Saturday, July 5, 2025
ಸಾವಿತ್ರೀ ಭಾಗ 2
ಮಿತವಾದ ಪರಿವಾರದೊಂದಿಗೆ ಹೊರಟ ಅರಸುಕುಮಾರಿ ಸಾವಿತ್ರಿ ಅನೇಕ ತೀರ್ಥಕ್ಷೇತ್ರಗಳ ಸಂದರ್ಷನ ಮಾಡಿದಳು, ಹಲವು ಖುಷಿಮುನಿಗಳನ್ನು ಕಂಡು ಸತ್ಕರಿಸಿದಳು . ಮುಂದೆ ಸಾಗುತ್ತಾ ಮೇಧ್ಯಾರಣ್ಯವೆಂಬ ವನ ಪ್ರವೇಶ ಮಾಡಿದಳು. ಅಲ್ಲಿ ಸ್ಪುರದ್ರೂಪಿಯಾದ ಯುವಕ ನೋರ್ವನನ್ನು ನೋಡುತ್ತಾಳೆ. ಬ್ರಾಹ್ಮಣನಂತೆ ಕಾಣುವ ಅವನನ್ನು ನೋಡಿದಾಗ ಆಕರ್ಷಣೆಯಾಗುತ್ತದೆ. ಪರಿಚಯ ಮಾಡಿಕೊಳ್ಳಲು ಮುಂದಾಗುತ್ತಾಳೆ. ಅವಳು ಭಾವಿಸಿದ ಹಾಗೆ ಅವನು ಬ್ರಾಹ್ಮಣ ಕುಮಾರನಾಗಿರುವುದಿಲ್ಲ ಆತನ ತಂದೆಯ ಹೆಸರು ದ್ಯುಮತ್ಸೇನ.. ತಾಯಿ ಶೈಬ್ಯೆ, ಒಂದು ಕಾಲದಲ್ಲಿ ದ್ಯುಮತ್ಸೇನ ಸಾಲ್ವ ದೇಶದ ಅರಸನಾಗಿದ್ದ. ಅರಸನಾಗಿದ್ದಾಗಲೇ ಅಕಾಲದಲ್ಲಿ ಅವನು ಎರಡೂ ಕಣ್ಣುಗಳನ್ನು ಕಳೆದುಕೊಂಡ. ಈ ಸಮಯಕ್ಕೆ ಸರಿಯಾಗಿ ವಿಷಯ ತಿಳಿದ ಶತ್ರು ರಾಜರು (ನಾವು ದುರ್ಬಲರಾದಾಗಲೇ ಮಿತ್ರರು ಯಾರು ಶತ್ರುಗಳು ಯಾರೆಂದು ತಿಳಿಯುತ್ತದೆ) ರಾಜ್ಯದ ಮೇಲೆ ಆಕ್ರಮಣ ಮಾಡಿ ವಶಪಡಿಸಿಕೊಳ್ಳುತ್ತಾರೆ. ಆ ಸಂದಭದಲ್ಲಿ ಅವನಿಗೆ ಇನ್ನೂ ಚಿಕ್ಕವನಾಗಿದ್ದ ಮಗನಿದ್ದ... "ಸತ್ಯವಾನ್" ಎಂದು ಹೆಸರು. ಮಗುವಾಗಿದ್ದಾಗಲೇ ಅಶ್ವಗಳ ಬಗ್ಗೆ ಆಸಕ್ತಿ ... ಮಣ್ಣಿನ ಕುದುರೆಗಳನ್ನು ಮಾಡಿ ಆಟವಾಡುತ್ತಿದ್ದ ಹಾಗಾಗಿ ಚಿತ್ರಾಶ್ವ ಎಂದೂ ಕರೆಯುತ್ತಿದ್ದರು. ರಾಜ್ಯವನ್ನು ಕಳೆದುಕೊಂಡ ಕುರುಡ ದ್ಯುಮತ್ಸೇನ ಪತ್ನಿಯನ್ನೂ ಮಗನನ್ನೂ ಕರೆದುಕೊಂಡು ವನದತ್ತ ಬಂದ. ಮೇಧ್ಯಾರಣ್ಯಕ್ಕೆ ಬಂದು ಅಲ್ಲಿರುವ ಖುಷಿಗಳ ಜೊತೆಯಲ್ಲಿ ತಾನೂ ಅವರಂತೆಯೇ ಸತಿ ಸುತರೊಂದಿಗೆ ಬದುಕತೊಡಗಿದ. ಬಾಲನಾಗಿದ್ದ ಸತ್ಕವಾನ ಈಗ ಪ್ರೌಢನಾಗಿದ್ದಾನೆ. ತಂದೆಗೆ ಕಣ್ಣಿಲ್ಲ ಜೊತೆಗೆ ವೃದ್ಧಾಪ್ಯವೂ ಆವರಿಸಿದೆ.. ತಾಯಿಗೂ ವೃದ್ಧಾಪ್ಯದ ಜೊತೆಗೆ ಅನಾರೋಗ್ಯ.. ಹಾಗೆ ತಂದೆ ತಾಯಿಗಳ ಸೇವೆಯನ್ನು ಮಾಡಿಕೊಂಡು... ಸಮೀಪದಲ್ಲಿರುವ ಬ್ರಾಹ್ಮಣರಿಗೂ ಪ್ರಿಯನಾಗಿ ಸತ್ಯವಾನ ಬದುಕುತ್ತಿದ್ದ. ಇಂತಹ ಸ್ಥಿತಿಯಲ್ಲಿ ಸಾವಿತ್ರಿ ಸತ್ಯವಾನನನ್ನು ಕಾಣುತ್ತಾಳೆ. ಪರಿಚಯವಾದಮೇಲೆ ತನ್ನನ್ನು ಮದುವೆಯಾಗೆಂದು ಕೇಳಿಕೊಳ್ಳುತ್ತಾಳೆ. ಸತ್ಯವಾನನ ಬದುಕಿನ ಕರಾಳ ಕಥೆಯನ್ನು ಕೇಳಿದಮೇಲೆಯೂ ನೀನೇ ನನಗೆ ಪತಿಯಾಗಬೇಕೆಂದು ಒಪ್ಪಿಸಿ ದಿಬ್ಬಣ ಸಮೇತ ಬರುವೆನೆಂದು ತನ್ನ ರಾಜ್ಯಕ್ಕೆ ಹಿಂತಿರುಗುತ್ತಾಳೆ.
ಇತ್ತ ಮಾದ್ರೇಶನಾದ ಅಶ್ವಪತಿಯನ್ನು ಕಾಣಲು ನಾರದ ಮಹರ್ಷಿಗಳು ಬರುತ್ತಾರೆ.. ನಾರದರನ್ನು ಸತ್ಕರಿಸಿ ಮಾತಿಗೆ ತೊಡಗಿದ ಸಂದರ್ಭದಲ್ಲಿಯೇ ಸಾವಿತ್ರಿ ಬಂದು ತಂದೆಗೂ ನಾರದರಿಗೂ ನಮಸ್ಕರಿಸಿ ನಿಲ್ಲುತ್ತಾಳೆ. ಸಾವಿತ್ರಿಯನ್ನು ನೋಡಿದ ನಾರದ ಮಹರ್ಷಿಗಳು ದೂರದ ಪ್ರಯಾಣ ಮುಗಿಸಿ ಬಂದವಳೆಂದು ತಿಳಿದು ಏನೆಂದು ಅಶ್ವಪತಿಗೆ ಕೇಳುತ್ತಾರೆ. ಹಿಂದೆ ನಡೆದ ಘಟನೆಗಳನ್ನು ಹೇಳಿದ ಅಶ್ವಪತಿ ಮಗಳು ತಾನೇ ವರಾನ್ವೇಷಣೆಗಾಗಿ ತೆರಳಿದವಳು ಎಂಬುದನ್ನು ವಿವರಿಸುತ್ತಾನೆ. ಮುಂದೆ ನಡೆದ ಎಲ್ಲಾ ವಿದ್ಯಮಾನವನ್ನು ಸಾವಿತ್ರಿಯೇ ಹೇಳುತ್ತಾ ಸತ್ಯವಾನನನ್ನು ಮನಸಾ ವರಿಸಿದ್ದನ್ನು ತಿಳಿಸುತ್ತಾಳೆ. ಕೇಳುತ್ತಿದ್ದ ನಾರದರು "ಅಪರಾಧ ಮಾಡಿಬಿಟ್ಟಳು" ಎಂದು ಉದ್ಗರಿಸುತ್ತಾರೆ. ಅವರ ಮಾತನ್ನು ಕೇಳಿದ ಅಶ್ವಪತಿ ಆತಂಕದಿಂದಲೇ " ಸ್ವಾಮೀ ವರನಲ್ಲಿ ಏನು ಕೊರತೆ ಉಂಟು" ಎಂದು ಕೇಳಿದಾಗ ನಾರದರು "ಕೊರತೆಯೇನಿಲ್ಲ... ರೂಪದಲ್ಲಿ ಮನ್ಮಥ - ಜಯಂತರನ್ನೂ ಮೀರಿಸುವವ.. ಇನ್ನು ಯೋಗ್ಯತೆಯಲ್ಲಿ.. ದಾನ ಧರ್ಮದಲ್ಲಿ ರಂತಿದೇವನನ್ನು ಹಿಂದಿಕ್ಕಬಲ್ಲ.. ಕ್ಷಮೆಯಲ್ಲಿ ಭೂದೇವಿಗೆ ಸರಿಸಾಟಿಯಾಗಬಲ್ಲ... ಸತ್ಯದಲ್ಲಿ ಅವನೇ ಸತ್ಯವಾನ... ಹೆಸರಿಗೆ ಅನುಗುಣವಾಗಿಯೇ ಇಂದ್ರ ಸಮಾನನಿದ್ದಾನೆ" ನಾರದರ ಮಾತನ್ನು ಕೇಳಿದ ಅಶ್ವಪತಿಗೆ ಅಂತವನನ್ನು ಆಯ್ಕೆಮಾಡಿದ ಸಾವಿತ್ರಿಯ ಅಪರಾಧ ಯಾವುದು ಎಂದು ತಿಳಿಯಲಿಲ್ಲ. ಮುಂದುವರಿದು ಕೇಳುತ್ತಾನೆ " ಸ್ವಾಮಿ ಸತ್ಯವಾನ ಸರ್ವಗುಣ ಸಂಪನ್ನ ಎಂದು ನೀವೇ ಹೇಳಿದಿರಿ ಆದರೂ ಏನೋ ಒಂದು ದೋಷ ಇದೆ ಎಂದು ಭಾವಿಸಬೇಕಾಗಿದೆ... ಅಂತಹ ದೋಷ ಅವನಲ್ಲಿರುವುದಾದರೂ ಏನು ಎಂದು ತಿಳಿಸಿ" ಆಗ ನಾರದರು " ಸರ್ವಗುಣ ಸಂಪನ್ನನಾದ ಸತ್ಯವಾನನಲ್ಲಿ ಇನ್ನುಳಿದ ಯಾವುದೋ ಒಂದು ದೋಷವನ್ನು ನಿವಾರಿಸಿ ಬಿಡಬಹುದು ಎಂದು ನೀನು ಯೋಚಿಸಿದರೆ ಅದು ತಪ್ಪು... ಯಾರಿಂದಲೂ ಹೋಗಲಾಡಿಸಲಾಗದ ಒಂದು ದೋಷ ಏನೆಂದರೆ.. "ಸಂವತ್ಸರೇಣ ಕ್ಷೀಣಾಯುರ್ದೇಹನ್ಯಾಸಂ ಕರಿಷ್ಯತಿ "
ಸತ್ಯವಾನನು ಅಲ್ಪಾಯುಷ್ಯವನ್ನು ಹೊಂದಿದ್ದಾನೆ ಇಂದಿಗೆ ಸರಿಯಾಗಿ ಒಂದು ವರ್ಷಕ್ಕೆ ಅವನ ಆಯಸ್ಸು ಮುಗಿದು ಮರಣ ಹೊಂದುವನು" ನಾರದರು ಆಡಿದ ಆ ಮಾತನ್ನು ಕೇಳಿದ ಅಶ್ವಪತಿಗೆ ಬಹಳ ದುಃಖವಾಯಿತು. ಬಹಳ ಪರಿಶ್ರಮದಿಂದ ದೊರಕಿದ ಈ ವರನನ್ನೂ ತೊರೆಯಬೇಕಾಗಿ ಬಂತಲ್ಲಾ... ಅಂತೆಯೇ ಸಾವಿತ್ರಿಯನ್ನು ಕುರಿತು "ಮಗಳೇ... ನಾರದರು ಆಡಿದ ಮಾತನ್ನು ನೀನೂ ಕೇಳಿಸಿಕೊಂಡಿರುವೆ ಸತ್ಯವಾನನಿಗೆ ಎಲ್ಲ ಗುಣಗಳೂ ಇದ್ದರೂ ಆಯುಷ್ಯವೇ ಇಲ್ಲವೆಂದಾದ ಮೇಲೆ ಏನು ಪ್ರಯೋಜನ.. ಹಾಗಾಗಿ ನೀನು ಮತ್ತೆ ವರಾನ್ವೇಶಣೆಗಾಗಿ ತೆರಳು ಮಗಳೇ ಸರ್ವಗುಣಸಂಪನ್ನನಾದ ದೀರ್ಘಾಯುವಾದ ಒಬ್ಬನನ್ನು ಅರಸು" ತಂದೆಯ ಮಾತನ್ನು ಕೇಳಿದ ಸಾವಿತ್ರಿ " ಅಪ್ಪಾ.. ಒಡೆದ ದರ್ಪಣವನ್ನು ಮತ್ತೆ ಕೂಡಿಸಲು ಸಾಧ್ಯವಾಗುವುದಿಲ್ಲವೋ ಹಾಗೆ ಒಮ್ಮೆ ಆಡಿದ ಮಾತು ಕೂಡ.., ಮನಸ್ಸಿನಲ್ಲಿ ಮೂಡಿ.. ಬುದ್ಧಿಯಿಂದ ಪ್ರಚೋದಿತವಾಗಿ ಬಾಯಿಂದ ಮಾತಾಗಿ ಹೊರಬೀಳುವುದು.. ಅಂತಹ ಮಾತನ್ನು ನಾನು ಸತ್ಯವಾನನಿಗೆ ಆಡಿಯಾಗಿದೆ, ಅವನು ಅಲ್ಪಾಯುವಾಗಲೀ ದೀರ್ಘಾಯುವಾಗಲಿ, ಗುಣಾಡ್ಯನೇ ಆಗಿರಲಿ.. ಗುಣಹೀನನೇ ಆಗಿರಲಿ ಅವನನ್ನೇ ವರಿಸುವುದೆಂದು ನಿರ್ಧರಿಸಿಯಾಗಿದೆ ಇನ್ನು ವಿವಾಹದ ಸಿದ್ಧತೆಯೊಂದೇ ಉಳಿದಿರುವುದು.." ಸಾವಿತ್ರಿಯ ಮಾತನ್ನು ಕೇಳಿದ ನಾರದ ಮಹರ್ಷಿಗಳು ಅಶ್ವಪತಿಯನ್ನು ಕುರಿತು " ಅರಸಾ ಸ್ಥಿರವಾದ ಬುದ್ಧಿಯನ್ನು ಹೊಂದಿರುವ ನಿನ್ನ ಮಗಳ ಮನಸ್ಸನ್ನು ಚಂಚಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ , ಧರ್ಮಮಾರ್ಗದಲ್ಲಿ ಪತಿವ್ರತೆಯಾಗಿ ಬದುಕುವ ಸಂಕಲ್ಪ ಅವಳದ್ದಾಗಿದೆ ಎಂದಾದರೆ ಅದನ್ನು ನೆರವೇರಿಸುವುದೇ ಸೂಕ್ತ " ನಾರದರ ಈ ಮಾತನ್ನು ಕೇಳಿದ ಅಶ್ವಪತಿ .. ಸ್ವಾಮೀ ನಿಮ್ಮ ಮಾತನ್ನು ನಾನೂ ಅತಿಕ್ರಮಿಸುವುದಿಲ್ಲ ದೈವ ನಿರ್ಣಯಿಸಿದಂತೆ ಆಗಲಿ ಎಂದು ಸಮ್ಮತಿ ಸೂಚಿಸಿದ. ಮಹರ್ಷಿ ನಾರದರು ಸಾವಿತ್ರಿಯ ವಿವಾಹವು ಸಾಂಗವಾಗಿ ನೆರವೇರಲಿ ಎಂದು ಹರಸಿ ಮುಂದೆ ಸಾಗಿದರು.🙏🙏
ಮುಂದಿನ ಕಥೆ ಮುಂದಿನ ಬರಹದಲ್ಲಿ🙏🙏
Subscribe to:
Post Comments (Atom)
No comments:
Post a Comment