Sunday, July 6, 2025
ಸಾವಿತ್ರಿ ಭಾಗ 3
ಅಶ್ವಪತಿ ಮಹಾರಾಜನಿಗೆ ಸಾವಿತ್ರಿಯ ಮದುವೆಯನ್ನು ಸತ್ಯವಾನನೊಂದಿಗೆ ಮಾಡಲು ಸಂಪೂರ್ಣ ಮನಸ್ಸಿಲ್ಲ ಆದರೆ... ನಾರದ ಮಹರ್ಷಿಗಳು ಹೇಳಿದ ಮಾತಿನಂತೆ ವಿವಾಹದ ಸಿದ್ಧತೆ ಮಾಡತೊಡಗಿದ, ರಾಜಪರಿವಾರವನ್ನು ಕೂಡಿಕೊಂಡು ನೇರವಾಗಿ ಮೇಧ್ಯಾರಣ್ಯದತ್ತ ಹೊರಟ. ಪರಿವಾರ ಸಮೇತ ನೇರವಾಗಿ ಬಂದು ಎಲೆ ಮನೆಯ ಹೊರಭಾಗದ ವೃಕ್ಷದ ಕೆಳಗೆ ಧರ್ಭಾಸನದಲ್ಲಿ ಕುಳಿತ ದ್ಯುಮತ್ಸೇನನ ಬಳಿಗೆ ಸಾಗುತ್ತಾನೆ. ಫಲತಾಂಬೂಲದ ಹರಿವಾಣವನ್ನು ಅವನ ಮುಂದಿಟ್ಟು ನಮಸ್ಕರಿಸಿಕೊಳ್ಳುತ್ತಾನೆ. ಕುರುಡನಾದ ಕಾರಣ ಬಂದ ತಾನು ಯಾರು ಎಂಬುದನ್ನೂ ಹೇಳಿಕೊಳ್ಳಬೇಕಾಗುತ್ತದೆ. ಬಂದವ ತಾನು ಮಾದ್ರ ದೇಶದ ಅಧಿಪತಿ ಅಶ್ವಪತಿಯೆಂದೂ ದಿಬ್ಬಣದೊಂದಿಗೆ ರಾಜಪರಿವಾರ ಸಮೇತ ಬಂದಿದ್ದಾಗಿಯೂ ನಿನ್ನ ಮಗನಾದ ಸತ್ಯವಾನನಿಗೆ ತನ್ನ ಮಗಳಾದ ಸಾವಿತ್ರಿಯನ್ನು ವಿವಾಹ ಮಾಡಿಕೊಡುವ ನಿರ್ಣಯ ಕೈಗೊಂಡಿರುವೆನೆಂದೂ ಹೇಳಿಕೊಳ್ಳುತ್ತಾನೆ. ದ್ಯಮತ್ಸೇನನಿಗೆ ಆಶ್ಚರ್ಯ ಆತಂಕಗಳು ಏಕಕಾಲದಲ್ಲಿ ಆಗುತ್ತದೆ. ಕಾಡಿನಲ್ಲಿ ನಿರ್ಗತಿಕನಾಗಿ ಬದುಕುತ್ತಿರುವ ತನ್ನಂತವನ ಮಗನಿಗೆ ರಾಜ ಕುಟುಂಬದ ಸಂಭಂಧವೆ! ಇದು ತನ್ನನ್ನು ಅಪಹಾಸ್ಯ ಮಾಡಲು ಆಡುತ್ತಿರುವ ಮಾತಿರಬಹುದೇ... ಧಾರ್ಮಿಕನಾದ ಮಾದ್ರೇಶ ಎಂದೂ ಯಾರ ದುಃಸ್ಥಿತಿಯನ್ನು ಕಂಡು ಅಪಹಾಸ್ಯ ಮಾಡಲಾರ... ಒಂದು ಕ್ಷಣ ಯೋಚಿಸಿ..." ಅಯ್ಯಾ ಮಹಾರಾಜಾ.. ನೀನು ಹೇಳುತ್ತಿರುವ ಮಾತು ಸತ್ಯವೆಂದು ನಂಬಲೋ... ಕೆಲವು ವರ್ಷಗಳ ಹಿಂದೆ ನಾನು ಸಾಲ್ವ ದೇಶದ ಸಿಂಹಾಸನದಲ್ಲಿ ಕುಳಿತಾಗ ಇಂತಹ ಸಂಧರ್ಭ ಒದಗಿ ಬಂದಿದ್ದರೆ ಸಂತೋಷದಿಂದ ನಂಬುತ್ತಿದ್ದೆ. ಈಗ ಅದೆಲ್ಲವೂ ಕನಸಿನಲ್ಲಿ ಕಂಡ ದಿನಗಳು ಎಂದೆನಿಸತೊಡಗಿದೆ. ದಟ್ಟದರಿದ್ರನಾದ ನಾನು ಈಗ ಸಂಪತ್ತನ್ನು ಹೊಂದುವುದಿರಲಿ.. ಬೇರೆಯವರ ಸಂಪತ್ತು - ಸಂಭ್ರಮವನ್ನು ನೋಡಿ ಸಂತೋಷ ಪಡಲು ಬೇಕಾದ ಕಣ್ಣುಗಳನ್ನು ಕೂಡ ಕಳೆದುಕೊಂಡಿದ್ದೇನೆ. ನನ್ನ ಮಡದಿ ರೋಗಿಯಾಗಿದ್ದಾಳೆ ಇದನ್ನೆಲ್ಲ ನೋಡುತ್ತಾ ನಮ್ಮೀರ್ವರ ಸೇವೆ ಮಾಡುತ್ತಿರುವ ಕಡು ಬಡವ ಸತ್ಯವಾನನಿಗೆ ನಿನ್ನ ಮಗಳನ್ನು ಕೊಡುವ ನಿರ್ಧಾರವಾದರೂ ಯಾಕೆ ಮಾಡಿದೆ... ಇನ್ನು ನಿನ್ನ ಮಗಳಾದರೂ ಇದನ್ನು ಹೇಗೆ ಸ್ವೀಕರಿಸಬಲ್ಲಳು" ಹೀಗೆ ದ್ಯುಮತ್ಸೇನನಾಡಿದ ಮಾತಿಗೆ ಪ್ರತಿಯಾಗಿ ಅಶ್ವಪತಿಯೇ ಉತ್ತರಿಸುತ್ತಾನೆ "ದ್ಯುಮತ್ಸೇನ... ನೀನೋ ನಿನ್ನ ಮಗನಿರುವ ಸ್ಥಿತಿಯನ್ನೋ ತಿಳಿಯದೇ ನಾನು ಈ ನಿರ್ಧಾರ ಕೈಗೊಳ್ಳಲಿಲ್ಲ, ಎಲ್ಲವೂ ನಮ್ಮ ಅರಿವಿಗೆ ಬಂದಿದೆ ವಿಧಿಲಿಖಿತವನ್ನು ಮೀರಲು ಈ ಪ್ರಪಂಚದಲ್ಲಿ ಯಾರಿಂದಲೂ ಸಾಧ್ಯವಿಲ್ಲ, ನೀನು ಅರಣ್ಯದಲ್ಲಿದ್ದರೂ ಕ್ಷತ್ರಿಯನೇ ಅಲ್ಲವೆ... ನಿನ್ನ ನುಗನಾದ ಸತ್ಯವಾನ ರಾಜಕುಮಾರನೇ ಅಲ್ಲವೆ..ಸ್ವತಃ ವಿವಾಹವಾಗಬೇಕಾದ ನನ್ನ ಪುತ್ರಿಯೇ ಸತ್ಯವಾನನನ್ನು ಆಯ್ಕೆ ಮಾಡಿಕೊಂಡಿದ್ದಾಳೆ. ಅವಳ ನಿರ್ಧಾರವನ್ನು ಅಂಗೀಕರಿಸಿಯೇ ನಾವು ದಿಬ್ಬಣ ಸಮೇತರಾಗಿ ಬಂದವರು " ಅಶ್ವಪತಿಯ ಈ ಮಾತನ್ನು ಕೇಳಿ ದ್ಯುಮತ್ಸೇನನಿಗೆ ಸಮಾಧಾನ-ಸಂತೋಷವಾಗುತ್ತದೆ. "ಹಾಗಿದ್ದರೆ ಎಲ್ಲವನ್ನು ಯೋಚಿಸಿಯೇ ತೀರ್ಮಾನ ಕೈಗೊಂಡಿರುವಿರಾದರೆ ಈ ವಿವಾಹ ನಡೆಯಲಿ " ಎಂದು ಅನುಮತಿಸುತ್ತಾನೆ. ರಾಜರ್ಷಿ ದ್ಯುಮತ್ಸೇನನ ನಿರ್ಧಾರದಿಂದ ಎಲ್ಲರಿಗೂ ಸಂತೋಷವಾಗುತ್ತದೆ. ಅತ್ಯಂತ ಸಂಭ್ರಮದಿಂದ ಅರಣ್ಯದಲ್ಲಿಯೇ ಖುಷಿ ಮುನಿಗಳ ಸಮ್ಮುಖದಲ್ಲಿ ವಿವಾಹ ಸಂಪನ್ನಗೊಳ್ಳುತ್ತದೆ. ಮಾದ್ರಾಧಿಪತಿ ಅಶ್ವಪತಿ ತನ್ನ ಪರಿವಾರದೊಂದಿಗೆ ನಾಲ್ಕಾರು ದಿನ ಅಲ್ಲಿಯೇ ಇದ್ದು ನಂತರ ದ್ಯುಮತ್ಸೇನನ ಅನುಮತಿ ಪಡೆದು ವಧೂವರರಿಗೆ ಉಡುಗೊರೆ ಕೊಟ್ಟು ಹರಸಿ ತನ್ನ ರಾಜ್ಯಕ್ಕೆ ಹಿಂತಿರುಗುತ್ತಾನೆ.
ತಂದೆ ತನ್ನ ಪರಿವಾರವನ್ನು ಕರೆದುಕೊಂಡು ಹಿಂತಿರುಗಿದ ಮರುಕ್ಷಣದಲ್ಲಿಯೇ ಸಾವಿತ್ರಿ ರಾಜಕುಮಾರಿಗೆ ಉಚಿತವಾಗಿ ತಾನು ಧರಿಸಿದ್ದ ವಸ್ತ್ರಾಭರಣಗಳನ್ನು ತೆಗೆದಿರಿಸಿ ವನದಲ್ಲಿ ಆಶ್ರಮವಾಸಿಗಳು ಧರಿಸುವ ನಾರುಡುಗೆಯನ್ನು ಧರಿಸುತ್ತಾಳೆ. ಗಂಡನಾದ ಸತ್ಯವಾನನನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾ, ಅತ್ತೆ ಮಾವಂದಿರ ಸೇವೆಯನ್ನು ಮಾಡತೊಡಗುತ್ತಾಳೆ. ತಾನು ತೆಗೆದಿರಿಸಿದ ಆಭರಣಗಳನ್ನು ಅತ್ತೆಗೆ ತೊಡಿಸಿ ಅದರಿಂದ ಅವಳು ಸಂತೋಷ ಹೊಂದಿದಾಗ ತಾನೂ ಸಂತೋಷ ಹೊಂದುವಳು. ಸತ್ಯವಾನನೊಂದಿಗೆ ವನವನ್ನು ಸಂಚರಿಸುತ್ತಾ ಸಂತೋಷಪಡುವಳು. ಸಂತೋಷದ ದಿನಗಳು ಕಳೆಯುವುದೇ ತಿಳಿಯುವುದಿಲ್ಲ. ದಿನ ಕಳೆದು ತಿಂಗಳಾಗಿ.. ತಿಂಗಳುಗಳು ಕಳೆದು ವರ್ಷಕ್ಕೆ ಸಮೀಪಿಸಿತು. ಸಾವಿತ್ರಿ ನಾರದರು ಅಂದು ಹೇಳಿದ ಮಾತು "ಸಂವತ್ಸರೇಣ ಕ್ಷೀಣಾಯುಃ" ಎಂಬುದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿದ್ದಳು. ನಾರದರು ಹೇಳಿದ ಆ ದಿನವೂ ಹತ್ತಿರ ಬಂದೇಬಿಟ್ಟಿತು. ನಾರದರ ಮಾತಿನಂತೆ ವರ್ಷ ಪೂರ್ತಿಯಾಗಲು ಇನ್ನು ನಾಲ್ಕು ದಿನಗಳು ಉಳಿದಿದೆ. ಅದನ್ನು ಎದುರಿಸಲು ಬೇಕಾಗಿ ಸಾವಿತ್ರಿ ಒಂದು ಕಠಿಣವಾದ ವ್ರತವನ್ನು ಕೈಗೊಳ್ಳುತ್ತಾಳೆ. "ತ್ರಿರಾತ್ರ" ವ್ರತ, ಅದು ಸುಲಭದ್ದಾಗಿರಲಿಲ್ಲ .. ಮೂರು ರಾತ್ರಿ - ಹಗಲುಗಳನ್ನು ಉಪವಾಸದಿಂದ ಕಳೆಯಬೇಕು., ಕೇವಲ ಉಪನಾಸವಿದ್ದರೆ ಸಾಲದು.. ಕುಳಿತುಕೊಳ್ಳಲೂ .. ಮಲಗಲೂ ಅವಕಾಶವಿಲ್ಲ ನಿಂತೇ ಕಳೆಯಬೇಕು. ಇಂತಹ ವ್ರತವನ್ನು ಸಂಕಲ್ಪ ಮಾಡಿದ್ದನ್ನು ತಿಳಿದು ಮಾವ ದ್ಯುಮತ್ಸೇನ ಸಾವಿತ್ರಿಯನ್ನು ಕರೆದು " ಮಗಳೇ ಮೊದಲು ನೀನು ಅರಮನೆಯ ಸುಖೋಪಭೋಗಗಳಲ್ಲಿ ಸಂತೋಷದಿಂದ ಬೆಳೆದವಳು ಸಹಜವಾಗಿಯೇ ಈ ಕಾಡಿನ ಜೀವನ ನಿನಗೆ ಕಷ್ಟಕರವಾದದ್ದು, ಅದರ ಜೊತೆಗೆ ಇಂತಹ ಕಠಿಣವಾದ ವ್ರತದ ಸಂಕಲ್ಪ ಯಾಕಮ್ಮ ಅದು ನಿನಗೆ ತುಂಬಾ ಕಠಿಣ" ಮಾವನ ಮಾತನ್ನ ಕೇಳಿದ ಸಾವಿತ್ರಿ .." ತಾತ... ನಾನೊಂದು ಉದ್ದೇಶವನ್ನಿಟ್ಟುಕೊಂಡೇ ಈ ವ್ರತವನ್ನು ಸಂಕಲ್ಪಿಸಿದ್ದೇನೆ. ನಾವು ಸಾಗುವ ಮಾರ್ಗದ ಸ್ಪಷ್ಟವಾದ ಕಲ್ಪನೆ ನಮಗಿದ್ದರೆ ಯಾವುದೂ ಕಠಿಣವಲ್ಲ. ನೀನು ಸಂಕಲ್ಪಿಸಿರುವ ವ್ರತ ಸಾಂಗವಾಗಿ ನೆರವೇರಲಿ ಎಂದು ಹಿರಿಯರಾದ ನೀವು ಆಶೀರ್ವದಿಸಿದರೆ ಅಷ್ಟೇಸಾಕು ಎಲ್ಲವೂ ಸುಲಭವಾಗುತ್ತದೆ. " ( ಸಾವಿತ್ರಿಗೆ ಮಾತ್ರ ಇನ್ನು ನಾಲ್ಕನೆಯ ದಿನ ಸತ್ಯವಾನನಿಗೆ ಮರಣ ಎಂದು ತಿಳಿದಿರುವುದು... ತಿಳಿಯದೇ ಇದ್ದ ಗಂಡನಿಗೋ, ಅತ್ತೆ ಮಾವಂದಿರಿಗೂ ಹೇಳುವ ಹಾಗಿಲ್ಲ ) ಸೊಸೆಯ ಮಾತನ್ನು ಕೇಳಿದ ದ್ಯುಮತ್ಸೇನ ಇನ್ನೇನನ್ನು ಹೇಳಿದರೂ ಸಾವಿತ್ರಿ ಕೇಳಲಾರಳು ಎಂಬುದನ್ನು ತಿಳಿದು " ವ್ರತವನ್ನು ನಿಲ್ಲಿಸು ಎನ್ನಲು ನನಗೂ ಮನಸ್ಸು ಬಾರದು ಹಾಗಾಗಿ ನೀನು ಸಂಕಲ್ಪಿಸಿರುವ ವ್ರತ ಯಶಸ್ವಿಯಾಗಲಿ" ಎಂದು ಆಶೀರ್ವದಿಸಿ ಹರಸಿದ. ತ್ರಿರಾತ್ರ ವ್ರತದ ಸಂಕಲ್ಪ ಮಾಡಿದ ಸಾವಿತ್ರಿ ಎರಡು ದಿನಗಳನ್ನು ಕಳೆದಳು ಅದಾಗಲೇ ಅವಳನ್ನು ನೋಡಿದರೆ ಎಂತವರಿಗೂ ಕನಿಕರ ಮೂಡುವ ಹಾಗೆ ಕಾಣಿಸುತ್ತಿದ್ದಳು ಇನ್ನೊಂದೇ ದಿನ .... ಉಪವಾಸದಿಂದ ಬಳಲಿದ್ದ ಸಾವಿತ್ರಿ ನಾಳೆಯೇ ಸತ್ಯವಾನನಿಗೆ ಮರಣ ಎಂಬುದನ್ನು ನೆನೆದು ಮತ್ತೂ ಬಳಲಿದಳು. ಅಂತೂ ಮೂರನೆಯ ರಾತ್ರಿಯೂ ಕಳೆದು ಸೂರ್ಯ ಉದಯಿಸಿದ, ಸಾವಿತ್ರಿ ಲಗುಬಗೆಯಿಂದ ಸ್ನಾನಮಾಡಿ ಮಡಿವಸನವನ್ನುಟ್ಟು ದೇವತಾರ್ಚನೆಯನ್ನು ಮಾಡಿದಳು. ಆನಂತರದಲ್ಲಿ ಆಶ್ರಮದ ಸಮೀಪವಾಸಿಗಳಾಗಿದ್ದ ಬ್ರಾಹ್ಮಣ ದಂಪತಿಗಳನ್ನೂ, ವೃದ್ಧರನ್ನೂ, ಅತ್ತೆ ಮಾವಂದಿರನ್ನೂ ಸತ್ಕರಿಸಿದಳು. ಅವರೆಲ್ಲರಿಗೂ ನಮಸ್ಕರಿಸಿದಾಗ ಪ್ರತಿಯಾಗಿ ಹರಸಿದ್ದು " ಧೀರ್ಘ ಸುಮಂಗಲೀ ಭವ " ಎಂಬುದಾಗಿ 🙏🙏
ಮುಂದಿನ ಘಟನೆ ಮುಂದಿನ ಬರಹ 🙏🙏
Subscribe to:
Post Comments (Atom)
No comments:
Post a Comment