ ಏನೇ ಆಗಲಿ ಆದರೆ ನಾಳೆ ನಾವು ತಾಯಿಯ ಮಾತನ್ನು ನಡೆಸಲು ದೇವಕುದುರೆಯ ಬಾಲವನ್ನು ಕಚ್ಚಿಕೊಂಡು ಕಪ್ಪು ಕಾಣುವಂತೆ ಮಾಡುವುದೇ ಸೂಕ್ತ ಎಂಬ ನಿರ್ಧಾರದ ಮಾತಾಡಿದ. ಅದಕ್ಕೆ ಎಲ್ಲರೂ ಒಪ್ಪಿದರು. ಮರುದಿನ ಕದ್ರೂ ವಿನತೆಯರಿಬ್ಬರೂ ಅಶ್ವವನ್ನು ನೋಡಲು ಹೋದರು.. ಕದ್ರುವಿಗೆ ತಾನು ಸೋಲುತ್ತೇನೆ ಎಂಬ ತೀರ್ಮಾನ ಆಗಿ ಹೋಗಿತ್ತು. ಆದರೆ ವಾಯುವೇಗವಾಗಿ ಸಾಗುತ್ತಿದ್ದ ಕುದುರೆಯನ್ನು ಇಬ್ಬರೂ ನೋಡಿದರು. ಆಶ್ಚರ್ಯ.. ಅದರ ಬಾಲ ಕಪ್ಪಾಗಿತ್ತು. ವಿನತೆಯ ಮುಖವೂ ಕಪ್ಪಾಯಿತು. ಅಂದು ಪುತ್ರನಾದ ಅರುಣ ಕೊಟ್ಟ ಶಾಪದ ಫಲ ಇದು ಎಂಬ ಅರಿವೂ ಆಯಿತು. ಕದ್ರೂ ಪಂಥ ಗೆದ್ದು ಬೀಗಿದಳು. ಆದರೆ ಹಿಂದೆ ತನ್ನ ಮಕ್ಕಳಿಗೆ ಕೊಟ್ಟ ಶಾಪ ಜನಮೇಜಯನ ಸರ್ಪಯಾಗಕ್ಕೆ ಇನ್ನೊಂದು ಅಡಿಗಲ್ಲು 🙏🙏 ವಿನತೆಯ ಮತ್ತೊಂದು ಮೊಟ್ಟೆಯಿಂದ ಉಧಿಸಿಬಂದವ ಗರುಡ ಇವನಿಂದ ಆಕೆಯ ದಾಸ್ಯ ನಿವಾರಣೆ ಆದದ್ದು ಇನ್ನೊಂದು ರೋಚಕ ಕಥೆ..

No comments:

Post a Comment