Tuesday, July 15, 2025
ಸಾವಿತ್ರಿ ಭಾಗ 5
ಸತ್ಯವಾನ ಸಾವಿತ್ರಿಯನ್ನು ಕೂಗುತ್ತಾ ಮರದಿಂದ ಇಳಿದ, ಅವನ ಮೈಯೆಲ್ಲಾ ಬೆವರಿ ಹೋಗಿತ್ತು... ತುಂಬಾ ನಿತ್ರಾಣನಾದಂತೆ ಕಾಣುತ್ತಿದ್ದ." ನಿಧಾನ ಸ್ವಾಮಿ... ಸುಧಾರಿಸಿಕೊಳ್ಳಿ.. " ಎನ್ನುತ್ತಾ ಅವನ ಬಳಿಗೆ ಸಾವಿತ್ರಿ ಸಾಗಿದಳು. "ಸಾವಿತ್ರೀ... ಯಾಕೋ ತುಂಬಾ ತಲೆ ನೋಯುತ್ತ ಇದೆ, ಯಾಕೋ ಬಹಳ ಆಯಾಸವಾಗುತ್ತಿದೆ... ಕಣ್ಣಿಗೆ ಕತ್ತಲು ಆವರಿಸಿದ ಅನುಭವವಾಗುತ್ತಿದೆ.." ಎಂದು ಹೇಳುತ್ತಲೇ ನೆಲಕ್ಕೆ ಕುಸಿದ. ಸಾವಿತ್ರಿ ಅವನು ಬಿಳುವುದನ್ನು ತಡೆಯುತ್ತಾ ಉಪಚರಿಸಿ ಹಾಗೇ ತಾನು ಕುಳಿತುಕೊಂಡು ತನ್ನ ತೊಡೆಯಮೇಲೆ ಅವನ ತಲೆ ಇರಿಸಿಕೊಂಡು ಮಲಗಲು ಹೇಳಿದಳು. ಅವನು ಏದುಸಿರು ಬಿಡುತ್ತಿರುವುದನ್ನು ಸಾವಿತ್ರಿ ಗಮನಿಸಿದಳು... ಆ ಸ್ಥಿತಿಯಲ್ಲೂ ಸಾವಿತ್ರಿಯ ಸಾಮೀಪ್ಯ ಸತ್ಯವಾನನಿಗೆ ಸ್ವಲ್ಪ ನೆಮ್ಮದಿಯನ್ನು ಕೊಟ್ಟಂತಿತ್ತು. ಮರುಕ್ಷಣದಲ್ಲಿಯೇ ಅವಳ ಸಮೀಪದಲ್ಲಿ ಕೆಂಪಾದ ವಸ್ತ್ರಗಳನ್ನು ಧರಿಸಿದ್ದ, ಕೆಂಪು ಕಣ್ಣುಗಳನ್ನು ಹೊಂದಿದ್ದ, ಭಯಂಕರವಾದ ರೂಪದ ವ್ಯಕ್ತಿಯೊಬ್ಬ ಕೈಯಲ್ಲಿ ಪಾಶವನ್ನು ಹಿಡಿದು ನಿಂತಿದ್ದ. ಅವನನ್ನು ನೋಡಿದಾಕ್ಷಣ ಸಾವಿತ್ರಿಯ ಭಯ ನೂರ್ಮಡಿಯಾಯಿತು. ಆದರೂ ಸಾವರಿಸಿಕೊಂಡು ಸತ್ಯವಾನನ ತಲೆಯನ್ನು ತೊಡೆಯಿಂದ ಕೆಳಗಿಳಿಸಿ, "ಸ್ವಾಮಿ... ನೀವಾರು.. ನೋಡಿದರೆ ದೇವಪುರುಷನಂತೆ ಕಾಣಿಸುತ್ತಿದ್ದೀರಿ.. ನೀವು ಇಲ್ಲಿಗೆ ಬರಲು ಕಾರಣವೇನೆಂದು ದಯಮಾಡಿ ತಿಳಿಸಿ''.. ಸಾವಿತ್ರಿಯ ಮಾತನ್ನು ಕೇಳಿದ ಆ ದೇವಪುರುಷ " ಸತ್ಯವಾನನ ಪತ್ನಿಯಾದ ನೀನು ಪರಮ ಪತಿವ್ರತೆಯಾಗಿದ್ದಿ.... ನೀನು ಧರ್ಮದ ನೆಲೆಯರಿತು ನಡೆಯುತ್ತಿರುವ ಕಾರಣದಿಂದ ನಿನಗೆ ನಾನು ಕಾಣಿಸಿಕೊಂಡು ಮಾತನಾಡುತ್ತಿದ್ದೇನೆ. ಸಾವಿತ್ರೀ ನಿನ್ನ ಪತಿಯಾದ ಸತ್ಯವಾನನ ಆಯುಷ್ಯ ಇಂದಿಗೆ ಮುಗಿಯಿತು.. ಹಾಗಾಗಿ ಅವನ ಜೀವವನ್ನು ಸೆಳೆದೊಯ್ಯಲು ಬಂದಿದ್ದೇನೆ ನಾನೇ ಯಮಧರ್ಮ". ಸಾವಿತ್ರಿಯ ಹೃದಯದ ಬಡಿತ ಹೆಚ್ಚಾಯಿತು.. " ನಾರದರಾಡಿದ ಸಮಯ ಬಂದೇ ಬಿಟ್ಟಿತಲ್ಲಾ " ಎಂದು ದುಃಖದಿಂದ ತನ್ನಲ್ಲೇ ತಾನು ಹೇಳಿಕೊಂಡು.. "ಸ್ವಾಮಿ.. ನಾನು ಇಲ್ಲಿಯವರೆಗೆ ಕೇಳಿದ ವಿಷಯ.. ಧರೆಯಲ್ಲಿರುವ ಜೀವಾತ್ಮರನ್ನು ಕರೆದೊಯ್ಯಲು ನಿನ್ನ ಕಿಂಕರರು ಬರುತ್ತಾರೆಂದು ಕೇಳಿದ್ದೆ.. ಆದರೆ ಇಲ್ಲಿ ನೀನೇ ಬಂದೆಯಾ.." ಪ್ರಶ್ನೆಯ ಜೊತೆ ಅನುಮಾನವೂ ಇತ್ತು. "ಸಾವಿತ್ರೀ.. ಸರ್ವಗುಣ ಸಂಪನ್ನನಾದ, ಧರ್ಮಾತ್ಮನಾದ ನಿನ್ನ ಪತಿಯನ್ನು ನನ್ನ ಕಿಂಕರರು ಕರೆದೊಯ್ಯವುದು ಯೋಗ್ಯವಾದುದಲ್ಲ..ಹಾಗಾಗಿ ನಾನೇ ಬಂದಿರುವೆ" ಎಂದು ಹೇಳುತ್ತಾ ತನ್ನ ಕೈಯಲ್ಲಿರುವ ಪಾಶವನ್ನು ಸತ್ಯವಾನನತ್ತ ಬೀಸಿದ, ಮರುಕ್ಷಣದಲ್ಲಿಯೇ ಅಂಗುಷ್ಠ ಮಾತ್ರದ ಜೀವಾತ್ಮನು ಪಾಶದಲ್ಲಿ ಬಂಧನಕ್ಕೊಳಗಾದ. ಹಾಗೆ ಬಂದಿಸಲ್ಪಟ್ಟ ಆ ಕಿರುಗಾತ್ರದ ಜೀವನನ್ನು ಸತ್ಯವಾನನ ದೇಹದಿಂದ ಹೊರಸೆಳೆದ. ತಕ್ಷಣದಲ್ಲಿಯೇ ಸತ್ಯವಾನನ ಉಸಿರಾಟ ನಿಂತುಹೋಯಿತು.. ಮುಖದ ಕಾಂತಿ ಕಪ್ಪಿಟ್ಟಿತು.. ದೇಹದ ಅಂಗಾಂಗಗಳೂ ಸ್ಥಬ್ಧವಾದವು. ಪಾಶದಲ್ಲಿ ಬಂಧಿಸಿದ ಜೀವಾತ್ಮನನ್ನು ಸೆಳೆದುಕೊಂಡು ಯಮನು ದಕ್ಷಿಣಾಭಿಮುಖವಾಗಿ ಸಾಗತೊಡಗಿದ. ಸತ್ಯವಾನನ ಮರಣವಾಯಿತೆಂದು ಅರಿತ ಸಾವಿತ್ರಿ ದುಃಖದಿಂದ ಕಣ್ಣೀರು ಸುರಿಸುತ್ತಾ ತನಗರಿವಿಲ್ಲದಂತೆಯೇ ಪತಿಯ ಜೀವವನ್ನು ಸೆಳೆದೊಯ್ಯತ್ತಿರುವ ಯಮಧರ್ಮನನ್ನು ಹಿಂಬಾಲಿಸತೊಡಗಿದಳು. ಕೆಲವು ದೂರವನ್ನು ಕ್ರಮಿಸಿದ ಮೇಲೆ ಸಾವಿತ್ರಿಯನ್ನು ಕುರಿತು .. "ಸಾವಿತ್ರೀ ನೀನು ಪತಿ ಸೇವೆಯನ್ನು ನಿಷ್ಠೆಯಿಂದ ಮಾಡಿದ ಕಾರಣ ಇಲ್ಲಿಯವರೆಗೆ ಬಂದಿದ್ದೀ, ನೀನು ಮಾಡಬೇಕಾದ ಕರ್ತವ್ಯ ಉಳಿದಿದೆ.. ಆಶ್ರಮಕ್ಕೆ ತೆರಳಿ ಸತ್ಯವಾನನ ದೇಹಕ್ಕೆ ಅಂತ್ಯ ಸಂಸ್ಕಾರವನ್ನು ಮಾಡು ಹೋಗು... ಇನ್ನು ಮುಂದೆ ಬರುವುದು ತರವಲ್ಲ" ಎಂದು ಯಮಧರ್ಮ ಹೇಳುತ್ತಾನೆ.. ಅದಕ್ಕೆ ಪ್ರತಿಯಾಗಿ ಸಾವಿತ್ರಿ.. "ನನ್ನ ಪತಿಯ ಜೀವವನ್ನು ನೀನು ಎಲ್ಲಿಗೇ ಒಯ್ದರೂ ನಾನು ಹಿಂಬಾಲಿಸುವುದು ಧರ್ಮ ಎಂದು ಭಾವಿಸಿದ್ದೀನೆ... ಹಿರಿಯರ ಸೇವೆಯಿಂದ... ಸಂಕಟವನ್ನು ದೂರಮಾಡುವ ವ್ರತಗಳಿಂದ ... ನಾನು ಪತಿಯಲ್ಲಿ ಹೊಂದಿರುವ ಪ್ರೀತಿಯಿಂದ.. ಜೊತೆಗೆ ನಿನ್ನ ಕರುಣೆಯಿಂದ ನನ್ನ ಮುಂದಿನ ಮಾರ್ಗವೂ ಸುಗಮವಾಗಲಿದೆ ಎಂದು ಭಾವಿಸಿದ್ದೇನೆ, ಹಾಗಾಗಿಯೇ ಮುಂದೆ ಕೂಡ ನಿನ್ನನ್ನು ಅನುಸರಿಸುತ್ತೇನೆ... ಯಮದೇವ ಕೇವಲ ಏಳು ಹೆಜ್ಜೆಗಳನ್ನು ಜೊತೆಯಾಗಿ ನಡೆಯುವದರಿಂದ ಮೈತ್ರಿ ಉಂಟಾಗುವುದು ಎಂದು ಪ್ರಾಜ್ಞರಾಡುತ್ತಾರೆ, ಆದರೆ ನಾನು ನಿನ್ನೊಂದಿಗೆ ಹಲವು ಹೆಜ್ಜೆಗಳನ್ನು ಇಟ್ಟಿದ್ದೇನೆ.. ಹಾಗಾಗಿ ಅದೇ ಮೈತ್ರಿ ಭಾವದಿಂದ ನಿನ್ನಲ್ಲಿ ಕೆಲವು ಮಾತುಗಳನ್ನು ಹೇಳಬೇಕು ಎಂದುಕೊಂಡಿದ್ದೇನೆ.."🙏🙏
ಯಮಧರ್ಮ ಸಾವಿತ್ರಿಯರ ಸಂಭಾಷಣೆ ಮುಂದಿನ ಭಾಗ🙏🙏
Subscribe to:
Post Comments (Atom)
No comments:
Post a Comment