Monday, July 14, 2025
ಸಾವಿತ್ರಿ ಭಾಗ 4
ಸಾವಿತ್ರಿಗೆ ಯಾವ ಕ್ಷಣದಲ್ಲಿ ಏನಾಗುವುದೋ ಎಂಬ ಆತಂಕ... ಸಂಕಲ್ಪ ಮಾಡಿದ ವ್ರತ ಸಾಂಗವಾಗಿ ನೆರವೇರಿದರೂ ಮುಂದೇನು.. ಬಂದವರನ್ನು ಸತ್ಕರಿಸಿ ಆಶೀರ್ವಾದ ಪಡೆದಿದ್ದು ಆಯಿತು.. ಅವರೆಲ್ಲರೂ ಸುಮಂಗಲಿಯಾಗೆಂದು ಹರಸಿದರೂ ಅಷ್ಟಕ್ಕೆ ಮುಗಿಯಲ್ಲಿಲ್ಲ. ಇನ್ನೂ ಆರಂಭ ಎಂಬುದು ಸಾವಿತ್ರಿಗೂ ಗೊತ್ತು. ಬಳಲಿದ್ದ ಸೊಸೆಯನ್ನು ಕರೆದು ದ್ಯುಮತ್ಸೇನ "ಸಾವಿತ್ರೀ ಎಲ್ಲರನ್ನು ಸತ್ಕರಿಸಿ ಆಶೀರ್ವಾದ ಪಡೆದು ಆಯಿತು ತಾನೇ.. ಇನ್ನಾದರೂ ಪ್ರಸಾಧ ಸ್ವೀಕರಿಸು, ಮೂರು ಹಗಲು -ರಾತ್ರಿ ಏನನ್ನು ಸೇವಿಸದೇ ಈಗಾಗಲೇ ತುಂಬ ಕೃಷಳಾಗಿ ಬಿಟ್ಟಿದ್ದೀ ಮಗಳೇ... ಇನ್ನೂ ಏನನ್ನು ನಿರೀಕ್ಷೆ ಮಾಡುತಿದ್ದೀ.." ಎಂದರು. ಮಾವನ ಮಾತನ್ನು ಕೇಳಿದ ಸಾವಿತ್ರಿ ''ಆಯಿತು ಸ್ವೀಕರಿಸುತ್ತೇನೆ" ಎಂದಷ್ಟೇ ಹೇಳಿದಳು ಈಗ ಅವಳ ಗಮನವೆಲ್ಲಾ ಸತ್ಯವಾನನತ್ತ... ಅವನಿಗೆ ಇದರ ಯಾವ ಕಲ್ಪನೆಯೂ ಇಲ್ಲ. ಎಂದಿನಂತೆ ತಾನು ನಿರ್ವಹಿಸಬೇಕಾದ ಕರ್ತವ್ಯದಲ್ಲಿ ತೊಳಗಿಕೊಳ್ಳಲು ಮುಂದಾದ. ಒಂದು ಕೈಯಲ್ಲಿ ಕೊಡಲಿ.. ಅದು ಕಾಡಿನಿಂದ ಕಟ್ಟಿಗೆ ಸಂಗ್ರಹಿಸಿ ತರಲು.. ಇನ್ನೊಂದು ಸಣ್ಣ ಬುಟ್ಟಿ ... ಅದು ಫಲ ಪುಷ್ಪ ಸಂಗ್ರಹಿಸಲು.. " ಸಾವಿತ್ರೀ ನಾನು ಕಾಡಿಗೆ ಹೋಗಿ ಬರುತ್ತೇನೆ.." ಎಂದು ಹೇಳಿ ಹೊರಡಲು ಸಿದ್ಧನಾದವನ ಕುರಿತು.. " ಸ್ವಾಮೀ ಇಂದು ಕಾಡಿಗೆ ಹೋಗಲೇ ಬೇಕೆ? " ಎಂದೂ ಕೇಳದ ಪ್ರಶ್ನೆ ಅವಳಿಗೆ ಅರಿವಿಲ್ಲದಂತೆಯೇ ಬಂದಿತ್ತು. ಸಾವಿತ್ರಿಯ ಪಶ್ನೆಗೆ ಸತ್ಯವಾನನ ಮುಗುಳ್ನಗೆಯೊಂದಿಗಿನ ಉತ್ತರ " ಹೌದು ಒಂದಷ್ಟು ಫಲ -ಪುಷ್ಪಗಳ ಸಂಗ್ರಹ ಮಾಡಿಕೊಂಡು..ಸ್ವಲ್ಪ ಕಟ್ಟಿಗೆಯನ್ನೂ ತರಬೇಕು" ಉತ್ತರ ಪೂರ್ಣವಾಗುವ ಮೊದಲೇ "ಸ್ವಾಮೀ ನಾನೂ ಬರುತ್ತೇನೆ" ಬೇಡಿಕೆಗಿಂತ ಆ ಧ್ವನಿಯಲ್ಲಿ ನಿರ್ಧಾರವೇ ತುಂಬಿತ್ತು. ಆದರೆ.. ಇಂದು ಅವಳನ್ನು ಕರೆದೊಯ್ಯಲು ಸತ್ಯವಾನನೂ ಯೋಚಿಸಿ.. "ಸಾವಿತ್ರೀ ಕಳೆದ ಮೂರು ದಿನಗಳಿಂದ ವ್ರತದಲ್ಲಿ ತೊಡಗಿಕೊಂಡು ಬಳಲಿದ್ದಿ.. ಇನ್ನೂ ನೀನು ಆಹಾರವನ್ನು ಸೇವಿಸಲಿಲ್ಲ... ಈ ಸ್ಥಿತಿಯಲ್ಲಿ ಕಾಡಿಗೆ ಬರುವುದು ಯೋಗ್ಯವಲ್ಲ, ಇಂದು ನೀನು ಆಶ್ರಮದಲ್ಲಿಯೇ ಇರು. ನಾನಂತೂ ದಿನವೂ ಕಾಡಿಗೆ ಹೋಗುವವ.. ನೀನು ಬರುವವಳೇ ಆದರೆ ನಾಳೆಯೋ ನಾಡಿದ್ದೋ ಬಂದರಾಯಿತು. " ಸತ್ಯವಾನನ ಮಾತು ಆ ಸಂಧರ್ಭದಲ್ಲಿ ಸರಿಯೇ ಆಗಿದ್ದರೂ ಸಾವಿತ್ರಿ ಕಂಡುಕೊಳ್ಳಬೇಕಿದ್ದ ಸತ್ಯ ಬೇರೆಯದೇ ಆಗಿದ್ದರಿಂದ "ಇಲ್ಲ ನನಗೇನೂ ಬಳಲಿಕೆಯಾಗುವುದಿಲ್ಲ ನಾನು ಇಂದೇ ನಿಮ್ಮ ಜೊತೆಗೆ ಅರಣ್ಯಕ್ಕೆ ಬರುತ್ತೇನೆ, ಅರಣ್ಯದಲ್ಲಿ ನಿಮ್ಮೊಂದಿಗೆ ಸುತ್ತಾಡಿದರೆ ನನಗೂ ಸಮಾಧಾನವಾಗುವುದು " ಎಂದು ಹೇಳಿದಳು. "ಆಯಿತು ಹಾಗಿದ್ದರೆ ನಿನ್ನ ಅತ್ತೆ ಮಾವಂದಿರಿಗೆ ಹೇಳಿ ಬಾ '' ಹೀಗೆ ಹೇಳುವಾಗ ಉಪವಾಸದಿಂದ ಬಳಲಿದ್ದ ಸಾವಿತ್ರಿಯನ್ನು ತಂದೆಯಾದರೂ ನಿರ್ಭಂಧಿಸಬಹುದು ಎಂಬ ನಿರೀಕ್ಷೆ ಸತ್ಯವಾನನ ಮನಸ್ಸಿನಲ್ಲಿತ್ತು. ಆದರೆ ಸಾವಿತ್ರಿ ದೃಢ ನಿರ್ಧಾರ ಮಾಡಿದ್ದ ಕಾರಣದಿಂದ ಆ ಯೋಜನೆಯೂ ಪ್ರಯೋಜನಕ್ಕೆ ಬರಲಿಲ್ಲ, ಸಾವಿತ್ರಿ ಸರಸರನೆ ಒಳಮನೆ ಸೇರಿ ಅಲ್ಲಿದ್ದ ಅತ್ತೆ ಮಾವಂದಿರನ್ನು ಒಪ್ಪಿಸಿಯೇ ಬಂದುಬಿಟ್ಟಳು. ಮುಂದೆ ಆಗಸದೆತ್ತರಕ್ಕೆ ಬೆಳೆದುನಿಂತ ಅರಣ್ಯ.. ಸಹಜವಾಗಿಯೇ ಸೂರ್ಯರಶ್ಮಿಯನ್ನು ನಿರ್ಭಂಧಿಸುತಿತ್ತು. ಅಲ್ಲೊಂದು ರೀತಿಯ ಕತ್ತಲೆಯ ಭಾಸವಾದರೆ.. ಸಾವಿತ್ರಿಯನ್ನು ಅವರಿಸಿದ್ದ ಕತ್ತಲೆಯೇ ಬೇರೆ. ಮುಂದೆ ಸಾಗುವ ಸತ್ಯವಾನ... ಅವನ ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಅವನನ್ನು ಹಿಂಬಾಲಿಸುತ್ತಿದ್ದ ಸಾವಿತ್ರಿ.... ಅರಣ್ಯದಲ್ಲಿ ಸ್ವಲ್ಪ ಸ್ವಲ್ಪವೇ ಮುಂದೆ ಸಾಗುತ್ತಾ ಅಲ್ಲಿ ಕಾಣಿಸಿದ ತರು, ಲತೆಗಳನ್ನು ತೋರಿಸುತ್ತಿದ್ದ ಸತ್ಯವಾನ. ಆದರೆ ಇಂದು ಸಾವಿತ್ರಿಗೆ ಅವುಗಳನ್ನು ನೋಡಿ ಆನಂದಿಸುವ ಮನಸ್ಸಾದರೂ ಹೇಗೆ ಇದ್ದೀತು ... ಆದರೂ ಅವನ ಮನಸ್ಸಮಾಧಾನಕ್ಕೆ ಬೇಕಾಗಿ ನೋಡಿ ನಗುತ್ತಿದ್ದಳು. ಹಾಗೆಯೇ ಒಂದಷ್ಟು ಫಲ ಪುಷ್ಪಗಳ ಸಂಗ್ರಹವೂ ಆಯಿತು. ಇನ್ನು ಬೇಕಾದ್ದು ಕಟ್ಟಿಗೆ... . ಸಾವಿತ್ರಿ ಬಾರದೇ ಇರಲಿ ಎಂದು ಪ್ರಾರ್ಥಿಸುತ್ತಿದ್ದ ಆ ಘಳಿಗೆ ಬಂದೇ ಬಿಟ್ಟಿತು. ಸತ್ಯವಾನನ ಕಣ್ಣಿಗೆ ಗೋಚರಿಸಿದ್ದು ಅನತಿ ದೂರದಲಿದ್ದ ಒಂದು ಒಣಗಿದ ಕೊಂಬೆಗಳನ್ನು ಹೊಂದಿದ್ದ ಮರ! ಇತ್ತ ಸಾವಿತ್ರಿಯ ಗಂಟಲೂ ಒಣಗುತ್ತಾ ಇತ್ತು. ಸತ್ಯವಾನ ನೋಡುನೋಡುತ್ತಿದ್ದಂತೆಯೇ ಕೊಡಲಿಯನ್ನು ಹಿಡಿದು ಮರವೇರಿ ಒಣಗಿದ ಒಂದೊಂದೇ ಕೊಂಬೆಗಳನ್ನು ಕಡಿಯತೊಡಗಿದ. ಹಾಗೆ ಮರದ ಒಣಗಿದ ಕೊಂಬೆಗಳನ್ನು ಕಡಿಯುತ್ತಿದ್ದ ಸತ್ಯವಾನನಿಗೆ ಇದ್ದಕ್ಕಿದ್ದಂತೆ ತಲೆಸುತ್ತು ಬಂದಂತೆ ಆಯಿತು... ಎಂದೂ ಇಲ್ಲದ ಆಯಾಸ.. ಬಳಲಿಕೆ.. ಇನ್ನಾಗದು ಎಂದು ಭಾವಿಸಿ ಮರವನ್ನು ಇಳಿಯುತ್ತಾ ಸಾವಿತ್ರೀ.. ಎಂದು ಕೂಗಿದ.🙏🙏
ಉಳಿದದ್ದು ಮುಂದಿನ ಭಾಗಕ್ಕೆ.🙏🙏
Subscribe to:
Post Comments (Atom)
No comments:
Post a Comment