Saturday, July 26, 2025

ವೃತ್ರಾಸುರ 2

ಸತ್ಯ ಲೋಕಾಧೀಶನಾದ ಬ್ರಹ್ಮ ದೇವರಿಂದ ನಿರ್ದೇಶಿತರಾದ ಇಂದ್ರಾದಿ ಸುಮನಸರು ನೇರವಾಗಿ ತ್ವಷ್ಟ ಪುತ್ರನಾದ ವಿಶ್ವರೂಪನ ಬಳಿಗೆ ಬರುತ್ತಾರೆ. (ಈ ತ್ವಷ್ಟನು ಯಾರೆಂಬ ಬಗೆಗೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ವಿವರಣೆ ಇದೆ, ಕೆಲವು ಕಡೆ ಶುಕ್ರಾಚಾರ್ಯರ ಮಗನೆಂದೂ, ಕೆಲವುಕಡೆ ಪ್ರಜಾಪತಿಗಳಲ್ಲಿ ಒಬ್ಬನೆಂದೂ, ಕೆಲವು ಕಡೆ ದ್ವಾದಶಾಧಿತ್ಯರಲ್ಲಿ ಒಬ್ಬನೆಂದೂ ಹೇಳಲಾಗಿದೆ..! ಶ್ರೀಮದ್ಭಾಗವತದಲ್ಲಿ ವಿಶ್ವರೂಪನ ಬಳಿಗೆ ಬಂದ ಇಂದ್ರ "ಮಗೂ ವಿಶ್ವರೂಪ " ಎಂದೇ ಸಂಭೋಧಿಸುತ್ತಾನೆ. ) ವಿಶ್ವರೂಪನ ಬಳಿ ಬಂದ ದೇವತೆಗಳಲ್ಲಿ ಇಂದ್ರನೇ ಮುಂದಾಗಿ ಮಾತಿಗೆ ತೊಡಗುತ್ತಾನೆ. "ಮಗೂ ನಿನಗಿಂತ ಹಿಯರಾದ ನಾವು ಒಂದು ಹಿರಿದಾದ ಉದ್ದೇಶವನ್ನಿಟ್ಟುಕೊಂಡು ನಿನ್ನ ಬಳಿಗೆ ಬಂದವರಿದ್ದೇವೆ. ಲೋಕದ ಹಿತಕ್ಕಾಗಿ ನೀನು ದೇವತೆಗಳ ಪರವಾಗಿ ನಿಲ್ಲುತ್ತೀ ಎಂಬ ನಂಬಿಕೆ ನಮಗೆಲ್ಲರಿಗೂ ಇದೆ.. ಈಗಾಗಲೇ ದೇವ ಪುರೋಹಿತರಾದ ಬೃಹಸ್ಪತಿ ಆಚಾರ್ಯರು ನಮ್ಮನ್ನು ತೊರೆದು ಹೋಗಿರುವುದು ನಿನಗೂ ತಿಳಿದೇ ಇದೆ ಎಂದು ಭಾವಿಸಿದ್ದೀವೆ. ದೇವ ಪುರೋಹಿತರ ಅನುಪಸ್ಥಿತಿಯಲ್ಲಿ ನಮಗಾದ ಪರಿಭವದ ಪರಿಣಾಮವನ್ನು ಲೋಕಗಳು ಅನುಭವಿಸುವಂತಾಗಿದೆ. ಈಗ ಅಸುರರ ವಶವಾದ ಸ್ವರ್ಗದ ಅಧಿಪತ್ಯವನ್ನು ಮರಳಿ ಪಡೆಯಲು ನೀನೇ ಕಾರಣನಾಗಬೇಕು.. ಇದು ಕೇವಲ ನಮ್ಮ ನಿರೀಕ್ಷೆ ಮಾತ್ರವಲ್ಲ. ಕಮಲಸಂಭವನಾದ ಬ್ರಹ್ಮ ದೇವರ ನಿರ್ದೇಶನವೂ ಆಗಿರುತ್ತದೆ ಹಾಗಾಗಿ ನೀನೀಗಲೇ ನಮ್ಮ ಉತ್ಕರ್ಷಕ್ಕೆ ಬೇಕಾಗಿ ಪೌರೋಹಿತ್ಯವನ್ನು ವಹಿಸಿಕೋ". ವಿಶ್ವರೂಪನು ಕ್ಷಣಕಾಲ ಯೋಚಿಸಿದ ಯಾಕೆಂದರೆ ಆತನೇನೂ ದೇವ ಪಕ್ಷಪಾತಿಯೇ ಆಗಿರಲಿಲ್ಲ. ವಿಶ್ವರೂಪನ ತಾಯಿ ಪ್ರಹ್ಲಾದನ ಮಗಳು ವಿರೋಚನೆ, ವಿಶ್ವರೂಪನಿಗೆ ಮೂರು ತಲೆಗಳಿದ್ದವು... ಹಾಗಾಗಿಯೇ ಅವನಿಗೆ ತ್ರಿಶಿರ ಎಂಬ ಹೆಸರೂ ಇತ್ತು. ಒಂದು ಮುಖದಿಂದ ವೇದಾಧ್ಯಯನ ಮಾಡುತ್ತಾ ಅನ್ನವನ್ನು ಉಣ್ಣುತ್ತಾ.. ಒಂದು ಮುಖದಲ್ಲಿ ಸೋಮಪಾನ ಮಾಡುತ್ತಾ ಮತ್ತೊಂದು ಮುಖದಲ್ಲಿ ಸುರಾಪಾನ ಮಾಡುತ್ತಿದ್ದ. ತಾಯಿಯ ಸಂಭಂಧದಿಂದ ಅಸುರರ ಬಗೆಗೆ ಹಿತವೂ ... ತಂದೆಯ ಸಂಬಂಧದಿಂದ ದೇವತೆಗಳ ಬಗ್ಗೆ ಅನುರಾಗವೂ ಇತ್ತು. ಹಾಗಾಗಿ ಇಂದ್ರಾದಿಗಳ ಮಾತಿಗೆ ಕ್ಷಣಕಾಲ ಯೋಚಿಸಿ.. " ದೇವತೆಗಳೇ ನೀವು ನನಗಿಂತ ಹಿರಿಯರೂ ಹೌದು, ನಿಮಗಾದ ಪರಿಭವವನ್ನು ನಾನು ತಿಳಿದೇ ಇದ್ದೇನೆ. ಆದರೆ...ನಿಮ್ಮ ಆಮಂತ್ರಣವನ್ನು ಸ್ವೀಕರಿಸಬೇಕಾದುದು ಸಾಧುವೋ ಎಂಬ ಅನುಮಾನ ನನಗೆ, ಬ್ರಾಹ್ಮಣ ತಾನು ಕಲಿತ ವಿದ್ಯೆಯನ್ನು ಎಂದಿಗೂ ಹಣಕ್ಕಾಗಿ ವಿನಿಯೋಗಿಸಕೂಡದು. ಪ್ರತಿಫಲಾಪೇಕ್ಷೆಯಿಂದ ವಿದ್ಯೆಯನ್ನು ಬಳಸಿದರೆ ಅಂತಹ ಕಾರ್ಯದಿಂದ ಅವನ ಬ್ರಾಹ್ಮಣ್ಯವೇ ನಾಶನಾಗುತ್ತದೆ. ಇನ್ನು ಪೌರೋಹಿತ್ಯ ಎನ್ನುವುದು ನನಗೆ ಬಂಧನವೂ ಹೌದು. ಆದರೆ ಹಿರಿಯರಾದ ನಿಮ್ಮ ನಿರ್ದೇಶನವನ್ನು ತಿರಸ್ಕರಿಸುವ ಹಾಗೂ ಇಲ್ಲ. ಈ ನೆವನದಲ್ಲಿಯಾದರೂ ದೇವತೆಗಳ ಸೇವೆಯನ್ನು ಮಾಡುವ ಭಾಗ್ಯ ನನಗೆ ದೊರೆಯುತ್ತದೆ. ನಿಮ್ಮೆಲರ ನಿರೀಕ್ಷೆ... ಹಾಗೆಯೇ ಮುಂದೆ ನಿಮ್ಮ ಸಹಕಾರವೂ ಇದೆ ಎಂದಾದರೆ ಒಪ್ಪಿಕೊಳ್ಳುತ್ತೇನೆ" ಎಂದು ಕೈಮುಗಿದು ಹೇಳಿದ. ವಿಶ್ವರೂಪನಾಡಿದ ಮಾತಿನಿಂದ ದೇವತೆಗಳಿಗೆಲ್ಲಾ ಅತೀವ ಸಂತೋಷವಾಯಿತು. ನಷ್ಟವಾದ ಸ್ವರ್ಗವನ್ನು ಮತ್ತೆ ಪಡೆಯಲು ಬೇಕಾದ ಮಾರ್ಗವನ್ನು ವಿಶ್ವರೂಪನ ನಿರ್ದೇಶನದಲ್ಲಿ ಪಡೆಯಲು ಉದ್ಯುಕ್ತರಾದರು. ವಿಶ್ವರೂಪನು "ವೈಷ್ಣವೀ" ವಿದ್ಯೆಯನ್ನು ಬಲ್ಲವನಾದ ಕಾರಣ ಶುಕ್ರ ಶಿಷ್ಯರಾದ ಅಸುರರಿಂದ ಸ್ವರ್ಗಾಧಿಕಾರವನ್ನು ಕಸಿದುಕೊಳ್ಳಲು ಬೇಕಾದ ಶಕ್ತಿಯ ಮೂಲವನ್ನು ಇಂದ್ರನಿಗೆ ಉಪದೇಶ ಮಾಡಿದ ಅದೇ " ನಾರಾಯಣ ಕವಚ ". ಓಂ ನಮೋ ನಾರಾಯಣಾಯ ಎಂಬ ಅಷ್ಟಾಕ್ಷರಿಯಿಂದ ಅಂಗನ್ಯಾಸ.., ಓಂ ನಮೋ ಭಗವತೇ ವಾಸುದೇವಾಯ ಎಂಬ ದ್ವಾದಶಾಕ್ಷರಿಯಿಂದ ಕರನ್ಯಾಸವನ್ನು ಮಾಡಿ... "ಓಂ ಹರಿರ್ವಿದಧ್ಯಾನ್ಮಮ ಸಮರಕ್ಷಾಂ " ಎಂದು ಆರಂಭಗೊಳ್ಳುವ ನಾರಾಯಣ ಕವಚವನ್ನು ವಿಶ್ವರೂಪನು ಇಂದ್ರನಿಗೆ ಉಪದೇಶ ಮಾಡಿದ. ನಾರಾಯಣ ಕವಚದ ಮಹಿಮೆಯ ಬಗ್ಗೆ ಹೇಳುವುದಾದರೆ ಒಂದು ಕಾಲದಲ್ಲಿ ಬ್ರಾಹ್ಮಣನೊಬ್ಬ ಈ ನಾರಾಯಣ ಕವಚ ಎಂಬ ಮಂತ್ರವಿದ್ಯೆಯನ್ನು ಅರಿತವ ಕಾಲಾಂತರದಲ್ಲಿ ದೇಹ ತೊರೆದು ಮುಕ್ತಿ ಹೊಂದಿದ. ಅವನು ಶರೀರ ತೊರೆದ ಸ್ಥಳದಲ್ಲಿ ಆಕಾಶಮಾರ್ಗದಲ್ಲಿ ಚಿತ್ರರಥನೆಂಬ ಗಂಧರ್ವ ತನ್ನ ಸ್ತ್ರೀಯರೊಡಗೂಡಿ ವಿಮಾನದಲ್ಲಿ ಸಾಗುತ್ತಿದ್ದ. ಇದ್ದಕ್ಕಿದ್ದಂತೆ ಚಿತ್ರರಥನ ವಿಮಾನ ಭೂಸ್ಪರ್ಷ ಮಾಡಿತು. ಕಾರಣ ಅರಿಯದೇ ಚಿಂತಿತನಾದ ಚಿತ್ರರಥನ ಬಳಿಗೆ ವಾಲಖಿಲ್ಯ ಖುಷಿಗಳು ಬಂದು .."ಅಯ್ಯಾ ಹಿಂದೆ ನಾರಾಯಣ ಕವಚ ಧರಿಸಿದ ಬ್ರಾಹ್ಮಣ ದೇಹ ತೊರೆದ ಸ್ಥಳವಪ್ಪಾ ಇದು" ಎಂದು ಹೇಳಿದರು. ಕೂಡಲೇ ಚಿತ್ರರಥ ಆ ಪ್ರದೇಶದಲ್ಲಿ ಸಿಕ್ಕ ಬ್ರಾಹ್ಮಣನ ಮೂಳೆಗಳನ್ನು ಸಂಗ್ರಹಿಸಿ ಪೂರ್ವ ದಿಕ್ಕಿನಲ್ಲಿ ಹರಿಯುತ್ತಿದ್ದ ಸರಸ್ವತೀ ನದಿಯಲ್ಲಿ ವಿಸರ್ಜನೆ ಮಾಡಿದ ಮೇಲೆ ಅವನ ವಿಮಾನ ಮೊದಲಿನಂತೆ ಸಾಗಿತು. ಇಂತಹ ಮಹಿಮೆಯುಳ್ಳ "ನಾರಾಯಣ ಕವಚ " ಇಂದ್ರನ ವಶವಾಯಿತು. 🙏🙏 ಮುಂದಿನ ಭಾಗ... ಇನ್ನೊಂದು ಕಂತಿನಲ್ಲಿ🙏

No comments:

Post a Comment