Sunday, July 27, 2025

ವೃತ್ರಾಸುರ 3

. ವಿಶ್ವರೂಪನಿಂದ ನಾರಾಯಣ ಕವಚನನ್ನು ಉಪದೇಶ ಪಡೆದ ಇಂದ್ರ, ಸ್ವರ್ಗಲೋಕವನ್ನು ಕೈವಶ ಮಾಡಿಕೊಂಡಿದ್ದ ಅಸುರರನ್ನು ಅತ್ಯಂತ ಸುಲಭದಲ್ಲಿ ಜಯಿಸಿ ಮತ್ತೆ ಪಡೆಯುತ್ತಾನೆ. ಇತ್ತ ವಿಶ್ವರೂಪ ದೇವಗುರುವಾಗಿ ಉಳಿದುಕೊಂಡಿದ್ದರೂ ಸಂಪೂರ್ಣವಾಗಿ ದೇವತೆಗಳಿಗಾಗಿಯೇ ಕಾರ್ಯಪ್ರವೃತ್ತನಾಗಲಿಲ್ಲ. ದೇವತೆಗಳ ಸಮ್ಮುಖದಲ್ಲಿ ಅವರಿಗೆ ಆಹುತಿ ನೀಡಿದರೆ... ಯಜ್ಞಗಳಲ್ಲಿ ದೇವತೆಗಳಿಗೆ ಗೊತ್ತಾಗದಂತೆ ಅಸುರರಿಗೂ ಹವಿಸ್ಸು ನೀಡುತ್ತಿದ್ದ. ಅನುಮಾನಗೊಂಡ ದೇವೇಂದ್ರನಿಗೆ ಈ ಕಪಟ ಅರಿವಿಗೆ ಬಂತು. ಕೃದ್ಧನಾದ ಇಂದ್ರ ಹಿಂದೆ ಮುಂದೆ ನೋಡದೇ ವಿಶ್ವರೂಪನ ಮೂರೂ ತಲೆಯನ್ನು ಕತ್ತರಿಸಿ ಹಾಕಿದ. ಹಾಗೆ ಕತ್ತರಿಸಿದ ತಲೆಗಳಲ್ಲಿ ಸೋಮರಸವನ್ನು ಕುಡಿಯುತ್ತಿದ್ದ ತಲೆ ಕಪಿಂಜಲ ಪಕ್ಷಿಯ ರೂಪವನ್ನೂ, ಸುರಾಪಾನ ಮಾಡುತ್ತಿದ್ದ ತಲೆ ಗುಬ್ಬಚ್ಚಿಯ ರೂಪವನ್ನೂ, ಮತ್ತು ಅನ್ನವನ್ನು ಉಣ್ಣುತ್ತಿದ್ದ ತಲೆ ತಿತ್ತಿರಿ ಪಕ್ಷಿಯ ರೂಪವನ್ನೂ ಹೊಂದಿದವು. ವಿದ್ಯಾವಂತನಾದರೂ ದುರ್ನೀತಿವಂತನಾಗಿ ವರ್ತಿಸಿದ ವಿಶ್ವರೂಪ ತಾನು ಮಾಡಿದ ಅಪಚಾರಕ್ಕಾಗಿ ತನ್ನ ಜೀವವನ್ನೇ ತೊರೆದ. ಇತ್ತ ಆತನ ತಲೆಯನ್ನು ಕಡಿದ ದೇವೇಂದ್ರನಿಗೆ ಬ್ರಹ್ಮಹತ್ಯಾ ದೋಷ ಅಂಟಿಕೊಂಡಿತು. ಇಂದ್ರ ತನಗೆ ಹತ್ತಿಕೊಂಡ ದೋಷವನ್ನು ನಾಲ್ಕು ಭಾಗವಾಗಿ ವಿಭಾಗಿಸಿದ. ಅದರಲ್ಲಿ ಒಂದು ಭಾಗವನ್ನು ಭೂಮಿಗೆ ನೀಡಿದ... ಅದರ ಫಲವಾಗಿಯೇ ಭೂಮಿಯಲ್ಲಿ ಅಲ್ಲಲ್ಲಿ ಮರುಭೂಮಿಯ ನಿರ್ಮಾಣವಾಯಿತು. ದೋಷ ಸ್ವೀಕರಿಸಿದ್ದಕ್ಕೆ ಪ್ರತಿಯಾಗಿ ಭೂಮಿಗೆ ಒಂದು ವರವನ್ನೂ ನೀಡಿದ. ಆ ವರದ ಕಾರಣದಿಂದಲೇ ಭೂಮಿಯಲ್ಲಿರುವ ಹಳ್ಳಕೊಳ್ಳಗಳು ಕ್ರಮೇಣ ಭರ್ತಿಯಾಗಿ ಸಮತಟ್ಟಾಗುವವು. ಎರಡನೆಯ ಭಾಗವನ್ನು ವೃಕ್ಷಗಳು ಪಡೆದವು. ಅದರ ಸೂಚನೆಯಾಗಿಯೇ ವೃಕ್ಷಗಳಲ್ಲಿ ಅಂಟಿನ ರೂಪ ಕಾಣುವುದು. ವರರೂಪದಲ್ಲಿ ತಮ್ಮಲ್ಲಿ ಕತ್ತರಿಸಲ್ಪಟ್ಟ ರೆಂಬೆ ಕೊಂಬೆಗಳು ಚಿಗುರಿಕೊಳ್ಳೊಲಿ ಎಂದು ಕೇಳಿದವು. ಮೂರನೆಯ ಭಾಗವನ್ನು ಜಲದಲ್ಲಿ ಬಿಟ್ಟ. ಅದರ ಪರಿಣಾಮವೇ ನೀರಿನಲ್ಲಿ ನೊರೆ ಗುಳ್ಳೆಗಳು ಕಾಣಿಸುವುದು. ಇನ್ನು ವರವಾಗಿ ನೀರು ವ್ಯಯವಾದರೂ ಪ್ರವಾಹ ರೂಪದಲ್ಲಿ ಮತ್ತೆ ತುಂಬಿಕೊಳ್ಳುವುದು. ನಾಲ್ಕನೆಯ ಭಾಗವನ್ನು ಸ್ತ್ರೀಯರಿಗೆ ನೀಡಿದ... ಅದರ ಪರಿಣಾಮವಾಗಿಯೇ ಸ್ತ್ರೀಯರಲ್ಲಿ ತಿಂಗಳೂ ರಜೋ ದೋಷ ಉಂಟಾಗುವುದು. ಇನ್ನು ವರವಾಗಿ ಸ್ತ್ರೀಯರು ಗರ್ಭವತಿಯರಾದರೂ ಕಾಮಸುಖ ಹೊಂದಬಹುದು .. ಜೊತೆಗೆ ಧರಿಸಿದ ಗರ್ಭಕ್ಕೆ ಹಾನಿಯಾಗದು. ಹೀಗೆ ಇಂದ್ರ ತನಗಂಟಿದ ದೋಷವನ್ನು ಹಂಚಿ .. ಸ್ವೀಕರಿಸಿದವರಿಗೆ ವರವನ್ನೂ ಕೊಟ್ಟು ಪರಿಶುದ್ಧನಾದ. ಆದರೆ ಇದ್ದೊಬ್ಬ ಮಗನಾದ ವಿಶ್ವರೂಪನನ್ನು ಕಳೆದುಕೊಂಡು ತ್ವಷ್ಟ ಕೃಧ್ಧನಾಗಿದ್ದ. ಮಗನ ಸಾವಿಗೆ ಕಾರಣನಾದ ಇಂದ್ರನಿಗೆ ಸರಿಯಾದ ಬುದ್ಧಿಯನ್ನು ಕಲಿಸುವ ಸಲುವಾಗಿ ಇಂದ್ರ ನಾಶಕ್ಕೆ ಬೇಕಾದ ಯಜ್ಞ ಮಾಡಲು ಉಪಕ್ರಮಿಸಿದ. "ಸ್ವಾಹೇನ್ದ್ರ ಶತ್ರುರ್ವರ್ಧಸ್ವ.'' ಎಂಬ ಮಂತ್ರದಿಂದಲೇ ಆಹುತಿ ಕೊಡತೊಡಗಿದ. ಯಾವ ಇಂದ್ರನ ನಿರ್ನಾಮಕ್ಕಾಗಿ ಸಂತಾನವನ್ನು ಯಜ್ಞ ಮುಖೇನ ಪಡೆಯಹೊರಟನೋ ... ಆದರೆ ಮಂತ್ರಸ್ವರದಲ್ಲಿ ಅಪಚಾರವಾದ್ದರಿಂದ ಇಂದ್ರನನ್ನೇ ಶತ್ರುವಾಗಿ ಹೊಂದಿದ ಒಬ್ಬ ದೈತ್ಯ ದಕ್ಷಿಣಾಗ್ನಿಯಲ್ಲಿ ಮೇಲೆದ್ದು ಬಂದ. ಹುಟ್ಟಿ ಬಂದ ಕ್ಷಣದಲ್ಲಿಯೇ ದಶದಿಕ್ಕುಗಳನ್ನೂ ವ್ಯಾಪಿಸಿ ಬೆಳೆಯತೊಡಗಿದ. ಉರಿಯುತ್ತಿರುವ ಅಗ್ನಿಪರ್ವತದಂತೆ ಕಾಣಿಸುತ್ತಾ.. ಕೆಂಪಾದ ಕಣ್ಣುಗಳನ್ನು ಉಳ್ಳವನಾಗಿ ಕೆದರಿದ ಕೇಶರಾಶಿಯನ್ನು ಹೊಂದಿ ಉಗ್ರ ರೂಪದಿಂದ .. ಕೈಯಲ್ಲಿ ಶೂಲವನ್ನು ಹಿಡಿದು ವಿಕಟಾಟ್ಟಹಾಸ ಮಾಡುತ್ತ ಕುಣಿಯುತ್ತಿದ್ದ. ಸೂರ್ಯ ಚಂದ್ರರ ಸಂಚಾರಕ್ಕೂ ತಡೆಯೊಡ್ದುವ ರೀತಿಯಲ್ಲಿ ಭೀಕರವಾದ ಕಾಯವನ್ನು ಹೊಂದಿದ್ದ . ಅವನ ಭೀಕರ ರೂಪವನ್ನು ನೋಡಿ ಪ್ರತ್ಯಕ್ಷ ಕಾಲನೇ ಬೆವರಿದ. ಕೋರೆದಾಡೆಗಳನ್ನು ಹೊಂದಿದ ಆತ ಆಗಾಗ ಆಕಳಿಸುತ್ತಿದ್ದನು. ಆ ಭೀಕರಾಕೃತಿಯನ್ನು ನೋಡಿದ ಸಮಸ್ತ ಭೂತಗಳೂ ದಿಕ್ಕು ದೆಸೆಯಿಲ್ಲದೆ ಓಡತೊಡಗಿದರು. ಹಾಗೆ ಪ್ರಪಂಚವನ್ನೇ ಬೆದರಿಸುವ ರೂಪವನ್ನು ಹೊಂದಿ... ಎಲ್ಲಾ ಕಡೆಯಲ್ಲಿಯೂ ವ್ಯಾಪಿಸಿಕೊಂಡ ಕಾರಣ ಅವನಿಗೆ "ವೃತ್ರ " ಎಂಬ ಹೆಸರಾಯಿತು. 🙏🙏 ಮುಂದಿನ ಭಾಗದಲ್ಲಿ ಇನ್ನೂ ಇದೆ 🙏

No comments:

Post a Comment