Wednesday, July 16, 2025
ಸಾವಿತ್ರಿ ಭಾಗ 6
ಯಮಧರ್ಮನನ್ನು ಹಿಂಬಾಲಿಸಿ ಹೊರಟ ಸಾವಿತ್ರಿ ಇಬ್ಬರು ದಾರಿಹೋಕರು ಒಂದೇ ದಾರಿಯಲ್ಲಿ ಜೊತೆ ಜೊತೆಯಾಗಿ ಸಾಗುವಾಗ ಮಾತಿಗೆ ತೊಡಗುವಂತೆ ಮಾತಾಡತೊಡಗಿದಳು. ಅವಳ ಒಂದೊಂದು ಮಾತೂ ಕೂಡ ಅವಳಿಗಿದ್ದ ಆಗಾಧವಾದ ಜ್ಞಾನದ ಪ್ರತೀಕವಾಗಿತ್ತು. "ಧರ್ಮದೇವ ಪ್ರಪಂಚದಲ್ಲಿ ಇಂದ್ರಿಯಗಳ ನಿಗ್ರಹ ಸಾಧ್ಯವಾಗದೇ ಹೋದರೆ ಅರಣ್ಯವಾಸದಲ್ಲಿ ಧರ್ಮ ಪರಿಪಾಲನೆಯೋ ತಪಸ್ಸನ್ನೋ ಆಚರಿಸುವುದು ಕಷ್ಟವಾಗುತ್ತದೆ, ಜ್ಞಾನಿಗಳು ಧರ್ಮಾಚರಣೆ ಮಾಡುತ್ತಾ ಧರ್ಮವೇನೆಂದು ಉಳಿದವರಿಗೂ ತಿಳಿಸಿಕೊಡುತ್ತಾರೆ. ಯಜ್ಞ -ಯಾಗಗಳಿಂದಲೋ, ತಪಸ್ಸು ಮಾಡುವುದರಿಂದಲೋ ಬಯಸುವ ಗುರಿ ಒಂದೇ ಅದು ಪರಮಪುರುಷನ ಸಾಕ್ಷಾತ್ಕಾರ... ಆ ಪರಮಪುರುಷ ನಮ್ಮಲ್ಲಿಯೇ ಇದ್ದಾನೆ.. ಆತ್ಮನಲ್ಲಿ ಪರಮಾತ್ಮನನ್ನು ಕಾಣುವ ಪ್ರಯತ್ನವೇ ಎಲ್ಲವೂ. ನಾವು ತ್ರಿಕಾಲ ಸಂಧ್ಯಾವಂದನೆಯನ್ನು ಮಾಡುವಾಗ ಗಾಯಿತ್ರೀ ದೇವಿಯ ಪ್ರತಿಮೆಯೇನೂ ಇರುವುದಿಲ್ಲ.. ಪ್ರತಿಯೊಬ್ಬ ದ್ವಿಜನೂ ಸಂಧ್ಯಾವಂದನೆಯನ್ನು ಮಾಡಬೇಕು.. ಮಾಡುತ್ತಾನೆ, ಹಾಗೆ ಮಾಡುವ ಕಾಲದಲ್ಲಿ ಅಂಗ-ಕರನ್ಯಾಸಗಳ ಮುಖೇನ ಗಾಯತ್ರಿ ದೇವಿಯನ್ನು ತನ್ನ ಹೃದಯದಲ್ಲಿಯೇ ಪ್ರತಿಷ್ಠಾಪಿಸಿ ಆರಾಧಿಸುವನು. ಅಂದರೆ ಇದರಲ್ಲು ಹೃದಯಾಂತರ್ಗತವಾದ ಪರತತ್ವವನ್ನು ಕಂಡುಕೊಳ್ಳಬೇಕೆಂಬುದೇ ಜ್ಞಾನಿಗಳ ನಿರ್ಣಯವಲ್ಲವೇ... ನಮ್ಮೆಲ್ಲರ ಕರ್ಮಗಳೂ.. ಆಚಾರ-ವಿಚಾರಗಳೂ ಶಾಸ್ತ್ರ - ಸಂಪ್ರದಾಯಗಳೂ ಪರಬ್ರಹ್ಮವನ್ನು ಕಂಡುಕೊಳ್ಳಲು ಬೇಕಾದ ದಾರಿದೀಪಗಳಲ್ಲವೇ.. ಈ ಧರ್ಮದ ಸಾಧನೆ ಎನ್ನುವುದು ನಾಲ್ಕು ಆಶ್ರಮಗಳಿಗೂ ಒಂದೇ ಆಗಿದೆ. ಆತ್ಮಸಾಕ್ಷಾತ್ಕಾರ ಮಾಡಿಕೊಂಡವನಿಗೆ ಆಶ್ರಮಧರ್ಮದ ಪ್ರವೃತ್ತಿ -ನಿವೃತ್ತಿ ಎಂಬುದೇನೂ ಇಲ್ಲ. ಸತ್ಪುರುಷರು ಅರ್ಥವನ್ನಾಗಲೀ.. ಕಾಮವನ್ನಾಗಲಿ ... ಧರ್ಮದ ವ್ಯಾಪ್ತಿಯಲ್ಲಿ ಇಲ್ಲದೇ ಇದ್ದರೆ ಬಯಸುವುದೇ ಇಲ್ಲ. ಸತ್ಪುರುಷರು ಬಯಸುವ ಅಂತಹ ಆತ್ಮಧರ್ಮವನ್ನೇ ನಾನೂ ಬಯಸುತ್ತೇನೆ". ಸಾವಿತ್ರಿಯ ಮಾತನ್ನ ಕೇಳಿದ ಯಮಧರ್ಮನಿಗೆ ಸಂತೋಷವಾಯಿತು. "ಮಗಳೇ ಹಿಂದಿರುಗು.. ನಿನ್ನ ಯುಕ್ತಿಯುಕ್ತವಾಗಿರುವ ಮಾತುಗಳನ್ನು ಕೇಳಿ ಸಂತೋಷಗೊಂಡಿದ್ದೇನೆ ಹಾಗಾಗಿ ಒಂದು ವರವನ್ನು ಕೇಳು.. ಆದರೆ ನಿನ್ನ ಗಂಡನನ್ನು ಮಾತ್ರ ಕೇಳಬೇಡ ಬೇರಾವ ವರವನ್ನಾದರು ಕೊಡುವೆ". ಆಗ ಸಾವಿತ್ರಿ.." ದೇವಾ... ನನ್ನ ಮಾವನು ರಾಜ್ಯಭ್ರಷ್ಠನಾಗಿದ್ದಾನೆ, ತನ್ನ ಕಣ್ಣುಗಳನ್ನೂ ಕಳೆದು ಕೊಂದಿದ್ದಾನೆ, ಅವನ ಅಂಧತ್ವವು ಹೋಗಿ ಮತ್ತೆ ಬಲಿಷ್ಠನೂ ತೇಜೋವಂತನೂ ಆಗಬೇಕು". ಸಾವಿತ್ರಿಯ ಮಾತನ್ನು ಕೇಳಿ ಯಮಧರ್ಮ " ಆಯಿತು ನಿನ್ನ ಮಾವನ ಅಂಧತ್ವ ನಿವಾರಣೆಯಾಗಿ ಸೂರ್ಯನಂತೆ ತೇಜೋವಂತನಾಗುವನು.. ಇನ್ನು ನನ್ನನ್ನು ಹಿಂಬಾಲಿಸಿ ಶ್ರಾಂತಳಾಗಬೇಡ ಹಿಂತಿರುಗು ನಿನಗೆ ವಿಶ್ರಾಂತಿಯ ಅವಶ್ಯಕತೆ ಇದೆ" ಎಂದು ಹೇಳಿದ. ಆಗ ಸಾವಿತ್ರಿ " ಸ್ವಾಮೀ ನನಗೆಲ್ಲಿಯ ಬಳಲಿಕೆ... ನನ್ನ ಪತಿಯನ್ನು ನೀನು ಕರೆದುಕೊಂಡು ಹೋಗುತ್ತಿರುವೆ, ಅವನ ಸಮೀಪವರ್ತಿನಿಯಾಗಿರುವ ನನಗೆ ಆಯಾಸ ಬಳಲಿಕೆಗಳಿಲ್ಲ... ಅವನನ್ನು ನೀನು ಎಲ್ಲಿಗೆ ಒಯ್ದರೂ ಅಲ್ಲಿಯವರೆಗೂ ಹಿಂಬಾಲಿಸುವುದೇ ನನ್ನ ಧರ್ಮ.. ನಾನು ಹೇಳಲಿರುವ ಇನ್ನೊಂದೆರಡು ಮಾತುಗಳನ್ನು ಕೇಳು". "ಸತ್ಪುರುಷರ ಸಮಾಗಮ ಶ್ರೇಷ್ಠ.. ಸತ್ಪುರುಷರ ಜೊತೆಗಿನ ಮೈತ್ರಿ ಅದಕ್ಕಿಂತಲೂ ಉತ್ತಮ.. ಅವರೊಂದಿಗೆ ಸಮಾಗಮ ಎಂದಿಗೂ ವ್ಯರ್ಥವಾಗುವುದಿಲ್ಲ, ಆದ್ದರಿಂದ ಯಾವಾಗಲೂ ಸತ್ಪುರುಷರ ಸಹವಾಸವನ್ನೇ ಮಾಡಬೇಕು". ಈ ಮಾತನ್ನು ಕೇಳಿದ ಅಂತಕನಿಗೆ ಇನ್ನೂ ಸಂತೋಷವಾಗಿ.." ಸಾವಿತ್ರಿ ನೀನು ಹೇಳಿದ್ದು ವಿದ್ವಾಂಸರೂ ಕೂಡ ಅನುಸರಿಸಬೇಕಾದ ವಿಷಯ ಇದರಿಂದ ನಾನು ಸುಪ್ರೀತನಾದೆ ಹಾಗಾಗಿ ಸತ್ಯವಾನನನ್ನು ಬಿಟ್ಟು ಬೇರೊಂದು ವರವನ್ನು ಕೇಳು". ಎರಡನೆಯ ವರವಾಗಿ ಸಾವಿತ್ರಿ " ದೇವಾ ನನ್ನ ಮಾವನು ಕಳೆದುಕೊಂಡ ತನ್ನ ರಾಜ್ಯವನ್ನು ಮತ್ತೆ ಪಡೆಯುವಂತಾಗಲಿ.. ರಾಜನಾಗಿಯು ಅವನು ಸ್ವಧರ್ಮವನ್ನೆಂದಿಗೂ ತ್ಯಜಿಸದೇ ಇರಲಿ". ಸಾವಿತ್ರಿ ಬಯಸಿದ ಎರಡನೆ ವರವನ್ನು ಕೂಡ ಅನುಗ್ರಹಿಸಿದ ಬಳಿಕ ಯಮಧರ್ಮ.." ಇನ್ನಾದರೂ ಹಿಂತಿರುಗು ನನ್ನ ಜೊತೆ ಬಂದು ಶ್ರಮಪಡಬೇಡ" ಎಂದು ಹೇಳಿದ.🙏🙏
ಮುಂದುವರಿಯುತ್ತದೆ.🙏🙏
Subscribe to:
Post Comments (Atom)
No comments:
Post a Comment