Thursday, July 24, 2025
ವೃತ್ರಾಸುರ ಭಾಗ 1
ಶ್ರೀಮದ್ಭಾಗವತದಲ್ಲಿ, ಮಹಾಭಾರತದಲ್ಲಿ ಮತ್ತು ರಾಮಾಯಣದಲ್ಲಿ, ಇನ್ನೂ ಅಲ್ಲಲ್ಲಿ ಬರುವ ಒಂದು ಕುತೂಹಲ ಹುಟ್ಟಿಸುವ ಕಥೆ ವೃತ್ರಾಸುರನದ್ದು.. ಈ ಕಥೆಯನ್ನು ಆರಂಭಿಸಿದರೆ ಕೆಲವು ಕಂತುಗಳೇ ಆಗಬಹುದು..
ತ್ರಿಲೋಕಾಧಿಪತಿಯಾದ ಇಂದ್ರ ಒಂದು ದಿನ ಅತ್ಯಂತ ಸಂತೋಷದಿಂದ ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶಾಧಿತ್ಯರು, ಮರುತ್ತುಗಳು, ಸಿದ್ದರು, ಚಾರಣರು, ವಿದ್ಯಾಧರರು, ಗಂಧರ್ವರು, ಮುಂತಾದವರೆಲ್ಲ ಸೇರಿದ್ದ ದೇವ ಸಭೆಯಲ್ಲಿ ತನ್ನರಸಿಯಾದ ಶಚೀದೇವಿಯೊಂದಿಗೆ ಸುರಸಿಂಹಾಸನದಲ್ಲಿ ಮಂಡಿಸಿದ್ದ. ಯಕ್ಷರು ಕಿನ್ನರರು ಮುಂತಾದವರು ಇಂದ್ರನ ಕೀರ್ತಿಯನ್ನು ಕೊಂಡಾಡುತ್ತಿದ್ದರು. ಯಾವುದೇ ರಾಕ್ಷಸರ ಉಪಟಳ ಇಲ್ಲದೇ ಇದ್ದ ಕಾರಣದಿಂದ ಸ್ವತಃ ದೇವೇಂದ್ರನೂ ಆನಂದದಿಂದಲೇ ಸಭಾ ಕಲಾಪವನ್ನು ನೋಡುತ್ತಾ ಮೈಮರೆತಿದ್ದ. ಆ ಸಂದರ್ಭಕ್ಕೆ ಸರಿಯಾಗಿ ದೇವಗುರುಗಳಾದ ಆಚಾರ್ಯ ಬೃಹಸ್ಪತಿಗಳು ಇಂದ್ರನ ಸಭೆಗೆ ಆಗಮಿಸಿದರು. ಸಭೆಯಲ್ಲಿ ನಡೆಯುತಿದ್ದ ನರ್ತನ ಗಾಯನಗಳಲ್ಲಿ ಮೈಮರೆತಿದ್ದ ಇಂದ್ರ ಸಭೆಗೆ ಆಗಮಿಸಿದ ದೇವಗುರುಗಳನ್ನು ಯತೋಚಿತವಾಗಿ ಸತ್ಕರಿಸಲಿಲ್ಲ, ಅಷ್ಟಕ್ಕೂ ಅವರನ್ನು ನೋಡಿ ಗೌರವ ಸೂಚಕವಾಗಿ ತಾನು ಕುಳಿತಿದ್ದ ಸಿಂಹಾಸನದಿಂದ ಮೇಲೇಳಲೂ ಇಲ್ಲ. ಇದನ್ನು ಗಮನಿಸಿದ ಆಚಾರ್ಯ ಬೃಹಸ್ಪತಿಗಳು ಇಂದ್ರನ ಅಹಂಕಾರವನ್ನು ಗಮನಿಸಿ ಬೇಸರಗೊಂಡು ಸಭೆಯಿಂದ ಸುಮ್ಮನೆ ಮನೆಗೆ ಹಿಂದಿರುಗಿ ಬಿಟ್ಟರು. ಇತ್ತ ಗುರುಗಳು ಹಿಂತಿರುಗಿದ ಮೇಲೆ ಇಂದ್ರನಿಗೂ ಇದು ಅರಿವಿಗೆ ಬಂತು.." ಅಯ್ಯೋ ನಾನೆಂತಹಾ ಹೀನ ಕಾರ್ಯ ಮಾಡಿದೆ ಗುರುಗಳು ಸಭೆಗೆ ಬಂದರೂ ಅವರನ್ನು ಉಪಚರಿಸಲಿಲ್ಲವಲ್ಲಾ... ಇದರಿಂದ ಪಾಪಕಾರ್ಯವನ್ನು ಮಾಡಿದ ನನಗೆ ಇನ್ನಾವ ಕೇಡು ಕಾದಿದೆಯೋ.. ಗುರುನಿಂದೆಯನ್ನು ಮಾಡಿದ ಯಾವೊಬ್ಬನೂ ಸ್ವಾಸ್ಥ್ಯದಿಂದ ಇರಲಾರ.. ಏನಾದರಾಗಲಿ ಗುರುಗಳ ಮನೆಗೇ ತೆರಳಿ ಅವರ ಮನವೊಲಿಸಿಕೊಂಡು ಕರೆತರುತ್ತೇನೆ" ಎಂದು ಹೇಳಿಕೊಂಡು ದೇವಗುರು ಬೃಹಸ್ಪತಿಗಳ ಸಧನದತ್ತ ತೆರಳಿದ. ಆದರೆ ಮನೆಗೆ ಬಂದ ಬೃಹಸ್ಪತಿಗಳು ಅಲ್ಲಿಂದಲೂ ಅದೃಶ್ಯರಾಗಿಹೋಗಿದ್ದರು. ಗುರುಗಳ ಮಂದಿರಕ್ಕೆ ಬಂದ ಇಂದ್ರಾದಿ ದೇವತೆಗಳಿಗೆ ಗುರುಗಳು ಕಾಣಿಸಲಿಲ್ಲ... ಎಲ್ಲಿ ಅರಸಿದರೂ ಗುರುಗಳು ಸಿಗಲಿಲ್ಲ. ದೇವೇಂದ್ರನ ದುಃಖ ಆತಂಕ ಇಮ್ಮಡಿಯಾಯಿತು. "ಗುರುಕಾರುಣ್ಯವಿಲ್ಲದೇ ಸ್ವರ್ಗದ ಅಧಿಕಾರವನ್ನು ಉಳಿಸಿಕೊಳ್ಳುವುದು ಹೇಗೆ... ಒಂದೆಡೆಯಲ್ಲಿ ಆಚಾರ್ಯರಾದ ಶುಕ್ರರು ಅಸುರ ಗುರುಗಳಾಗಿ ಅವರಿಗೆ ಬೇಕಾದ ವಿದ್ಯೆಯನ್ನು ಬೋಧಿಸುತ್ತಿದ್ದಾರೆ.. ಸ್ವರ್ಗ ಲೋಕವನ್ನು ಸದಾ ಹಂಬಲಿಸುವ ಅಸುರರೂ ಶುಕ್ರರ ಸಹಾಯದಿಂದ ಆಕ್ರಮಣ ಮಾಡುವ ಸಮಯವನ್ನು ಕಾಯುತ್ತಿದ್ದಾರೆ .. ಆಯ್ಯೋ ಏನು ಮಾಡಲಿ '' ಎಂದು ಚಿಂತಿಸತೊಡಗಿದ. ತ್ರಿಲೋಕಾಧಿಪತ್ಯವನ್ನು ಹೊಂದಿದ ಇಂದ್ರನೂ ಚಿಂತೆಯಲ್ಲಿ ಮುಂದೇನು ಎಂಬ ದಾರಿ ಕಾಣದೇ ಕುಳಿತ. ಈ ಸಂಗತಿಯನ್ನು ತಿಳಿದು ಇದೇ ಸರಿಯಾದ ಸಮಯವೆಂದ ತಿಳಿದ ಕಾಲಕೇಯರೇ ಮುಂತಾದ ಅಸುರರು ಸ್ವರ್ಗದ ಮೇಲೆ ಆಕ್ರಮಣ ಮಾಡಿದರು. ಸುರಾಸುರರಿಗೆ ನಡೆದ ಘೋರವಾದ ಯುದ್ಧದಲ್ಲಿ ದೇವತೆಗಳೆಲ್ಲರೂ ಪರಾಜಯ ಹೊಂದಬೇಕಾದ ಸ್ಥಿತಿ ಬಂತು. ಸೋತ ಇಂದ್ರಾದಿ ದೇವತೆಗಳು ಸ್ವರ್ಗವನ್ನು ಬಿಟ್ಟು ಪಲಾಯನ ಮಾಡಿದರು, ಮುಂದೇನು ಎಂಬ ಮಾರ್ಗ ತಿಳಿಯದೇ ಬ್ರಹ್ಮ ದೇವರ ಮೊರೆ ಹೊಕ್ಕರು. ದೇವತೆಗಳ ಮೊರೆಯನ್ನು ಕೇಳಿದ ಬ್ರಹ್ಮದೇವ " ಇಂದ್ರಾದಿ ದೇವತೆಗಳೇ ನಿಮ್ಮ ಸೋಲಿಗೆ ನಿಮ್ಮಿಂದ ಆದ ಅಪಚಾರವೇ ಕಾರಣ...
ನ ವಿಪ್ರಗೋವಿಂದಗವೀಶ್ವರಾಣಾಂ |
ಭವನ್ತ್ಯಭದ್ರಾಣಿ ನರೇಶ್ವರಾಣಾಂ | | (ಶ್ರೀಮದ್ಭಾಗವತ)
ಬ್ರಾಹ್ಮಣರನ್ನೂ, ಗೋವಿಂದನನ್ನೂ ಮತ್ತು ಗೋವುಗಳನ್ನೂ ತಮ್ಮ ಸರ್ವಸ್ವವೆಂದು ತಿಳಿದು ಗೌರವಿಸಬೇಕಾದ ನೀವು ಆಂಗಿರಸ ಪುತ್ರನಾದ ನಿಮ್ಮ ಗುರು ಬೃಹಸ್ಪತಿಗೆ ನೀವು ಮಾಡಿದ ಅವಮಾನಕ್ಕಾಗಿ ಇಂತಹ ಪರಾಭವವನ್ನು ಅನುಭವಿಸುತ್ತಾ ಇದ್ದೀರಿ... ದೇವಲೋಕದಲ್ಲಿ ಈಗ ಕಾಲ ಕಾಲಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡಿ, ದುಷ್ಟರ ಆಕ್ರಮಣವಾದಾಗ ಗೆಲುವಿಗೆ ಬೇಕಾದುದನ್ನು ಉಪದೇಶ ಮಾಡುವ ಗುರುವೇ ಇಲ್ಲ... ಇನ್ನು ನಿಮಗೆ ಜಯ ಎಲ್ಲಿಯದು. ಅತ್ತ ಆಚಾರ್ಯ ಶುಕ್ರನು ರಾಕ್ಷಸರಿಂದ ಯಜ್ಞಗಳನ್ನು ಮಾಡಿಸುತ್ತಾ ಅವರ ಬಲ ವೃದ್ಧಿಯಾಗುವಂತೆ ಮಾಡುತ್ತಿದ್ದಾನೆ.. ನೀವು ಕಳೆದುಕೊಂಡ ಸ್ವರ್ಗಾಧಿಪತ್ಯವನ್ನು ಮರಳಿ ಪಡೆಯಲು ಯೋಗ್ಯನಾದ ಗುರುವಿನಿಂದ ಸೂಕ್ತವಾದ ನಿರ್ದೇಶನದ ಅನಿವಾರ್ಯತೆ ಇದೆ. ಪ್ರಸ್ತುತ "ತ್ವಸ್ಟ '' ಪುತ್ರನಾದ "ವಿಶ್ವರೂಪ " ಯೋಗ್ಯನಿದ್ದಾನೆ. ಆದರೆ ಅವನಿಗೆ ರಾಕ್ಷಸರ ಬಗ್ಗೆ ಕೂಡ ಒಲವಿದೆ. ಆದರೂ ಅವನನ್ನು ಪ್ರಾರ್ಥಿಸಿ ನಿಮ್ಮ ಗುರುವನ್ನಾಗಿ ಸ್ವೀಕರಿಸಿದರೆ ಅವನ ಉಪದೇಶದಿಂದ ಸ್ಪರ್ಗಾಧಿಕಾರವನ್ನು ಮರಳಿ ಪಡೆಯಬಹುದು ". ಎಂದು ಹೇಳಿದ 🙏
ಮತ್ತೆ ಮುಂದಿನ ಭಾಗದಲ್ಲಿ 🙏🙏
Subscribe to:
Post Comments (Atom)
No comments:
Post a Comment