Thursday, July 17, 2025

ಸಾವಿತ್ರಿ ಭಾಗ 7

" ನಾನು ನನ್ನ ಪತಿಯನ್ನು ಹಿಂಬಾಲಿಸಿ ಬರುತ್ತಿದ್ದೇನೆ... ಹಾಗಾಗಿ ನನಗೆ ಯಾವ ರೀತಿಯ ಬಳಲಿಕೆಯೂ ಇಲ್ಲ, ಜೊತೆಗೆ ಧರ್ಮದೇವನಾದ ನಿನ್ನೊಂದಿಗೆ ಮಾತಾಡುತ್ತಿರುವ ಕಾರಣದಿಂದ ಕ್ರಮಿಸಿದ ಮಾರ್ಗ ಎಷ್ಟು ಎಂಬ ಗಣನೆಯೂ ನನಗಿಲ್ಲ.. ದೇವ.. ನಿನ್ನಿಂದ ಸೃಷ್ಠಿಯ ಸಮಸ್ತ ಜೀವಿಗಳೂ ಅಂತ್ಯವನ್ನು ಹೊಂದುತ್ತವೆ. ಪ್ರತಿಯೊಂದು ಜೀವಿಯ ಆಯಸ್ಸನ್ನು ತಿಳಿದು ಅದು ಮುಗಿದಾಗ ಅವುಗಳನ್ನು ಕೊಂಡೊಯ್ಯವೆ, ಆದರೆ ಜೀವಿಯ ಆಯಸ್ಸನ್ನು ನಿರ್ಧರಿಸುವವ ನೀನಲ್ಲ ಆಯಾ ಜೀವಿಯ ಲಲಾಟ ಲಿಖಿತವನ್ನರಿತು ನಿನ್ನ ಕಾರ್ಯವನ್ನು ಕೈಗೊಳ್ಳುವೆ.. ಇಲ್ಲಿ ನಿನ್ನ ಇಷ್ಟ-ಅನಿಷ್ಟಗಳ ನಿರ್ಧಾರಗಳಿಲ್ಲ. ಜೀವಿಯ ಕರ್ಮಗಳಿಗನುಗುಣವಾಗಿ ಹೊಂದಬೇಕಾದುದನ್ನು ನೀನು ನಿರ್ಣಯಿಸುತ್ತೀ.. ಹಾಗಾಗಿಯೇ ನೀನು ''ಯಮ''. ಇನ್ನೊಂದು ಮಾತು... ಪ್ರಪಂಚದಲ್ಲಿರುವ ಎಲ್ಲ ಜೀವಿಗಳೂ ಬಲಹೀನರೇ ಸರಿ ಆದರೆ ಸತ್ಪುರುಷರು ಅಂತಹ ಬಲಹೀನರಿಗೆ ಅವುಗಳ ಕರ್ಮಾನುಸಾರ ತಮ್ಮ ಬಲವನ್ನು ನೀಡಿ ಉದ್ಧರಿಸುತ್ತಾರೆ. ಎಂತಹ ವಿರೋಧಿಯೇ ಒಂದು ಸಂದರ್ಭದಲ್ಲಿ ಬಂದು ಯಾಚಿಸಿದರೆ ಸತ್ಪುರುಷರು ದಯೆಯಿಂದ ಅವರಿಗೆ ರಕ್ಷಣೆ ನೀಡುತ್ತಾರೆ ". ಅವಳ ಮಾತನ್ನು ಕೇಳಿದ ಯಮಧರ್ಮ "ಸಾವಿತ್ರೀ.. ನಿನ್ನ ಮಾತುಗಳು ಬಾಯರಿದವನಿಗೆ ತಿಳಿನೀರು ಎಷ್ಟು ಸಂತೋಷ ಕೊಡುವುದೋ ಹಾಗೇ ನನಗೂ ಸಂತೋಷವನ್ನುಂಟುಮಾಡುತ್ತಿದೆ, ನಾನು ಸುಪ್ರೀತನಾದೆ... ನಿನ್ನ ಪತಿಯ ಪ್ರಾಣವೊಂದನ್ನುಳಿದು ಬೇರೇನು ವರ ಬೇಕು ಕೇಳು". ಹೆಣ್ಣಾದವಳು ಕೊಟ್ಟ ಮನೆ ಮತ್ತು ಹುಟ್ಟಿದ ಮನೆಗಳೆರಡರ ಉದ್ಧಾರವನ್ನು ಸದಾ ಯೋಚಿಸುತ್ತಾಳೆ, ಧರ್ಮದೇವ ಕೊಟ್ಟ ಮೊದಲೆರಡು ವರಗಳನ್ನು ತಾನು ಸೇರಿದ ಮನೆಯ ಉದ್ಧಾರಕ್ಕೆ ಬಳಸಿದ ಸಾವಿತ್ರಿ ಮೂರನೆಯ ವರವಾಗಿ "ಧರ್ಮದೇವ ... ಮಾದ್ರ ದೇಶವನ್ನು ಆಳುತ್ತಿರುವ ನನ್ನ ತಂದೆಗೆ ಗಂಡು ಸಂತಾನವಾಗಬೇಕೆಂದು ಬಹಳ ಬಯಕೆಯಿದ್ದಿತು. ನನ್ನ ತಂದೆಯಾದ ಅಶ್ವಪತಿ ಮಹಾರಾಜನಿಗೆ ನೂರು ಮಂದಿ ಔರಸಪುತ್ರರು ಜನಿಸಲಿ" ಎಂದು ಕೇಳಿದಳು. " ಆಯಿತು ಸಾವಿತ್ರಿ... ನಿನ್ನ ತಂದೆಗೆ ವೀರರಾದ ವರ್ಚಸ್ವಿಗಳಾದ ನೂರು ಮಂದಿ ಪುತ್ರರು ಜನಿಸುತ್ತಾರೆ, ಅವರಿಂದ ಆತನ ಕುಲ ಮುಂದುವರಿಯುತ್ತದೆ.. ಸಾದ್ವೀ ನೀನು ಬಯಸಿದ್ದನ್ನು ವರರೂಪದಲ್ಲಿ ಪಡೆದಿದ್ದೀ..ನೀನಿನ್ನು ಹಿಂತಿರುಗಿ ಹೋಗು ಈಗಾಗಲೇ ಬಹಳದೂರ ನನ್ನನ್ನು ಅನುಸರಿಸಿ ಬಂದಿದ್ದೀ...". ಯಮನ ಎಚ್ಚರಿಕೆಯನ್ನು ಗಣಿಸದೆ ಸಾವಿತ್ರೀ " ದೇವ ಎಷ್ಟು ದೂರ ಕ್ರಮಿಸಿದರೂ ನನ್ನ ಜೊತೆಗೆ ಸತ್ಯವಾನನೂ ಇದ್ದಾನೆ ಎಂಬ ಸಮಾಧಾನ ನನಗೆ ಹಾಗಾಗಿ ಇನ್ನೂ ಮುಂದೆ ಸಾಗಬೇಕೆಂಬ ತವಕ.. ಧರ್ಮದೇವ ನೀನು ಸೂರ್ಯಪುತ್ರ ಹಾಗಾಗಿ ನಿನ್ನನ್ನು ವೈವಸ್ವತ ಎಂದೂ ಕರೆಯುತ್ತಾರೆ.. ಸೂರ್ಯಕಿರಣಗಳು ತಾರತಮ್ಯವಿಲ್ಲದೇ ಹೇಗೆ ಎಲ್ಲೆಡೆಯಲ್ಲಿಯೂ ಹರಡಿಕೊಳ್ಳುವವೋ ಹಾಗೇ ನೀನು ಧರ್ಮದಿಂದ ಎಲ್ಲರನ್ನೂ ಪಾಲಿಸುತ್ತೀಯ ಹಾಗಾಗಿ ನೀನು ಧರ್ಮರಾಜ.. ಪ್ರಪಂಚದಲ್ಲಿ ಸತ್ಪುರುಷರೂ ಹಾಗೆಯೇ .. ಮಿತ್ರ - ಶತ್ರು ಎಂಬ ಬೇಧವಿಲ್ಲದೆಯೇ ಎಲ್ಲರಲ್ಲೂ ಪ್ರೀತಿಯಿಂದ ವರ್ತಿಸುತ್ತಾರೆ, ಹಾಗಾಗಿಯೇ ಎಲ್ಲರೂ ಸಜ್ಜನರ ಸಂಗವನ್ನೇ ಬಯಸುತ್ತಾರೆ". ಸಾವಿತ್ರಿಯ ಮಾತುಗಳನ್ನು ಕೇಳಿದ ಧರ್ಮರಾಜ " ಮಗಳೇ ನಾನು ಇಲ್ಲಿಯವರೆಗೆ ಯಾರಿಂದಲೂ ಇಂತಹ ಅರ್ಥಪೂರ್ಣವಾದ ಮಾತುಗಳನ್ನು ಕೇಳಿರಲಿಲ್ಲ .. ನಿನ್ನ ಮಾತಿನ ಸವಿಗೆ ನಾನು ಸೋತಿದ್ದೇನೆ ಹಾಗಾಗಿ ನಾಲ್ಕನೆಯ ವರವನ್ನು ಕೊಡುತ್ತೇನೆ. ಸತ್ಯವಾನನ್ನುಳಿದು ಬೇರೇನು ಬೇಕು ಕೇಳು". ಆಗ ಸಾವಿತ್ರಿ ನಾಲ್ಕನೆಯ ವರವಾಗಿ " ನನ್ನ ವಂಶಾಭಿವೃದ್ಧಿಗೆ ಕಾರಣರಾಗುವ, ಬಲಾನ್ವಿತರಾದ ನೂರು ಮಂದಿ ಮಕ್ಕಳು ನನಗೆ ಔರಸರಾಗಿ ಸತ್ಯವಾನನಿಂದ ಹುಟ್ಟಲಿ ". ಎಂದು ಕೇಳಿದಳು. "ಆಯಿತು ಮಗಳೇ ಪರಾಕ್ರಮಿಗಳಾದ ಕುಲವನ್ನು ಉದ್ಧರಿಸುವ ನೂರು ಜನ ಮಕ್ಕಳು ನಿನಗೆ ಜನಿಸಲಿ.., ಮಗಳೇ ಬಹಳ ದೂರ ಸಾಗಿ ಬಂದಿದ್ದೀ.. ಇನ್ನೂ ಮುಂದೆ ಬಂದರೆ ನಿನಗೆ ಹಿಂತಿರುಗುವದೂ ಕಷ್ಟವಾಗುತ್ತದೆ ಈ ಕ್ಷಣವೇ ಹಿಂತಿರುಗು". ಸತ್ಯವಾನನಿಂದ ನೂರು ಜನ ಪುತ್ರರು ಎಂದು ಸಾವಿತ್ರಿ ಕೇಳಿದ ವರ... ಯಮನೂ ಅದನ್ನು ಕೊಟ್ಟಿದ್ದಾನೆ... ಸಾವಿತ್ರಿ ಇನ್ನೂ ಯವನನ್ನು ಕುರಿತು "ಸ್ವಾಮೀ... ಈ ಪ್ರಪಂಚದಲ್ಲಿನ ಸತ್ಪುರುಷರ ಸತ್ಯನಿಷ್ಠೆ ಇಲ್ಲಿನ ಪ್ರತಿಯೊಂದು ಆಗುಹೋಗುಗಳಿಗೆ ಕಾರಣವಾಗುತ್ತದೆ, ಅವರ ಧರ್ಮವೇ ಸೂರ್ಯ-ಚಂದ್ರರ ಉದಯಾಸ್ತಮಾನಕ್ಕೆ ಕಾರಣ ಎನ್ನುತ್ತಾರೆ.. ಯಾವ ಸಂಧರ್ಭದಲ್ಲಿಯೂ ಸತ್ಪುರುಷರು ಯಾವಾಗಲೂ ಪರಹಿತಕ್ಕಾಗಿಯೇ ಕಾರ್ಯವೆಸಗುತ್ತಾರೆ.. ಅವರ ಸಂದರ್ಷನ ಮಾಡಿದ ಯಾರಿಗೂ ಯಾವ ರೀತಿಯ ನಷ್ಟವಾಗುವುದಿಲ್ಲ. ಇಂತಹ ಅನುಗ್ರಹ ಬುದ್ಧಿಯನ್ನು ಹೊಂದಿದ ಸತ್ಪುರುಷರು ಸಕಲರ ರಕ್ಷಣೆಯನ್ನು ಧರ್ಮದಿಂದಲೇ ಮಾಡುತ್ತಾರೆ''. ಸಾವಿತ್ರಿಯ ಈ ಮಾತುಗಳಿಂದ ಸಂತುಷ್ಟನಾದ ಯಮಧರ್ಮ " ಮಗಳೇ.. ನೀನು ಮಹಾಪತಿವ್ರತೆಯಿದ್ದೀ... ಧರ್ಮಸಮ್ಮತವಾದ ಮಾತುಗಳನ್ನೇ ಆಡುತ್ತಿರುವೆ, ನನಗೆ ನಿನ್ನಲ್ಲಿ ಗೌರವ ಹೆಚ್ಚಾಗುತ್ತಿದೆ ಹಾಗಾಗಿ ಅತಿ ವಿಶಿಷ್ಠವಾದ ವರವೊಂದನ್ನು ಕೇಳು ಕೊಟ್ಟುಬಿಡುತ್ತೇನೆ" . ಎಂದು ಹೇಳಿದ. ಆಗ ಸಾವಿತ್ರಿ " ದೇವಾ... ನಾನು ನೂರು ಮಂದಿ ಔರಸಪುತ್ರರು ಬೇಕು ಎಂದು ವರಕೇಳಿದೆ..ನೀನು ಕೊಟ್ಟಿದ್ದೀ.. ಈ ವರ ಫಲಿಸಬೇಕಾದರೆ ಸತ್ಯವಾನನ ಜೊತೆಗೆ ಧರ್ಮಸಮ್ಮತವಾದ ದಾಂಪತ್ಯವೂ ಬೇಕು ತಾನೇ.. ಸಂತಾನವಾಗುವ ವರವನ್ನು ಅನುಗ್ರಹಿಸಿದ ಮೇಲೂ ನೀನು ಅವನನ್ನು ಸೆಳೆದುಕೊಂಡು ಹೋಗುತ್ತಿರುವೆ, ಅವನಿಲ್ಲದೆ ನನಗೆ ಬದುಕೇ ಇಲ್ಲ... ಕೇವಲ ವರದಿಂದಲೇ ಮಕ್ಕಳಾಗುವುದನ್ನು ನಾನು ಬಯಸುವುದಿಲ್ಲ ಹಾಗಾಗಿ ನನ್ನ ಪತಿಯನ್ನು ನನಗೆ ವರ ರೂಪದಲ್ಲಿ ಅನುಗ್ರಹಿಸು". ಸಾವಿತ್ರಿಯ ಮಾತಿನಿಂದ ಸಂತೋಷಗೊಂಡ ಯಮಧರ್ಮ " ಆಯಿತು ಮಗಳೇ... ನಿನ್ನ ಪತಿಯ ಪ್ರಾಣವನ್ನು ಹಿಂದಿರುಗಿಸುತ್ತೇನೆ.. ಈ ಸತ್ಯವಂತನು ಮತ್ತೆ ಬದುಕಿ ದೃಡಕಾಯನಾಗಿ ನಾಲ್ಕುನೂರು ವರ್ಷಗಳ ಕಾಲ ಧರ್ಮಪರನಾಗಿ ಬದುಕುತ್ತಾನೆ, ಮುಂದೆ ಈತ ಸಿದ್ಧಾರ್ಥನೆನಿಸಿಕೊಂಡು ಯಜ್ಞ-ಯಾಗಗಳನ್ನು ಮಾಡಿ ಪ್ರಸಿದ್ಧಿಯನ್ನೂ ಪಡೆಯುತ್ತಾನೆ. ನನ್ನ ವರದಂತೆಯೇ ನಿನಗೆ ನೂರು ಮಂದಿ ಮಕ್ಕಳು ಜನಿಸುತ್ತಾರೆ ಅವರು ''ಸಾವಿತ್ರ " ರು ಎಂದೆನಿಸಿ ಅಪಾರವಾದ ಕೀರ್ತಿಯನ್ನು ಪಡೆಯುತ್ತಾರೆ. ನಿನ್ನ ತಂದೆಗೆ ನೂರು ಮಂದಿ ಮಕ್ಕಳಾಗಿ ಅವರು " ಮಾಲವ " ರೆಂದು ಪ್ರಸಿದ್ಧರಾಗುತ್ತಾರೆ " ಹೀಗೆಂದು ಹೇಳಿ ಯಮರಾಜ ಪಾಶದಲ್ಲಿ ಬಂಧಿಸಿದ್ದ ಸತ್ಯವಾನನ ಜೀವಾತ್ಮವನ್ನು ಬಿಟ್ಟು ಹಿಂತಿರುಗುತ್ತಾನೆ. ಸಾವಿತ್ರಿ ಸುತೋಷದಿಂದ ಹಿಂತಿರುಗಿ ಸತ್ಯವಾನನ ದೇಹದ ಬಳಿ ಬಂದು ಅವನ ತಲೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು ಕುಳಿತುಕೊಳ್ಳುತ್ತಾಳೆ. ನಿದ್ರೆಯಿಂದ ಎಚ್ಚರಗೊಂಡಂತೆ ಸತ್ಯವಾನ ಮೇಲೇಳುತ್ತಾನೆ. ಅಷ್ಟರಲ್ಲಿ ರಾತ್ರಿಯಾಗಿದೆ.. ತಂದೆ-ತಾಯಿಯರನ್ನು ನೆನಪಿಸಿಕೊಂಡು ದುಃಖಿಸಿದ ಸತ್ಯವಾನನನಿಗೆ ಸಮಾಧಾನ ಮಾಡಿ ಆ ರಾತ್ರಿಯಲ್ಲಿಯೇ ಆಶ್ರಮದತ್ತ ಸಾಗತೊಡಗುತ್ತಾರೆ. 🙏🙏 ಮುಂದಿನ ಬರಹದಲ್ಲಿ ಹೊಸದೊಂದು ಕಥೆ🙏🙏

No comments:

Post a Comment