Wednesday, July 23, 2025
ಅಜಾಮಿಳ
ಶ್ರೀಮದ್ಭಾಗವತದ ಆರನೇ ಸ್ಕಂಧದಲ್ಲಿ ಬರುವ ಒಂದು ಕಥೆ... ಸುಲಭ ಭಕ್ತಿಯ ಪ್ರತೀಕವಾಗಿ ಎಲ್ಲೆಡೆಯಲ್ಲಿಯೂ ಹೇಳುವ ಒಂದು ಹೆಸರು "ಅಜಾಮಿಳ "...
ಒಂದು ಕಾಲದಲ್ಲಿ ಕನ್ಯಾಕುಬ್ಜ ದೇಶದಲ್ಲಿ ಧರ್ಮಕರ್ಮಗಳಿಂದ ಜೀವನ ನಡೆಸುತ್ತಿದ್ದ ಒಬ್ಬ ಬ್ರಾಹ್ಮಣನಿದ್ದ ಅವನಿಗೆ ಒಬ್ಬ ಪುತ್ರ ಅವನ ಹೆಸರು ಅಜಾಮಿಳ... ತಂದೆ ತಾಯಿಯರ ಸೇವೆ ಮಾಡುತ್ತಾ ಇದ್ದ. ಚಿಕ್ಕ ಪ್ರಾಯದಲ್ಲಿಯೇ ಅವನಿಗೆ ಮದುವೆಯೂ ಆಗಿತ್ತು, ರೂಪವತಿಯಾದ ಹೆಂಡತಿ ಇದ್ದಳು. ಹೀಗಿರುವಾಗ ಎಂದಿನಂತೆಯೇ ಒಂದು ದಿನ ಕುಶ ಸಮಿಧೆಗಳನ್ನು, ಹಣ್ಣು ಹೂವುಗಳನ್ನು ಸಂಗ್ರಹಿಸಲು ಆತ ಅರಣ್ಯದತ್ತ ಹೊರಟ. ದಾರಿಯಲ್ಲಿ ಸಾಗುತ್ತಿರುವಾಗ ವಿಟ ಪುರುಷನೊಬ್ಬ ಒಬ್ಬಳು ವೇಶ್ಯೆಯೊಂದಿಗೆ ವಿಹರಿಸುತ್ತಿರುವುದನ್ನು ನೋಡಿದ. ಮಧ್ಯವನ್ನು ಸೇವಿಸಿದ್ದ ಆ ಹೆಂಗಸು ಯಾವ ಪರಿವೆಯೂ ಇಲ್ಲದೆ ಅರೆನಗ್ನಳಾಗಿ ಅನ್ಯ ಪುರುಷನೊಂದಿಗೆ ವಿವರಿಸುತ್ತಿದ್ದಳು. ಇದನ್ನು ನೋಡಿದ ಅಜಾಮಿಳನಿಗೆ ಅವಳ ಮೇಲೆ ಕಾಮವಾಂಛೆಯುಂಟಾಯಿತು. ತನ್ನ ಆಶ್ರಮಧರ್ಮವನ್ನು ಮರೆತು ಹೇಗಾದರೂ ಅವಳನ್ನು ಒಲಿಸಿಕೊಳ್ಳಬೇಕೆಂದು ತೀರ್ಮಾನಿಸಿದ. ದಿನದಿನವೂ ಅವಳಿಗೆ ಬೇಕಾದ ಧನಕನಕಗಳನ್ನು ತೆಗೆದುಕೊಂಡು ಹೋಗಿ ಕೊಡತೊಡಗಿದ. ತನ್ನ ಸಂಪತ್ತು... ತಂದೆ ಗಳಿಸಿದ ಸಂಪತ್ತುಗಳೂ ವ್ಯಯವಾಯಿತು. ಕೊನೆಗೆ ತಂದೆ-ತಾಯಿಯರನ್ನು ತೊರೆದು, ಹೆಂಡತಿಯನ್ನು ತೊರೆದು, ಮನೆಯನ್ನು ಬಿಟ್ಟು ಅವಳ ಜೊತೆಗೇ ಇರತೊಡಗಿದ. ಈಗ ವೇಶ್ಯೆಯ ಜೊತೆಗಿನ ಸಂಸಾರ ಬೆಳೆಯತೊಡಗಿತು..! ಅವನಿಂದ ಮಕ್ಕಳು ಹುಟ್ಟಿದರು. ಸಂಸಾರ ನಿರ್ವಹಣೆಗೆ ದರೋಡೆ ಮಾಡಿದ... ಕಳ್ಳತನಕ್ಕೆ ಇಳಿದ.. ಹೀಗೇ ದಿನ ಕಳೆಯುತ್ತಾ ತನ್ನ ಆಶ್ರಮಧರ್ಮವನ್ನು ಪೂರ್ಣ ತ್ಯಜಿಸಿ ತೀರಾ ಹೀನ ಮಾರ್ಗದಲ್ಲಿ ಬದುಕತೊಡಗಿದ. ಹತ್ತು ಜನ ಮಕ್ಕಳು ಅವನಿಗೆ ಹುಟ್ಟಿದರು ಅವರಲ್ಲಿ ಕಿರಿಯ ಮಗನ ಹೆಸರು "ನಾರಾಯಣ". ಹೀಗೇ ಅವಳ ಜೊತೆಯ ಸಂಸಾರದಲ್ಲಿ ಅಜಾಮಿಳನಿಗೆ ಎಂಬತ್ತು ವರ್ಷಗಳ ವಯಸ್ಸು ಕಳೆದವು. ಅಲ್ಲಿಗೆ ಅಜಾಮಿಳನ ಆಯಸ್ಸು ಮುಗಿದ ಕಾರಣ ಅವನನ್ನು ಕರೆದೊಯ್ಯಲು ಮೂರು ಜನ ಯಮದೂತರು ಬಂದರು. ಮರಣಶಯ್ಯೆಯಲ್ಲಿದ್ದ ಅಜಾಮಿಳನಿಗೆ ಯಮದೂತರು ಕಾಣಿಸಿಕೊಂಡರು. ಆ ಸಂದರ್ಭದಲ್ಲಿ ಯಮದೂತರು ಪಾಶವನ್ನು ಬೀಸಿದಕೂಡಲೇ ಅಜಾಮಿಳನಿಗೆ ತನ್ನ ಕಿರಿಯ ಮಗನಾದ ನಾರಾಯಣನ ನೆನಪಾಯಿತು. ಕಿರಿಯ ಪುತ್ರನಾದ ನಾರಾಯಣನನ್ನು ಕಂಡರೆ ಅವನಿಗೆ ತುಂಬಾ ಪ್ರೀತಿ.. ಅವನನ್ನು ತೊಡೆಯಮೇಲೆ ಕುಳ್ಳಿರಿಸಿಕೊಂಡು ಊಟಮಾಡಿಸಿದ.. ಆಟವಾಡಿಸಿದ... ಸಂದರ್ಭಗಳು ನೆನಪಾಯಿತು. ಅಜಾಮಿಳನ ಕಣ್ಣುಗಳಲ್ಲಿ ನೀರು ತುಂಬಿಕೊಂಡು " ನಾರಾಯಣಾ" ಎಂದು ಕರೆದ. ಹಾಗೆ ಕರೆದ ಕೂಡಲೇ ಒಂದು ಚಮತ್ಕಾರವೇ ನಡೆದುಹೋಯಿತು... ಪಾಶವನ್ನು ಬೀಸಿ ಅಜಾಮಿಳನ ಜೀವವನ್ನು ಸೆಳೆಯಲು ಸಿಧ್ಧರಾಗಿದ್ದ ಯಮದೂತರ ಸಮ್ಮುಖದಲ್ಲಿ ನಾಲ್ಕು ಜನ ವಿಷ್ಣುದೂತರು ಬಂದು ನಿಂತಿದ್ದರು. ಇವರನ್ನು ನೋಡಿದಾಕ್ಷಣ ಯಮದೂತರು ಆಶ್ಚರ್ಯದಿಂದ ನೀವಾರೆಂದು ಪ್ರಶ್ನೆ ಮಾಡಿದರು. ಆಗ ವಿಷ್ಣುದೂತರು ತಮ್ಮ ಪರಿಚಯವನ್ನು ಮಾಡಿಕೊಂಡು ಅಜಾಮಿಳನ ಜೀವಾತ್ಮವನ್ನು ಕೊಂಡೊಯ್ಯುವುದನ್ನು ತಡೆಯಲು ಬಂದಿರುವುದಾಗಿ ಹೇಳಿದರು. ಆಗ... "ಮಹಾನುಭಾವರೇ... ವಿಷ್ಣುದೂತರಾದ ನೀವು ಇವನ ಜೀವವನ್ನು ಕೊಂಡೊಯ್ಯುವ ಸಂದರ್ಭದಲ್ಲಿ ತಡೆಯಲು ಬಂದದ್ದು ಆಶ್ಚರ್ಯಕ್ಕೆ ಕಾರಣವಾಗಿದೆ. ಈತ ತನ್ನ ಧರ್ಮವನ್ನು ತೊರೆದು ಜೀವನ ಮಾಡಿದವ, ಪಾಣಿಗ್ರಹಣ ಮಾಡಿದ ಸತಿಯನ್ನು ತೊರೆದು.. ತನ್ನ ವೃದ್ಧ ಮಾತಾಪಿತೃಗಳನ್ನು ತೊರೆದು... ತನ್ನ ವರ್ಣಾಶ್ರಮ ಧರ್ಮವನ್ನು ತೊರೆದು.. ಕೇವಲ ಇಂದ್ರಿಯ ಸುಖಕ್ಕಾಗಿ ಒಬ್ಬಳು ವೇಶ್ಯೆಯ ಸಂಗ ಮಾಡಿದ. ಅವಳೊಂದಿಗೆ ಜೀವನ ನಡೆಸಲು ಬೇಕಾಗಿ ಕಳ್ಳತನ ದರೋಡೆಯನ್ನು ಮಾಡಿದ ಇಂತಹ ದುಷ್ಟ ಪೃವೃತ್ತಿಯಲ್ಲಿಯೇ ಬದುಕಿದ ಇವನ ಆಯಸ್ಸು ಮುಗಿದಿದೆ, ಹಾಗಾಗಿ ನಾವು ಕರೆದೊಯ್ದ ಇವನ ಪಾಪ ಕಾರ್ಯಗಳಿಗೆ ಶಿಕ್ಷೆಯನ್ನು ವಿದಿಸಬೇಕಾಗಿದೆ". ಆಗ ವಿಷ್ಣುದೂತರು "ಯಮಕಿಂಕರರೇ...ಈತನು ಹಿಂದಿನ ಹಲವು ಜನ್ಮಗಳಲ್ಲಿ ಮಾಡಿದ ಎಲ್ಲಾ ಪಾಪಗಳಿಗೂ ಪ್ರಾಯಶ್ಚಿತ್ತವನ್ನು ಮಾಡಿಕೊಂಡಾಗಿದೆ. ಯಾಕೆಂದರೆ ಇವನು ತನ್ನ ಮಗನನ್ನು ಕರೆಯುವ ವ್ಯಾಮೋಹದಲ್ಲಿ ಪರಮಪವಿತ್ರವಾದ ಶ್ರೀಹರಿಯ "ನಾರಾಯಣಾ" ಎಂಬ ಹೆಸರನ್ನು ಉಚ್ಛರಿಸಿದ್ದಾನೆ. ಎಂತಹ ಪಾತಕಿಯೇ ಆಗಲಿ .. ಎಲ್ಲಾ ಪಾತಕಗಳಿಗೂ ನಾರಾಯಣ ನಾಮವನ್ನು ಉಚ್ಛರಿಸುವುದೇ ಪ್ರಾಯಶ್ಚಿತ್ತ. ಮಹಾತ್ಮರು ಪಾತಕಗಳ ಪರಿಹಾರಕ್ಕಾಗಿ ಕೃಚ್ಛ- ಚಾಂದ್ರಾಯಣವೇ ಮುಂತಾದ ವ್ರತಗಳನ್ನು ವಿಧಿಸಿದ್ದಾರೆ, ಆದರೆ ಭಗವಂತನ ನಾಮ ಸಂಕೀರ್ತನದಿಂದ ಅಂತಹ ವ್ರತಗಳಿಂದ ಸಿಗಬಹುದಾದ ಫಲಗಳಿಂದ ಹೆಚ್ಚು ದೊರೆಯುತ್ತದೆ. ಅವನು ಯಾವ ಕಾರಣಕ್ಕಾಗಿಯಾದರೂ ಭಗವಂತನ ನಾಮವನ್ನು ಉಚ್ಚರಿಸಲಿ.... ತಿಳಿದೋ ತಿಳಿಯದೆಯೋ ಹೊತ್ತಿಕೊಂಡ ಬೆಂಕಿ ಕಟ್ಟಿಗೆಯನ್ನು ಸುಡುತ್ತದೆ... ಹಾಗೆಯೇ ಯಾವ ಕಾರಣಕ್ಕಾಗಿಯಾದರೂ ಉಚ್ಛರಿಸಿದ ನಾರಾಯಣನೆಂಬ ನಾಮ ಇವನ ಪಾಪವನ್ನು ಸುಟ್ಟು ಬೂದಿ ಮಾಡಿದೆ. ಹಾಗಾಗಿ ಈತ ಯಮಸಧನವನ್ನು ಸೇರಿ ಯಾವುದೇ ರೀತಿಯ ಶಿಕ್ಷೆಗಳನ್ನು ಅನುಭವಿಸಬೇಕಾಗಿಲ್ಲ ಇವನನ್ನು ಬಿಟ್ಟು ಬಿಡಿ" ವಿಷ್ಣುದೂತರ ಮಾತನ್ನ ಕೇಳಿದ ಯಮಕಿಂಕರರು ಪಾಶದಲ್ಲಿ ಬಂಧಿಸಿದ ಅಜಾಮಿಳನನ್ನು ಬಿಟ್ಟು ಹೊರಟು ಹೋಗುತ್ತಾರೆ. ಪ್ರಾಣ ತ್ಯಜಿಸುವ ಹಂತದಲ್ಲಿದ್ದ ಅಜಾಮಿಳನಿಗೆ ಇದೆಲ್ಲವೂ ಕನಸಿನ ರೂಪದಲ್ಲಿ ಕಾಣಿಸುತ್ತದೆ. ಎಚ್ಚರಗೊಂಡು ನೋಡುವಷ್ಟರಲ್ಲಿ ವಿಷ್ಣುದೂತರೂ ಅದೃಷ್ಯರಾಗುತ್ತಾರೆ. ಅಗ ಅಜಾಮಿಳ "ಜೀವನದಲ್ಲಿ ತಾನೆಂತಹ ದುರ್ವರ್ತನೆಗೆ ಮುಂದಾದೆ ... ಒಂದು ಹೆಣ್ಣಿನ ಕಾರಣದಿಂದ ನಾಚಿಕೆಗೆಟ್ಟವನಾಗಿ ಬದುಕಿದೆ.. ಆದರೆ ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯಫಲದಿಂದ ನಾರಾಯಣ ಎಂಬ ನಾಮವನ್ನು ಮರಣಕಾಲದಲ್ಲಿ ಉಚ್ಛರಿಸಿದೆ. ಅದೇ ನನ್ನ ಮರಣಭಯ ನಿವಾರಣೆಗೆ ಕಾರಣವಾಯಿತು ಎಂದಾದರೆ ... ಸಾಕು ಈ ಹೀನ ಬದುಕು" ಎಂದು ಯೋಚಿಸಿ ಎಲ್ಲವನ್ನೂ ತೊರೆದು ಹರಿದ್ವಾರಕ್ಕೆ ಹೋಗುತ್ತಾನೆ. ಅಲ್ಲಿ ಹಲವು ಕಾಲ ಭಗವನ್ನಾಮ ಸಂಕೀರ್ತನೆ ಮಾಡುತ್ತಾ.. ಯೋಗವನ್ನುನುಸರಿಸುತ್ತಾ . ಆತ್ಮಚಿಂತನೆ ಮಾಡುತ್ತಾ .. ವಿಷಯಾಸಕ್ತಿಗಳಿಂದ ಬುದ್ಧಿಯನ್ನು ಬೇರ್ಪಡಿಸಿ ಭಗವಂತನ ಮೋಕ್ಷಧಾಮವನ್ನು ಮಾತ್ರ ಲಕ್ಷ್ಯವಾಗಿಟ್ಟುಕೊಂಡು ಕಳೆದ... ಕೊನೆಗೆ ಒಂದು ದಿನ ಪವಿತ್ರವಾದ ಗಂಗಾತಟದಲ್ಲಿ ದೇಹತ್ಯಾಗ ಮಾಡುತ್ತಾನೆ. ತಕ್ಷಣದಲ್ಲಿಯೇ ವಿಷ್ಣುದೂತರು ಸ್ವರ್ಣಮಯವಾದ ವಿಮಾನವನ್ನು ತಂದು ಇವನನ್ನು ವಿಮಾನವೇರಿಸಿಕೊಳ್ಳುತ್ತಾರೆ.. ಇವನೂ ಕೂಡ ಭಗವಂತನ ಪಾರ್ಷದರಾದ ವಿಷ್ಣುದೂತರ ರೂಪವನ್ನೇ ಹೊಂದಿ ಜನನ ಮರಣವರ್ಜಿತವಾದ ಮೋಕ್ಷವನ್ನು ಪಡೆದು ವೈಕುಂಠ ಲೋಕವನ್ನು ಸೇರಿಕೊಳ್ಳುತ್ತಾನೆ.🙏🙏
ಮುಂದೊಂದು ಹೊಸ ಕಥೆ🙏🙏
Subscribe to:
Post Comments (Atom)
No comments:
Post a Comment